December 3, 2013

ಪಾಕಶಾಸ್ತ್ರದ ನನ್ನ ಮೊದಲ ಪ್ರಯೋಗ.

          ಮೊದಲೇಲ್ಲಾ ಅಮ್ಮ ಮನೆಯಲ್ಲಿ ಇಲ್ಲ ಅಂದರೆ ಸಾಕು, ತುಂಬಾ ಖುಷಿ. ಆಡುಗೆ ಮನೆಗೆ ನಾನೇ ರಾಣಿ. ಹೊಸರುಚಿಗಳ ನನ್ನ ಪ್ರಯೋಗಗಳಿಗೆ ಅಪ್ಪ, ತಂಗಿ ಮತ್ತು  ತಮ್ಮ ಸೇವಕರು ಹಾಗೇ ಬಲಿಪಶುಗಳು ಕೂಡ.
           
      ನನ್ನ ಪಾಕಶಾಸ್ತ್ರದ ಪ್ರಥಮ ಪ್ರಯೊಗ ಉಪ್ಪಿಟ್ಟಾಗಿತ್ತು. ಬಹುಶಃ ನಾನಾಗ ಎಂಟನೇಯ ಕ್ಲಾಸು ಅನ್ಸುತ್ತೆ. ಆ ದಿನಗಳಲ್ಲಿ  ಮನೆಗೆ ಯಾರಾದರೂ ಧೀಡಿರ್ ಅಂತ ಆಗಮಿಸಿದಾಗ ಉಪ್ಪಿಟ್ಟು ಕಾಮನ್ ತಿಂಡಿಯಾಗಿದ್ದ ಕಾರಣದಿಂದ, ನನಗೆ ಉಪ್ಪಿಟ್ಟು ಮಾಡೋದು ಅಂದರೆ ತುಂಬಾ ಸುಲಭ ಅನ್ನೋ ಭಾವನೆ ಆಗಾಲೇ ಬೇರೂರಿಬಿಟ್ಟಿತ್ತು. ಅಮ್ಮನ ಸಾಲು ಡಬ್ಬಿಗಳಲ್ಲಿ ರವೆಗಾಗಿ ತಡಕಾಡಿದಾಗ  2-3   ಬಗೆಯ ರವೆಗಳು ದೊರೆತಿದ್ದು, ಆರಂಭದಲ್ಲೇ ಕನ್‌ಫ್ಯೂಶನ್‌ಗೆ ಕಾರಣ ಆಯಿತು. ಆಡುಗೆಯ ಬಗ್ಗೆಯ ಅಪ್ಪನ ಚೂರು-ಪಾರು ಜ್ಞಾನವೇನು ಪ್ರಯೋಜನೆಕ್ಕೆ ಬರಲಿಲ್ಲ. ಅಂತೂ-ಇಂತೂ ಒಂದನ್ನು ಆರಿಸಿ ಕೊಂಡೆ. ದೊಡ್ಡ ಬಾಣಲೆಯಲ್ಲಿ ಧಾರಳವಾಗಿ ತುಪ್ಪ ಹಾಕಿ ಒಗ್ಗರಣೆ ಮಾಡಿದೆ. ರವೆಗೆ ನೀರಿನ ಆಳತೆಯ ಪ್ರಮಾಣ ತಿಳಿಯದೆ, ಯಾವುದೇ ರೀತಿಯ ಕಂಜೂಸ್‌ತನ ಮಾಡದೆ ಬಾಣಲೆ ತುಂಬಾ ನೀರು ತುಂಬಿಸಿದೆ. ಕುದಿ ಬಂದ ನಂತರ ಹುರಿದ ರವೆ ಹಾಕಿದೆ. ಎಲ್ಲಾ  15-20 ನಿಮಿಷಗಳಲ್ಲಿ ಮಾಡೋ ಉಪ್ಪಿಟ್ಟು ಮುಕ್ಕಾಲು ಘಂಟೆಯಾದರೂ ಗಟ್ಟಿಯಾಗುವ ಯಾವುದೇ ಲಕ್ಷಣ ಕಾಣದಿದ್ದಾಗ, ಉಪ್ಪಿಟ್ಟಿನ ಪ್ರಯೋಗಕ್ಕೆ ಅಂತ್ಯ ಹಾಡಿದೆ. ಸುಮಾರು ಒಂದುವರೆ ಘಂಟೆಗಳ ಕಠಿಣ ಪರಿಶ್ರಮದ ನಂತರ ನೀರಾದ ಉಪ್ಪಿಟ್ಟು ತಯಾರಾಗಿತ್ತು. ಉಪ್ಪಿಟ್ಟಿಗಿಂತ ಖಾರದ ಪಾಯಸ ಎನ್ನುವುದು ಹೆಚ್ಚು ಸೂಕ್ತ. ಎಲ್ಲರೂ ಸೂಪ್‌ನಂತೆ ಬೌಲ್‌ನಲ್ಲಿ ಕುಡಿಯಬೇಕಾಯಿತು. ರುಚಿಕರವಾಗಿತ್ತು ಎನ್ನುವುದು ಸಮಾಧಾನದ ಸಂಗತಿ.

ಈ ನನ್ನ ಪಾಕಶಾಸ್ತ್ರದ ಮೊಟ್ಟಮೊದಲ ಪ್ರಯೋಗ,  ಇಷ್ಟು ವರ್ಷಗಳ ನಂತರವೂ ಪ್ರತಿಬಾರಿ ಉಪ್ಪಿಟ್ಟು ಮಾಡುವಾಗ ನೆನಪಾಗುತ್ತದೆ.



November 16, 2013

ಹುಚ್ಚು ಕೋಡಿ ಮನಸ್ಸು.


ಹುಚ್ಚು ಕೋಡಿ ಮನಸ್ಸು ಅದು ಹದಿನಾರರ ವಯಸ್ಸು

ಆದ್ರೆ ಮನಸ್ಸು ಮೂವತ್ತರ ನಂತರವೂ ಹುಚ್ಚು ಕೋಡಿಯಾಗತ್ತೆ ! ಅಂತ ಅವನು ಜೀವನದೊಳಗೆ ಕಾಲಿಟ್ಟ ಮೇಲೆ ಗೊತ್ತಾಗಿದ್ದು. ಬರೆಯೋಕ್ಕೆ ಹೋದ್ರೆ ಈಗ ಹುಟ್ಟುವುದು ಮಾತ್ರ ಕವನ ಅಲ್ಲ, ಇನ್ನೊಂದು  ಮಹಾಭಾರತ.

ಮನಸ್ಸೇ ಹೀಗಲ್ವಾ? ಇರುವುದೇಲ್ಲಾ ಬಿಟ್ಟು ಇಲ್ಲದೇ ಇರುವುದನ್ನೇ ಬಯಸುವುದು. ಹದಿನಾರು ಮೂವತ್ತಾರು ಎಲ್ಲಾ ಬರೀ ಲೆಕ್ಕಕ್ಕೆ ಮಾತ್ರ.
ಬುದ್ಧಿ ಮನಸ್ಸು ಎರಡೂ ನನ್ನದೇ ಆದ್ರೂ ಅವನ ವಿಷಯದಲ್ಲಿ ಮಾತ್ರ  ಒಂದಕ್ಕೊಂದು ಅಸಂಬದ್ಧ, ತದ್ವಿರುದ್ಧ. ಒಂದು ನೀರಿಗೆ ಇಳಿದರೆ ಇನ್ನೊಂದು ಏರಿ ಕಡೆ. ಬುದ್ಧಿ ಅವನಿಂದ ದೂರ ಇರು, ಅವನು ಬೇಡ ಎಂದಷ್ಟು  ಮನಸ್ಸು ಅವನ ಕಡೆನೇ ವಾಲುತ್ತೆ, ಪದೇ ಪದೇ ಸೋಲುತ್ತೆ. ಮನಸ್ಸು ಅವನೇ ಬೇಕು ಅಂತ ಹಟ ಹಿಡಿಯುತ್ತೆ ಪ್ರತಿ ಬಾರಿ ಅವನ ಜೊತೆ ಗಂಟೇಗಟ್ಟಲೆ ಮಾತಾನಾಡಿ ಮುಗಿಸಿ ನಂತರವೂ ಏನೋ ಅತೃಪ್ತಿ. ಮತ್ತೆ ಮತ್ತೆ ಅವನ ದ್ವನಿ ಕೇಳಲು ಮನ ಹಾತೊರೆಯುತ್ತದೆ. ಅವನನೊಂದಿಗೆ ಕಾಲ ಕಳೆಯುವವರ  ಮೇಲೆಲ್ಲಾ ಏನೋ ಒಂಥರಾ ಜಲಸ್. ನನಗಿಲ್ಲದ ಅವರ ಭ್ಯಾಗಕ್ಕೆ ಕರಬುತ್ತೇನೆ. ಮೂರು ಹೊತ್ತು ಅವನದೇ ಧ್ಯಾನದಲ್ಲಿ  ಒಂಟಿತನವೂ ಪ್ರಿಯ. ಮನಸ್ಸು ಕೈಗೆ ಸಿಗದ ಗಾಳಿಪಟ. ಎಲ್ಲಾ ಅಲ್ಲೋಲ ಕಲ್ಲೋಲ.
ಅವನೊಂದು ತೀರ ನಾನೊಂದು ತೀರ. ಸಮಾನಂತರ ದಾರಿಯ ಪಯಣಿಗರು ನಾವಿಬ್ಬರು. ಎಂದಿಗೂ  ಅವನೊಂದಿಗೆ ಹೆಜ್ಜೆ ಹಾಕುವ ಸಾಧ್ಯತೆಗಳಿಲ್ಲ.  ಆಗ ಬುದ್ಧಿ ಕೆಲಸ ಮಾಡಲು ಶುರು ಮಾಡುತ್ತೆ. ಇನ್ಯಾವತ್ತೂ  ಅವನ ಜೊತೆ ಮಾತಾಡಲ್ಲ ಅಂತ ಶಪಥನೂ ಮಾಡುತ್ತೆ. ಇವೆಲ್ಲಾ ಬರೀ ಬುದ್ದಿಯ ಬುದ್ದಿ ಮಾತುಗಳಷ್ಟೇ . ಆಗಲೇ ಹುಟ್ಟುಕೊಳ್ಳೊದು ಅವನನ್ನ ಕಳೆದು ಕೊಳ್ಳುವ ಭಯ , ಅವನು ನನ್ನ ಮರತೇ ಬಿಟ್ಟರೆ ಎನ್ನುವ ಅಂತಕ. ನನ್ನ ಜಾಗ ಇನ್ಯಾರೋ  ಆಕ್ರಮಿಸಿಕೊಂಡರೆ ಅನ್ನೊ ಇನ್‌ಸೆಕ್ಯುರಿಟಿ ಫಿಲಿಂಗ್. ಎಲ್ಲಾ ಸೇರಿ ಒಟ್ಟಾರೆ ಮತ್ತೆ ಬುದ್ಧಿ ಮೇಲೆ ಮನಸ್ಸಿನ ಸವಾರಿ ಶುರುವಾಗುತ್ತೆ.   ಬುದ್ಧಿ ಮಾತು ಮೀರಿ ಭಾವನೆಗಳು ಅಲೆ ಅಲೆಗಳಾಗಿ ಏಳುತ್ತವೆ. ದಿನ ದಿನದಿಂದ ಅವನ ಹುಚ್ಚು ಹೆಚ್ಚುತ್ತೆ . ಮನಸ್ಸು ಸದಾ ಅವನನ್ನು ಬಯಸುತ್ತದೆ. ಮನಸ್ಸು ಅವನಿಗಾಗಿ ಚಡಪಡಿಸುತ್ತದೆ. ಮುದ ನೀಡುವ ಅವನ ಪ್ರೀತಿ -ಸಾಂಗತ್ಯದ ಕಡೆ ಮತ್ತೆ ಮನಸ್ಸು ಜಾರುತ್ತೆ.

 ನನ್ನ ಕನಸುಗಳಿಗೆ  ಬಣ್ಣ  ತುಂಬಿದವನು ಅವನು. ಅವನ ಪ್ರೀತಿ ಎಷ್ಟು ಸಹ್ಯವೋ, ಅವನ ನಿರ್ಲಕ್ಯ ಅದಕ್ಕಿಂತ ಹೆಚ್ಚು ರೋಷ ಹುಟ್ಟಿಸುತ್ತದೆ. ಅವನ ಹತ್ತು ನಿಮಿಷಗಳು ಗಂಟೆಗಳಾದಾಗ ಕಾಯುವಿಕೆ ಅಸಹನೆ ಹುಟಿಸುತ್ತದೆ. ಅಯ್ಯೋ ಸಾರಿ ಮರತೆ ಹೋದೆ ಕಣೇ, ಬ್ಯುಸಿ ಇದ್ದೆ , ತುಂಬಾ ಟೆನ್ಶನ್ ಕಣೇ ಎನ್ನುವ  ಅವನ ಉತ್ತರಗಳು ಸಮಾಧಾನಿಸಲು ಸೋಲುತ್ತವೆ.  ನನಗೆ ಅವನಷ್ಟೇ ಪ್ರಪಂಚ ಆದರೆ ಅವನಿಗೂ ಹಾಗಿರಬೇಕೆಂದೇನೂ ಇಲ್ಲವಲ್ಲ. ನಿಧಾನವಾಗಿ ಅವನಿಗೆ ನಾನು ಅನಿವಾರ್ಯವಲ್ಲ ಎನ್ನುವ ಅನುಮಾನ ಹುಟ್ಟಿಸುತ್ತದೆ.  ಯಾವುದನ್ನಾದರೂ ಸಹಿಸಬಹುದು ಆದರೆ ಪ್ರೀತಿಸಿದವರಿಂದ ನಿರ್ಲಕ್ಷ್ಯ ಮಾತ್ರ ಅಸಾಧ್ಯ. ಮನಸ್ಸು ಕಲ್ಲಾಗುತ್ತದೆ. ನನ್ನ ಪಾಡಿಗೆ ನಾನಿದ್ದು ಬಿಡಲು ನಿರ್ಧರಿಸುತ್ತೇನೆ.

ಎಲ್ಲಾ ಸುಸೂತ್ರವಾಗಿ, ಹಳಿ ತಪ್ಪಿದ ಹುಚ್ಚು ಕೋಡಿ ಮನಸ್ಸು ಪುನಃ ಟ್ರ್ಯಾಕ್‌ಗೆ ಬರುತ್ತಿದ್ದೆ ಅಂತ ಅನಿಸುವಾಗಲೇ ಮತ್ತೆ ಅವನ ರಿಎಂಟ್ರಿ. ಎಲ್ಲಾ ಶಪಥ, ಕಠೋರ ನಿರ್ಧಾರಗಳನ್ನು ಧೂಳಿಪಟ ಮಾಡಿಬಿಡುತ್ತೆ. ಅವನು  ಮತ್ತೆ  ಹೊಸ ಚಿತ್ತಾರ ಮೂಡಿಸಲು ತೊಡಗುತ್ತಾನೆ.  ಅದಕ್ಕೆ  ಚೆಂದದ ಬಣ್ಣಗಳ ಆಯ್ಕೆಯಲ್ಲಿ ನಾನು ಮುಳುಗಿರುವಾಗಲೇಅವನು ಬಿಡಿಸುತ್ತಿರುವ ಚಿತ್ತಾರಗಳನ್ನೇ ಮತ್ತೆ ಮರೆಯುತ್ತಾನೆ. ಎಲ್ಲಾ ಮತ್ತೆ ಮೊದಲಿನಂತ್ತೆ ಅರ್ಧಬರೆದು ಬಿಟ್ಟ, ಅರ್ಥ ಕಳೆದು ಕೊಂಡ ಚಿತ್ತಾರ, ಕವನ, ಕನಸುಗಳು ಮತ್ತು ನಾನು.

