December 1, 2010

ಅಡುಗೆ ಮನೆಯ ಮುಂಜಾಗತ್ರ ಕ್ರಮಗಳು

ಮಹಿಳೆಯರಾದ ನಮಗೂ ಅಡಿಗೆಮನೆಗೂ ಜನ್ಮ ಜನ್ಮದ ನಂಟು. ಕೆಲವು ದಶಕಗಳ ಹಿಂದೆ ಮಹಿಳೆ ಎಂದರೆ ಅಡಿಗೆ ಕೆಲಸದಲ್ಲಿ ಬ್ಯುಸಿ ಎನ್ನುವ ಯೋಚನೆ ತಕ್ಷಣ ತಲೆಯಲ್ಲಿ ಬರುತ್ತದೆ. ಅಲ್ಲಿ ಅವಳ ಕೆಲಸವು ಹಾಗೆ ಚಾಲೆಂಜಿಗ್‌. ಬೆಂಕಿ, ಬಿಸಿಯೊಡನೆ ಸೆಣಾಸಾಟವೆಂದರೆ ಸಮಂಜಸ. ಹರಿತವಾದ ಕತ್ತಿ, ಭಾರವಾದ ಪಾತ್ರೆಗಳನ್ನು ಸರಾಗವಾಗಿ ಹ್ಯಾಂಡಲ್‌ ಮಾಡಬಲ್ಲ ಚತುರೆ. ಅಲ್ಲಿ ಅವಳದೇ ರಾಜ್ಯಭಾರ. ಈಗ ಮಹಿಳೆಯರು ಅಡುಗೆ ಮನೆಯ ಹೊರಗೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಸಂತೋಷಕರ. ಆದರೆ ಅಡುಗೆಮನೆಯಿಂದ ಮಾತ್ರ ಮುಕ್ತಿ ಪಡೆದಿಲ್ಲ. ಅಲ್ಲಿ ಅವಳ ಸ್ಥಾನ ಖಾಯಂ. ಅಡುಗೆ ಮನೆಯ ಪರಿಕಲ್ಪನೆ ಈಗ ಬದಲಾಗಿದೆ. ಸೌದೆ ಒಲೆ, ಸೀಮೆ ಎಣ್ಣೆ ಸ್ಟೌವಿನ ಜಾಗವನ್ನು ಗ್ಯಾಸ್ ಸ್ಟೌವ್ ಅಥವಾ ಒವನ್, ಅಥವಾ ಹಾಟ್‌ ಪ್ಲೇಟ್, ಬೀಸೆಕಲ್ಲು, ತಿರುವೆ ಕಲ್ಲಿನ ಸ್ಥಾನವನ್ನು ಮಿಕ್ಸರ್ ಮತ್ತು ಗ್ರೈಂಡರ್‌, ಕಡೆಗೋಲಿನ ಜಾಗವನ್ನು ಬ್ಲೆಂಡರ್ ಪಡೆದು ಕೊಂಡಿದೆ. ಇಷ್ಟೇ ಅಲ್ಲದೆ ಬೇರೆ ವಿದ್ಯುತ್ ಉಪಕರಣಗಳು ಅಡಿಗೆ ಮನೆಯನ್ನು ಆಕ್ರಮಿಸಿ ಕೊಂಡಿವೆ. ಅಡಿಗೆ ಮನೆಯ ಜೊತೆಗೆ ಹೊರಗೂ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಅದು ಅವಶ್ಯಕ ಕೂಡ. ಅದರೆ ಇವುಗಳ ಅನೂಕೂಲದ ಜೊತೆಗೆ ಅಪಾಯವು ಕಟ್ಟಿಟ್ಟ ಬುತ್ತಿ. ಸ್ಪಲ್ಪ ಎಚ್ಚರ ತಪ್ಪಿದರೂ ಅಡಿಗೆಮನೆಗಳಲ್ಲಿ ಅನಾಹುತಗಳು ಗ್ಯಾರಂಟಿ. ಬಟ್ಟೆಗೆ ಬೆಂಕಿ ತಗಲುವುದು, ಬಿಸಿ ಎಣ್ಣೆ ಅಥವಾ ನೀರು ಮೈ ಕೈ ಮೇಲೆ ಬೀಳುವುದು, ಗ್ಯಾಸ್ ಸ್ಪೋಟ, ಮಿಕ್ಸಿ ಜಾರ್‌ಗೆ ಕೈ ಸಿಕ್ಕಿಕೊಳ್ಳುವುದು, ವಿದ್ಯುತ್ ಶಾಕ್ ಇತ್ಯಾದಿ, ಇತ್ಯಾದಿ. ಇವುಗಳೆಲ್ಲಾ ಉದಾಹರಣೆಗಳಷ್ಟೆ. ಅದೇಷ್ಟೋ ಅನಾಹುತಗಳು ಪ್ರತಿ ದಿನ ಒಂದಲ್ಲ ಒಂದು ಅಡಿಗೆ ಮನೆಯಲ್ಲಿ ಉಪಕರಣಗಳನ್ನು ಬಳಸುವಾಗ ನೆಡೆಯುತ್ತದೆ. ಈ ರೀತಿ ಮಹಿಳೆಯರಾದ ನಾವು ಮನೆಯಲ್ಲಿ ದಿನ ಹೆಚ್ಚು ಸಮಯವನ್ನು ಕಳೆಯುವುದು ಅಡಿಗೆ ಮನೆಯಲ್ಲೇ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಡಿಗೆ ಮನೆಯೆ ಮನೆ ಅವಘಡಗಳು ನೆಡೆಯುವ ಪ್ರಾಥಮಿಕ ಸ್ಥಳ ಕೂಡ. ಇದರಲ್ಲಿ ಅಶ್ಚರ್ಯ ಪಡುವುಂತಹದು ಏನು ಇಲ್ಲ. ಬಗೆ ಬಗೆ ಎಲೆಕ್ಟ್ರಿಕ್ ಉಪಕರಣಗಳು, ಗ್ಯಾಸ್‌, ಬೆಂಕಿ, ಹರಿತವಾದ ವಸ್ತುಗಳನ್ನೆಲ್ಲಾ ಹೊಂದಿರುವಾಗ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಸಾಮಾನ್ಯ ಕೂಡ. ಚಾಕು, ಕತ್ತಿ, ಗ್ಯಾಸ್‌, ಬೆಂಕಿ, ಮಿಕ್ಸರ್, ಗ್ರೈಂಡರ್, ಓವನ್ , ಪ್ರಿಜ್ಡ್ ಅಥವಾ ಇನ್ಯಾವುದೇ ವಸ್ತುಗಳನ್ನು ಉಪಯೋಗಿಸುವಾಗ ಆಗಬಹುದು. ಅನಾಹುತಗಳು ಕ್ಷಣಾರ್ಧದಲ್ಲಿ ಸಂಭವಿಸತ್ತವೆ. ನಾವು ಮಹಿಳೆಯರು ಸ್ವಲ್ಪ ಕಾಮನ್ ಸೆನ್ಸ್ ಉಪಯೋಗಿಸಿದರೆ ಇವುಗಳನ್ನು ತಡೆಯುವುದು ಸುಲಭ. ನಾವು ಮನೆಯಲ್ಲಿ ಈ ರೀತಿಯ ಅಡುಗೆ ಮನೆಯ ಅನಾಹುತಗಳನ್ನು ತಡೆಗಟ್ಟಲು ಹಲವು ಮುಂಜಾಗತ್ರ ಕ್ರಮಗಳನ್ನು ಖಂಡಿತವಾಗಿ ತೆಗೆದುಕೊಳ್ಳಬಹುದು. ಅವುಗಳಲ್ಲಿ ಅತಿ ಸರಳ ಹಾಗೂ ಅಗತ್ಯ ಕ್ರಮಗಳು ಇಲ್ಲಿವೆ.
ಗಡಿಬಿಡಿಯಲ್ಲಿ ಅಡಿಗೆ ಮಾಡುವಾಗ ನೀರು, ಎಣ್ಣೆ ಅಥವಾ ಯಾವುದಾದರೂ ಪದಾರ್ಥ ನೆಲ ಮೇಲೆ ಬೀಳುವುದು ಕಾಮಾನ್. ಆದರೆ ಅವುಗಳು ಅಪಾಯಕಾರಿ ಎನ್ನುವ ಅಂಶ ಕೂಡ ಅಷ್ಟೆ ನಿಜ. ಅವುಗಳು ಅವಘಡಗಳಿಗೆ ಮೂಲವಾಗ ಬಹುದು. ಹಾಗಾಗಿ ನೆಲದ ಮೇಲೆ ಚೆಲ್ಲಿರುವುದನ್ನು ಉದಾಸೀನ ಮಾಡದೇ ತಕ್ಷಣ ಕ್ಲೀನ್ ಮಾಡಿ. ಅಡಿಗೆ ಮನೆಯ ನೆಲ ಜಾರದಂತೆ (slip-resistant/matte finished) ಇದ್ದರೆ ಉತ್ತಮ.
