October 26, 2010

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

ಮಲೆನಾಡಿನ ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಬಹುಶ: ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.
ಇಲ್ಲಿನ ಕೃಷಿಕರಿಗೆ ಅಡಿಕೆ ಕೊಯ್ಲು ಬರೀ ಒಂದು ಕೆಲಸವಾಗಿರದೆ, ಒಂದು ಆಚರಣೆಯೇ ಆಗಿತ್ತು ಎಂದರೆ ತಪ್ಪಾಗಲಾರದು. ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿತ (ಕೊಯ್ಲು) ಪ್ರಾರಂಭಿಸುವುದೇ ಒಂದು ಸಂಭ್ರಮ ಸಡಗರ. ಅದಕ್ಕೆ ಪೂರ್ವಭಾವಿಯಾಗಿ ಕತ್ತಿ, ಮಣೆ. ತಟ್ಟಿ-ಬುಟ್ಟಿಗಳನ್ನು ಒಟ್ಟುಗೂಡಿಸುವುದು, ಚಪ್ಪರದಂಗಳವನ್ನು ಸಾರಿಸುವುದು, ಚೊಗರು ತಯಾರಿಸುವುದು, ಕೊನೆಗಾರನಿಗೆ, ಅಡಿಕೆ ಸುಲಿಯುವ ಕುಲಿಯಾಳುಗಳಿಗೆ ತಿಳಿಸುವುದು ಹೀಗೆ ಹತ್ತು ಹಲವು ತಯಾರಿಗಳನ್ನು ಮಾಡಿಕೊಳ್ಳುವುದು. ನಂತರ ಶುಭ ದಿನದಂದು ಒಳ್ಳೆ ಮೂಹರ್ತದಲ್ಲಿ ಪೂಜೆ ಮಾಡಿ ಕೊನೆ ತೆಗೆಯುವುದು. ಅಡಿಕೆ ಒಲೆಗೆ ಉರಿ ಹಚ್ಚುವ ಮುನ್ನ ಒಲೆಗೆ ಪೂಜೆ ಸಲ್ಲಿಸುತ್ತಿದ್ದರು. ಹಾಗೇ ಸೂರ್ಯ ಮೇಲೆರುವ ಮುನ್ನವೇ ಬೇಯಿಸಿದ ಅಡಿಕೆಯನ್ನು ಬಿದರಿನ ತಟ್ಟಿಯ ಮೇಲೆ ಒಣಗಿಸಲಾಗುತ್ತಿತ್ತು. ಸಂಜೆ ಇಬ್ಬನಿ ಬೀಳುವ ಮುನ್ನ ಒಣಗಿದ ಅಡಿಕೆಯನ್ನು ಒಟ್ಟು ಮಾಡಿ ಅಡಿಕೆ ಹಾಳೆಯನ್ನು ಮುಚ್ಚಲಾಗುತ್ತಿತ್ತು. ಅಡಿಕೆ ಕೊಯ್ಲು ಮುಗಿದ ನಂತರ ಒಣಗಿಸಿದ ಅಡಿಕೆಯನ್ನು ಒಟ್ಟಿಗೆ ಸುರಿದು ರಾಶಿಗೆ ಪೂಜೆ ಮಾಡಿ ನಂತರ ಮೂಟೆ ಮಾಡಿ ಮಂಡಿಗೆ ಕಳುಹಿಸುವುದು, ಇದಿಷ್ಟು ಮಲೆನಾಡಿನ ಸಂಪ್ರಾದಾಯಿಕ ಅಡಿಕೆ ಕೊಯ್ಲಿನ ಚಿತ್ರಣ. ಇಷ್ಟೆ ಅಲ್ಲದೇ ತೋಟದಿಂದ ತಂದ ಗೊನೆಗಳನ್ನು ಅಚ್ಚುಕಟ್ಟಾಗಿ ರಾಶಿ ಮಾಡಲಾಗುತ್ತಿತ್ತು. ಅಡಿಕೆ ಸುಲಿಯುವವರಿಗೆ ಸಮಾನಾಗಿ ಗೊನೆಗಳನ್ನು ಪಾಲು ಮಾಡುತ್ತಿದ್ದರು. ಹಾಡು, ಹರಟೆ, ನಗು, ತಮಾಷೆ, ಒಗಟು, ಪ್ರಶ್ನೋತ್ತರಗಳು ಮಧ್ಯರಾತ್ರಿಯವರೆಗೆ ಚಪ್ಪರದಂಗಳ ತುಂಬಿರುತ್ತಿತ್ತು. ಅಪರೂಪಕ್ಕೊಮ್ಮೆ ಟೇಪ್ ರೀಕಾರ್ಡಗಳು ಕಾಣಿಸಿಕೊಳ್ಳುತ್ತಿದ್ದವು.