ಅವನ ವಿಷಯದಲ್ಲಿ ವಯಸ್ಸು ಹದಿನ್ನಾರದರೂ ಮೂವತ್ತಾರಾದರೂ ಹುಚ್ಚು ಕೋಡಿಯೇ. ಆದರೆ  ಅದಕ್ಕಾಗುವ ಗಾಯದಲ್ಲಿ ಮಾತ್ರ ಅಜಗಜಾಂತರ. ಹದಿನಾರರ ಗಾಯ ಮಾಗುವುದೂ ಬೇಗ.  ಸಾಲುಗಟ್ಟಿ ನಿಂತವರಲೊಬ್ಬ  ಗಾಯಕ್ಕೆ ಮುಲಾಮಾಗಿ ಕಲೆ ಇಲ್ಲದೆ ಅಳಿಸಿ ಬಿಡುತ್ತಾನೆ. ಆದರೆ ಈಗ ಮೇಲಿಂದ ಮೇಲಿಂದ ಅದೇ ಗಾಯಕ್ಕೆ ಪೆಟ್ಟು ಜೊತೆಗೆ ಸದಾ ಕಾಡುವ ಎಂದಿಗೂ  ಮಾಸದ ಕಲೆ.   ಗಾಯ ಮೇಲ್ನೋಟಕ್ಕೆ ವಾಸಿಯಾದಂತೆ ಕಂಡರೂ ಮುಲಾಮಿಲ್ಲದ ಗಾಯ ಒಳಗೆ ಹಸಿಯಾಗೇ ಉಳಿದೇ ಬಿಡುತ್ತದೆ.


ಮರೆತೆನೆದರೂ ಅವನನ್ನು ಮರೆಯಲಾಗದೆ ಒದ್ದಾಡುವ…. ಮತ್ತದೇ ನಾನು.

October 31, 2013

ದೀಪಾವಳಿ ಗಿಫ್ಟ್

ಮೈತೊಳೆಯಲು ಕೊಟ್ಟಿಗೆಯಿಂದ   ಅಂಗಳಕ್ಕೆ ಶಿಫ್ಟ್ ಆಗಿ, ಚಪ್ಪರದ ಕಂಬದ ಸುತ್ತದ ಗಾಬರಿಯಿಂದ ಗಿರಕ್ಕಿ ಹೊಡೆಯುತ್ತ ಒಂದರ ಹಿಂದೊಂತೆ ಅಂಬಾ ಎಂದು ಅರುಚುವ ಜಾನುವಾರುಗಳು.  ರಾತ್ರಿ ಲೇಟಾಗಿ ಮನೆಗೆ ಬಂದ ಅಪ್ಪ, ಮನೆ ಕಡೆ ಮುಖ ಹಾಕದ  ಕೆಲಸದಾಳು ಶೇಷ, ಇನ್ನೂ ಮುರುಟಿ ಮಲಗಿರುವ ಮಕ್ಕಳು, ಅಲ್ಲಿ ಅಲ್ಲಿ ಗಲೀಜು ಮಾಡಿದ ನಾಯಿ ಬೆಕ್ಕು ಒಂದನ್ನೂ ಬಿಡದೆ  ಬೆಳಿಗ್ಗೆಯೇ ಜನ್ಮ ಜಾಲಾಡುವ ಅಮ್ಮನ ಸುಪ್ರಭಾತ. ಮನೆ ತುಂಬಾ ಬಚ್ಚಲು, ಅಡಿಗೆ ಒಲೆಯ ಹೊಗೆ,  ಬೇಯುತ್ತಿರುವ ಸೌತೆಕಾಯಿ ಸಿಹಿ ಕಡುಬಿನ ತೆಳು ಪರಿಮಳದ ಜೊತೆ ಗೋ ಮಾಲೆಯ ಚೆಂಡು ಹೂ, ಪಚ್ಚೆ ತೆನೆ , ಕಿತ್ತಳೆ ಸೊಪ್ಪುಗಳ ಗಮ ತುಂಬಿದೆ ಅಂದರೆ ಅವತ್ತು ಖಂಡಿತಾ ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬ.ಇಡೀ ಹಬ್ಬನೇ ತಲೆ ಮೇಲೆ ಹೊತ್ತ ಕೊಂಡ ಅಮ್ಮ, ಯಾವುದಕ್ಕೂ ತಲೆ ಹಾಕದೆ ತನ್ನಷ್ಟಕ್ಕೆ ತಾನು ಗೋ ಮಾಲೆ ಕಟ್ಟುತ್ತ ಕುಳಿತ್ತಿರುವ ಅಪ್ಪ. ಏನು ಕೆಲಸ ಮಾಡದೆ ಗಡಿಬಿಡಿಯಲ್ಲಿ ಆಕಡೆಯಿಂದ ಈ ಕಡೆಗೆ ಓಡಾಡುವ ನಾವುಗಳು. ಕಬ್ಬಿಣ್ಣದ ಬಕೆಟ್ ಕವಚಿ ಅದರೊಳಗೆ  ಬಾಂಬ್ ಇಟ್ಟು ಸಿಡಿಸಿದ್ದು, ಸಂಜೆ ದೀಪ್‌ದೀಪೋಳ್ಳಿಗೆ ಕೂಗುತ್ತ ದೀಪ ಹಚ್ಚುತ್ತಿದ್ದಿದ್ದು, ರಾತ್ರಿ ಅಂಟಿಕೆ ಪಿಂಟಿಕೆಯ ಸುವಾಲೋಸುವಾಲು. ದೀಪಾವಳಿ ಅಂತ ನೆನೆಪಿಸುಕೊಳ್ಳುತ್ತಿದ್ದ ಹಾಗೆ ಇವುಗಳ ಸ್ಲೈಡ್ ಶೋ ಶುರುವಾಗಿ ಬಿಡುತ್ತದೆ. ಅಮ್ಮ ಆಚರಿಸುವ ಎರಡೇ ಹಬ್ಬಗಳಲ್ಲಿ ಇದು ಒಂದು.  ಹಾಗಾಗಿ ಇಂದಿಗೂ  ಈ ಹಬ್ಬಕ್ಕೆ ಅಮ್ಮನ ಮನೆಗೆ ಹೋಗುವುದನ್ನು ಮಿಸ್ ಮಾಡೋಲ್ಲ

ಇವೇಲ್ಲಾದರ  ಹೊರತಾಗಿ  ದೀಪಾವಳಿ ನನಗೆ  ಅತಿ ವೀಶೇಷ. ನಾನು ಮೊದಲು ಬರೆದಿದ್ದು ಈ ಹಬ್ಬದ ಅಂಟಿಕೆ-ಪಿಂಟಿಕೆಯ ಬಗ್ಗೆ. ಬರೆದಿದ್ದು ಆಯಿತು ಒಂದು ಪ್ರತಿಷ್ಟಿತ ಪತ್ರಿಕೆಯ ಭಾನುವಾರದ ಪುರವಾಣಿಗೆ ಕಳುಹಿಸಿದ್ದು ಆಯಿತು. ದೊಡ್ಡ ಪತ್ರಿಕೆಯಾದ ಕಾರಣ ಪುರವಾಣಿಯಲ್ಲಿ ಪ್ರಕಟಿವಾಗುವ ವೀಶೇಷತೆಗಳ ಬಗ್ಗೆ ಮುಂಚಿನ ದಿನದ ಪತ್ರಿಕೆಯಲ್ಲಿ ಪ್ರಕಟಿಸುವ ವಾಡಿಕೆ. ಅದರಲ್ಲಿ ಅಂಟಿಕೆ-ಪಿಂಟಿಕೆ ಎಂಬ ಲೇಖನವು ಒಳಗೊಂಡಿತ್ತು. ನಾನೊಂತ್ತು ಉಬ್ಬಿ ಹೋದೆ ಮೊದಲ ಪ್ರಯತ್ನ ಯಶಸ್ಸಿಗೆ. ಹಳೆ ಸ್ನೇಹಿತರು, ಅವರು ಇವರು ಕಂಡ ಕಂಡವರಿಗೆಲ್ಲಾ  ಫೋನ್ ಮಾಡಿ, ಕಂಡ ಕಂಡಲ್ಲಿ ಮರು ದಿನ ಪೇಪರ್ ಓದಲು ಹೇಳಿದ್ದೇ ಹೇಳಿದ್ದು. ಆದ್ರೆ ಮರು ದಿನ ಪೇಪರ್ ನೋಡಿದ್ದಾಗಲೇ ತಿಳಿದಿದ್ದು ಬೇರೊಬ್ಬರು ಬರೆದ ಅದೇ ವಿಷಯದ ಲೇಖನ ಅಂತ. ಇಡೀ ಹಾಸ್ಟೇಲ್ ಪೂರ್ತಿ ಅದೇ ವಿಷಯ. ನಾನು ನಿರಾಶೆಯಿಂದ ರೂಮ್ ಸೇರಿದ್ದೆ, ಅತ್ತು ಅತ್ತು ನನ್ನ ಕಣ್ಣುಗಳು ಊದಿ ಕೊಂಡಿದ್ದವು. ಹಿಂದಿನ ದಿನವೀಡಿ ನನ್ನ ಸಂತೋಷದಲ್ಲಿ ಪಾಲ್ಗೊಂಡ, ನನ್ನ ಬರೆಯಲು ಹುರುಂದುಬಿಸಿದ ಭಾಗ್ಯ ಮತ್ತು ಸ್ವಾಮಿ   ಬೆಳಿಗ್ಗೆಯೇ ನನ್ನ ಕನ್ಸೋಲ್ ಮಾಡಲು ಹಾಸ್ಟೇಲ್‌ಗೆ ಓಡಿ ಬಂದಿದ್ದರು.  ಇಡೀ ದಿನ ನನ್ನ ಜೊತೆ ಕಾಲ ಕಳೆದರು. ಸ್ವಾಮಿ ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಅದೇ ಲೇಖನವನ್ನು ಪ್ರಕಟಿಸಿದ್ದು  ನಾನು ಕಾಲೇಜಿನಲ್ಲಿ ಸ್ಪಲ್ಪ ಫೇಮಸ್ ಆಗಿದ್ದು ಎಲ್ಲಾ ಅಮೇಲೆ ನೆಡೆದ  ಹಬ್ಬದ ಹ್ಯಾಪಿ ಪಾರ್ಟ್. 

ಹೀಗೆ   ದೀಪಾವಳಿ  ಸಾಕಷ್ಟು ಸುಂದರ ನೆನಪುಗಳ ಜೊತೆಗೆ ನಿಜವಾದ ಗೆಳೆಯರನ್ನು ಸಹ ನನಗೆ ಕೊಟ್ಟಿದೆ.

August 3, 2013

ಮರೆತ ಹಾದಿ!


ಅವಳು ತುಂಬಾ ಗಂಬೀರೆ, ಪ್ರಬುದ್ದೆ ಎಂದೇ ಚಿರಪರಿಚಿತೆ.  ಹತ್ತು ಬಾರಿ ಯೋಚಿಸದೆ ಹೆಜ್ಜೆ ಮುಂದಿಡುವ ಜಾಯಮಾನದವಳಲ್ಲ. ಜೀವನವನ್ನು ಅತ್ಯಂತ ಜಾಗೂಕರತೆಯಿಂದ ಕಟ್ಟಿಕೊಂಡವಳು. ಅಂಥವಳು ಅವನ ವಿಷಯದಲ್ಲಿ ಎಡವಿದ್ದಳು.