ಅಡಿಗೆ ಮಾಡುವಾಗ ನಿಮ್ಮ ಬಟ್ಟೆ ಮತ್ತು ಕೂದಲಿನ ಕಡೆ ಗಮನವಿರಲಿ. ಕೂದಲನ್ನು ಕಟ್ಟಿ ಕೊಳ್ಳಿ. ಸೀರೆ ಸೆರಗಿನ ಕಡೆ ಲಕ್ಷ್ಯವಿರಲಿ, ಉದ್ದ ತೋಳನ್ನು ಹಿಂದಕ್ಕೆ ಮಡಚಿ ಕೊಳ್ಳಿ. ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ.
ಪೇಪರ್‌, ಬಟ್ಟೆ, ಎಣ್ಣೆ, ಟವೆಲ್, ಅಲ್ಕೋಹಾಲ್ ಹಾಗೂ ಇತರೆ ಯಾವುದೇ ಸುಭವಾಗಿ ಉರಿ ಹೊತ್ತಿಕೊಳ್ಳುವ ವಸ್ತುಗಳನ್ನು ಬೆಂಕಿ ಅಥವಾ ಸ್ಟೌವ್‌ನಿಂದ ದೂರವಿಡಿ.
ಅಡುಗೆ ಮನೆಯಿಂದ ಹೊರ ಹೋಗುವಾಗ ಓಲೆ ಅಫ್ ಮಾಡಿರುವುದನ್ನು ಖಚಿತ ಪಡಿಸಿಕೊಳ್ಳಿ. ಯಾವಾಗಲೂ ಗ್ಯಾಸ್‌ ಸಿಲಿಂಡರ್‌ನ ರೆಗ್ಯುಲೇಟರ್ ಬಂದ್‌ ಮಾಡಿಡಿ.
ಪಾತ್ರೆಯಲ್ಲಿ ಎಣ್ಣೆ, ಬೆಣ್ಣೆ , ತುಪ್ಪವನ್ನು ಕಾಯಿಸುವಾಗ ಆದಷ್ಟೂ ಅಡಿಗೆ ಮನೆಯಲ್ಲಿ ಇರಿ. ಒಂದೊಮ್ಮೆ ಬೆಂಕಿ ಹತ್ತಿ ಕೊಂಡರೆ ನೀರು ಸುರಿಯಬೇಡಿ. ಅಡುಗೆಮನೆಯಲ್ಲಿ ಅಗ್ನಿ ಶಾಮಕ ಉಪಕರಣವನ್ನು ಹೊಂದಿರುವುದು ಕ್ಷೇಮ.
ಸರಿಯಾದ ಗಾಳಿ, ಬೆಳಕು ಅಡಿಗೆ ಮನೆಯಲ್ಲಿರುವಂತೆ ನೋಡಿಕೊಳ್ಳಿ. ಮಂದ ಬೆಳಕಿನ ಅಡಿಗೆ ಮನೆಯಲ್ಲಿ ಕೆಲಸ ಮಾಡುವುದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚು.
ಹರಿತವಾದ ಸಲಕರಣೆಗಳನ್ನು ಉಪಯೋಗಿಸುವ ಜಾಗೂರಕರಾಗಿರಿ ಹಾಗೂ ಅವುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಿ.
ಎಲೆಕ್ಟ್ರಿಕ್ ಉಪಕರಣಗಳನ್ನು ಉಪಯೊಗಿಸುವಾಗ ಸಾಧ್ಯವಾದಷ್ಟು ಜಾಗರೂಕರಾಗಿ. ವೈಯರ್‌ಗಳನ್ನು, ಸ್ವಿಚ್‌ಗಳನ್ನು ಹಾಗೂ ಉಪಕರಣಗಳನ್ನು ನೀರಿನಿಂದ ದೂರ ಇಡಿ. ವೈಯರ್‌ಗಳಲ್ಲಿ, ಸ್ವಿಚ್‌ಗಳಲ್ಲಿ ಯಾವುದೇ ದೋಷ ಕಂಡು ಬಂದಲ್ಲಿ ನಿರ್ಲಕ್ಷಿಸದೇ ಬದಲಾಯಿಸಿ ಅಥವಾ ಸರಿ ಪಡಿಸಿ. ಆಗುವ ಅಕ್ಸಿಡೆಂಟ್‌ಗಳನ್ನು ತಪ್ಪಿಸಿ.
ಗೃಹ ಉಪಯೋಗಿ ವಿದ್ಯುತ್ ಉಪಕರಣಗಳನ್ನು ಬಳಸುವ ಮುನ್ನ ಯುಸರ್ ಮ್ಯಾನುಯಲ್‌ ಅನ್ನು ಓದಿಕೊಳ್ಳಿ. ಇದು ಬಹಳ ಸಹಕಾರಿ ಹಾಗೂ ಅದರಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿ.
ಫ್ರಿಜ್ಡ್‌ನ್ನು ಕ್ಲೀನ್ ಮಾಡುವಾಗ ಸ್ವಿಚ್ ಅಫ್ ಮಾಡಿ ಹಾಗೂ ಸಂಪರ್ಕವನ್ನು ತೆಗೆಯಲು ಮರೆಯದಿರಿ.
ಮಿಕ್ಸರ್ ಜಾರ್‌ಗಳಿಗೆ ಅದರ ಸಾಮರ್ಥ್ಯಕ್ಕೆ ತಕ್ಕಷ್ಟೆ ಹಾಕಿ, ಒವರ್‌ ಲೋಡ್ ಅಪಾಯಕಾರಿ. ಅತಿ ಗಟ್ಟಿಯಾದ ಪದಾರ್ಥಗಳನ್ನು ಬಳಸ ಬೇಡಿ. ಮಿಕ್ಸರ್ ಜಾರ್ ಸರಿಯಾಗಿ ಫಿಟ್‌ ಆಗಿದ್ದೇಯೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
ಒವನ್‌ಗಳಿಗೆ ಸೂಕ್ತವಾದ ಪಾತ್ರೆಗಳನ್ನೇ ಬಳಸಿ.
ನಿಮ್ಮ ಅಡಿಗೆ ಮನೆಯನ್ನು ಸುರಕ್ಷಿತ ತಾಣವಾಗಿಸಿ. ಇಲ್ಲಿನ ಅಪಾಯಕಾರಿ ವಸ್ತುಗಳನ್ನು ಮಕ್ಕಳಿಂದ ದೂರವಿಡಿ. ಹಾಗೇಯೆ ಅಡಿಗೆ ಮಾಡುವಾಗ ಮಕ್ಕಳನ್ನು ಅಡಿಗೆ ಮನೆಯಿಂದ ದೂರವಿಡಿ.
ಅಡಿಗೆ ಮನೆಯಲ್ಲಿ ಫಸ್ಟ್ ಏಡ್ ಕಿಟ್ ಇಟ್ಟುಕೊಳ್ಳಿ.
ಇಡೀ ಮನೆಯ ಹಾಗೂ ಮನೆಯವರ ಸಂತೋಷ ಹೋಮ್ ಮೇಕರ್‌ ಆಗಿರುವ ಮಹಿಳೆಯ ಮೇಲೆ ಅವಲಂಬಿತವಾಗಿದೆ. ನಾವು ಮಾಡುವ ಕೆಲಸದಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ ಸಾಕು ಮನೆ ಆನಂದವನ ವಾಗುತ್ತದೆ. ಅಡುಗೆಮನೆಯನ್ನು ಸುರಕ್ಷಿತ ತಾಣವಾಗಿಸುವ ನಿಟ್ಟಿನಲ್ಲಿ ಸ್ಪಲ್ಪ ಮುತುವರ್ಜಿ ವಹಿಸಿದರೆ ಮಹಿಳೆ ಸ್ಮಾರ್ಟ್ ಗೃಹಣಿ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