ಆದರೆ, ಈಗ ಈ ರೀತಿಯ ಅಡಿಕೆ ಕೊಯ್ಲು ಕಾಣಲು ಸಿಗುವುದಿಲ್ಲ, ಈಗ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣವೇ ಬದಲಾಗಿದೆ. ಕೇಲವೆ ವರ್ಷಗಳೀಚೆಗೆ ಈ ಅಡಿಕೆ ಕೊಯ್ಲಿನ ಕಾನ್ಸೆಪೆಟ್ ಬದಲಾಗಿದೆ. ಕುಲಿಯಾಳುಗಳಾಗಿ ಪರದಾಟ, ಕೊಯ್ಲಿನ ಸಮಯ ಹತ್ತಿರವಾದಂತೆ ಹಸಿ ಅಡಿಕೆ ಕಾಯಿ ಕೊಳ್ಳುವರನ್ನೋ ಅಥವಾ ಚೇಣಿದಾರರನ್ನೋ ಹುಡುಕುವಂತೆ ಬೆಳೆಗಾರರನ್ನು ಮಾಡಿದೆ.
ಚಪ್ಪರದಂಗಳದಲ್ಲಿ ಕಂಬಕ್ಕೆ ಒರಗಿ ನಡುರಾತ್ರಿವರೆಗೆ ಚಳಿಯಲ್ಲಿ ಅಡಿಕೆ ಸುಲಿಯುವ ಅಳುಗಳು ಈಗ ವಿರಳ. ಚಪ್ಪರವೇ ಎಷ್ಟೋ ಮನೆಗಳಲ್ಲಿ ಇಲ್ಲವಾಗಿದೆ . ಬದಲಾಗಿ ಅಂಗಳ ಅಥವಾ ಮನೆಯ ಥಾರಸಿಯನ್ನು ಅಡಿಕೆ ಒಣಗಿಸಲು ಬಳಸಿಕೊಳ್ಳಲಾರಂಭಿಸಿದ್ದಾರೆ. ಬಿದರಿನ ಬುಟ್ಟಿಯ ಜಾಗವನ್ನು ಪ್ಲಾಸ್ಟಿಕ್ ಬುಟ್ಟಿಗಳು, ತಟ್ಟಿಯ ಸ್ಥಾನವನ್ನು ಕಬ್ಬಿಣದ ಟ್ರೇಗಳು ಆಕ್ರಮಿಸಿಕೊಂಡಿದೆ. ನಗು, ಹಾಡು, ಹರಟೆಯನ್ನು ಟಿವಿ ನುಂಗಿ ಹಾಕಿದೆ. ಅಡಿಕೆ ಸುಲಿಗೆಗೆ ಈಗ ಟಿವಿ ಕಡ್ಡಾಯವಾಗಿದೆ. ಅದರಲ್ಲೂ ಡಿಶ್ ಸಂಪರ್ಕ ಅಗತ್ಯ. ಅಡಿಕೆ ಸುಲಿಯುವ ಯಂತ್ರಗಳ ಆಗಮನವಾಗಿದೆ. ಈ ಯಂತ್ರಗಳು ಪರಿಪೂರ್ಣವಾಗಿಲ್ಲ, ಆದರೂ ಸಹ ಅನಿವಾರ್ಯವಾಗಿ ಕೃಷಿಕ ಇದರ ಮೊರೆ ಹೋಗಬೇಕಾಗಿದೆ.