ಅವರಿಬ್ಬರು ಒಂದೇ ಹಾದಿಯ ಪಯಣಿಗರೇನು ಅಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಮೊದಲ ನೋಟದಲ್ಲೇ ಪ್ರೀತಿ ಪ್ರೇಮ ಆಕರ್ಷಣೆಗೆ ಬಲಿಯಾಗುವ ಹದಿ ವಯಸ್ಸನ್ನೆಲ್ಲಾ ಕಳೆದವರಿಬ್ಬರು. ಯಾವುದೋ ಒಂದು ತಿರುವಿನಲ್ಲಿ ಭೇಟಿಯಾಗಿದ್ದರು.  ಅವನು ಅವಳ ಬೆಂಬಿಡದೆ ಗೋಗರೆದು ಹಿಂದೆ ಮುಂದೆ ಯೋಚಿಸದೆ ತನ್ನ ಒಲವ ತೊಡಿ ಕೊಂಡಿದ್ದ. ಅವನಿಂದ ದೂರವಾಗುವ ಗಟ್ಟಿ ಮನಸ್ಸು ಮಾಡಿದಾಗಲೇಲ್ಲಾ, ಬಾರಿ ಬಾರಿ ಅವನಿಗೆ ಸೋತಿದ್ದಳು. ಬೆಟ್ಟದಷ್ಟು ಪ್ರೀತಿಯನ್ನು ಅವನು ಅವಳ ಹಾದಿಗೆ ಅಡ್ಡವಾಗಿ ಹರವಿದ್ದ. ಅವಳು ತನ್ನ ದಾರಿ ಮರೆತು ಅವನ ಪ್ರೀತಿಯ ಬೆಟ್ಟವನ್ನು ದಾಟಲಾರದೆ ಅಲ್ಲೇ ನಿಂತೇ ಬಿಟ್ಟಳು. ಅವನು ಅವಳು ಕರೆದಾಗಲೇಲ್ಲಾ ಓಗೋಡುತ್ತಿದ್ದ. ಅವಳನ್ನು ಅವನ ಒಲವಿನ ಹೊಳೆಯಲ್ಲಿ ತೇಲಿಸಿದ್ದ. ಅವನ ದಿನದ ಸಮಯ ಪೂರ್ತಿ ಅವಳಿಗೆ ಮಾತ್ರ  ಸೀಮಿತ ಎನ್ನುವಂತೆ ಸದಾ ಜೊತೆಯಲ್ಲಿರುತ್ತಿದ್ದ. ಅವನಿಂದ ಗುಡ್ ಮಾರ್ನಿಂಗ್, ಗುಡ್ ನೈಟ್‌ಗಳಿಲ್ಲದೇ ಅವಳ ಜೀವನದಲ್ಲಿ ಬೆಳಗು ರಾತ್ರಿಗಳೇ ಇಲ್ಲವೇನೋ ಅನ್ನುವಷ್ಟು ಅವಳು ಅವನಿಗೆ ಒಗ್ಗಿ ಹೋಗ್ಗಿದ್ದಳು.  ಅವರಿಬ್ಬರು ಜೊತೆಗೂಡಿ ಕೇಳಿದ ಹಾಡುಗಳು, ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಮುಂದಿನ ಜನ್ಮಕ್ಕಾಗುವಷ್ಟು ಕನಸು ಕಂಡಿದ್ದರು. ಮೊದಲಿನಿಂದಲೂ ಅಂಕೆ ಸಂಖ್ಯೆಗಳ ವ್ಯವಹಾರ ಅವಳಿಗೆ ಆಗಿ ಬಾರದು. ಆದರೆ ಜೀವನದಲ್ಲಿ ಅವನು ಕಾಲಿಟ್ಟ ಘಳಿಗೆಯಿಂದ  ನಿಮಿಷ, ಗಂಟೆ, ದಿನಗಳ ಲೆಕ್ಕದಲ್ಲಿ ಪಳಗಿದ್ದಳು. ಆರು ಅಂಕೆಯ ಒಂದು ಫೋನ್ ನಂಬರ್‌ಗೆ ಮೂರು ಸಾರಿ ಪುಸ್ತಕ ನೋಡುವ ಅವಳು ನಿದ್ದೆಗಣ್ಣಿಲ್ಲಿ ಕೇಳಿದರೂ ಹತ್ತು ಅಂಕೆಗಳ ಅವನ ಎರಡೂ ಮೊಬೈಲ್ ಸಂಖ್ಯೆಗಳನ್ನು ಕನವರಿಸುವಷ್ಟು ಅವಳು ಅವನಿಂದ ಬದಲಾಗಿದ್ದಳು. ಅವನಿಂದ ಹೆಚ್ಚು ಹೆಚ್ಚು ಪ್ರೀತಿ ಬಯಸ ತೊಡಗಿದ್ದಳು. ದಿನದಿಂದ ದಿನಕ್ಕೆ ಅವನೆಡೆಗೆ ಅವಳು ಜಾಸ್ತಿ ಪೊಸೆಸ್ಸಿವ್  ಆದಂತೆಲ್ಲಾ ಅವನು ಅವಳ ನಿರಿಕ್ಷೆಯ ಮಟ್ಟ ತಲುಪಲಾರದೆ ಸೋತ. ಅವಳು ಅವನ ಕನವರಿಕೆಯಲ್ಲಿ ಸೋರಗ ತೊಡಗಿದ್ದಳು. ಅವನ ಹೊರತಾಗಿ ಅವಳು  ಬದುಕಬಲ್ಲಳು, ಆದರೆ ಅವನ ಜೊತೆ ಜೊತೆಯಲ್ಲಿ ಬದುಕುವುದು ಅವಳಿಗೆ ಪ್ರಿಯವಾದದ್ದು.
ಅವರಿಬ್ಬರ ಸಂಬಂಧ ಮುಷ್ಟಿಯಲ್ಲಿನ ಮರಳಿನ ಹಾಗೆ. ಮುಷ್ಟಿ ಕಟ್ಟಿದರೂ, ಬಿಟ್ಟರೂ ಕೈಯಿಂದ ಜಾರಿ ಹೋಗುತ್ತದೆ ಎಂಬುದು ಅರಿವಾಗುವ ವೇಳೆಗಾಗಲೇ ಅವರಿಬ್ಬರ ಮಧ್ಯೆ ಮಾತಿಗೆ ಬರಗಾಲ ಆರಂಭವಾಗಿತ್ತು. ಜೀವನದಲ್ಲಿ ಒಟ್ಟಿಗೆ ಸಾಗುವ ಕನಸು ತುಂಬಿ ಆತ ಭವಿಷ್ಯದ ಕಡೆ ಮುಖ ತಿರುಗಿಸಿದ್ದ. ಅವನು ಕಟ್ಟಿ ಕೊಂಡ ಗುರಿ ಸಾಧಿಸುವ ಛಲದಲ್ಲಿ ಒಟ್ಟಿಗೆ ಕಂಡ ಕನಸಿಗೆ ಸಮಯವಿಲ್ಲದೆ ಮಸುಕಾಗ ತೊಡಗಿತ್ತು. ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸಿದಳು.   ಮೊದಮೊದಲು ಮುನಿದಳು, ಜಗಳವಾಡಿದಳು, ಅತ್ತಳು, ಕೊನೆಯಲ್ಲಿ ಮೌನವಾದಳು. ನಿಧಾನವಾಗಿ ಅವಳಿಗೆ ಅರಿವಾಗ ತೊಡಗಿತ್ತು  ಅವನ ಹಾದಿಯೇ ಬೇರೆ, ಅವಳದೇ ಬೇರೆಯೆಂದು. ಆದರೂ ದುಂಡಗಿರೊ ಭೂಮಿಯ ಯಾವುದೋ ತಿರುವಿನಲ್ಲಿ ಮತ್ತೆ ಅವನು ಸಿಗಬಹುದು ಎಂಬ ಆಸೆ ಅವಳಲ್ಲಿ. ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮತ್ತೆ ಮತ್ತೆ  ತಿರುಗಿ ನೋಡುತ್ತಾ, ಅವನ ನೆನಪುಗಳೊಂದಿಗೆ  ಮರೆತ ಅವಳ ಹಾದಿಯಲ್ಲಿ ಪುನಃ  ಹೆಜ್ಜೆ ಹಾಕಲು ನಿರ್ಧರಿಸಿದಳು.

ಈಗ ಅವಳು ಮತ್ತೆ ಲೆಕ್ಕ ತಪ್ಪುತ್ತಿದ್ದಾಳೆ. ಎಷ್ಟು ಯೋಚಿಸಿದರೂ ಅವನ ಮೊಬೈಲ್ ಫೋನಿನ ಒಂಬತ್ತೇ ಸಂಖ್ಯೆಗಳು ಅವಳಿಗೆ ನೆನಪಾಗುವುದು.

July 19, 2013

ಸುಮ್ಮನೆ ಹಾಗೇ ಇಷ್ಟವಾದವರು.



 ದ್ವೇಷಿಸಲು ಕಾರಣ ಬೇಕು. ಆದೇ ಇಷ್ಟವಾಗಲೂ, ಪ್ರೀತಿ ಹುಟ್ಟಲು ಒಂದೇ ಒಂದು ಕಾರಣ ಕೂಡ ಬೇಡ.
ಕೆಲವರು ಹಾಗೇ ಸುಮ್ಮನೆ ಇಷ್ಟವಾಗಿ, ಅವರ ಮೇಲೆ ಪ್ರೀತಿ ಎಲ್ಲಿಂದಲೋ ಪ್ರೀತಿ ಹುಟ್ಟಿಕೊಂಡು ಬಿಡುತ್ತದೆ. ಕನಿಷ್ಟ ಅವರಿಂದ ಮರು ಪ್ರೀತಿಯನ್ನು ಅಪಕ್ಷೇಸಿದಷ್ಟೂ ಸುಮ್ಮನೆ ಇಷ್ಟವಾಗಿ ಬಿಡುತ್ತಾರೆ. ಅವರೇಲ್ಲಾ ತುಂಬಾ ಹತ್ತಿರದವರಾಗಿರ ಬೇಕೆಂದೂ ಇಲ್ಲ. ಅವರಲ್ಲಿ ಕೆಲವರನ್ನೂ ಒಂದು ಸಾರಿ ಭೇಟಿ ದೂರದ ಮಾತು, ನೇರವಾಗಿ ಮುಖ ಕೂಡ ನೋಡಿರುವುದಿಲ್ಲ. ಆದರೂ ಬದುಕಿಗೆ ಎಷ್ಟೊಂದು ಸಂತೋಷ ನೀಡಬಲ್ಲರು. ನನ್ನ ಜೀವನದ ಖಷಿ ಕ್ಷಣಗಳಿಗೆ ಅವರೆಲ್ಲಾ ಎಷ್ಟು ಕಾರಣರೋ ಅಷ್ಟೇ ಪಾಲುಗಾರರು ಕೂಡ.
ನಾನು ಪಿಯುಸಿ ಓದುವಾಗ ಹಾಸ್ಟೇಲ್‌ಮೇಟ್ ಆಗಿದ್ದ ಸುಂದರ ನಗುವಿನ ತಾನು ಹೋದಲ್ಲೇಲ್ಲಾ ಖುಷಿ ಹಂಚುವ ಲೈವ್ಲಿ ಹುಡುಗಿ. ನೋಡಿದ ಮೊದಲ ಕ್ಷಣದಿಂದಲೇ ಹಾಗೆ ಸುಮ್ಮನೆ ಇಷ್ಟವಾದವಳು.  ಅವಳಿಂದ ಒಂದೇ ಒಂದು ಪದದ ಮೆಸೇಜ್ ಸಹ ನನ್ನನ್ನು ದಿನ ಪೂರ್ತಿ ಖುಷಿಯಾಗಿಡಬಲ್ಲದು. ಇನ್ನೂ ನನ್ನ ಫ್ರೆಂಡ್ ಹೆಂಡತಿ  ನಮ್ಮಿಬ್ಬರ ನಡುವೆ ಫ್ರೆಂಡ್ಸ್, ಅಭಿರುಚಿ, ಆಸಕ್ತಿ ಯಾವುದೊಂದು ಸಹ ಕಾಮನ್ ಅಲ್ಲ. ಆದರೂ ಅವರು ಸುಮ್ಸುಮ್ಮನೆ ಇಷ್ಟವಾಗಿ ಬಿಟ್ಟಿದ್ದಾರೆ.
ನನ್ನ ಗಂಡನ   ದೂರದ ಸಂಬಂಧಿ ಹುಡುಗ. ವರ್ಷಕ್ಕೊಮ್ಮೆ ಅಲ್ಲಿ ಇಲ್ಲಿ ಫಂಕ್ಷನ್‌ಗಳಲ್ಲಿ ಐದೋಹತ್ತು ನಿಮಿಷ ಮಾತಿಗೆ ಸಿಗುವ ಇವನು, ಮುಂದಿನ ಭೇಟಿಗಾಗುವಷ್ಟು ಪ್ರೀತಿ ಹಂಚಿ ಮುಂದಿನ ಭೇಟಿಗೆ ಕಾಯುವಂತೆ ಮಾಡುತ್ತಾನೆ. ನಮ್ಮ ತೋಟ ಖರೀದಿಸಿದ ಗೌಡರ ಸೆನ್ಸಿಬಲ್ ಹೆಂಡತಿ ನನ್ನ ಅತಿ ಪ್ರೀತಿಯ ಅಂಟಿ. ನೋಡಿದ್ದು ಒಂದೇ ಸಾರಿಯಾದರೂ ಸಡನ್‌ ಆಗಿ ಯಾವುದೋ ಒಂದು ಹೊತ್ತಿನಲ್ಲಿ ಅವರನ್ನು ನೋಡಬೇಕು ಅನಿಸುವಷ್ಟು ಇಷ್ಟ. ಇನ್ನೊಬ್ಬರಂತೂ  ಯಾವುದೋ ಜನ್ಮದ ಗೆಳತಿ ಅನ್ನುವಷ್ಟು ಪ್ರಿಯವಾಗಿದ್ದಾರೆ. ನೋಡಿಲ್ಲ, ಮಾತಾಡಿಲ್ಲ, ಆದರೆ ನಾವಿಬ್ಬರ ಒಂದೇ ದಾಟಿಯ ಯೋಚನೆ, ವೀ ಅರ್ ಸೋ ಅಲೈಕ್ ಅನಿಸುವಂತೆ ಮಾಡಿದೆ.
 ನಿರ್ದಿಷ್ಟವಾದ ಕಾರಣವಿಲ್ಲದೆ ಸುಮ್ಮನೆ ಇಷ್ಟವಾಗಿ ನನ್ನ ಬದುಕನ್ನು ಮತ್ತಷ್ಟೂ ಸುಂದರಗೊಳಿಸಿದವರು ಇವರೆಲ್ಲಾ. ನೆನೆಪು ತುಟಿಯಂಚಿನಲ್ಲಿ ನಗು ಮೂಡಿಸುತ್ತದೆ. ಆಗಾಗ ಮಿಸ್ ಕೂಡ ಮಾಡಿಕೊಳುತ್ತೇನೆ. ಸುಮ್ಸುಮ್ಮನೆ ಇಷ್ಟವಾಗುವ ಇವರೆಲ್ಲಾ ನನ್ನ ಬದುಕಲ್ಲಿರುವಾಗ, ಪ್ರೀತಿ ಹಂಚೋಕೆ ಟೈಮ್ ಸಾಕಗಲ್ಲ.. ಇನ್ನೂ ದ್ವೇಷಕ್ಕೆಲ್ಲಿದೆ ಸಮಯ?

July 18, 2013

ಮಗಳೇ ನಿನಗಾಗಿ..