(2010ರ ನವೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

October 26, 2010

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

ಮಲೆನಾಡಿನ ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಬಹುಶ: ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.
ಇಲ್ಲಿನ ಕೃಷಿಕರಿಗೆ ಅಡಿಕೆ ಕೊಯ್ಲು ಬರೀ ಒಂದು ಕೆಲಸವಾಗಿರದೆ, ಒಂದು ಆಚರಣೆಯೇ ಆಗಿತ್ತು ಎಂದರೆ ತಪ್ಪಾಗಲಾರದು. ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿತ (ಕೊಯ್ಲು) ಪ್ರಾರಂಭಿಸುವುದೇ ಒಂದು ಸಂಭ್ರಮ ಸಡಗರ. ಅದಕ್ಕೆ ಪೂರ್ವಭಾವಿಯಾಗಿ ಕತ್ತಿ, ಮಣೆ. ತಟ್ಟಿ-ಬುಟ್ಟಿಗಳನ್ನು ಒಟ್ಟುಗೂಡಿಸುವುದು, ಚಪ್ಪರದಂಗಳವನ್ನು ಸಾರಿಸುವುದು, ಚೊಗರು ತಯಾರಿಸುವುದು, ಕೊನೆಗಾರನಿಗೆ, ಅಡಿಕೆ ಸುಲಿಯುವ ಕುಲಿಯಾಳುಗಳಿಗೆ ತಿಳಿಸುವುದು ಹೀಗೆ ಹತ್ತು ಹಲವು ತಯಾರಿಗಳನ್ನು ಮಾಡಿಕೊಳ್ಳುವುದು. ನಂತರ ಶುಭ ದಿನದಂದು ಒಳ್ಳೆ ಮೂಹರ್ತದಲ್ಲಿ ಪೂಜೆ ಮಾಡಿ ಕೊನೆ ತೆಗೆಯುವುದು. ಅಡಿಕೆ ಒಲೆಗೆ ಉರಿ ಹಚ್ಚುವ ಮುನ್ನ ಒಲೆಗೆ ಪೂಜೆ ಸಲ್ಲಿಸುತ್ತಿದ್ದರು. ಹಾಗೇ ಸೂರ್ಯ ಮೇಲೆರುವ ಮುನ್ನವೇ ಬೇಯಿಸಿದ ಅಡಿಕೆಯನ್ನು ಬಿದರಿನ ತಟ್ಟಿಯ ಮೇಲೆ ಒಣಗಿಸಲಾಗುತ್ತಿತ್ತು. ಸಂಜೆ ಇಬ್ಬನಿ ಬೀಳುವ ಮುನ್ನ ಒಣಗಿದ ಅಡಿಕೆಯನ್ನು ಒಟ್ಟು ಮಾಡಿ ಅಡಿಕೆ ಹಾಳೆಯನ್ನು ಮುಚ್ಚಲಾಗುತ್ತಿತ್ತು. ಅಡಿಕೆ ಕೊಯ್ಲು ಮುಗಿದ ನಂತರ ಒಣಗಿಸಿದ ಅಡಿಕೆಯನ್ನು ಒಟ್ಟಿಗೆ ಸುರಿದು ರಾಶಿಗೆ ಪೂಜೆ ಮಾಡಿ ನಂತರ ಮೂಟೆ ಮಾಡಿ ಮಂಡಿಗೆ ಕಳುಹಿಸುವುದು, ಇದಿಷ್ಟು ಮಲೆನಾಡಿನ ಸಂಪ್ರಾದಾಯಿಕ ಅಡಿಕೆ ಕೊಯ್ಲಿನ ಚಿತ್ರಣ. ಇಷ್ಟೆ ಅಲ್ಲದೇ ತೋಟದಿಂದ ತಂದ ಗೊನೆಗಳನ್ನು ಅಚ್ಚುಕಟ್ಟಾಗಿ ರಾಶಿ ಮಾಡಲಾಗುತ್ತಿತ್ತು. ಅಡಿಕೆ ಸುಲಿಯುವವರಿಗೆ ಸಮಾನಾಗಿ ಗೊನೆಗಳನ್ನು ಪಾಲು ಮಾಡುತ್ತಿದ್ದರು. ಹಾಡು, ಹರಟೆ, ನಗು, ತಮಾಷೆ, ಒಗಟು, ಪ್ರಶ್ನೋತ್ತರಗಳು ಮಧ್ಯರಾತ್ರಿಯವರೆಗೆ ಚಪ್ಪರದಂಗಳ ತುಂಬಿರುತ್ತಿತ್ತು. ಅಪರೂಪಕ್ಕೊಮ್ಮೆ ಟೇಪ್ ರೀಕಾರ್ಡಗಳು ಕಾಣಿಸಿಕೊಳ್ಳುತ್ತಿದ್ದವು.
ಆದರೆ, ಈಗ ಈ ರೀತಿಯ ಅಡಿಕೆ ಕೊಯ್ಲು ಕಾಣಲು ಸಿಗುವುದಿಲ್ಲ, ಈಗ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣವೇ ಬದಲಾಗಿದೆ. ಕೇಲವೆ ವರ್ಷಗಳೀಚೆಗೆ ಈ ಅಡಿಕೆ ಕೊಯ್ಲಿನ ಕಾನ್ಸೆಪೆಟ್ ಬದಲಾಗಿದೆ. ಕುಲಿಯಾಳುಗಳಾಗಿ ಪರದಾಟ, ಕೊಯ್ಲಿನ ಸಮಯ ಹತ್ತಿರವಾದಂತೆ ಹಸಿ ಅಡಿಕೆ ಕಾಯಿ ಕೊಳ್ಳುವರನ್ನೋ ಅಥವಾ ಚೇಣಿದಾರರನ್ನೋ ಹುಡುಕುವಂತೆ ಬೆಳೆಗಾರರನ್ನು ಮಾಡಿದೆ.
ಚಪ್ಪರದಂಗಳದಲ್ಲಿ ಕಂಬಕ್ಕೆ ಒರಗಿ ನಡುರಾತ್ರಿವರೆಗೆ ಚಳಿಯಲ್ಲಿ ಅಡಿಕೆ ಸುಲಿಯುವ ಅಳುಗಳು ಈಗ ವಿರಳ. ಚಪ್ಪರವೇ ಎಷ್ಟೋ ಮನೆಗಳಲ್ಲಿ ಇಲ್ಲವಾಗಿದೆ . ಬದಲಾಗಿ ಅಂಗಳ ಅಥವಾ ಮನೆಯ ಥಾರಸಿಯನ್ನು ಅಡಿಕೆ ಒಣಗಿಸಲು ಬಳಸಿಕೊಳ್ಳಲಾರಂಭಿಸಿದ್ದಾರೆ. ಬಿದರಿನ ಬುಟ್ಟಿಯ ಜಾಗವನ್ನು ಪ್ಲಾಸ್ಟಿಕ್ ಬುಟ್ಟಿಗಳು, ತಟ್ಟಿಯ ಸ್ಥಾನವನ್ನು ಕಬ್ಬಿಣದ ಟ್ರೇಗಳು ಆಕ್ರಮಿಸಿಕೊಂಡಿದೆ. ನಗು, ಹಾಡು, ಹರಟೆಯನ್ನು ಟಿವಿ ನುಂಗಿ ಹಾಕಿದೆ. ಅಡಿಕೆ ಸುಲಿಗೆಗೆ ಈಗ ಟಿವಿ ಕಡ್ಡಾಯವಾಗಿದೆ. ಅದರಲ್ಲೂ ಡಿಶ್ ಸಂಪರ್ಕ ಅಗತ್ಯ. ಅಡಿಕೆ ಸುಲಿಯುವ ಯಂತ್ರಗಳ ಆಗಮನವಾಗಿದೆ. ಈ ಯಂತ್ರಗಳು ಪರಿಪೂರ್ಣವಾಗಿಲ್ಲ, ಆದರೂ ಸಹ ಅನಿವಾರ್ಯವಾಗಿ ಕೃಷಿಕ ಇದರ ಮೊರೆ ಹೋಗಬೇಕಾಗಿದೆ.
ಅಡಿಕೆಯ ಅಸ್ಥಿರ ಬೆಲೆ, ಕೆಲಸಗಾರ ಅಭಾವ, ದಿನೇ ದಿನೇ ಹೆಚ್ಚುತ್ತಿರುವ ಸಂಬಳ, ಖರ್ಚು, ಹವಾಮಾನದ ಏರುಪೇರು, ರೋಗ, ಯುವ ಪೀಳಿಗೆಯವರ ಪಟ್ಟಣದತ್ತ ವಲಸೆ ಇವುಗಳೆಲ್ಲದರಿಂದ ಅಡಿಕೆ ಬೆಳೆಗಾರ ತತ್ತರಿಸಿ ಹೋಗಿದ್ದಾನೆ. ವಿಧಿಯಿಲ್ಲದೆ ಕೃಷಿಕ ಅಧುನಿಕರಣ, ಯಂತ್ರೀಕರಣ ಹಾಗೂ ಸರಳೀಕರಣಕ್ಕೆ ತಲೆ ಬಾಗುತ್ತಿದ್ದಾನೆ. ಸಣ್ಣ ಪುಟ್ಟ ಬೆಳೆಗಾರರು ಈ ಎಲ್ಲಾ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ಹಸಿಕಾಯಿಯನ್ನೇ ಮಾರಿ ಕೈ ತೊಳೆದು ಕೊಳ್ಳುತ್ತಿದ್ದಾರೆ.
ಮಲೆನಾಡಿನಲ್ಲಿ ಕೃಷಿಕರು ಅಡಿಕೆ ಕೊಯ್ಲುನ್ನು ಬರೀ ಅರ್ಥಿಕ ಉದ್ದೇಶಕ್ಕಾಗಿ ಮಾತ್ರ ಎನ್ನುವ ಭಾವನೆಯಿಂದಷ್ಟೇ ಅಲ್ಲದೆ, ಒಂದು ಸಂಪ್ರಾದಾಯಿಕ ಅಚರಣೆಯನ್ನು ನೆಡೆಸುವಷ್ಟೇ ಶ್ರದ್ಧೆಯಿಂದ ಮಾಡುತ್ತಿದ್ದರು ಎಂದರೆ ತಪ್ಪಾಗಲಾರದು. ಆದರೆ ಇಂದು ಆ ದಿನಗಳಲ್ಲಿ ಕಂಡು ಬರುತ್ತಿದ್ದ ಸಂಭ್ರಮ, ಅಚ್ಚುಕಟ್ಟುತನ, ವೈಭವ ಯಾವುದು ಇಲ್ಲದೇ ಅಡಿಕೆ ಕೊಯ್ಲು ನೀರಸವಾಗಿದೆ.

October 22, 2010

ಕಾಡುವ ಭೂಮಿ ಹುಣ್ಣಿಮೆಯ ನೆನಪುಗಳು...!

ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ ಅತ್ತೆ ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿಸುತ್ತಿರಲಿಲ್ಲ. ಆದರೆ ಇದಕ್ಕೆ ಭೂಮಿ ಹುಣ್ಣಿಮೆ ಮತ್ತು ದೀಪಾವಳಿ ಮಾತ್ರ ಹೊರತಾಗಿತ್ತು. ಈ ಎರಡು ಹಬ್ಬಗಳು ತಪ್ಪದೇ ನಮ್ಮ ಮನೆಯಲ್ಲಿ ನೆಡೆಯುತ್ತಿತ್ತು. ನಮಗೆ ಕಾರಣ ಮಾತ್ರ ಆಗ ತಿಳಿದಿರಲಿಲ್ಲ. ಆದರೆ ನಾವು ಕೃಷಿಕರಾಗಿದ್ದೇ ಈ ಹಬ್ಬದ ಬಗ್ಗೆ ಹೆಚ್ಚಿನ ಒಲವಿಗೆ ಕಾರಣ ಎಂಬುದು ಈಗ ಅರ್ಥವಾಗಿದೆ. ಹಾಗೆ ನನಗೂ ಈ ಎರಡು ಹಬ್ಬಗಳು ಬೇರೆ ಕಾರಣಗಳಿಗೆ ಇಂದಿಗೂ ಅತೀ ಪ್ರಿಯವಾದವು. ಇವುಗಳು ನನ್ನ ಬಾಲ್ಯದ ಮಧುರ ನೆನೆಪುಗಳೊಂದಿಗೆ ಬೆಸೆದು ಕೊಂಡಿವೆ.
ಅಪ್ಪನಿಗೆ ಹೇಳಿ ಕೇಳಿ ಈ ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳೆಂದರೆ ಮಾರು ದೂರು. ಆದರೆ ಈ ಹಬ್ಬದಲ್ಲಿ ಮಾತ್ರ ತೋಟ ಗದ್ದೆಗೆ ಅಪ್ಪನದೇ ಪೂಜೆ. ನಾವು ಮೂರು ಮಕ್ಕಳು ಅಪ್ಪನ ಬಾಲ ಹಿಡಿದು ಈ ಪೂಜೆಯಲ್ಲಿ ಭಾಗವಹಿಸುತ್ತಿದ್ದೆವು. ಹಬ್ಬದ ಪ್ರಯುಕ್ತ ನಿತ್ಯಕ್ಕಿಂತ ಸ್ವಲ್ಪ ಬೇಗ ಏಳುವುದು ಮಾತ್ರ ನಿದ್ರೆ ಗುಮ್ಮನಾದ ನನಗೆ ಸಂಕಟ ತರಿಸುತ್ತಿತ್ತು. ಆದರೆ ಅಮ್ಮ ಬಿಡಬೇಕಲ್ಲಾ!! ನಾನೇ ಹಿರಿಯವಳಾದ ಕಾರಣ ನನ್ನ ಹೆಸರೇ ಮೊದಲು, ಪಲ್ಯಕ್ಕೆ ಸೊಪ್ಪು ತರಬೇಕು ಏಳರೇ ಅನ್ನುವ ಸುಪ್ರಭಾತದಿಂದ ದಿನ ಶುರುವಾಗುತ್ತಿತ್ತು. ಈ ಹಬ್ಬದ ವಿಶೇಷ ಅಡಿಗೆ ಅಂದರೆ ಬೆರಕೆ (ಮಿಶ್ರ) ಸೊಪ್ಪಿನ ಪಲ್ಯ. ಅಪ್ಪನ ಜೊತೆ ನಾವು ಮೂರು ಜನ ಮಕ್ಕಳು ಮನೆ ಸುತ್ತಮುತ್ತ ಇರುವ ಸೊಪ್ಪು ತರಲು ಹೋಗುವುದು ನನಗೆ ಇನ್ನು ನಿನ್ನೆ ಮೊನ್ನೆ ನೆಡೆದ ಹಾಗೆ ಅನಿಸುತ್ತದೆ. ಎಲ್ಲಾ ಗಿಡದ್ದೂ ಹತ್ತು ಹತ್ತು ಎಲೆ ಕುಯ್ಯಿರಿ ಸಾಕು ಅಂತ ಅಪ್ಪ ಹೇಳೆದೆ ತಡ, ನಾವು ಪಾರ್ಥೇನಿಯಂ ಸೇರಿಸಿ ಇದ್ದ ಬದ್ದ ಗಿಡದ ಎಲೆ ಎಲ್ಲಾ ಬುಟ್ಟಿಗೆ ಸೇರಿಸುತ್ತಿದ್ದೇವು. ಅಪ್ಪನಿಗೆ ಅಡಿಗೆ ಯೋಗ್ಯವಾದ ಎಲೆಗಳನ್ನು ಬೇರೆ ಮಾಡುವುದೇ ಒಂದು ಕೆಲಸವಾಗುತ್ತಿತ್ತು. ನಮ್ಮ ಅವಾಂತರ ನೋಡಿ, ಬರೀ ಅಡಿಗೆ ಯೋಗ್ಯವಾದ ಎಲೆಗಳನ್ನು ಮಾತ್ರ ಕುಯ್ಯಿಬೇಕು ಅಂತ ಅಪ್ಪ ಹೇಳಿದರೆ, ಪ್ರತಿಯೊಂದು ಎಲೆಯನ್ನು ತೋರಿಸಿ ಇದು ಆಗುತ್ತಾ ? ಇದು ಆಗುತ್ತಾ? ಅಂತ ಮೂರು ಜನನ್ನು ಅಪ್ಪನ ತಲೆ ಚಿಟ್ಟು ಹಿಡಿಸಿ ಬಿಡುತ್ತಿದ್ದೀವಿ. ನಂತರ ತೋಟಕ್ಕೆ ಹೋಗಿ ಪೂಜೆ ಮಾಡುವ ಜಾಗ ಸರಿ ಮಾಡಿ ಬರುವ ಕೆಲಸಕ್ಕೆ ಅಪ್ಪನ ಜೊತೆ ತೋಟಕ್ಕೂ ದಾಳಿ ಇಟ್ಟು, ಅಲ್ಲಿ ಸ್ವಲ್ಪ ಗಲಾಟೆ ಮಾಡಿ, ಮನೆಗೆ ಬರೋ ಅಷ್ಟೋತ್ತಿಗೆ ಅಮ್ಮ ಅಡಿಗೆಯಲ್ಲಿ ಬ್ಯುಸಿಯಾಗಿರುತ್ತಿದ್ದಳು. ನಾವು ಸ್ನಾನದ ಶಾಸ್ತ್ರ ಮುಗಿಸೋ ವೇಳೆಗೆ, ಮನೆ ತುಂಬಾ ನನ್ನ ಫೆವರೇಟ್ ಬೆರಕೆ ಸೊಪ್ಪಿನ ಪಲ್ಯದ ಗಮ. ಆದರೆ ತಿನ್ನೊಕ್ಕೆ ಪೂಜೆ ಮುಗಿಯದೆ ಅನುಮತಿಯಿಲ್ಲ. ಅದರೆ ಈ ಪಲ್ಯಕ್ಕೆ ಉಪ್ಪು ಹಾಕದೆ ಮಾಡಲಾಗುತ್ತಿತ್ತು. ಕಾರಣ ಮಾತ್ರ ನನಗೆ ಇವತ್ತಿಗೂ ಗೊತ್ತಿಲ್ಲ. ಅಮ್ಮ ಒಂದು ಪಾತ್ರೆಗೆ ಅನ್ನ ಮತ್ತು ಪಲ್ಯ ಹಾಕಿ ಕಲಸಿ ಪೂಜೆಗೆ ಕಳುಹಿಸುತ್ತಿದ್ದಳು. ಪೂಜೆ ಯ ನಂತರ ಅದನ್ನು ತೋಟಕ್ಕೆ ಬೀರುವುದು ವಾಡಿಕೆ. ಅಪ್ಪ ಮುಂದೆ ಮುಂದೆ ಪಲ್ಯದ ಅನ್ನವನ್ನು ಬೀರುತ್ತಾ ಹೋದ ಹಾಗೆ ನಾನು ಅವನ ಹಿಂದೆ ಪಾತ್ರೆ ಹಿಡಿದು ಹಿಂಬಾಲಿಸುತ್ತಿದ್ದೆ, ಅಪ್ಪನಿಗೆ ಕಾಣದ ಹಾಗೆ ಸಾಕಷ್ಟು ಅನ್ನ ನನ್ನ ಹೊಟ್ಟೆ ಸೇರಿರುತ್ತಿತ್ತು. ಇದಕ್ಕಾಗಿಯೇ ನಾನು ತೋಟಕ್ಕೆ ಹೋಗುತ್ತಿದ್ದೆ ಅನ್ಸುತ್ತೆ. ಆದರೆ ತೋಟ ಗದ್ದೆಗೆ ಅನ್ನ ಚೆಲ್ಲುವುದು ಮಾತ್ರ ನನಗೆ ಇಷ್ಟ ಆಗುತ್ತಿರಲ್ಲಿಲ್ಲ. ವೇಸ್ಟ್ ಅನ್ನೋದು ನನ್ನ ಭಾವನೆಯಾಗಿತ್ತು. ಅಗ ಅಪ್ಪ ನಮ್ಮ ಜೀವನ ನೆಡೆಯೋದೆ ಈ ಜಮೀನಿನಿಂದ, ಇಡೀ ವರ್ಷ ಇದರಿಂದ ಲಾಭ ಪಡೆಯುತ್ತೇವೆ, ಒಂದು ದಿನ ಇದಕ್ಕಾಗಿ ನಾವು ಸ್ಪಲ್ಪ ಖರ್ಚು ಮಾಡಿದ್ದರೆ ಅದು ನಾವು ಭೂಮಿಗೆ ಸಲ್ಲಿಸುವ ವಂದೆನೆ ಅಂತ ಬುದ್ಧಿ ಹೇಳುತ್ತಿದ್ದ. ನಾವು ದೊಡ್ಡವರಾದ ಹಾಗೆ ಕಾಲೇಜು, ಹಾಸ್ಟೇಲ್ ಅಂತ ಹಬ್ಬಕ್ಕೆ ಮನೆಯಲ್ಲಿ ಇರುತ್ತಿರಲಿಲ್ಲ. ಹಾಗೆ ಹಬ್ಬದೊಂದಿಗಿನ ನಂಟು ಕಡಿಮೆಯಾಗುತ್ತಾ ಬಂತು.
ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಈ ಹಬ್ಬವನ್ನು ಬೇರೆ ತರ ಆಚರಿಸುತ್ತಿದ್ದರು. ರಾತ್ರಿ ಎಲ್ಲಾ ಅಡಿಗೆ ಮಾಡಿ, ಮುಂಜಾನೆ ಕಾಗೆ ಕೂಗುವ ಮುನ್ನ ಜಮೀನಿಗೆ ಪೂಜೆ ಮಾಡಿ, ಮಾಡಿದ ಭಕ್ಷ್ಯಗಳನ್ನು ಭೂ ತಾಯಿಗೆ ಅರ್ಪಿಸುತ್ತಿದ್ದರು. ಅವರಲ್ಲಿ ಕೊಟ್ಟೆ ಕಡಬು ಅ ದಿನ ವಿಶೇಷ, ಅದನ್ನು ಭೂಮಿಯ ಒಳಗೆ ಹೂಳಿ, ಗದ್ದೆ ಕುಯ್ಲಿನ ಸಮಯದಲ್ಲಿ ತೆಗೆದು ತಿನ್ನುವುದು ಅವರ ಆಚರಣೆ. ಅವರ ಮನೆಗೆ ಹಬ್ಬಕ್ಕೆ ಹೋಗುವ ನನ್ನ ಆಸೆ ಮಾತ್ರ ಆಸೆಯಾಗಿಯೆ ಉಳಿಯಿತು. ಅದನ್ನು ಅಮ್ಮನ ಬಳಿ ಹೇಳಿದಾಗ ಚೆನ್ನಾಗಿ ಬೈಯಿದು, ಬಾಯಿ ಮುಚ್ಚಿಸಿದ್ದಳು.
ಈಗ ಹಬ್ಬ ಮಾಡಿದರೂ, ಆ ಸಂಭ್ರಮ ಇಲ್ಲ. ಆದರೂ ನನಗೆ ಭೂಮಿ ಹುಣ್ಣಿಮೆ ಅತಿ ಪ್ರಿಯವಾದ ಹಬ್ಬ. ಹಲವು ವರ್ಷಗಳ ನಂತರವೂ ಬಾಲ್ಯದ ಈ ಹಬ್ಬದ ಆ ದಿನಗಳ ನೆನಪು ಹಸಿರಾಗಿದೆ, ಪ್ರತಿ ವರ್ಷವೂ ಅವುಗಳನ್ನು ಮಿಸ್ ಮಾಡ್ಕೊಳುತ್ತೀನಿ ಮತ್ತು ನೆನೆಪುಗಳು ಕಾಡುತ್ತವೆ. ಆದರೆ ಈ ಬಾರಿ ನನ್ನ ಮಗಳೊಂದಿಗೆ ಈ ಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅವಳಿಗೂ ಬಾಲ್ಯದ ಸುಂದರ ದಿನಗಳ ನೆನಪುಗಳನ್ನು ಉಳಿಸುವ ನಿಟ್ಟಿನಲ್ಲಿ...

September 5, 2010

ಮೆಚ್ಚಿನ ಗುರು ವೃಂದಕ್ಕೆ ಪ್ರಣಾಮಗಳು...

ಸಾಮಾನ್ಯವಾಗಿ ನಾವು ಪ್ರಾಥಮಿಕ ಶಾಲೆಯಿಂದ ಪದವಿಯವರೆಗೆ ಓದುವಾಗ ಸುಮಾರು 40ಕ್ಕಿಂತ ಅಧಿಕ ಗುರುಗಳ ಕೈಯಲ್ಲಿ ಪಾಠ ಕಲಿತ್ತಿರುತ್ತೇವೆ. ಹತ್ತು ಹದಿನೈದು ವರ್ಷದ ನಂತರ ಎಲ್ಲರನ್ನೂ ನೆನೆಪಿನಲ್ಲಿಟ್ಟುಕೊಳ್ಳುವುದು ಅಸಾಧ್ಯ. ಅಬ್ಬಬ್ಬಾ ಎಂದರೆ ಹತ್ತೋ, ಹನ್ನೆರಡು ಅಧ್ಯಾಪಕರು ನೆನಪಾಗಬಹುದು. ಹಾಗೆಯೇ, ನನ್ನ 18 ವರ್ಷ ವಿದ್ಯಾರ್ಥಿ ಜೀವನದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಗುರುಗಳು ಬೆರಳೆಣಿಕೆ ಅಷ್ಟು ಮಾತ್ರ. ಅವರಲ್ಲಿ ಜಿ.ಕೆ.ಜಿ.(ಜೈರಾಮ್ ಮಾಸ್ತರು) ಮೊದಲಿಗರು. ಜಿ.ಕೆ.ಜೆ. ಅವರಲ್ಲದೆ ನಾಗರಾಜ್ಸರ್, ಶ್ರೀಪಾದಮಾಸ್ತರ್ಜೀ, ಭಾಗ್ಯ ಮಾತಜೀ, ಕೃಷ್ಣಸರ್, ನಾಗೇಶ್ ಸರ್, ಕೃಷ್ಣಸ್ವಾಮಿ ಸರ್, ಅರೀಫಾ ಮೇಡಂರವರು ನನ್ನ ಮೆಚ್ಚಿನ ಗುರುಗಳು.



ಪ್ರೌಢಶಾಲೆಯಲ್ಲಿ ಓದುವಾಗ ನಮಗೆ ಇಂಗ್ಲಿಷ್ ಉಪಧ್ಯಾಯರಾಗಿದ್ದವರು ಜಿ.ಕೆ.ಜೆ. ಇವರ ತರಗತಿ ಎಂದರೆ ನಮ್ಮ ಮುಂದೆ ಹೊಸಲೋಕವೇ ತೆರದಿಟ್ಟ ಅನುಭವ. ನಾವುಗಳು ಇವರ ತರಗತಿಗಾಗಿ ಕಾತುರದಿಂದ ಕಾಯುತ್ತಿದ್ದೆವು. ಅಂದು ಮಾಡಿದ ಪಾಠಗಳು ಇಂದಿಗೂ ಮನಸ್ಸಿನಲ್ಲಿ ಹಸಿರಾಗಿದೆ. ಪಾಠದ ಜೊತೆ ಮಂಕು ತಿಮ್ಮನ ಕಗ್ಗದ ಪದ್ಯಗಳು ಮತ್ತು ರತ್ನ ಪದಗಳ ಔತಣವನ್ನು ಉಣಬಡಿಸುತ್ತಿದ್ದರು. ಮಹಮದ್ ಅಲಿ, ಕಾರ್ ಲೂಯಿಸ್, ಜೆಸಿಒವನ್. ಅರ್ಥರ್ ಯಾಶ್ ಇನ್ನೂ ಹಲವು ವಿಶ್ವವಿಖ್ಯಾತ ಕ್ರೀಡಾಪಟ್ಟುಗಳ ಸಾಧನೆ, ವಿಜ್ಙಾನದ ಹೊಸ, ಹೊಸ ಅವಿಷ್ಕಾರಗಳು, ಪ್ರಪಂಚದ ಅಗುಹೋಗುಗಳನ್ನು ಪರಿಚಯಿಸಿದ್ದರು. ಕನ್ನಡ ಮಾದ್ಯಮದಲ್ಲಿ ಓದಿದ್ದ ನನ್ನ ಅಲ್ಪ ಸ್ವಲ್ಪ ಇಂಗ್ಲಿಷ್ ಜ್ಞಾನವೃದ್ದಿಗೆ ಇವರ ತರಗತಿಗಳೇ ಅಡಿಪಾಯ.

ಶಿವಮೊಗ್ಗದ ಡಿ.ವಿ.ಸ್. ಪ್ರೈಮರಿ ಶಾಲೆಯಲ್ಲಿ ಓದುವಾಗ ನಮ್ಮ ತರಗತಿಯ ಉಪಧಾಯ್ಯರಾಗಿದ್ದ ನಾಗರಾಜ್ ಮೇಷ್ಟರು ನನ್ನ ಎಳೆಯ ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರಿದವರು. ಅವರು ಅಂದು ಹೇಳಿಕೊಟ್ಟ ಗೋವಿನಹಾಡು ಪದ್ಯ ಇನ್ನೂ ನಾಲಿಗೆ ತುದಿಯಲ್ಲಿ ನಲಿದಾಡುತ್ತದೆ. ನಂತರದ ದಿನಗಳಲ್ಲಿ ತೀರ್ಥಹಳ್ಳಿಯ ಸೇವಾಭಾರತಿ ಶಾಲೆಯಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಸೌಮ್ಯ ಸ್ವಭಾವದ ಶ್ರೀಪಾದ್ ಮಾಸ್ತರ್ಜೀ ನನ್ನ ಮೆಚ್ಚಿನ ಶಿಕ್ಷಕಲ್ಲಿರೊಬ್ಬರು. ಅದೇ ಶಾಲೆಯ ಭಾಗ್ಯಮಾತಾಜೀ ಕಲಿಸುತ್ತಿದ್ದು ನನಗೆ ಇಷ್ಟವಿಲ್ಲದ್ದ ಕಷ್ಟದ ಗಣಿತವಾದರೂ , ಅವರು ಮಾತ್ರ ಪಿಯಾವಾಗಿದ್ದರು.

ಕಾರ್ಕಳದ ಭುವನೇಂದ್ರ ಕಾಲೇಜಿನ ದಿನಗಳಲ್ಲಿ ಕನ್ನಡದ ಉಪನ್ಯಾಸಕರಾಗಿದ್ದ ನಾಗೇಶ್ ಸರ್, ಇಕಾನಾಮಿಕ್ಸ್ ಕಲಿಸುತ್ತಿದ್ದ ಕೃಷ್ಣ ಸರ್ ನನ್ನ ಮೆಚ್ಚಿನ ಗುರುಗಳ ಪಟ್ಟಿಗೆ ಸೇರ್ಪಡೆಯಾದರು. ಮೈಸೂರಿನ ಮಹಾರಾಣಿ ಕಾಲೇಜಿನ ಪ್ರೋಫೆಸ್ರುಗಳಾದ ಅರೀಫ ಮೇಡಂ ಹಾಗೂ ಶಂಕರಸ್ವಾಮಿ ಸರ್ಗಳ ತರಗತಿಯಲ್ಲಿ ಪಾಠ ಕೇಳುವುದೇ ಒಂದು ಅದೃಷ್ಟ. ವಿಷಯದ ಬಗ್ಗೆ ಅಳ ಜ್ಞಾನ ಹಾಗೂ ಇವುರುಗಳ ಪಾಠ ಮಾಡುವ ಶೈಲಿ ಎಂತವರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಈ ಎಲ್ಲಾ ಶಿಕ್ಷಕರುಗಳಿಂದ ಕಲಿತ್ತಿರುವುದು ಅಪಾರ. ಇವರುಗಳ ತರಗತಿಗಳು ಜೀವನದಲ್ಲಿ ಮರೆಯಾಲಾಗದ ಅನುಭವಗಳು. ನನ್ನ ಈ ಎಲ್ಲಾ ಮೆಚ್ಚಿನ ಗುರುಗಳಿಗೆ ಅನಂತ ಪ್ರಣಾಮಗಳು.....

(ಮಯೂರ ಮ್ಯಾಗಜೀನ್‌ನಲ್ಲಿ ಪ್ರಕಟವಾಗುತ್ತಿದ್ದ ’ಗುರು ನಮನ’ ವಿಭಾಗಕ್ಕಾಗಿ ಈ ಲೇಖನವನ್ನು ಬರೆದ್ದಿದ್ದು. ಇಂದು ಶಿಕ್ಷರ ದಿನದ ಸಂಧರ್ಭದಲ್ಲಿ ನನ್ನ ಮೆಚ್ಚಿನ ಗುರುಗಳಿಗೆ ಈ ಮೂಲಕ ಶುಭಾಷಯಗಳು ಮತ್ತು ನಮನಗಳು HAPPAY TEACHER'S DAY To All MY TEACHERS)

September 4, 2010

ತಂಪು ತಂಪು ಕೂಲ್ ಕೂಲ್ ಅಡುಗೆ ಮತ್ತು ಪೇಯಗಳು.