ಅಡಿಕೆಯ ಅಸ್ಥಿರ ಬೆಲೆ, ಕೆಲಸಗಾರ ಅಭಾವ, ದಿನೇ ದಿನೇ ಹೆಚ್ಚುತ್ತಿರುವ ಸಂಬಳ, ಖರ್ಚು, ಹವಾಮಾನದ ಏರುಪೇರು, ರೋಗ, ಯುವ ಪೀಳಿಗೆಯವರ ಪಟ್ಟಣದತ್ತ ವಲಸೆ ಇವುಗಳೆಲ್ಲದರಿಂದ ಅಡಿಕೆ ಬೆಳೆಗಾರ ತತ್ತರಿಸಿ ಹೋಗಿದ್ದಾನೆ. ವಿಧಿಯಿಲ್ಲದೆ ಕೃಷಿಕ ಅಧುನಿಕರಣ, ಯಂತ್ರೀಕರಣ ಹಾಗೂ ಸರಳೀಕರಣಕ್ಕೆ ತಲೆ ಬಾಗುತ್ತಿದ್ದಾನೆ. ಸಣ್ಣ ಪುಟ್ಟ ಬೆಳೆಗಾರರು ಈ ಎಲ್ಲಾ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ಹಸಿಕಾಯಿಯನ್ನೇ ಮಾರಿ ಕೈ ತೊಳೆದು ಕೊಳ್ಳುತ್ತಿದ್ದಾರೆ.
ಮಲೆನಾಡಿನಲ್ಲಿ ಕೃಷಿಕರು ಅಡಿಕೆ ಕೊಯ್ಲುನ್ನು ಬರೀ ಅರ್ಥಿಕ ಉದ್ದೇಶಕ್ಕಾಗಿ ಮಾತ್ರ ಎನ್ನುವ ಭಾವನೆಯಿಂದಷ್ಟೇ ಅಲ್ಲದೆ, ಒಂದು ಸಂಪ್ರಾದಾಯಿಕ ಅಚರಣೆಯನ್ನು ನೆಡೆಸುವಷ್ಟೇ ಶ್ರದ್ಧೆಯಿಂದ ಮಾಡುತ್ತಿದ್ದರು ಎಂದರೆ ತಪ್ಪಾಗಲಾರದು. ಆದರೆ ಇಂದು ಆ ದಿನಗಳಲ್ಲಿ ಕಂಡು ಬರುತ್ತಿದ್ದ ಸಂಭ್ರಮ, ಅಚ್ಚುಕಟ್ಟುತನ, ವೈಭವ ಯಾವುದು ಇಲ್ಲದೇ ಅಡಿಕೆ ಕೊಯ್ಲು ನೀರಸವಾಗಿದೆ.

October 22, 2010

ಕಾಡುವ ಭೂಮಿ ಹುಣ್ಣಿಮೆಯ ನೆನಪುಗಳು...!

ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ ಅತ್ತೆ ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿಸುತ್ತಿರಲಿಲ್ಲ. ಆದರೆ ಇದಕ್ಕೆ ಭೂಮಿ ಹುಣ್ಣಿಮೆ ಮತ್ತು ದೀಪಾವಳಿ ಮಾತ್ರ ಹೊರತಾಗಿತ್ತು. ಈ ಎರಡು ಹಬ್ಬಗಳು ತಪ್ಪದೇ ನಮ್ಮ ಮನೆಯಲ್ಲಿ ನೆಡೆಯುತ್ತಿತ್ತು. ನಮಗೆ ಕಾರಣ ಮಾತ್ರ ಆಗ ತಿಳಿದಿರಲಿಲ್ಲ. ಆದರೆ ನಾವು ಕೃಷಿಕರಾಗಿದ್ದೇ ಈ ಹಬ್ಬದ ಬಗ್ಗೆ ಹೆಚ್ಚಿನ ಒಲವಿಗೆ ಕಾರಣ ಎಂಬುದು ಈಗ ಅರ್ಥವಾಗಿದೆ. ಹಾಗೆ ನನಗೂ ಈ ಎರಡು ಹಬ್ಬಗಳು ಬೇರೆ ಕಾರಣಗಳಿಗೆ ಇಂದಿಗೂ ಅತೀ ಪ್ರಿಯವಾದವು. ಇವುಗಳು ನನ್ನ ಬಾಲ್ಯದ ಮಧುರ ನೆನೆಪುಗಳೊಂದಿಗೆ ಬೆಸೆದು ಕೊಂಡಿವೆ.