ನಟಿ ಶ್ರೀದೇವಿ ತನ್ನ ಮಗಳನ್ನು ಬಿಡಲು ನಿತ್ಯ ಶಾಲೆಗೆ ಹೋಗುತ್ತಿದ್ದಳಂತೆ. ಆ  ಶಾಲೆಯ ಇತರ ಮಕ್ಕಳ ತಾಯಂದಿರು ಯಮ್ಮಿ ಮಮ್ಮಿ ಶ್ರೀದೇವಿಯಿಂದ ಪ್ರೇರಪಿತರಾಗಿ ಬ್ಯೂಟಿಪಾರ್ಲರ್ ಮತ್ತು ಜಿಮ್‌ಗೆ ಮುಗ್ಗಿ ಬೀಳುತ್ತಿದ್ದರಂತೆ ಎಂದು ಬಹಳ ಹಿಂದೆ ಯಾವುದೊ ಒಂದು ಮ್ಯಾಗಜೀನ್‌ನಲ್ಲಿ ಓದಿದ ನೆನಪು. ಈ ಹಳೆ ಕಥೆ ಈಗ ಮತ್ತೆ ನೆನಪಾಗಲು ಕಾರಣ ನನ್ನ  ಮಗಳ ಸ್ಕೂಲ್‌ಗೆ ಬರುವ ಯಾವುದೇ ಸೆಲೆಬ್ರೆಟಿ  ಮಮ್ಮಿ ಅಲ್ಲ, ನೇರವಾಗಿ ನನ್ನ ಮಗಳೇ.  ಪ್ರಾರಂಭದಲ್ಲಿ ಅವಳ ಸ್ಕೂಲ್‌ನ ಪೆರೆಂಟ್ಸ್ ಮೀಟಿಂಗ್ ಅಥವಾ ಇನ್ಯಾವುದೋ ಫಂಕ್ಷನ್‌ಗೆ ಬರುವ ಅವಳ ಫ್ರೆಂಡ್ಸ್‌ನ ಅಮ್ಮಂದಿರ ಬಗ್ಗೆ  ಅಮ್ಮ  ದಿಶಾನ ಅಮ್ಮ ಎಷ್ಟು ಚೆನ್ನಾಗಿದ್ದಾರೆ, ಆಯೇಷಾನ ಅಮ್ಮ ಯಾಕಮ್ಮ ಅಷ್ಟು ತೆಳ್ಳಗಿದ್ದಾರೆ ಅಂದರೆ ಇನ್ನೊಬ್ಬರ ಅಮ್ಮ ಜೀನ್ಸ್ ಪ್ಯಾಂಟ್ ಹಾಕ್ತಾರೆ ಅಂತ ಹೇಳುತ್ತಿದ್ದಳು. ಆಗಾಗ ಅಮ್ಮ ನೀನು ಡುಮ್ಮಿ ಆಗ್ತಾ ಇದ್ದೀಯಾ ಅಂತ ರಾಗ ಎಳೆಯುತ್ತಿದ್ದವಳು, ಸ್ಪಲ್ಪ ದಿನ ಕಳೆದ ಹಾಗೇ ಅಮ್ಮ ನೀನು  ಇವತ್ತು ವಾಕ್ ಹೋಗಲ್ವಾ ಅಂತ ದಿನ  ಎನ್‌ಕೈವರಿ ಶುರುಮಾಡಿದ್ದಳು. ಅಮ್ಮ ನಿನ್ನ ಹೊಟ್ಟೆ ಯಾಕೆ ಇಷ್ಟು ದಪ್ಪ? ನೀನ್ಯಾಕೆ ಜೀನ್ಸ್ ಪ್ಯಾಂಟ್ ಹಾಕಲ್ಲ? ನೀನು ಅವರ ಅಮ್ಮನ ತರ ತೆಳ್ಳಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಮ್ಯಾಮ್ ಹೇಳಿದ್ದಾರೆ ಯೋಗ ಮಾಡಿದ್ರರೆ ಸ್ಲಿಮ್ ಆಗುತ್ತಾರೆ, ನೀನು ಯಾಕೆ ಮಾಡಲ್ಲ? ಟಿವಿ ಮುಂದೆ ಕುತ್ಕೊಂಡು ಏನು ತಿನ್ನಬಾರದಂತೆ ಹೀಗೆ ದಿನ ಒಂದೊಂದು ಸ್ಕೂಲ್‌ನಲ್ಲಿ  ರೆಕಾರ್ಡ್‌ ಆದ ಫಿಟ್‌ನೆಸ್ ಪಾಠ ನೇರವಾಗಿ ನನ್ನ ಮುಂದೆ. ನನ್ನ ಸುತ್ತಳತೆ ಹೆಚ್ಚಾದಂತೆ ಅವಳ ರಗಳೆ ಕೂಡ. ಬೇರೆಯವರಿಗೆ ಹೋಲಿಸಿದಾಗಲೇ ನಮ್ಮೊಳಗೆ ಬೆಂಕಿ ಹತ್ತಿಕೊಳ್ಳುವುದು.
ಕನ್ನಡಿ ಮುಂದೆ ಹತ್ತು ನಿಮಿಷ ನಿಂತು ನೋಡಿದೆ. ಅಸುಪಾಸು ನಲವತ್ತರ ಸೈಜಿನ ದೊಗಲೆ ಶೇಪ್‌ಲೆಸ್ ಚೂಡಿದಾರದಲ್ಲಿ ನಿಂತಿರುವ ನನ್ನ ಮೇಲೆ ನನಗೆ ಬೇಸರವಾಯಿತು. ವಾರ್ಡ್‌ರೋಬ್ ತೆಗೆದು ನೋಡಿದರೆ ಎಲ್ಲಾ ಅದೇ ಸೈಜಿನ ಡ್ರೆಸ್‌ಗಳು. ಕೊನೆ ಆರೆಯ ಮೂಲೆಯಿಂದ ಎರಡು ಸಾಲು ಮುಗ್ಗಲು ಹಿಡಿದ  ಕುರ್ತಾಗಳು, ಅಡಿಯಲ್ಲಿಟ್ಟ ನನ್ನ ಹಳೆಯ ಎರಡು ಜೀನ್ಸ್ ಪ್ಯಾಂಟ್‍‌ಗಳನ್ನು ನೋಡಿ ದು:ಖವಾಯಿತು. ಅವೆಲ್ಲಾ ಈಗ ಹಾಕುವ ಡ್ರೆಸ್‌ಗಳ ಅರ್ಧ ಸೈಜಿನವು. ಹಳೆ ಫೋಟೊಗಳನ್ನು ನೋಡ್ದೆ. ತೀರಾ ಸಣಕಲು ಕಡ್ಡಿಯಲ್ಲದ್ದಿದ್ದರು, ಸುಮಾರು ಸಪೂರಾ ಇದ್ದೆ ಎಂಬುದು ಸ್ಪಷ್ಟವಾಗಿ ಅರಿವಾಯಿತು. ತಕ್ಷಣ ನಿರ್ಧರಿಸಿದೆ.  ಮಗಳಿಗೊಸ್ಕರವಾದರು  ಹೊಟ್ಟೆ ಕರಗಿಸ ಬೇಕು, ಸೊಂಟದ ಸುತ್ತಳತ್ತೆ ಕಮ್ಮಿ ಮಾಡಿಕೊಳ್ಳಲೇಬೇಕು ಎಂದು.
ಹಾಕಲಾಗದೆ ತಳ ಸೇರಿರುವ ಕುರ್ತಾಗಳಿಗೆ ಪ್ರಾಮಿಸ್ ಮಾಡಿದ್ದೇನೆ ಮಳೆಗಾಲ ಕಳೆದ ಮೇಲೆ ಒಗೆದು ಅವುಗಳಿಗೆ ಮತ್ತೆ ಮೇಲಿನ ಅರೆಯಲ್ಲಿ ಜಾಗ ಕೊಡುತ್ತೇನೆ ಅಂತ. ಇನ್ನೂ ಮುಂದೆ  ಖಂಡಿತವಾಗಲೂ ಮಗಳು ತಟ್ಟೆಯಲ್ಲಿ ಹೊಟ್ಟೆಗೆ ಹೊಟ್ಟೆಗೆ ತುಂಬಿಕೊಳ್ಳಲ್ಲ, ಅವಳು ಲೇಸ್ ಚಿಪ್ಸ್ ತಿನ್ನುವಾಗ ಬೇಡಲ್ಲಅವಳು ಸ್ಕೂಲ್‌ಗೆ ಹೋದ ಮೇಲೆ ಚಾಕೊಲೇಟ್ ಕದ್ದ್ದು ತಿನ್ನಲ್ಲ. ನಾನೂ ಯಮ್ಮಿ ಮಮ್ಮಿ ಆಗುವ ಕಸರತ್ತಿನಲ್ಲಿ  ಗ್ರೀನ್ ಟೀ, ನೀರು, ಒಣ ಚಪಾತಿ, ಮೊಳಕೆ ಕಾಳು, ಹಸಿ ತರಕಾರಿಯಷ್ಟೇ ಮೆನು. ಜೊತೆಗೆ ಕನಿಷ್ಟ ಅರ್ಧ ಗಂಟೆಯಾದರು ವರ್ಕ್‌ಔಟ್. ಗೊತ್ತು ಈ ಅವೇಶ ಹೆಚ್ಚು ದಿನ ಉಳಿಯೋಲ್ಲ.  ಆಗಾಗ ರೋಟಿನ್ ತಪ್ಪುತ್ತೆ. ಆದರೂ... ಮುಂದುವರಿಸುತ್ತೇನೆ.

ಈ ಬಾರಿ ನನ್ನ ಮಗಳ ಫ್ರೆಂಡ್ಸ್‌ನ ಅಮ್ಮಂದಿರ ಜೊತೆ ಪೈಪೋಟಿ ಹಾಗಾಗಿ.

July 15, 2013

Making Life Interesting!


ಮನುಷ್ಯ ಜೀವನದಲ್ಲಿ ಆಸಕ್ತಿ ಉಳಿಸಿಕೊಳ್ಳಲು ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು ಅನ್ನುವ ಯಾರೋ ಹೇಳಿದ  ಮಾತು (ಹೇಳಿದಾರೋ ಇಲ್ವೊ ಗೊತ್ತಿಲ್ಲ!) ನಾನು ಬದುಕಿನಲ್ಲಿ ಅಳವಡಿಸಿಕೊಂಡ ಮತ್ತು ನಿರಂತರವಾಗಿ ಪಾಲಿಸುತ್ತಾ ಬಂದಿರುವ ಏಕೈಕ ವೇದ ವಾಕ್ಯ. ಆದರ ಕೊನೆ ಮುಟ್ಟುವುದೇನೂ  ನನ್ನ ಪಾಲಿಸಿಯಲ್ಲಿ ಒಳಪಟ್ಟಿಲ್ಲ ಅನ್ನುವುದನ್ನು ಮೊದಲೇ ಹೇಳುತ್ತೇನೆ ಹಾಗೂ ಮುಖ್ಯ ಅಂತ ಇಂದಿಗೂ ಅಂದುಕೊಂಡಿಲ್ಲ.
ಗ್ರಹಗಳ ಗತಿಗಳು ಬದಲಾಗಿ ಹೇಗೆ ತಪ್ಪದೇ ತಿಂಗಳಿಗೊಮ್ಮೆ ಅಮವಾಸ್ಯೆ ಮತ್ತು ಹುಣ್ಣಿಮೆಗಳಾಗುತ್ತಾವೊ...  ಹಾಗೆ ನನಗೂ, ಎರಡು-ಮೂರು ತಿಂಗಳಿಗೊಮ್ಮೆ ಕಾಣಿಸಿಕೊಳ್ಳುವ ಕಾಯಿಲೆ ಎಂದರೆ ಜೀವನದಲ್ಲಿ ಜಿಗುಪ್ಸೆ. ಇರುವುದನ್ನೇಲ್ಲಾ ಬಿಟ್ಟು ಓಡಿ ಹೋಗುವ ಅಲೋಚನೆ. ಆಗೇಲ್ಲಾ ನನಗೆ ಕಂಪ್ಯೂಟರ್‌ ಮತ್ತು ಮೊಬೈಲ್‌ನಲ್ಲಿರುವ ಡಿಲಿಟ್ ಅಪ್ಶನ್ ಬದುಕಿಗೂ ಅನ್ವಯವಾಗಿದ್ರೆ ಎಷ್ಟು ಚೆನ್ನ ಅನ್ಸುತ್ತೆ. ಕೊನೆ ಪಕ್ಷ  ರಿಫ್ರೆಶ್  ಬಟನ್ ಆದರೂ ಪರವಾಗಿರಲಿಲ್ಲ ಅಂತ ಅಂದುಕೊಳ್ಳತ್ತೀನಿ. ಹೀಗೆ ಜಿಗುಪ್ಸೆಯಲ್ಲೇ ಎರಡು ಮೂರು ದಿನ ಕಳೆದ ನಂತರ ಸಡನ್ ಆಗಿ ನನ್ನ ಬದುಕಿನಲ್ಲಿ ಆಳವಡಿಸಿಕೊಂಡಿರುವ  ವೇದ ವಾಕ್ಯ ನೆನೆಪಾಗುವುದು. ಹೀಗೆ ಙ್ಞಾನೋದಯವಾದಗಲೇಲ್ಲಾ ಜೀವನದಲ್ಲಿ ಮತ್ತೆ ಆಸಕ್ತಿ ಕಂಡುಕೊಳ್ಳಲು ನಾನು ಆಯ್ದುಕೊಂಡ ಪ್ರಯೋಗಗಳ ಪಟ್ಟಿ ಸ್ಪಲ್ಪ ಜಾಸ್ತಿ ದೊಡ್ಡದೇ. ನನ್ನ ಆಯ್ಕೆಗಳು ಎಲ್ಲವೂ ತೀರ  ಒಂದಕ್ಕೊಂದು ಸಂಬಂಧವಿಲ್ಲದವು. ಸ್ಪಲ್ಪ ದಿನ ಬಣ್ಣಗಳ ಹಿಂದೆ ಬಿದ್ದು  ಪಾಠ್ ಪೆಯಿಂಟಿಂಗ್ ಹುಚ್ಚು ಹಿಡಿಸಿಕೊಂಡಿದ್ದೆ. ಆದಕ್ಕೆ ಬೇಕಾಗುವ ಸಲಕರಣೆಗಳನ್ನು ಕೊಂಡುಕೊಳ್ಳುವಾಗ ಇದ್ದ ಆಸ್ಥೆ ಕುಂಡಗಳಿಗೆ ಬಣ್ಣ ಬಳಿಯುವಾಗ ಉಳಿದಿರಲಿಲ್ಲ. ವರ್ಷಗಳಿಂದ ಇನ್ನೂ  ಅರ್ಧಂಬರ್ಧ ಬಣ್ಣ ಹಚ್ಚಿಸಿಕೊಂಡೇ ಮೂಲೆಯಲ್ಲಿ ಕುತಿರುವ ಪಾಠ್ ನನ್ನನ್ನು ನಿತ್ಯ ಅಣುಕಿಸಿದಂತೆ ಭಾಸವಾಗುತ್ತದೆ. ಒಂದು ದಿನವೂ ಸೂಜಿ ದಾರ ಹಿಡಿಯದ ನನಗೆ ಒಮ್ಮೆ ಇದಕ್ಕಿದ್ದ ಹಾಗೆ ಟೈಲರಿಂಗ್ ಮೇಲೆ ಆಸಕ್ತಿ ಹುಟ್ಟಿಕೊಂಡಿದಂತೂ ನಿಜ. ಆ ಕಲೆಯ ಮೇಲೆ ಹಿಡಿತ ಸಾಧಿಸಿ ಸ್ಪಂತ ಗಾರ್ಮೆಂಟ್ ಉದ್ಯಮ ಪ್ರಾರಂಭಿಸುವ ವರೆಗಿನ ಕನಸು ಕೂಡ ಕಂಡಿದೆ.  ಪೂರ್ವ ಸಿದ್ಧತೆ ಸಹ ಆಷ್ಟೇ ಜೋರಾಗಿ ನೆಡೆದಿತ್ತು. ಮೆಷಿನ್, ಕತ್ತರಿ ಬಣ್ನ ಬಣ್ಣ್ದ ದಾರ, ಬಟ್ಟೆ ಎಲ್ಲ ಮನೆಗೆ ಬಂತು. ಜೊತೆಗೆ ಮನೆಗೇ ಬಂದು  ಟೈಲಂರಿಗ್ ಪಾಠ ಹೇಳಿಕೊಡುವ ಹುಡುಗಿ.  ಮೂರೇ ದಿನ ಮತ್ತೆ ಆದರ ಸುದ್ದಿನೇ ಎತ್ತಲಿಲ್ಲ. ಪದೇ ಪದೇ ತುಂಡಾಗುವ ಮತ್ತು  ಸೂಜಿಯಿಂದ ತಪ್ಪಿ ಹೋಗುವ ದಾರ ಅದರೊಂದಿಗೆ ಮಧ್ಯದಲ್ಲಿ  ಚಕ್ರದಿಂದ ಜಾರಿ ಹೋಗುವ ಬೆಲ್ಟ್‌ನ ಕಾಟದಿಂದ ರೋಸತ್ತಿ ಟೈಲರಿಂಗ್‌ಗೆ ಎಳ್ಳು ನೀರು ಬಿತ್ತು. ಯಾವಾಗಲೂ ನಮಗೆ ಫಾರಿನ್ ಅಂದರೆ ಒಂಥರ ಆಕರ್ಷಣೆ ಅದು ಅಲ್ಲಿನ ಬಟ್ಟೆ-ಬರೆ ಜನ-ಭಾಷೆ ಯಾವುದು ಅದಕ್ಕೆ ಹೊರತಾಗಿ ಉಳಿದ್ದಿಲ್ಲ. ಹಾಗೇಯೇ ನಾನೂ ಜರ್ಮನಿ ಭಾಷೆ ಕಲಿಯುವ ಸಾಹಸಕ್ಕೆ ಇಳಿದೆ. ನೆಟ್ ಎಲ್ಲಾ ಜಾಲಾಡಿ ಐದಾರು ಸೈಟ್‌ಗಳನ್ನ ಆಯ್ಕೆ ಮಾಡಿಕೊಂಡು, ಈ ಬಾರಿ ಸ್ಪಲ್ಪ ಬುದ್ಧಿವಂತಿಕೆ ಓಡಿಸಿ ಫ್ರೀ ಕೋರ್ಸ್ ಆಯ್ಕೆ ಮಾಡಿಕೊಂಡೆ. ಮೊದಲ ಎರಡು ದಿನ ತುಂಬಾ ಪ್ರಮಾಣಿಕವಾಗಿ ಕಲಿಯುವ ಪ್ರಯತ್ನ ಮಾಡ್ದೆ ಸಹ. ನಂತರ ನನ್ನ ಇನ್‌ಬಾಕ್ಸ್‌ ತೆರೆಯದೆ ಉಳಿಯದ ಜರ್ಮನಿ ಭಾಷೆ ಪಾಠಗಳಿಂದ ತುಂಬಿ ತುಳುಕಲಾರಂಭಿಸಿದಾಗ, ಅದನ್ನು ಅನ್ ಸಬ್‌ಸ್ಕ್ರೈಬ್ ಮಾಡಿ  ಕೈ ತೊಳೆದುಕೊಂಡೆ. ಆಗ ನನಗೆ ಕಾಲೇಜು ದಿನಗಳಲ್ಲಿ ನಮ್ಮ ಇಂಗ್ಲೀಷ್ ಪ್ರೊಫೆಸರೊಬ್ಬರು ಈ ರೀತಿ ಬೇರೆ ದೇಶಗಳ ಭಾಷೆ ಕಲಿಯುವ ಬಗ್ಗೆ  ಸಲಹೆ ಕೇಳಿದಾಗ ಹೇಳಿದ ಮಾತು ನೆನಪಾಯಿತು.You all are already struggling with one foreign language. Do not again do the same mistake ಇದಕ್ಕೂ ಮೊದಲು ಹಿಂದಿ ಪಾಂಡಿತ್ಯ ಸಾಧಿಸುವ ನನ್ನ ಕಾರ್ಯಕ್ರಮದಡಿಯಲ್ಲಿ ಸುಮಾರು ಪರೀಕ್ಷೆಗಳನ್ನು ತೆಗೆದು ಕೊಂಡಿದ್ದೆ. ಇನ್ನೂ ಸ್ಪಲ್ಪ ದಿನ ಯೋಗ ಪ್ರಯೋಗವೂ ನೆಡೆದಿತ್ತು. ಅಮೇಲೆ ಸೊಪ್ಪು ತರಕಾರಿಗಳನ್ನು   ಬೆಳೆಯುವ ಕಡೆಗೂ ಸ್ಪಲ್ಪ ದಿನ ಆಸಕ್ತಿ ಹರಿಸಿದ್ದೆ. ಇವುಗಳೇಲ್ಲಾವುದಕ್ಕಿಂತ ವಿಭಿನ್ನವಾದ ನನ್ನ ಪ್ರಯೋಗ ಎಂದರೆ ಯಾವುದೋ  ಒಂದು ಪ್ರಸಿದ್ಧ  ಕಂಪೆನಿಯ ರೆಪ್ರಸೆಂಟಿಟಿವ್ ಆಗಿ ಅದರ ಉತ್ಪನ್ನಗಳನ್ನು ತರಿಸಿ ಮಾರಟಮಾಡುವುದು.  ಅದರ್ಲ್ಲಿ  ಬಾಕಿ  ಕೊಡುವವರ ಪಟ್ಟಿ ಹನುಮಂತನ ಬಾಲವಾಗಿ ಕೈ ಸುಟ್ಟು ಕೊಂಡಿದಾಯಿತು.
ಲೈಫನ್ನು  ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ  ಪ್ರಯತ್ನಗಳನ್ನು ಮಾಡ್ತಾನೆ ಇರ್ತೀನಿ.  ವರ್ಲಿ ಚಿತ್ರಕಲೆ, ಕ್ರೋಷ, ಡ್ರೈವಿಂಗ್, ಸ್ವಿಮಿಂಗ್, ಪ್ರಾಣಯಾಮ ಕೆಲವು ನೆನಪಲ್ಲಿ ಉಳಿದುಕೊಂಡಿರುವ ಉದಾಹರಣೆಗಳಷ್ಟೆ. ಅವುಗಳು ಬದಲಾಗುತ್ತಲೇ ಇರುತ್ತವೆ ಮತ್ತು ಯಾವುದೊಂದು  ಹೆಚ್ಚು ಕಾಲ ಉಳಿದ್ದಿಲ್ಲ. ಒಂದರಲ್ಲೂ ಸಹ ಯಶಸ್ಸು ಕಂಡಿಲ್ಲವಾದರೂ ನನ್ನ ಈ ದ್ಯೇಯಕ್ಕೆ ಮಾತ್ರ  ಕೊನೆಯವರಗೂ ಬದ್ಧಳಾಗಿರುತ್ತೇನೆ.