ಎಲ್ಲೆಲೂ ಸುಡು ಬೇಸಿಗೆ. ತಾಳಲಾರದಷ್ಟು ದಾಹ. ಬೇಸಿಗೆಕಾಲಕ್ಕೆ ತಕ್ಕಂತಹ ಅಂದರೆ ಉಷ್ಣ, ಪಿತವನ್ನು ಹತೋಟಿಯಲ್ಲಿಡುವ ಆಹಾರ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಕ್ಷೇಮ. ಹಾಗೇಯೇ ಆರೋಗ್ಯಕ್ಕೆ ಹಾನಿಕರಕ ಮತ್ತು ದುಬಾರಿ ತಂಪು ಪಾನೀಯಗಳಿಗೆ ಮಾರುಹೊಗುವ ಬದಲು ಮನೆಯಲ್ಲೇ ಆರೋಗ್ಯಕರ ಸರಳ ಪೇಯಗಳನ್ನು ತಯಾರಿಸಿಕೊಳ್ಳಬಹುದು. ಬಾಯಾರಿಕೆ ಹಾಗೂ ಖರ್ಚು ಎರಡಕ್ಕೂ ಕಡಿವಾಣ ಹಾಕಬಹುದು. ಅತಿ ಸರಳ ಹಾಗೂ ಕಡಿಮೆ ಖರ್ಚಿನ ಕೆಲವು ತಂಪು ತಂಪು ಕೂಲ್ ಕೂಲ್ ಅಡುಗೆ ಹಾಗೂ ಪೇಯಗಳು ಇಲ್ಲಿವೆ. ತಂಬುಳಿ: ಬೇಕಾಗುವ ಸಾಮಗ್ರಿಗಳು: ಕಾಯಿ ತುರಿ-1/4 ಬಟ್ಟಲು, ಕರಿಬೇವಿನಸೊಪ್ಪು-1/2ಬಟ್ಟಲು, ಜೀರಿಗೆ-1ಟೀಚಮಚ, ಮೆಣಸಿನಕಾಳು-5, ಮಜ್ಜಿಗೆ-1ಲೋಟ ಮಾಡುವ ವಿಧಾನ : ಕಾಯಿತುರಿಯನ್ನು ಬಿಟ್ಟು ಉಳಿದೆಲ್ಲಾ ವಸ್ತುಗಳನ್ನು ತುಪ್ಪದಲ್ಲಿ ಹುರಿದು, ಕಾಯಿತುರಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಮಜ್ಜಿಗೆ ಬೆರೆಸಿ ನಂತರ ಜೀರಿಗೆ,ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿದರೆ ತಂಬುಳಿ ಸಿದ್ಧ. ಕರಿಬೇವಿನ ಬದಲು ದೊಡ್ಡಪತ್ರೆ, ಒಂದಲಗ, ಚಕ್ರಮುನಿಸೊಪ್ಪು, ಶುಂಠಿ, ಪಾಲಕ್ ಮುಂತಾದವುಗಳನ್ನು ಬಳಸಬಹುದು. ತಂಬುಳಿಗಳು ಬಾಯಿಹುಣ್ಣಿಗೆ ಉತ್ತಮ ಔಷಧಿ. ಸಾಸಿವೆ/ ಮೊಸರು ಬಜ್ಜಿ: ಬೇಕಾಗುವ ಸಾಮಗ್ರಿಗಳು: ಕಾಯಿ ತುರಿ-1/2 ಬಟ್ಟಲು, ಹುರಿಗಡಲೆ-2 ಟೀಚಮಚ , ಹಸಿಮೆಣಸು-2, ಸಾಸಿವೆ-1/2 ಟೀಚಮಚ, ಮಜ್ಜಿಗೆ/ಮೊಸರು ಸ್ವಲ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೋಮೊಟೊ- 1 ಬಟ್ಟಲು ಮಾಡುವ ವಿಧಾನ : ಕಾಯಿ ತುರಿ, ಹುರಿಗಡಲೆ, ಹಸಿ ಮೆಣಸಿನ ಕಾಯಿ, ಸಾಸಿವೆಯನ್ನು ರುಬ್ಬಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಟೋಮೊಟೊ, ಮಜ್ಜಿಗೆ/ ಮೊಸರು ಮತ್ತು ರುಚ್ಚಿಗೆ ಉಪ್ಪು ಬೆರೆಸಬೇಕು. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿದರೆ ತಂಪಾದ ಸಾಸಿವೆ/ಮೊಸರು ಬಜ್ಜಿ ರೆಡಿ. ಸಣ್ಣಗೆ ಹೆಚ್ಚಿ ಹುರಿದ ತೊಂಡೆಕಾಯಿ, ಬೆಂಡೆಕಾಯಿ, ದಪ್ಪ ಮೆಣಸಿನಕಾಯಿ ಅಥವಾ ಸುಟ್ಟ ಬದನೆಕಾಯಿ ಅಥವಾ ಹಸಿ ಮೂಲಂಗಿತುರಿ, ಸೌತೆಕಾಯಿಯನ್ನು ರುಬ್ಬಿದ ಮಿಶ್ರಣಕ್ಕೆ ಬೆರಿಸಿಕೊಳ್ಳಬಹುದು. ಅನ್ನದ ತಿಳಿ (ಗಂಜಿ) ಸಾರು: ಅನ್ನ ಬಸಿದ ತಿಳಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಮಜ್ಜಿಗೆ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಉಪ್ಪು ಬೆರೆಸಿ, ಇಷ್ಟಕ್ಕೆ ಅನುಗುಣವಾಗಿ ಬೆಳ್ಳುಳಿ ಅಥವಾ ಇಂಗಿನ ಒಗ್ಗರಣೆ ಮಾಡಿದರೆ ಸುಲಭದ ರುಚಿಯಾದ ಸಾರು ರೆಡಿ. ಪುನರ್ಪುಳಿ ಸಾರು (ಕೊಕೊಂ): ಪುನರ್ಪುಳಿ- 1ಬಟ್ಟಲು, ಬೆಲ್ಲ- 2ಉಂಡೆ, ಈರುಳ್ಳಿ- 1, ಹಸಿಮೆಣಸು- 2, ಕೊತ್ತಂಬರಿ ಸೊಪ್ಪು ಸ್ವಲ್ಪ ಪುನರ್ಪುಳಿಯನ್ನು ನೀರಿನಲ್ಲಿ ನೆನೆಸಿ ರಸ ತೆಗೆಯಬೇಕು. ರಸಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಬೆಲ್ಲ ಮತ್ತು ಬೇಕಾದಷ್ಟು ನೀರು ಹಾಗೂ ರುಚಿಗೆ ಉಪ್ಪು ಹಾಕಿ. ಸಾಸಿವೆ, ಜೀರಿಗೆ, ಕರಬೇವಿನ ಒಗ್ಗರಣೆ ಮಾಡಿದರೆ ಸಾರು ಸವಿಯಲು ಸಿದ್ಧ. ಹುಣಸೆಹಣ್ಣು ಮತ್ತು ಬೆಲ್ಲದ ಪಾನಕ: ಹುಣಸೆಹಣ್ಣಿನ ರಸ- 1ಲೋಟ, ಬೆಲ್ಲ- 3ಉಂಡೆ, ಶುಂಠಿ- 1ಚೂರು, ಕಾಳುಮೆಣಸಿನಪುಡಿ - 1ಚಮಚ ಹುಣಸೆಹಣ್ಣಿನ ರಸಕ್ಕೆ ಬೆಲ್ಲ ಹಾಕಿ ಅಗತ್ಯವಿದ್ದಷ್ಟು ನೀರು ಬೆರೆಸಿ. ಇದಕ್ಕೆ ಶುಂಠಿ ಚೂರನ್ನು ಹಾಗೂ ಕಾಳುಮೆಣಸಿನಪುಡಿನ ಪುಡಿಯನ್ನು ಸೇರಿಸಿದರೆ ಪಿತ್ತ ಶಮನಕಾರಿ ಪಾನಕ ತಯಾರು. ಅಕ್ಕಿ ತೊಳೆದ ನೀರಿನ ಪಾನಕ : ಎರಡನೇ ಬಾರಿ ಅಕ್ಕಿ ತೊಳೆದ ನೀರಿಗೆ ಬೇಕಾದಷ್ಟು ಬೆಲ್ಲ ಬೆರೆಸಿ, ಚಿಟಿಕೆ ಏಲಕ್ಕಿ ಪುಡಿ ಮತ್ತು 2 ಚಮಚ ಲಿಂಬೆರಸ ಹಾಕಿದರೆ ಸರಳವಾದ ಅರೋಗ್ಯಕರ ಪೇಯ ಕುಡಿಯಲು ಸಿದ್ಧ. ಹೆಸರುಕಾಳಿನ ಪಾನಕ: ನೆನೆಸಿದ ಹೆಸರುಕಾಳು- 1ಬಟ್ಟಲು, ಬೆಲ್ಲ- 3ಉಂಡೆ, ಏಲಕ್ಕಿ-3 ನೆನೆಸಿದ ಹೆಸರುಕಾಳು, ಬೆಲ್ಲ, ಏಲಕ್ಕಿ ಮೂರನ್ನು ನೀರು ಸೇರಿಸಿ ರುಬ್ಬಬೇಕು. ಅಗತ್ಯವಿದರೆ ಮತ್ತೆ ನೀರು ಬೆರೆಸಿಕೊಳ್ಳಿ. ಯಾವುದೇ ಮಿಲ್ಕ್‌ಶೇಕ್‌ಗಿಂತ ರುಚಿಯಾದ ನೊರೆ ನೊರೆಯಾದ ಪೇಯ ಮನೆಯಲ್ಲೇ ರೆಡಿ. (ವಾರಪತ್ರಿಕೆಗೆ ಕಳುಹಿಸಲು ಎರಡು ವರ್ಷದ ಹಿಂದೆ ಇವುಗಳನ್ನು ಬರೆದ್ದಿದ್ದೆ, ಯಾರಿಗಾದರೂ ಉಪಯೋಗಕ್ಕೆ ಬರಬಹುದು ಎಂಬ ಕಾರಣದಿಂದ ಬ್ಲಾಗ್‌ಗಲ್ಲಿ ಪೋಸ್ಟ್‌ ಮಾಡುತ್ತಿದ್ದೇನೆ)

ಈ ಟಿವಿ ವಾಹಿನಿಯ "ಎದೆ ತುಂಬಿ ಹಾಡುವೆನು".