ಅಪ್ಪನಿಗೆ ಹೇಳಿ ಕೇಳಿ ಈ ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳೆಂದರೆ ಮಾರು ದೂರು. ಆದರೆ ಈ ಹಬ್ಬದಲ್ಲಿ ಮಾತ್ರ ತೋಟ ಗದ್ದೆಗೆ ಅಪ್ಪನದೇ ಪೂಜೆ. ನಾವು ಮೂರು ಮಕ್ಕಳು ಅಪ್ಪನ ಬಾಲ ಹಿಡಿದು ಈ ಪೂಜೆಯಲ್ಲಿ ಭಾಗವಹಿಸುತ್ತಿದ್ದೆವು. ಹಬ್ಬದ ಪ್ರಯುಕ್ತ ನಿತ್ಯಕ್ಕಿಂತ ಸ್ವಲ್ಪ ಬೇಗ ಏಳುವುದು ಮಾತ್ರ ನಿದ್ರೆ ಗುಮ್ಮನಾದ ನನಗೆ ಸಂಕಟ ತರಿಸುತ್ತಿತ್ತು. ಆದರೆ ಅಮ್ಮ ಬಿಡಬೇಕಲ್ಲಾ!! ನಾನೇ ಹಿರಿಯವಳಾದ ಕಾರಣ ನನ್ನ ಹೆಸರೇ ಮೊದಲು, ಪಲ್ಯಕ್ಕೆ ಸೊಪ್ಪು ತರಬೇಕು ಏಳರೇ ಅನ್ನುವ ಸುಪ್ರಭಾತದಿಂದ ದಿನ ಶುರುವಾಗುತ್ತಿತ್ತು. ಈ ಹಬ್ಬದ ವಿಶೇಷ ಅಡಿಗೆ ಅಂದರೆ ಬೆರಕೆ (ಮಿಶ್ರ) ಸೊಪ್ಪಿನ ಪಲ್ಯ. ಅಪ್ಪನ ಜೊತೆ ನಾವು ಮೂರು ಜನ ಮಕ್ಕಳು ಮನೆ ಸುತ್ತಮುತ್ತ ಇರುವ ಸೊಪ್ಪು ತರಲು ಹೋಗುವುದು ನನಗೆ ಇನ್ನು ನಿನ್ನೆ ಮೊನ್ನೆ ನೆಡೆದ ಹಾಗೆ ಅನಿಸುತ್ತದೆ. ಎಲ್ಲಾ ಗಿಡದ್ದೂ ಹತ್ತು ಹತ್ತು ಎಲೆ ಕುಯ್ಯಿರಿ ಸಾಕು ಅಂತ ಅಪ್ಪ ಹೇಳೆದೆ ತಡ, ನಾವು ಪಾರ್ಥೇನಿಯಂ ಸೇರಿಸಿ ಇದ್ದ ಬದ್ದ ಗಿಡದ ಎಲೆ ಎಲ್ಲಾ ಬುಟ್ಟಿಗೆ ಸೇರಿಸುತ್ತಿದ್ದೇವು. ಅಪ್ಪನಿಗೆ ಅಡಿಗೆ ಯೋಗ್ಯವಾದ ಎಲೆಗಳನ್ನು ಬೇರೆ ಮಾಡುವುದೇ ಒಂದು ಕೆಲಸವಾಗುತ್ತಿತ್ತು. ನಮ್ಮ ಅವಾಂತರ ನೋಡಿ, ಬರೀ ಅಡಿಗೆ ಯೋಗ್ಯವಾದ ಎಲೆಗಳನ್ನು ಮಾತ್ರ ಕುಯ್ಯಿಬೇಕು ಅಂತ ಅಪ್ಪ ಹೇಳಿದರೆ, ಪ್ರತಿಯೊಂದು ಎಲೆಯನ್ನು ತೋರಿಸಿ ಇದು ಆಗುತ್ತಾ ? ಇದು ಆಗುತ್ತಾ? ಅಂತ ಮೂರು ಜನನ್ನು ಅಪ್ಪನ ತಲೆ ಚಿಟ್ಟು ಹಿಡಿಸಿ ಬಿಡುತ್ತಿದ್ದೀವಿ. ನಂತರ ತೋಟಕ್ಕೆ ಹೋಗಿ ಪೂಜೆ ಮಾಡುವ ಜಾಗ ಸರಿ ಮಾಡಿ ಬರುವ ಕೆಲಸಕ್ಕೆ ಅಪ್ಪನ ಜೊತೆ ತೋಟಕ್ಕೂ ದಾಳಿ ಇಟ್ಟು, ಅಲ್ಲಿ ಸ್ವಲ್ಪ ಗಲಾಟೆ ಮಾಡಿ, ಮನೆಗೆ ಬರೋ ಅಷ್ಟೋತ್ತಿಗೆ ಅಮ್ಮ ಅಡಿಗೆಯಲ್ಲಿ ಬ್ಯುಸಿಯಾಗಿರುತ್ತಿದ್ದಳು. ನಾವು ಸ್ನಾನದ ಶಾಸ್ತ್ರ ಮುಗಿಸೋ ವೇಳೆಗೆ, ಮನೆ ತುಂಬಾ ನನ್ನ ಫೆವರೇಟ್ ಬೆರಕೆ ಸೊಪ್ಪಿನ ಪಲ್ಯದ ಗಮ. ಆದರೆ ತಿನ್ನೊಕ್ಕೆ ಪೂಜೆ ಮುಗಿಯದೆ ಅನುಮತಿಯಿಲ್ಲ. ಅದರೆ ಈ ಪಲ್ಯಕ್ಕೆ ಉಪ್ಪು ಹಾಕದೆ ಮಾಡಲಾಗುತ್ತಿತ್ತು. ಕಾರಣ ಮಾತ್ರ ನನಗೆ ಇವತ್ತಿಗೂ ಗೊತ್ತಿಲ್ಲ. ಅಮ್ಮ ಒಂದು ಪಾತ್ರೆಗೆ ಅನ್ನ ಮತ್ತು ಪಲ್ಯ ಹಾಕಿ ಕಲಸಿ ಪೂಜೆಗೆ ಕಳುಹಿಸುತ್ತಿದ್ದಳು. ಪೂಜೆ ಯ ನಂತರ ಅದನ್ನು ತೋಟಕ್ಕೆ ಬೀರುವುದು ವಾಡಿಕೆ. ಅಪ್ಪ ಮುಂದೆ ಮುಂದೆ ಪಲ್ಯದ ಅನ್ನವನ್ನು ಬೀರುತ್ತಾ ಹೋದ ಹಾಗೆ ನಾನು ಅವನ ಹಿಂದೆ ಪಾತ್ರೆ ಹಿಡಿದು ಹಿಂಬಾಲಿಸುತ್ತಿದ್ದೆ, ಅಪ್ಪನಿಗೆ ಕಾಣದ ಹಾಗೆ ಸಾಕಷ್ಟು ಅನ್ನ ನನ್ನ ಹೊಟ್ಟೆ ಸೇರಿರುತ್ತಿತ್ತು. ಇದಕ್ಕಾಗಿಯೇ ನಾನು ತೋಟಕ್ಕೆ ಹೋಗುತ್ತಿದ್ದೆ ಅನ್ಸುತ್ತೆ. ಆದರೆ ತೋಟ ಗದ್ದೆಗೆ ಅನ್ನ ಚೆಲ್ಲುವುದು ಮಾತ್ರ ನನಗೆ ಇಷ್ಟ ಆಗುತ್ತಿರಲ್ಲಿಲ್ಲ. ವೇಸ್ಟ್ ಅನ್ನೋದು ನನ್ನ ಭಾವನೆಯಾಗಿತ್ತು. ಅಗ ಅಪ್ಪ ನಮ್ಮ ಜೀವನ ನೆಡೆಯೋದೆ ಈ ಜಮೀನಿನಿಂದ, ಇಡೀ ವರ್ಷ ಇದರಿಂದ ಲಾಭ ಪಡೆಯುತ್ತೇವೆ, ಒಂದು ದಿನ ಇದಕ್ಕಾಗಿ ನಾವು ಸ್ಪಲ್ಪ ಖರ್ಚು ಮಾಡಿದ್ದರೆ ಅದು ನಾವು ಭೂಮಿಗೆ ಸಲ್ಲಿಸುವ ವಂದೆನೆ ಅಂತ ಬುದ್ಧಿ ಹೇಳುತ್ತಿದ್ದ. ನಾವು ದೊಡ್ಡವರಾದ ಹಾಗೆ ಕಾಲೇಜು, ಹಾಸ್ಟೇಲ್ ಅಂತ ಹಬ್ಬಕ್ಕೆ ಮನೆಯಲ್ಲಿ ಇರುತ್ತಿರಲಿಲ್ಲ. ಹಾಗೆ ಹಬ್ಬದೊಂದಿಗಿನ ನಂಟು ಕಡಿಮೆಯಾಗುತ್ತಾ ಬಂತು.
ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಈ ಹಬ್ಬವನ್ನು ಬೇರೆ ತರ ಆಚರಿಸುತ್ತಿದ್ದರು. ರಾತ್ರಿ ಎಲ್ಲಾ ಅಡಿಗೆ ಮಾಡಿ, ಮುಂಜಾನೆ ಕಾಗೆ ಕೂಗುವ ಮುನ್ನ ಜಮೀನಿಗೆ ಪೂಜೆ ಮಾಡಿ, ಮಾಡಿದ ಭಕ್ಷ್ಯಗಳನ್ನು ಭೂ ತಾಯಿಗೆ ಅರ್ಪಿಸುತ್ತಿದ್ದರು. ಅವರಲ್ಲಿ ಕೊಟ್ಟೆ ಕಡಬು ಅ ದಿನ ವಿಶೇಷ, ಅದನ್ನು ಭೂಮಿಯ ಒಳಗೆ ಹೂಳಿ, ಗದ್ದೆ ಕುಯ್ಲಿನ ಸಮಯದಲ್ಲಿ ತೆಗೆದು ತಿನ್ನುವುದು ಅವರ ಆಚರಣೆ. ಅವರ ಮನೆಗೆ ಹಬ್ಬಕ್ಕೆ ಹೋಗುವ ನನ್ನ ಆಸೆ ಮಾತ್ರ ಆಸೆಯಾಗಿಯೆ ಉಳಿಯಿತು. ಅದನ್ನು ಅಮ್ಮನ ಬಳಿ ಹೇಳಿದಾಗ ಚೆನ್ನಾಗಿ ಬೈಯಿದು, ಬಾಯಿ ಮುಚ್ಚಿಸಿದ್ದಳು.
ಈಗ ಹಬ್ಬ ಮಾಡಿದರೂ, ಆ ಸಂಭ್ರಮ ಇಲ್ಲ. ಆದರೂ ನನಗೆ ಭೂಮಿ ಹುಣ್ಣಿಮೆ ಅತಿ ಪ್ರಿಯವಾದ ಹಬ್ಬ. ಹಲವು ವರ್ಷಗಳ ನಂತರವೂ ಬಾಲ್ಯದ ಈ ಹಬ್ಬದ ಆ ದಿನಗಳ ನೆನಪು ಹಸಿರಾಗಿದೆ, ಪ್ರತಿ ವರ್ಷವೂ ಅವುಗಳನ್ನು ಮಿಸ್ ಮಾಡ್ಕೊಳುತ್ತೀನಿ ಮತ್ತು ನೆನೆಪುಗಳು ಕಾಡುತ್ತವೆ. ಆದರೆ ಈ ಬಾರಿ ನನ್ನ ಮಗಳೊಂದಿಗೆ ಈ ಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅವಳಿಗೂ ಬಾಲ್ಯದ ಸುಂದರ ದಿನಗಳ ನೆನಪುಗಳನ್ನು ಉಳಿಸುವ ನಿಟ್ಟಿನಲ್ಲಿ...