ಈಗ ಸದ್ಯಕ್ಕೆ  ಗಿಟಾರ್‌ ಕೈಗೆ ಬಂದಿದೆ.    

July 3, 2013

ಮಳೆ

ನಿನ್ನೆ ಮಧ್ಯಾಹ್ನ ಶುರುವಾಗಿರೋ ಮಳೆ ಇವತ್ತು ಮಧ್ಯಾಹ್ನ ದಾಟಿದರೂ ಇನ್ನೂ ಹನಿ ಕಡಿದ್ದಿಲ್ಲ. ಎಲ್ಲಿ ನೋಡಿದರೂ ನೀರು, ಧೋ ಅನ್ನೋ ಶಬ್ದ ಬಿಟ್ಟರೆ  ಮನೆ ಹತ್ತಿರ ಒಂದೇ ಒಂದು ನರ ಪಿಳ್ಳೆಯ ಸುಳಿವೂ ಇಲ್ಲ. ಕೊನೆ ಪಕ್ಷ ಮನೆ ಸುತ್ತ ಮುತ್ತ ಆಡ್ಡಾಡುವ ನಮ್ಮ ಮನೆ ನಾಯಿಗಳೂ ಪತ್ತೇ ಇಲ್ಲ. ಕರೆಂಟೂ ಫೋನ್ ಎಲ್ಲಾ ಸತ್ತು ಹೋಗಿದ್ದಾವೆ. ಸಧ್ಯಕ್ಕೆ ಬ್ಯಾಟರಿ ಅಲ್ಪ ಸ್ಪಲ್ಪ ಜೀವ  ಉಳಿಸಿಕೊಂಡಿದೆ. ಬರೀ ಮಳೆಯದೇ ಕಾರುಬಾರು. ಹೀಗೆ ಪ್ರತಿ ಬಾರಿ ಮಳೆ ಬಂದಾಗಲೂ ಮನೆ ಮುಂದೆ ಹರಿಯುವ ಕೆಂಪು ಮಣ್ಣಿನ ನೀರಿನ ಜೊತೆ ನನ್ನ ನೆನಪುಗಳು ಮತ್ತೆ ಬಾಲ್ಯಕ್ಕೆ ಜಾರುತ್ತೆ. ಮಲೆನಾಡಿನಲ್ಲಿ ತೋಟದ ಮನೆಯೆಂದರೆ ಸಾಮಾನ್ಯವಾಗಿ ಒಂಟಿ ಮನೆ. ಸುತ್ತಲೂ ತೋಟ, ಸ್ಪಲ್ಪ ತಗ್ಗಿನ ಜಾಗದಲ್ಲಿ  ಒಂದೇ ಹೆಂಚಿನ ಮನೆ ಹೊಸತೇನು ಅಲ್ಲ. ನಮ್ಮದು ಒಂದು ಇಂತ್ತದೇ ಮನೆ. ಮೊದಲೇ ನರ ಮನುಷ್ಯರು ಕಡಿಮೆ, ಮಳೆಗಾಲ ಶುರು ವಾಯಿತು ಅಂದ್ರೆ ಆಗೋ ಈಗೋ ಬರುತ್ತಿದ್ದವರು ಕೂಡ ಆ ಕಡೆ ಮುಖ ಹಾಕುತ್ತಿರಲಿಲ್ಲ.  ಒಂದೇ ಸಮನೆ ಸುರಿಯುವ ಮಳೆ ಶಬ್ಧ. ಹೆಂಚಿನ ಸಂಧಿಯಲ್ಲಿ ನುಸುಳುವ ತಣ್ಣಗೆ  ಕೊರೆಯುವ ಗಾಳಿ  ಕೆಲವು ಜೊತೆಗೆ ಸಾರಿ ನೀರು ಕೂಡ.  ಒರೆಸಿದಷ್ಟು ಕಾವಿ ನೆಲದಲ್ಲಿ ಏಳುವ ನೀರು.  ಮನೆಯೊಳಗೆ  ನುಗ್ಗುವ  ಗಾಳಿಗೆ  ಆಗಾಗ ನಂದಿ ಹೋಗುವ ಸೀಮೆಎಣ್ಣೆ ಚಿಮಣಿ.   ಜಡಿ ಮಳೆ ಜೊತೆ  ವಾರಗಟ್ಟಲೇ ಇರದ ಕರೆಂಟ್, ಮನೆಯಲ್ಲಿರದ ಅಪ್ಪನ ಬಗ್ಗೆ  ಅಮ್ಮನ ಗೊಣಗಾಟ ನಿರಂತರ.  ನನ್ನಲ್ಲಿ ಅಚ್ಚಾಗಿರುವ  ಮಳೆಗಾಲದ ಚಿತ್ರಗಳು.   ಬೆಳಕಿಗೆಂದು ಹೆಂಚಿನ ಮಧ್ಯ ಹಾಕಿದ ಗ್ಲಾಸಿನ ಮೇಲೆ ರಭಸವಾಗಿ ಹರಿಯುವ ನೀರುನಿಲ್ಲವ ಮಾತೇ ಇಲ್ಲದೇ  ಹಟ ಹಿಡಿದ ಮಳೆಉಕ್ಕಿ ಹರಿಯುವ  ತೋಟದ  ಹಳ್ಳದ ಶಬ್ದ ಹಾಗೂ ಆದರ ಕೆಂಪು ನೀರು, ಮನೆಯ ನೀರವ ಮೌನ  ನನಗೆ ಭಯ ಹುಟ್ಟಿಸುತ್ತಿತ್ತು. ಬೆಳಕು ಹರಿಯುವವರೆಗೂ ಮುಸುಕು ಹಾಕಿದ ಹೊದಿಕೆ ತೆಗೆಯುತ್ತಿರಲಿಲ್ಲ. ಆಗೆಲ್ಲಾ ನಮ್ಮ  ಮನೆ ಶಾಪಗ್ರಸ್ತ  ಮನೆ  ಹಾಗೂ ನಾವು ಯಾವುದೋ ಋಷಿಗಳ ಶಾಪಕ್ಕೆ ಬಲಿಯಾಗಿ ಇಲ್ಲಿದ್ದೀವಿ ಅಂತ ಎಷ್ಟೋ ಸಾರಿ ನನಗೆ  ನಾನೇ ಅಂದುಕೊಳ್ಳುತ್ತಿದ್ದೆ.  ಆದರೂ ಹೆಂಚಿನ ಮಾಡಿನ ತುದಿಯಿಂದ  ಬೀಳುವ ನೀರು ನೋಡುವುದು ನನಗೆ ಅತಿ ಪ್ರಿಯವಾಗಿತ್ತು. ಸಾಲಾಗಿ ಬೀಳುವ ನೀರು ನನಗೆ ಯುದ್ಧಕ್ಕೆ ಹೊರಟ ಕುದುರೆ ಹಿಂಡಿನಂತೆ ಕಾಣುತ್ತಿತ್ತು. ಮನೆಯ ಜಗುಲಿಯಲ್ಲಿ ಸೀಡುವ ನೀರಿಗೆ  ಮುಖವೊಡ್ಡಿ  ಹೆಂಚಿನ  ನೀರಿನ ಸಾಲುಗಳನ್ನು ನೋಡುತ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದೆ.
ಈಗ ಬರಿ ಮಳೆಯಷ್ಟೇ ಉಳಿದವೇಲ್ಲಾ ನೆನಪಾಗಿ ಉಳಿದಿವೆ ಅಷ್ಟೇ.  ಸೀಮೆಎಣ್ಣೆ ಚಿಮಣಿ, ನೀರೇಳುವ ನೆಲ, ಸೋರುವ ಹೆಂಚಿನ ಮಾಡು, ತೋಟದ ಹಳ್ಳ, ಅಮ್ಮನ ಗೊಣಗಾಟಮನೆ ಎಲ್ಲಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ….