ಟಿವಿ ಚಾನೆಲ್‌ಗಳಲ್ಲೇಲ್ಲಾ ಈಗ ರಿಯಾಲಿಟಿ ಶೋಗಳದ್ದೇ ದರ್ಬಾರ್. ಬಹುತೇಕ ಎಲ್ಲಾ ಭಾಷೆಗಳ ಎಲ್ಲಾ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳು ಪ್ರಸಾರಗೊಳ್ಳುತ್ತಿವೆ. ಹಾಡು, ಡ್ಯಾನ್ಸ್ ಅಥವಾ ಬೇರೆ ಯಾವುದಾದರೂ ಪ್ರತಿಭಾನ್ವೇಷಣೆ ಇರಬಹುದು, ಕ್ಷೇತ್ರಗಳು ಮಾತ್ರ ವಿಭಿನ್ನ. ಈ ರೀತಿ ರಿಯಾಲಿಟಿ ಶೋಗಳಲ್ಲಿ ಸಂಗೀತ ಅಥವಾ ಹಾಡಿನ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಎಂದರೆ ತಪ್ಪಾಗಲಾರದು. ರಿಯಾಲಿಟಿ ಶೋಗಳನ್ನು ಬಿತ್ತರಿಸುವಲ್ಲಿ ನಮ್ಮ ಕನ್ನಡ ಚಾನೆಲ್‌ಗಳು ಸಹ ಹಿಂದೆ ಬಿದ್ದಿಲ್ಲ. ಝೀ ಕನ್ನಡ, ಕಸ್ತೂರಿ, ಈ ಟಿವಿ, ಉದಯ ಟಿವಿ, ಇತ್ಯಾದಿ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜೋರಾಗಿಯೇ ಇದೆ. ಅದರಲ್ಲಿ ಹಾಡಿನ ಸ್ಪರ್ಧೆಗಳ ಕಾರ್ಯಕ್ರಮಗಳು ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿವೆ. ಲಿಟಲ್ ಚಾಂಪ್ಸ್, ಕಾನಿಫಿಡೆಂಟ್ ಸಿಂಗರ್, ಎದೆ ತುಂಬಿ ಹಾಡುವೆನು ಮೊದಲಾದವುಗಳು. ಈ ಎಲ್ಲಾ ಶೋಗಳಲ್ಲಿ ಮಕ್ಕಳೇ ಸ್ಪರ್ಧಾಳುಗಳು. ಆದ್ದರಿಂದ ಈ ಕಾರ್ಯಕ್ರಮಗಳ ನಡುವೆ ಟಿ.ಅರ್.ಪಿ ಹೆಚ್ಚಿಸಿಕೊಳ್ಳಲು ಪೈಪೋಟಿ ಜೋರಾಗಿದೆ. ಮಕ್ಕಳ ಮುಗ್ದತೆಯನ್ನೇ ಬಂಡವಾಳವಾಗಿಸಿ ಕೊಂಡು ತಮ್ಮ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುವುದು ಈ ಶೋಗಳ ಮೂಲ ತಂತ್ರ. ಪುಟ್ಟ ಮಕ್ಕಳಿಗೆ ವಯಸ್ಸಿಗೆ ಮೀರಿದ ಉಡುಗೆ ತೊಡುಗೆ ತೊಡಿಸುವುದು, ಅಸಂಬದ್ದ ಹಾಡು ಹಾಡಿಸುವುದನ್ನು ನಾವುಗಳು ಕಾಣಬಹುದು. ಮಕ್ಕಳ ಮೃದು ಮನಸ್ಸನ್ನೂ ಗಮನಿಸಿದೆ ಪ್ರದರ್ಶನದ ಬಗ್ಗೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಅಥವಾ ಅತಿಥಿಗಳಾಗಿ ಬಂದವರು ಕಠೋರವಾಗಿ ಪ್ರತಿಕ್ರಿಯಿಸುತ್ತಾರೆ. ಅವರ ಈ ರೀತಿ ಪ್ರತಿಕ್ರಿಯೆಗಳು ಕೇವಲ ಪ್ರತಿಭೆಗೆ ಮಾತ್ರ ಸಂಬಂಧಿಸಿರುವುದಿಲ್ಲ ಎನ್ನುವುದು ಕೂಡ ಸತ್ಯ. ಮಕ್ಕಳು ಸ್ಪರ್ಧೆಯಿಂದ ನಿರ್ಗಮಿಸಿದಕ್ಕಾಗಿ ಅಳುವ ದೃಶ್ಯ ನೋಡುಗರ ಮನ ಕಲಕುತ್ತದೆ. ಇಷ್ಟೇ ಅಲ್ಲದೇ ಎಸ್.ಎಮ್.ಎಸ್‌ಗಳ ಹಾವಳಿ ಬೇರೆ. ಈ ದೃಶ್ಯಗಳು ಎಲ್ಲಾ ರಿಯಾಲಿಟಿ ಶೋಗಳಲ್ಲಿ ಸರ್ವೇಸಾಮಾನ್ಯ ಹಾಗೂ ಈ ದೃಶ್ಯಗಳನ್ನೇಲ್ಲಾ ವೈಭಿವಿಕರಿಸಿ ಟಿವಿಯಲ್ಲಿ ತೋರಿಸಿ ಕಾರ್ಯಕ್ರಮದ ಜನಪ್ರಿಯತೆಯನ್ನು ಹೆಚ್ಚಿಸಿಕೊಳುತ್ತಿದ್ದಾರೆ.
ಆದರೆ ಎಲ್ಲಾ ಹಾಡಿನ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಮೂಡಿ ಬರುತ್ತಿರುವ ಕಾರ್ಯಕ್ರಮ ಅಂದರೆ ಈ ಟಿವಿ ವಾಹಿನಿಯಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿರುವ "ಎದೆ ತುಂಬಿ ಹಾಡುವೆನು". ಖಾತ್ಯ ಗಾಯಕ "ಎಸ್.ಪಿ.ಬಾಲಸುಬ್ರಮಣ್ಯಂ" ನೆಡೆಸಿಕೊಡುವ ಕೆನರಾ ಬ್ಯಾಂಕ್ ಪ್ರಾಯೋಜಿಸುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಕನ್ನಡ ಚಾನೆಲ್‌ಗಳ ಒಂದು ಪ್ರಮುಖ ಮತ್ತು ಅತ್ಯಂತ ಯಶಸ್ವಿ ಕಾರ್ಯಕ್ರಮ. ಈ ಟಿವಿ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ 9 ಘಂಟೆಗೆ ಪ್ರಸಾರವಾಗುತ್ತದೆ. ಇದನ್ನು ಎಸ್.ಪಿ.ಬಿ ಯವರು ತುಂಬಾ ಅಚ್ಚುಕಟ್ಟಾಗಿ ನೆಡೆಸುವುದರೊಂದಿಗೆ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದಾರೆ. ಸ್ವತಹ ಬಾಲಸುಬ್ರಮಣ್ಯಂ ಅವರೇ ವಚನವನ್ನು ಹೇಳುವುದರ ಮೂಲಕ ಶೋತೃರುಗಳಿಗೆ ವಚನ ಸಾಹಿತ್ಯವನ್ನು ಉಣಬಡಿಸುತ್ತ ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ. ಪ್ರತಿವಾರವು ಸಂಗೀತ ಕ್ಷೇತ್ರದ್ದಲ್ಲಿ ಸಾಧನೆ ಮಾಡಿದ ಗಣ್ಯರನ್ನು ತೀರ್ಪುಗಾರರ ರೂಪದಲ್ಲಿ ಜನತೆಗೆ ಪರಿಚಯಿಸುತ್ತಾರೆ. ಈ ಶೋನಲ್ಲಿ ಬರಿ ಸಿನಿಮಾ ಹಾಡುಗಳಿಗಷ್ಟೇ ಸೀಮಿತವಾಗಿರದೆ ಭಾವಗೀತೆ, ಜನಪದ ಗೀತೆ, ಭಕ್ತಿಗೀತೆಗಳನ್ನು ಸಹ ಹಾಡಲಾಗುತ್ತದೆ. ಎಸ್.ಪಿ.ಬಿ ಯವರು ಸ್ಪರ್ಧಾಳುಗಳ ಪೋಷಕರಿಗೆ ಮತ್ತು ಗುರುಗಳಿಗೆ ಮಕ್ಕಳಿಗೆ ಹೊಂದುವಂತಹ ಹಾಡುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಸೂಚಿಸುವುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ. ಮಕ್ಕಳ ಉಡುಗೆ ತೊಡುಗೆ ಸಹ ಅತ್ಯಂತ ಸಭ್ಯ. ಕೊನೆಯಲ್ಲಿ ಫಲಿತಾಂಶವನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಯಾರ ಮನಸ್ಸನ್ನು ನೋಯಿಸದೆ ಪ್ರಕಟಿಸಲಾಗುತ್ತದೆ. ಬೇರೆ ಶೋಗಳಲ್ಲಿ ಕಂಡು ಬರುವಂತೆ ಮಕ್ಕಳೊಡನೆ ಒರಟಾಗಿ ನೆಡೆದು ಕೊಳುವುದಾಗಲಿ ಅಥವಾ ಅವರ ಮುಗ್ಧತೆಯನ್ನು ಟಿ.ಅರ್.ಪಿ ಹೆಚ್ಚಿಸಲು ಬಳಸಿಕೊಳುವುದಾಗಲಿ ಇಲ್ಲವೇ ಇಲ್ಲ. ಕಾಮೆಂಟ್ ಗಳು ಕೇವಲ ಸಂಗೀತಕ್ಕಷ್ಟೇ ಸಿಮೀತ. ತಪ್ಪುಗಳನ್ನು ಮೃದುವಾಗಿ ತಿದ್ದಿ ಹೇಳಲಾಗುತ್ತದೆ. ಈ ಕಾರ್ಯಕ್ರಮ ಹಲವು ಮಾಲಿಕೆಗಳಲ್ಲಿ ಪ್ರಸಾರಗೊಂಡಿದರು ಸಹ ಕಿರಿಯರ ಮಾಲಿಕೆ ಅತಿ ಹೆಚ್ಚು ಯಶಸ್ಸನ್ನು ಕಂಡಿದೆ. ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷಕರ ಸಂಗತಿ.
ವೇದಿಕೆ ಮೇಲೆ ಯಾವುದೇ ಕುಣಿತದ ಅಬ್ಬರವಿಲ್ಲದೆ ಮನೆ ಮಂದಿಗೆಲ್ಲಾ ಮುದ ನೀಡುವ ರಿಯಾಲಿಟಿ ಶೋ ಇದಾಗಿದೆ. ಗೆಲ್ಲುವುದಕ್ಕಿಂತ ಕಾರ್ಯಕ್ರಮದಲ್ಲಿ ಭಾಗಿಸುವುದು ಅತ್ಯಂತ ಮುಖ್ಯ ಎಂಬುದನ್ನು ಎಸ್.ಪಿ.ಬಿ ಈ ಕಾರ್ಯಕ್ರಮದಲ್ಲಿ ಮನದಟ್ಟು ಮಾಡುತ್ತಾರೆ. ಎಸ್.ಪಿ.ಬಾಲಸುಬ್ರಮಣ್ಯಂ ಅವರು ತಮ್ಮ ನೆಡೆ ನುಡಿಯಿಂದ ಈ ಕಾರ್ಯಕ್ರಮದ ಘನತೆಯನ್ನು ಇನಷ್ಟು ಹೆಚ್ಚಿಸಿದ್ದಾರೆ. ನಿರಂತರವಾಗಿ ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ತನ್ನದೇ ಆದ ಛಾಪನ್ನು ಉಳಿಸಿಕೊಂಡು ಬಂದಿದೆ.