February 22, 2013

’ಅವನ ಮೇನಿಯಾ’


ನಿನ್ನದ್ದು ಎಲ್ಲಾ ಅತಿರೇಕ. ಮೂರು ಹೊತ್ತು ನಿಂಗೆ ಅದೇ ಧ್ಯಾನ, ಸುತ್ತಿ ಬಳಸಿ ಮತ್ತದೇ ವಿಷ್ಯಕ್ಕೆ  ಬರ್ತಿಯಾ. ಹೀಗೆ ಮುಂದುವರೆದರೆ ಯು ನೀಡ್ ಎ ಕೌನ್ಸಿಲಿಂಗ್. ನಿನಗೆ ಅವನ ಮೇನಿಯಾಅಂತ  ಗೆಳತಿ ಹೆಚ್ಚು ಕಮ್ಮಿ ನನ್ನ ತರಾಟೆಗೆ ತೆಗೆದುಕೊಂಡಳು. ಹಾಗೆ ಜೊತೆಗೆ ಮೇನಿಯಾದ ಹುಳವನ್ನು ನನ್ನ ತಲೆ ಒಳಗೆ ಬಿಟ್ಟಳು. ಮೇನಿಯಾದ  ಬಗ್ಗೆ ತಿಳಿಯುವ ಕೂತುಹಲದಿಂದ   ಸಂಶೋಧನೆ ಮಾಡಲು, ಕೀ ಬೋರ್ಡ್ ಮೇಲೆ ಮೇನಿಯಾ ಅಂತ ಟೈಪಿಸುತ್ತಿದಂತೆ. ಬೆರಳ ತುದಿಯ ನನ್ನ  ಪ್ರಪಂಚ, ಪ್ರೀತಿಯ ಕಂಪ್ಯೂಟರ್ ಪರದೆ ಮೇಲೆ ಪೂರ್ತಿ ಮೇನಿಯಾದ ಪುರಾಣವೇ ಸಿಕ್ಕಿತ್ತು. ಮೇನಿಯಾ ಅನ್ನುವುದು  ಹುಚ್ಚು ಎಂಬ ಅರ್ಥ ಕೊಡುವ ಗ್ರೀಕ್ ಮೂಲದ ಪದವಂತೆ. ಈ ಪದವು ಬುದ್ಧಿವಿಕಲ್ಪ, ಚಿತ್ತವಿಕಾರ, ಉನ್ಮಾದ ಎಂಬ ಅರ್ಥಗಳನ್ನು ನೀಡುತ್ತದೆ. ಇದನ್ನೊಂದು  ವಿಧದ ಮಾನಸಿಕ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಸರಳವಾಗಿ ಮೇನಿಯಾವನ್ನು   ಮಿತಿಮೀರಿದ ಉತ್ಸಾಹ ಅಥವಾ ಬಯಕೆ, ಗೀಳು ಎಂದು ಹೇಳಬಹುದು. ಮನಸ್ಸಿಗೆ ಕಿರಿಕಿರಿ, ತೀವ್ರ ನೀದ್ರಾಹೀನತೆ, ಅತಿಯಾದ ಮಾತು ಮತ್ತು ಸೂಕ್ತವಲ್ಲದ ಸಾಮಾಜಿಕ ವರ್ತನೆಗಳು ಮೇನಿಯಾದ ಲಕ್ಷಣಗಳಲ್ಲಿ ಕೆಲವು.  ಇನ್ನೂ ಈ ಮನಸ್ಸಿನ ಕಾಯಿಲೆಯಲ್ಲಿ ಹಲವು ರೀತಿಯವು.   ಪ್ರತಿಯೊಂದು  ಗೀಳಿಗೂ  ಒಂದೊಂದು ಹೆಸರು ಹೊಂದಿದ ಎ ಟು ಜೆಡ್ ವರೆಗಿನ  ದೊಡ್ಡ ಪಟ್ಟಿ ಹಾಗೂ  ಮನುಷ್ಯನ ತರೇವಾರಿ ಹುಚ್ಚುತನ ಕಂಡು ನಾನು  ಹೌಹಾರಿದೆ. ಅದರೊಂದಿಗೆ ನಾನು ಈ ಹುಚ್ಚುಗಳಲ್ಲಿ ಹಿಂದೆ ಬಿದ್ದಿಲ್ಲ ಎಂಬುದು  ನೆನೆಪಾಗ ತೊಡಗಿತ್ತು. ಸೆಕೆಂಡ್ ಇಯರ್  ಡಿಗ್ರಿಯಲ್ಲಿ ಪರೀಕ್ಷೆಗೆ ಎರಡು ವಾರ ಮುಂಚೆ ನನಗೆ ಯಾವತ್ತು  ಇಲ್ಲದ ಚೆಸ್ ಆಟದ ಹುಚ್ಚು ಹಿಡಿದು ನಾನು ಮತ್ತು  ನನ್ನ ರೂಮ್ ಮೆಟ್  ಸುಮಾರು  ರಾತ್ರಿ ಬೆಳ್ಳಿಗೆ ಮಾಡಿದ್ದು. ಸ್ಪಲ್ಪ ದಿನಗಳ ಕಾಲ ಕಾದಂಬರಿ ಓದೊ ಹುಚ್ಚು ಯಾವ ಮಟ್ಟಕ್ಕೆ ತಲುಪಿತು ಅಂದರೆ ವಾರಗಟ್ಟಲೇ  ಕ್ಲಾಸ್ ಬಂಕ್ ಮಾಡಿ ಸೆಂಟ್ರಲ್ ಲೈಬ್ರರಿಯಲ್ಲಿ  ಕಾಲ ಕಳೆಯುತ್ತಿದ್ದೆ.  ಗಣಿತ ಅಂದರೆ ಮೂರು ಮೈಲಿ ದೂರ ಓಡೊ ನಾನು, ನಲವತ್ತಕ್ಕಿಂತ ಜಾಸ್ತಿ ಮಾರ್ಕ್ಸ್  ತೆಗೆಯದ ನನಗೆ ಒಂದಷ್ಟು ತಿಂಗಳು  ಸಂಖ್ಯೆಗಳ ಮೇಲೆ ಎಲ್ಲಿಎಲ್ಲಿದ ಪ್ರೀತಿ ಹುಟ್ಟಿ, ಸುಡೊಕೊ ಮೇನಿಯಾ ಅಂಟಿಸಿ ಕೊಂಡಿದೆ. ಅದಕ್ಕಾಗಿ  ಕಂಡಕಂಡವರ ಮನೆಯ  ಪೇಪರ್ ಕೇಳೊ ಅಭ್ಯಾಸ ಶುರುವಾಗಿತ್ತು.  ಹಾಸ್ಟೆಲಿನಿಂದ ಮನೆಗೆ ಹೋದಾಗಲೇಲ್ಲಾ ದಿನದ ಮುಕ್ಕಾಲು ಭಾಗಕ್ಕಿಂತ  ಜಾಸ್ತಿ ಹೊತ್ತು  ನಿದ್ರೆ ಮಾಡುತ್ತಿದ  ನನ್ನ ಗೀಳು,  ಸದಾ ಅಮ್ಮನ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ನನ್ನ ಅತಿ ಪ್ರೀತಿಯ ಮೇನಿಯಾ. ಕಾಫಿ ಅಂದರೆ ಮೂಗು ಮೂರಿಯುತ್ತಿದ್ದ ನನಗೆ ಕಳೆದ ವರ್ಷ ಅಂಟಿ ಕೊಂಡಿದ್ದು  ಕಾಫಿ ಚಟ. ದಿನವೀಡಿ ಘಂಟಗೆ ಎರಡು ಮೂರು ಸಾರಿ ಬ್ರೂ ಕಾಫಿ ಕುಡಿದ್ದು, ಆಸಿಡಿಟಿ ರೂಪದಲ್ಲಿ ಅದು ಕಾರಲು  ಶುರುವಾದ ಮೇಲೆ ಅದಕ್ಕೆ ಕಡಿವಾಣ ಬಿತ್ತು. ಇನ್ನು ಆರು ತಿಂಗಳ ಹಿಂದೆ ಅಂಟಿ ಕೊಂಡಿದ್ದ ಗೀಳಂದರೆ ಸೀರಿಯಲ್ ನೋಡೋದು. ಒಂದೇ ಟೈಮ್ ಸ್ಲಾಟ್‌ನಲ್ಲಿ ಮೂರು ಮೂರು ಧಾರವಾಹಿಗಳನ್ನು ನೋಡಿ ನೋಡಿ ತಲೆಯಲ್ಲಿ ಕಲೆಸು ಮೆಲೋಗರವಾಗಿ ವಾಕರಿಕೆ ಹುಟ್ಟಿಕೊಂಡಾಗಲೇ  ಗೊತ್ತಾಗಿದ್ದು ನನ್ನ ಹುಚ್ಚಿನ ಪರಿಣಾಮದ ಮಟ್ಟ.  ಇನ್ನೂ ಕೆಲವು ಮೇನಿಯಾಗಳು ಕಮಾನ್ ಆದರೂ, ಆದರ ಪರಿಣಾಮ ಮಾತ್ರ ಸ್ಪಲ್ಪ ಜಾಸ್ತಿನೇ ಆಗಿದ್ದೆ. ಆ ರೀತಿಯಲ್ಲಿ ಒಂದು ಚಾಕೊಲೇಟ್  ವ್ಯಾಮೋಹ, ಹೆಚ್ಚಿನ ಎಲ್ಲಾ ಹಲ್ಲುಗಳನ್ನು ಇವಕ್ಕೆ ಬಲಿಯಾಗಿವೆ, ಅನ್ನೊದಕ್ಕಿಂತ ಹೆಚ್ಚಿನ ದುಃಖ ದಿನ ದಿನ ಹೆಚ್ಚುತ್ತಿರುವ ತೂಕ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ.  ಈ ಎಲ್ಲಾ ಹಾಗೂ ಇನ್ನೂ ಕೆಲವು  ಮೇನಿಯಾಗಳು ಆಗಲೋ ಈಗಲೋ ಕಾಡಿ ಬಂದಹಾಗೇ ಮರೆಯಾಗುತ್ತವೆ. ಯಾವುದು ಅಂತ ಏನು ಗಂಬೀರ ನಷ್ಟವನ್ನು ಉಂಟು ಮಾಡಿದ್ದು ಗಮನಕ್ಕೆ ಬಂದಿಲ್ಲ. ಆದರ ಜೊತೆಗೆ ಇವೆಲ್ಲಾ ಎಲ್ಲರಿಗೂ ಇರೋ ಅಂತ ಗೀಳು. 

ಆದರೆ ಯಾರಿಗೂ  ಕಾಡದ, ಹೆಸರಿಡದ, ನನಗೆ ಮಾತ್ರ ಸೀಮಿತವಾಗಿರುವ ಮೀತಿ ಮಿರಿದ ಉತ್ಸಾಹದ ಲಾಂಗ್ ಲಾಸ್ಟಿಂಗ್  ಗೀಳು  ಅವನ ಮೇನಿಯಾ’. ಇದು ನನ್ನ ಹಿಂದಿನ ಎಲ್ಲಾ ಹುಚ್ಚುತನಗಳನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದು ಕೊಂಡಿದೆ.  ಮೇನಿಯಾದ ಪ್ರತಿಯೊಂದು ಲಕ್ಷಣಗಳನ್ನು ಒಳಗೊಂಡಿರುವುದು ಅಷ್ಟೇ ನಿಜ ಕೂಡ.  ಅವನಿಂದ ದೂರವಾದಷ್ಟು ಹೆಚ್ಚು  ಮನಸ್ಸಿಗೆ ಕಿರಿಕಿರಿಯಾದರೆಅವನ ನೆನಪು ನಿದ್ರೆಯನ್ನು ಓಡಿಸಿದೆ, ನನ್ನೊಳಗೆ ಅವನೊಂದಿಗೆ  ಕೊನೆಯಿಲ್ಲದ ಮಾತುನನ್ನ ಇರುವನೇ ಮರೆಸುವ ಅವನ ಗುಂಗು.  ಇವೆಲ್ಲಾ ನನಗೆ ಅಂಟಿಕೊಂಡಿರುವ ಅವನ ವ್ಯಾಮೋಹದ ಸ್ಪಷ್ಟ ಕುರುಹುಗಳು. ನನಗಿರುವ ಅವನ ಗೀಳು ಅಂಟು ರೋಗವಾಗಿದರೆ ಎಷ್ಟು ಚೆನ್ನಾಗಿರುತಿತ್ತು. ನನ್ನ ಮೇನಿಯಾವನ್ನು ಅವನಿಗೂ ಟ್ರಾನ್ಸ್ ಫರ್ ಮಾಡಿ, ಅದಕ್ಕೊಂದು ಮುದ್ದಾದ ಹೆಸರಿಟ್ಟು ಬಿಡುತ್ತಿದೆ. ಅದಕ್ಕೆ ಅವನು ಹೇಳುತ್ತಾನೆ ಈಗೀಗ ನೀನು ನನ್ನಿಂದ ಇನ್ನು ಹೆಚ್ಚಿನ ಪ್ರೀತಿಯನ್ನು ಎಕ್ಸ್‌ ಪೆಕ್ಟ್ ಮಾಡ್ತಿಯಾ ಅಂತ. ಹೌದು ಏನು ಮಾಡೋದು.. ದಿನದಿಂದ ದಿನಕ್ಕೆ ಅವನು ಇನ್ನಷ್ಟು ಹೆಚ್ಚು ಇಷ್ಟವಾಗಿ ಅವನ ಮೇನಿಯಾಗಂಬೀರವಾಗುತ್ತಿದೆಯಲ್ಲಾ.. !
 ಸುತ್ತಿ ಬಳಸಿ ಮತ್ತದೇ ಅವನ ವಿಷ್ಯ.          


(Published in Vijaya Next on 22.2.2013)
               

January 24, 2013

ವಾಸನೆ, ನೆನಪು ಮತ್ತು ಅವನು!


ನನ್ನ ನೆನಪುಗಳಿಗೆ ಸಂಬಂಧಿಸಿದಂತೆ ನನಗೆ ಒಂದು ವಿಚಿತ್ರವಾದ ಕಾಯಿಲೆ ಇದೆ. ಕೆಲವು ಬಾರಿ ಎಷ್ಟು ನೆನಪು ಮಾಡಿಕೊಂಡರು ಎದುರಿಗೆ ಇರೋ ವ್ಯಕ್ತಿಯ ಹೆಸರೇ ನೆನಪಿಗೆ ಬರುವುದ್ದಿಲ್ಲ. ಇನ್ನೂ ಕೆಲವು ಸಾರಿ ಯಾವುದೋ ಒಂದು ಪ್ರಾಣಿ ಅಥವಾ ವಸ್ತುವನ್ನು ನೋಡಿದ ತಕ್ಷಣ ಅದಕ್ಕೆ ಸಂಬಂಧನೇ ಇಲ್ಲದೆ ಇರೋ  ಇನ್ಯಾರೋ ಮನುಷ್ಯ ನೆನಪಾಗುವುದು. ನಮ್ಮ ಮನೆಯ ನಾಯಿ ರೋನಿ ನೋಡಿದಾಗಲ್ಲೇಲ್ಲಾ ಯಾವುದೋ ಅಂದಕಾಲತ್ತಿನಲ್ಲಿ ನಮ್ಮ ಮನೆಗೆ ಬರುತ್ತಿದ್ದ ದಾಸಯ್ಯ ಪ್ರತಿ ಬಾರಿಯೂ ನನ್ನ ಕಣ್ಣು ಮುಂದೆ ಬರುತ್ತಾನೆ. ಇನ್ನೂ ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರ್ ಕಂಡಾಗ ನಮ್ಮ ಅಜ್ಜಿ ನೆನಪಾಗೋದು. ಈ ರೀತಿ ಹೋಲಿಕೆಗೆ ಯಾವುದೇ ಒಂದು ನಿರ್ದಿಷ್ಟ ಕಾರಣ ಮಾತ್ರ ಎಷ್ಟು ಯೋಚಿಸಿದರು ನೆನಪಿಗೆ ಬಾರದು.  ವಾಸನೆ ಮತ್ತು  ನನ್ನ ನೆನೆಪಿಗಳಿಗಂತೂ ಜನ್ಮ ಜನ್ಮಾಂತರದ ಸಂಬಂಧ. ಕೆಲವು ವಾಸನೆಗಳಂತೂ ಕೇಳೋದೆ ಬೇಡ ನನ್ನ ನೆನಪಿನ ದೋಣಿಯನ್ನು ಎಲ್ಲಿಂದ ಎಲ್ಲಿಗೋ ತೇಲಿಸಿ ಬಿಡುತ್ತದೆ. ನೇಲ್ ಪಾಲಿಶ್ ರಿಮೂರ್ ಅಪರೇಷನ್ ಥೆಟರ್ ನೆನಪು ತರಿಸಿದರೆಮೀನು ವಾಸನೆ ಮೂಗಿಗೆ ಬಡಿದ ತಕ್ಷಣ ನಮ್ಮೂರ ಮಂಗಳವಾರ ಸಂತೆ ನೆನೆಪಾಗುತ್ತದೆ. ಸಗಣಿ ವಾಸನೆಯಿಂದ ಆಗ ತಾನೇ ಕೊಟ್ಟಿಗೆ ಕೆಲಸ ಮುಗಿಸಿ ಕಾಲಿಗೆ ಸಗಣಿ ಮೆತ್ತಿಸಿ ಕೊಂಡ ಬಂದ ಅಮ್ಮ ನೆನಪಾಗುತ್ತಾಳೆ.  ಇನ್ನೂ  ಈರುಳ್ಳಿ ವಾಸನೆ ಸಣ್ಣಲ್ಲಿ ಯಾವಾಗಲೋ ಅಪ್ಪನೊಡನೆ ನೋಡಿದ ಯಕ್ಷಗಾನ ಮತ್ತು ಅಲ್ಲಿನ ಮಸಾಲೆ ಮಂಡಕ್ಕಿಯ ನೆನೆಪು ಮೂಡಿಸುತ್ತದೆ.  ಮಳೆ ಹನಿ ಬಿದ್ದ ಮಣ್ಣಿನ ವಾಸನೆಯಂತೂ ನನ್ನ ನೆನಪನ್ನು  ನೇರವಾಗಿ  ಬಾಲ್ಯಕ್ಕೆ  ತಳ್ಳುತ್ತೆ. ಮಳೆಯಲ್ಲಿ ಆಟವಾಡಿ ಮನೆಯೆಲ್ಲಾ ಕೆಸರ ಹೆಜ್ಜೆ ಮಾಡಿ, ದೊಡ್ಡವಳಾದ ತಪ್ಪಿಗೆ ಅಮ್ಮನಿಂದ ತಂಗಿ-ತಮ್ಮ ಇಬ್ಬರ ಪಾಲಿನ ಪೆಟ್ಟನ್ನು ನಾನೇ ತಿಂದ ನೆನೆಪು ತಾಜಾವಾಗಿಸುತ್ತದೆ.  ಬೆವರಿನ  ವಾಸನೆ ನಾನು ಶಾಲೆಗೆ ಹೋಗುವಾಗ ಸದಾ ತುಂಬಿರುತ್ತಿದ್ದ ಗುರುಶಕ್ತಿ ಬಸ್ ಅನ್ನು  ನೆನಪಿಸಿದರೆ, ಪಬ್ಲಿಕ್ ಟಾಯ್ಲೆಟ್ ನಮ್ಮ ಹಾಸ್ಟೇಲನ್ನು ನೆನಪಿಸುತ್ತದೆ. ಹೀಗೆ ನನ್ನ ವಾಸನೆ ಮತ್ತು ನೆನಪಿನ ನಿಕಟ ಸಂಬಂಧದ  ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಆದರೆ ಈ ವಾಸನೆ  ಮತ್ತು ನೆನಪಿನ ಪುರಾಣ ಇಷ್ಟಕ್ಕೆ ಸೀಮಿತವಾಗಿಲ್ಲ. ಮೊದಲೇಲ್ಲಾ ಪ್ರತಿಯೊಂದು ವಾಸನೆಗೂ ಬೇರೆಯಾದ ನೆನಪುಗಳಿದ್ದವು. ಆದರೆ ಈಗ ಪ್ರತಿಯೊಂದು ವಾಸನೆಯು ಅವನ ನೆನಪಿನ ಸುತ್ತಲೇ ಸುತ್ತುತ್ತವೆ. ಬೆಳಿಗ್ಗೆ ಎದ್ದ ತಕ್ಷಣದ ಕಾಫಿ ಡಿಕ್ಷಾನ್‌ನಿನ ಘಮಲಿನಿಂದ ಹಿಡಿದು, ರಾತ್ರಿ ಮಲಗುವ ಮುನ್ನ ತಿನ್ನುವ ಚಾಕೊಲೇಟಿನ ತೆಳು ಕಂಪಿನವರೆಗೂ  ಬರಿ ಅವನಿಗೆ ಅಂಟಿ ಕೊಂಡ ನೆನಪೇ. ಬೆಳಗ್ಗಿನ ಚಳಿಯಲ್ಲಿ ಬಿಸಿ ಕಾಫಿಯ ಪರಿಮಳ ಮೂಗನ್ನು ಆರಳಿಸುತ್ತಿದ್ದಂತೆಇಷ್ಟು ದುಡ್ಡು ಕೊಟ್ಟು ನಾವೇ ಸಕ್ಕರೆನೂ ಹಾಕೋ ಬೇಕಾ ಅಂತ ಕಾಫಿ ಡೇಯಲ್ಲಿ ಅವನು ಗೊಣಗಿಕೊಂಡು, ಕಾಫಿಗೆ ಸಕ್ಕರೆ ಸುರಿದು ಕೊಳ್ಳೊ ಅವನ ಪರಿ ನನ್ನನ್ನು ಬೆಚ್ಚಗಾಗಿಸುತ್ತದೆ. ಇನ್ನೂ ನನಗೆ ವಾಂತಿ ಬರಿಸುವ ಸೀಗರೇಟ್ ವಾಸನೆಯೂ, ಅವನ ಮೊದಲ ಭೇಟಿಯನ್ನು ನೆನಪಿಸಿ ತುಟಿಯಲ್ಲಿ ಮಂದಹಾಸ ಮೂಡಿಸುತ್ತದೆ. ಆವತ್ತೇ ಅಲ್ವಾ ಅವನು ನಿನ್ನ ಮೂಗು ನಾಯಿ ಮೂಗು ಅಂತ ಹೇಳಿದ್ದು. ಲಿಂಬೆ ಹಣ್ಣಿನ ವಾಸನೆ ಮೂಗಿಗೆ ರಾಚುತ್ತಿದ್ದಂತೆ ಅವನ ಪ್ರಿಯವಾದ ಹುಳಿ ಹುಳಿಯಾದ  ಚಿತ್ರಾನ್ನದ ನೆನಪು ಮನಸ್ಸಿಗೆ ಮುದ ನೀಡುತ್ತೆ.  ಹೊಟ್ಟೆ ತೊಳಿಸುವ ಎಸಿಯ  ಗಾಳಿಯ ವಾಸನೆ ಅವನ ಕಾರನ್ನು ನೆನಪಿಗೆ ತರುತ್ತದೆ. ಹೀಗೆ ಇನ್ಯಾವುದೋ ವಾಸನೆ ಅವನ ಡೀಯೊ ನೆನಪಿಸಿದರೆ, ಮತ್ತೊಂದು ಅವನ ಬಿಸಿಯುಸರನ್ನು ನೆನಪಿಸಿ ಕಚಗುಳಿ ಇಡುತ್ತದೆ. ಹೀಗೆ ಪ್ರತಿ ಕ್ಷಣವೂ ನನ್ನ  ಕಾಡುವ ವಾಸನೆಗಳು ಅವನ ನೆನಪಿನಲ್ಲಿ ನನ್ನ ಇರುವನ್ನೆ ಮರೆಸುತ್ತವೆ.

ಅವನ ನೆನಪಿನ ಗುಂಗಿನಲ್ಲಿದ್ದ ನನಗೆ ತಕ್ಷಣ ಮೂಗಿಗೆ ಬಡಿದಿದ್ದು ಹಾರ್ಲಿಕ್ಸ್ ವಾಸನೆ... ಆಗಾಗಲೇ ನೆನಪಾಗಿದ್ದು ನನಗೆ ಅಡುಗೆ ಮನೆಯಲ್ಲಿ ಒಲೆ ಮೇಲೆ ಇಟ್ಟು ಮರೆತು ಬಂದ ಹಾಲಿನದು.

(Published in Vijaya Next on 13/1/20013)

January 18, 2013

ಮೀನಿನ ಮನೆ


ಪುಟ್ಟ ಮನೆಯಕಾರದ ಗಾಜಿನ  ಪೆಟ್ಟಿಗೆ, ಅದರೊಳಗೆ ಪುಣಾಣಿ ಬಣ್ಣ ಬಣ್ಣದ ಮೀನುಗಳು. ಮೊದಲಿನಿಂದಲೂ ನನಗೆ ಅತಿ ಪ್ರಿಯವಾದದ್ದು.  ಕಂಡ ಕಂಡಲ್ಲಿ ಅದರ ಮುಂದೆ ನಿಂತು, ಕಣ್ಣು ಮಿಟುಕಿಸದೆ ಆದನ್ನು ನೋಡುವುದೆಂದರೆ ಎನ್ನೋ ಖುಶಿ. ಪಾರದರ್ಶಕ ಮನೆ ಅದರೊಳಗೆ ನೀರು. ನೀರನ್ನು ಸೀಳಿ ಬೆಳಕು.  ತಳದಲ್ಲಿ ಮರಳು, ತರಾವರಿ ಕಲ್ಲುಗಳು, ಚಿಕ್ಕ ಚಿಕ್ಕ ಶಂಖ, ಕವಡೆ, ಕಪ್ಪೆ ಚಿಪ್ಪುಗಳ ಹಾಸು ಸದಾ ಆಕರ್ಷಣೆಯ ಬಿಂದು.  ಇವುಗಳನ್ನೇಲ್ಲಾ ಮೀರಿ ಮನಸ್ಸಿಗೆ ನಾಟುತ್ತಿದ್ದಿದ್ದು ಕೆಂಪು, ಕಪ್ಪು, ಬಿಳಿ, ಕೇಸರಿ, ಹಳದಿ, ನೀಲಿ, ಬಂಗಾರ ಬಣ್ಣಗಳ ಹಲವು ಬಗೆಯ ಮೀನುಗಳು. ಒಂದು ಮೀನು ಗಾಳಿ ಪಟದ ಆಕಾರದಲ್ಲಿದ್ದರೆ, ಇನ್ನೊಂದು ಬಲೂನಿನ ಹಾಗೆ, ಮತ್ತೊಂದು ಅಚ್ಚ ಬಿಳಿಅದರ ಜೋಡಿ ಕಡು ಕಪ್ಪು, ಮಗದೊಂದು ಎರಡು ಮೂರು ಬಣ್ಣಗಳ ಸಮಿಶ್ರಣ, ಇನ್ಯಾವುದೊಂದರ ಬಾಲ ಬೀಸಣಿಗೆಯ ತದ್ರೂಪ. ಒಂದೊಂದು ಒಂದೊಂದು ತರ, ಒಂದಕ್ಕಿಂತ ಒಂದು ವಿಭಿನ್ನ.  ಒಂದೇ ಟ್ಯಾಂಕ್‌ನಲ್ಲಿ ಒಗಟ್ಟಿನಲ್ಲಿರುವ ಬಗೆ ಬಗೆಯ ಮೀನುಗಳು. ಪ್ರತಿಯೊಂದರ  ಚಲನವಲನವೂ ಪೂರ್ತಿ ಬೇರೆ ಬೇರೆ. ಒಂದು ಜೋಡಿ ಸದಾ ಒಂದಕ್ಕೊಂದು ಅಂಟಿಕೊಂಡಂತೆ ಇದ್ದರೆ. ಇನ್ನೊಂದು ಬಗೆಯದು ಒಂದರ ಬಾಲ ಹಿಡಿದು ಇನ್ನೊಂದು ಜೂಟಾಟವನ್ನು ನೆನಪಿಸುತ್ತದೆ. ಇವರೆಡರಕ್ಕಿಂತ ಭಿನ್ನವಾಗಿ ಇನ್ನೊಂದು ಜಾತಿಯ ಮೀನು, ಒಂದಕ್ಕೊಂದು  ಮುತ್ತಿಡುವ, ಪಿಸುಗುಟ್ಟುವ  ಇವುಗಳು ಯುವ ಪ್ರೇಮಿಗಳ ತದ್ರೂಪ. ಒಂದು ಜಾತಿಯ ಮೀನು ಪ್ರಪಂಚದ ಎಲ್ಲಾ ತಲೆನೋವು ತನ್ನದೇ ಎಂಬಂತೆ ಗಡಿಬಿಡಿಯಲ್ಲಿ ಓಡಾಡುತ್ತಿದ್ದರೆ, ಇನ್ನೊಂದು ಈ ಲೋಕದ ಗೋಡ ನನಗೇಕೆ ಎಂಬಂತೆ ತಣ್ಣಗೆ ತನ್ನಷ್ಟಕ್ಕೆ ತಾನು.  ಹೇಳಿದಷ್ಟು ಮುಗಿಯದು.   ನಾವು ಏನು ಕಮ್ಮಿ ಇಲ್ಲ ಎನ್ನುವಂತೆ   ಮೀನುಗಳೊಂದಿನ ಬಣ್ಣದ ಗೊಂಬೆಗಳ ಪೈಪೋಟಿ. ಆಕ್ವೇರಿಯಂಗೆ ಇನ್ನಷ್ಟು ರಂಗು. ನೀರಿನ ಗುಳ್ಳೆಗಳನ್ನು ಉಗುಳುವ ಮೀನುಗಾರ, ಉಚ್ಚೆ ಹುಯ್ಯುವ ಪುಟ್ಟ ಬಾಲಕ, ಪುಟ್ಟ ದೋಣಿಯೊಂದಿಗೆ ಹುಟ್ಟು ಹಾಕುವ ಅಂಬಿಗ, ಈಜುಗಾರ ಹತ್ತು ಹಲವು ತರದ ಗೊಂಬೆಗಳು ಹೆಚ್ಚು ಹೆಚ್ಚು ಹೊತ್ತು ನನ್ನನ್ನು ಈ ಪುಟ್ಟ ಮಾಯಲೋಕದ ಮುಂದೆ ಕಾಲ ಕಳೆಯುವಂತೆ ಮಾಡುತ್ತಿದ್ದವು. ಅವುಗಳನ್ನು ನೋಡಲು ಸಿಕ್ಕ ಅವಕಾಶವನ್ನು ತಪ್ಪಿಸಿ ಕೊಳ್ಳದೆ ತೃಪ್ತಿಯಾಗುವಷ್ಟು ಬಣ್ಣದ ನೀರಿನ ಲೋಕವನ್ನು ಕಣ್ಣಿನಲ್ಲಿ ತುಂಬಿ ಕೊಳ್ಳಲು ಪ್ರಯತ್ನಿಸುತ್ತಿದ್ದೆ. ಮೊದಲೇಲ್ಲಾ ಆಕ್ವೇರಿಯಂ ನಮ್ಮಂತಹ ಮಧ್ಯಮ ವರ್ಗದವರ ಮನೆಗಳಲ್ಲಿ ಇದ್ದಿದ್ದು ಬಹಳ ಅಪರೂಪ.  ಆಗೇಲ್ಲಾ ಹೋಟಲ್‌ಗಳು ಅಥವಾ ದೊಡ್ಡ ದೊಡ್ದ ಮನೆಗಳಲ್ಲಿ  ಮಾತ್ರ ಅಕ್ವೇರಿಯಂ ಸೀಮಿತ ಹಾಗೂ ಅದು ಶ್ರೀಮಂತರ ಸೊತ್ತು ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು.ಆದರೂ ಅಪ್ಪನಿಂಗೆ ದಂಬಾಲು ಬಿದ್ದು ಅಕ್ವೇರಿಯಂ ಕೊಡಿಸಿಕೊಂಡು, ಕ್ಲೀನ್ ಮಾಡಲು ಹೋಗಿ ಒಡೆದು ಹಾಕಿದ್ದು ಸ್ಪಲ್ಪ ಹಳೆಯ ಕಥೆ.  ಕಾಲ ಕಳೆದಂತೆ ಅಕ್ವೇರಿಯಂಗಳು ಸಾಮಾನ್ಯವಾದರೂ ಅದರೆಡೆಗಿನ ಪ್ರೀತಿ ಮಾತ್ರ ಬೆಳೆಯುತ್ತಲೇ ಹೋಯಿತು.  ಈಗಲೂ ಮಗಳಿಗೆ ಮೀನು ತೋರಿಸುವ ನೆಪದಲ್ಲಿ ಅದರ ಮುಂದೆ ನಿಲ್ಲುವುದು, ಹೋಟೇಲ್‌ಗಳಲ್ಲಿ ಸಾದ್ಯವಾದಷ್ಟು ಫಿಶ್ ಟ್ಯಾಂಕ್‌ಗಳ ಹತ್ತಿರದ ಸ್ಥಳವನ್ನು ಆರಿಸಿಕೊಳ್ಳುವುದು ಇವತ್ತಿಗೂ ಬಿಟ್ಟಿಲ್ಲ.

ನನ್ನ ಆಕ್ವೇರಿಯಂ ಪ್ರೀತಿಗೆ ಈ ದೀಪಾವಳಿಯಲ್ಲಿ ತಂಗಿಯಿಂದ ಒಂದು ಪುಟ್ಟ ಫಿಶ್ ಟ್ಯಾಂಕ್ ಉಡುಗೊರೆಯಾಗಿ ದೊರೆತ ಮೇಲಂತೂ ಕೇಳುವುದೇ ಬೇಡ. ಈಗ ದಿನದ ಹೆಚ್ಚಿನ ಹೊತ್ತು  ಅದರದೇ ಧ್ಯಾನ. ಮೊದಲು ಬಣ್ಣಗಳಿಂದ ಗುರುತಿಸುತ್ತಿದ ಮೀನುಗಳ ಹೆಸರುಗಳು ಈಗ ಚಿರಪರಿಚಿತ. ಮೋಲಿ, ಗಪ್ಪಿ, ಫ್ಯಾನ್ಸಿ ಗಪ್ಪಿ, ಪ್ಲಾಟಿ, ಎಂಜಲ್, ಟೆಟ್ರಾ ಇತ್ಯಾದಿ ಇತ್ಯಾದಿ.  ಗೂಗಲಿಸಿದ್ದಷ್ಟು ತೆರೆದು ಕೊಳ್ಳುವ ಮೀನಿನ ಪ್ರಪಂಚ.  ಕೇಳಿದಷ್ಟು , ತಿಳಿದಷ್ಟು ಮುಗಿಯದ  ಕುತೂಹಲಕಾರಿ ಮಾಯ ಮತ್ಸ್ಯ ಲೋಕ.
ಅಕ್ವೇರಿಯಂ ಹೊಂದಲು ಸದಾ ನಿರಾಕರಿಸುತ್ತಿದ್ದ ಅವನಿಗೂ ಈಗ ಈ ಮೀನುಗಳ ಮೇಲೆ ಆಕ್ಕರೆ ಹಾಗೂ ಫಿಶ್ ಟ್ಯಾಂಕ್ ಮುಂದೆ ಕಾಲಹರಣ ಅವನ ಪ್ರಿಯವಾದ ಹವ್ಯಾಸಗಳಲ್ಲಿ ಒಂದಾಗಿದೆ.  ಅವನ ಸಾಥ್ ದೊರೆತ ಮೇಲೆ ಆಕ್ವೇರಿಯಂ, ಅದರೊಳಿಗಿನ ಬಣ್ಣ ಬಣ್ಣದ ಮೀನುಗಳು , ಕಪ್ಪೆಚಿಪ್ಫು, ಶಂಖ, ಮರಳು, ಕಲ್ಲುಗಳೆಲ್ಲಾ ಇನ್ನಷ್ಟೂ ಮನಸ್ಸಿಗೆ ಹತ್ತಿರವಾಗಿವೆ ಹಾಗೂ ಪ್ರಿಯವಾಗಿದೆ.

(ವಿಜಯ ನೆಕ್ಸ್ಟ್‌ನ "ಅವಳ ಡೈರಿ" ಆಕಂಣದಲ್ಲಿ 18/1/2013ರಂದು  ಪ್ರಕಟವಾದ ಬರಹ)

January 1, 2013

ಮರೆತೆ ಎಂದರೂ ಮರೆಯಲಾರೆ..


ಅವನ ನೆನಪನ್ನು ನನ್ನ ಮನಸ್ಸಿನಿಂದ ಬೇರು ಸಮೇತ ಕಿತ್ತು  ಹಾಕುತ್ತೇನೆ. ಅವನ್ನನ ಮರತೇ ತೀರುತ್ತೇನೆ ಎಂದು ನಾ ಪಣ ತೊಟ್ಟಾಗಲೇ, ಅವನ ನೆನೆಪುಗಳು ನನ್ನ ಹೆಚ್ಚುಹೆಚ್ಚು ಕಾಡಿರುವುದು. ಅವನ ನಂಟಿನ ಅಂಟಿನಿಂದ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟಷ್ಟು ನಮ್ಮಿಬ್ಬರ ನಡುವಿನ ನಂಟಿನ ಗಂಟು ಗಾಡವಾಗುತ್ತ ಹೋಗಿದ್ದು.  ನನ್ನ ಜೀವನದಿಂದ ಅವನ ಅಸ್ತಿತ್ವವನ್ನು ಅಳಿಸಲು ಯತ್ನಿಸಿದಾಗಲೇಲ್ಲಾ  ಅವನು ನನ್ನ ಮೀರಿ ನನ್ನ ಜೀವನವನ್ನು  ಆಕ್ರಮಿಸಿಕೊಂಡಿದ್ದು. ಇವತ್ತೇ ಕೊನೆ ಇನ್ಯಾವತ್ತು ಅವನ  ಜೊತೆ ಮಾತು ಕಥೆ ಇಲ್ಲ ಎಂದು  ಮಾಡಿದ  ಗಟ್ಟಿ ನಿರ್ಧಾರವನ್ನು ಅದೇಷ್ಟು ಸಾರಿ ಅವನ ದೇವದಾಸನ  ಆವತಾರ ಮಣ್ಣು ಪಾಲು ಮಾಡಿವೆ.  ಅವನ ಎರಡು ಲೈನ್ ಮೇಸೆಜ್‌ಗಾಗಿ ಅಥವಾ ಮೂರು ನಿಮಿಷದ ಮಾತಿಗಾಗಿ ಇಡಿ ದಿನ ಚಡಪಡಿಸುತ್ತಿದ್ದೆ. ಅವನ ಮರೆತು, ಅವನ ಹೊರತಾಗಿನ ನನ್ನ ಜೀವನ  ಕಲ್ಪನೆ ನಿಲುಕಾದಾಗಿತ್ತು. ಆದರೂ ಇದನ್ನೇಲ್ಲಾ ಮೀರಿ ಅವನೊಂದಿಗಿನ ಸಂಬಂಧವನ್ನು ಕಡಿದು ಕೊಳ್ಳಲು ನಿರ್ಧರಿಸಿದ್ದೆ. ಇಷ್ಟೇಲ್ಲಾ ನಿರ್ಧಾರದ ನಂತರವೂ ನನ್ನ ಮನಸ್ಸು ನನ್ನ ಹಿಡಿತ ತಪ್ಪುತ್ತಿತ್ತು.  ಪ್ರತಿ ಬಾರಿ ಫೋನ್ ರಿಂಗ್ ಆದಾಗಲೂ ಅದು ಅವನೇ ಅಂತ ಹೃದಯ ಬಡಿತ ತಪ್ಪುತ್ತಿತ್ತು.  ಪ್ರತಿ ಮೇಸೇಜ್ ಬಿಪ್ ಅವನಿಂದಲೇ  ಮೇಸೇಜ್ ಇರಬೇಕು ಅಂತ ಕೈ ಬೆರಳುಗಳು ಮರು ಸಂದೇಶ ಟೈಪ್ ಮಾಡಲು ಅಣಿಯಾಗುತ್ತಿತ್ತು. ಅವನನ್ನು ಮರೆತೆ ಎಂದರೂ ಮರೆಯಲಾರದೆ  ಒದ್ದಾಡಿದ್ದೆ. ಅವನ ಮರೆಯುವ ಅವಸರದಲ್ಲಿ ನಾನು ಮೂರು ಜನ್ಮಕ್ಕಾಗುವಷ್ಟು ವೇದನೆ ಅನುಭವಿಸಿದೆ. ಅವನನ್ನು ಮರೆತೇ ಬಿಡುವ ನನ್ನ ಈ  ಎಲ್ಲಾ ಕಸರತ್ತುಗಳಿಗೆ ನಿನ್ನೆಯೇ ಎಳ್ಳು ನೀರು ಬಿಟ್ಟೆ.
ಇವತ್ತು ನನ್ನ ಬದುಕಿನ ಅತಿ ಸುಂದರ ಬೆಳಗು ಅದು ಅವನೊಂದಿಗೆ ಆರಂಭಗೊಂಡಿದೆ, ಮುಕ್ತಾಯವು ಅವನೊದಿಂಗೆನೇ. ಇನ್ನೂ ಪ್ರತಿ ದಿನ, ಪ್ರತಿ ಕ್ಷಣ ಅವನ ನೆನಪ್ಪಿನೊಟ್ಟಿಗೆ ಹೆಜ್ಜೆ ಹಾಕಲು ತಿರ್ಮಾನಿಸಿದ್ಡೇನೆ. ನನ್ನಳೊಗಿನ ಅವನ  ನೆನಪನ್ನು  ಅಳಿಸಿ ಹಾಕುವ  ಕದನಕ್ಕೆ ಇಂದಿನ ಶಾಶ್ವತ ವಿರಾಮ ಘೋಷಿಸಿಲಾಗಿದೆ. ನಿನ್ನೆಯವರೆಗೆ ಅವನ ಮರೆತೇ ತೀರುತ್ತೀನಿ ಎಂಬ ಹಟ ಇವತ್ತು ಎಂಥಾ ಹುಚ್ಚಾಟ ಅನಿಸ್ಸುತ್ತಿದೆ. ಇನ್ನೂ ಅವನ ಮರೆಯುವ ಮಾತೇ ಇಲ್ಲ.  ನನ್ನೊಂದಿಗೆ ಅವನಿಲ್ಲ, ಈಗ  ಅವನ ಜೊತೆ ಮಾತಿಲ್ಲ . ಆದರೂ  ಅವನ ಪ್ರತಿಯೊಂದು  ಮಾತು. ನಗು, ನಿಟ್ಟುಸ್ಸುರು  ನನ್ನ ಕಿವಿಯಲ್ಲಿ ತಾಜಾವಾಗಿದೆ.  ಬದುಕು ಮುಗಿಯವರೆಗೂ ಸಾಕಾಗುವಷ್ಟು ನನ್ನೊಳಗೆ ಅವನ ನೆನೆಪಿದೆ. ಈಗ  ಅನು ಕ್ಷಣವು ಅವನೊಂದಿಗೆ ನಮ್ಮಿಬ್ಬರಿಗಷ್ಟ್ಟೆ ಕೇಳುವ ಪಿಸುಮಾತು.   ನನ್ನ  ಜೀವನದ ಪ್ರತಿ ಹಾಡಿಗೂ ಅವನ ನೆನಪೇ ಸಾಹಿತ್ಯ.  ಇಷ್ಟು ದಿನ ಜಾಗ ತಪ್ಪಿದ ನನ್ನ  ದಿನಚರಿಯ ಮತ್ತೆ ಸುಸ್ಥಿತಿಗೆ ಮರಳಿದೆ.  ನನ್ನ ಮನದಳೊಗೆ ಸದಾ ಅವನ ಇರುವಿಕೆಯ ಅನುಭವವೊದೇ  ಸಾಕು  ಜೀವನ ಪೂರ್ತಿಯ  ನೆಮ್ಮದಿಗೆ. 
ಈಗ ಎಲ್ಲಾ ಸುಸೂತ್ರ. ಬದುಕು ಮತ್ತಷ್ಟು ಸುಂದರ. ಹೋಲಿಸಲು ಎಷ್ಟು ಉಪಮೇಯವೂ ಕಡಿಮೆ. ಸೂತ್ರ ಕಿತ್ತ ಗಾಳಿಪಟವಾಗಿದ್ದ ನನ್ನ ದಿನಚರಿ ಮತ್ತೆ ಸರಾಗವಾಗಿದೆ. ಕದಡಿದ ಮನಸ್ಸು ಅದರೊಳಗೆ ರಚ್ಚೆ ಹಿಡಿದು ಕೂತಿದ್ದ ಅವನು  ಎಲ್ಲಾ ಈಗ ಶಾಂತ. ನಿನ್ನೆಯವರೆಗೆ ಎಲ್ಲಾ ಕಡೆಯು ಮುನ್ನುಗ್ಗುತ್ತಿದ್ದ ಅವನ ನೆನಪು ಇಂದು ಯಾವುದೇ ಧಾವಂತವಿಲ್ಲದೆ ಕೈ ಹಿಡಿದು  ನೆಡುವ ಮಗುವಿನಂತೆ ನನ್ನಳೊಗೆ ನನ್ನ ಜೊತೆ ಜೊತೆಯಲ್ಲೇ.... 



(Published in Vijaya next on 14/12/12)