(ಈ ಲೇಖನವನ್ನು 2009ರ ಸೆಪ್ಟೆಂಬರ್‌ ತಿಂಗಳಲ್ಲೇ ಬರೆದ್ದಿದ್ದೆ, ಆದರೆ ಈಗ ಇಲ್ಲಿ ಹಾಕಿದ್ದೇನೆ.)

July 19, 2010

ಕಾಫಿ ಕಣಿವೆಯೊಲ್ಲೊಂದು ವಿಹಾರಧಾಮ "ಕಲ್‌ಗ್ರೀನ್‌ ವ್ಯಾಲಿ"


ಬೆಂಗಳೂರಿನ ನಮ್ಮ ಸ್ನೇಹಿತರಾದ ಮುರುಳಿ ಕುಟುಂಬದವರು ನಮ್ಮ ಮನೆಗೆ ಬಂದಾಗ ಯಾವೂದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಸ್ಥಳದ ಆಯ್ಕೆ ಮಾಡಿದು ಅವರೇ. ಅವರ ಆಯ್ಕೆ ಕಾಫಿ ಕಣಿವೆಯ ಅತಿ ಸುಂದರ ನಯನ ಮನೋಹರ "ಕಲ್‌ಗ್ರೀನ್‌ ವ್ಯಾಲಿ ರೆಸಾರ್ಟ್" ಆಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಸುಮಾರು 13ಕಿ.ಮಿ ದೂರದಲ್ಲಿರುವ "ಕಲಸಪುರ ಎಸ್ಟೇಟ್" ಇಂದು "ಕಲ್‌ಗ್ರೀನ್ ವ್ಯಾಲಿ ರೆಸಾರ್ಟ್" ರೂಪ ಪಡೆದುಕೊಂಡಿದೆ. ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಈ ವಿಹಾರಧಾಮ ಹಬ್ಬಿದೆ. ಅಲ್ಲಿನ ಅಸ್ಮರಣೀಯ ಅನುಭವ ಇಲ್ಲಿದೆ.
ಕೊಪ್ಪದಲ್ಲೊಂದು ರೆಸಾರ್ಟ್ ಇದೆ ಎಂದು ತಿಳಿದಾಗ ತುಂಬಾ ಆಶ್ಚರ್ಯವಾಯಿತು, ನಮ್ಮ ಮಲೆನಾಡಿನಲ್ಲಿ ಈ ಮೂಲೆಯಲ್ಲಿ ಅದೂ ನಮಗೆ ಇಷ್ಟು ಸಮೀಪವಿರುವ ವಿಹಾರಧಾಮದ ಪರಿಚಯವೇ ನಮಗಿರಲಿಲ್ಲ. ನಮಗಿಂತ ಒಂದು ದಿನ ಮೊದಲು ತಲುಪಿದ ನಮ್ಮ ಸ್ನೇಹಿತರನ್ನು (ಮುರುಳಿ,ತ್ರಿವೇಣಿ & ರಚನ) ನಾವು (ನಾನು, ಸುನೀಲ್, ಸ್ವರ) ಮಾರನೇ ದಿನ ಸೇರಿಕೊಂಡೆವೆವು. ಕೊಪ್ಪದಿಂದ ಸುಮಾರು 13 ಕಿ.ಮಿ ಪ್ರಯಾಣಿಸಿದ ನಂತರ ಕಲಸಪುರ ಎಸ್ಟೇಟ್ ದರ್ಶನವಾಯಿತು (ಈ ರಸ್ತೆಯಲ್ಲಿ ಯಾವಾದರೂ ಬಾರಿ ವಾಹನ ಎದುರಾದರೆ ನಾವು ಹಿಮುಖ್ಖವಾಗಿ ಚಲಿಸಬೇಕಷ್ಟೆ, ಅದರ ಅನುಭವವೂ ನಮಗಾಯಿತು.) ಆದರೆ ನಾವು ತಲುಪಬೇಕಾದ ಜಾಗ ತೋಟದ ತುತ್ತತುದಿಯಾಗಿತ್ತು. ಮತ್ತೆ ನಮ್ಮ ಕಾರು ಕಾಫಿ ತೋಟವನ್ನು ಸೀಳಿಕೊಂಡು ಮೇಲೆರುವುದನ್ನು ಮುಂದುವರಿಸಿತು . ಕಣ್ಣು ಹಾಯಿಸಿದಷ್ಟು ಉದ್ದಗಲಕ್ಕೂ ಕಾಫಿ ತೋಟ, ಮಧ್ಯ ಮರಗಳು, ಅಂಚಿಗೆ ಬೆಟ್ಟಗಳ ನಡುವೆ ಎಸ್ಟೇಟ್‌ನ ತಲೆಯತ್ತ ಸಾಗುವ ರೀತಿಯೇ ಖುಷಿಯಾಗುತ್ತದೆ. ನಮ್ಮ ಗಮ್ಯ ಸೇರಿದಾಗ ಸರಿ ಮಧ್ಯಾಹ್ನವಾಗಿತ್ತು, ನಾವು ಸಮುದ್ರ ಮಟ್ಟಕ್ಕಿಂತ 3000 ಅಡಿ ಮೇಲಿದ್ದೆವು. ಹುಲ್ಲು ಹಾಸು,ಬಣ್ಣ ಬಣ್ಣದ ಹೂವಿನ ಗಿಡಗಳಿಂದ ಸುತ್ತುವರಿದ ಒಂದು ದೊಡ್ಡ ಬಂಗ್ಲೆ ತೋಟದ ಅತಿ ಎತ್ತರದ ಪ್ರದೇಶದಲ್ಲಿ ಮೈ ಚಾಚಿ ನಿಂತಿತು..
ನಮ್ಮ ಉಟೋಪಾಚಾರಕ್ಕೆ ಎಂದು ನೇಮಿಸಿದ ನಾಗರಾಜ್ ಫ್ಯಾಷನ್ ಫ್ರೂಟ್‌ ಜ್ಯೂಸ್‍‌ನೊಂದಿಗೆ ನಮ್ಮನ್ನು ಸ್ವಾಗತಿಸಿದರು. ನಂತರ ಅಲ್ಲೇ ಅಕ್ಕಪಕ್ಕ ಸುತ್ತಾಡಿದ್ದೇವು. ನಮಗಿಂತ ಒಂದು ದಿನ ಮೊದಲು ಅಲ್ಲಿಗೆ ತಲುಪಿದ ನಮ್ಮ ಫ್ರೆಂಡ್ಸ್ ಈಗ ನಮ್ಮ ಗೈಡ್‌ ಆಗಿದ್ದರು. ದೊಡ್ಡ ಜಾತಿಯ ಬಿದಿರು ಮೊದಲು ನಮ್ಮನ್ನು ಸೆಳೆಯಿತು. ತರಾವರಿ ಜಾತಿಯ ಫಲಭರಿತ ಮರಗಳು ಸುತ್ತಲೂ ಸರ್ವೇಸಾಮಾನ್ಯ. ಹಲಸು, ಕಿತ್ತಳೆ, ಮುಸುಂಬಿ, ಪುನರ್ಪುಳಿ, ಚೆರಿ, ಜಂಬು ನೇರಳೆ, ಪೇರಲೆ, ಮರಸೇಬು ಹೀಗೆ ಹಣ್ಣು ತುಂಬಿದ ಮರಗಳ ಪಟ್ಟಿ ಬೆಳೆಯುತ್ತದೆ.
ವಿಲ್ಲಾಗೆ ಮರಳಿದ್ದಾಗ ಡೈನಿಂಗ್ ಟೇಬಲ್‌ ಮೇಲೆ ಕಲಾತ್ಮಕವಾಗಿ ಜೋಡಿಸಿದ ಬಿಸಿ ಬಿಸಿ ಸಾದಿಷ್ಟ ಬಗೆಗಳು ನಮ್ಮನ್ನು ಕಾಯುತ್ತಿದ್ದವು. ನಿತ್ಯಕ್ಕಿಂತ ಜಾಸ್ತಿ ಊಟ ಒಳಸೇರಿತು. ಊಟದ ನಂತರ ಮಳೆಯ ಕಾರಣ ಹೊರಗೆ ಹೊರಡದ ನಮಗೆ ಅಲ್ಲಿದ್ದ ಕೇರಂ ಬೋರ್ಡ್ ಸಮಯ ಕಳೆಯಲು ನೆರವಾಯಿತು.
ಸಂಜೆ ಟೀ ಮತ್ತು ಬೊಂಡ ಸವಿದು ಬೊಟಿಂಗ್‌ಗೆ ಕರೆದೊಯ್ಯಲು ನಮಗಾಗಿ ಕಾದಿದ ಲಕ್ಷಣರ ಸಾರಥ್ಯದ ಜೀಪು ಹತ್ತಿ ತೋಟದ ಕೆಳ ಭಾಗದಲ್ಲಿರುವ ಕೆರೆ ತಲುಪಿದೆವು. ಸುಮಾರು ಆರು ಎಕರೆ ಜಾಗದಲ್ಲಿರುವ ದೊಡ್ಡ ಕೆರೆಯಲ್ಲಿನ ಬೋಟಿಂಗ್‌ ಅನುಭವವನ್ನು ಮಾತ್ರ ವರ್ಣಿಸಲು ಸಾಧ್ಯವಿಲ್ಲ. ರೋ ಹೌಸ್ ಮತ್ತು ಟ್ರೀ ಹೌಸ್‌ಗಳನ್ನು ವೀಕ್ಷಿಸಿ ಬಂಗ್ಲೆಗೆ ಮರಳಿದಾಗ ಕತ್ತಲು ಕಣ್ಣಿಗೆ ಕಟ್ಟಿತು. ಊಟದ ನಂತರ ಮಧ್ಯ ರಾತ್ರಿವರೆಗೆ ನಮ್ಮ ಹರಟೆ ಮುಂದುವರೆದಿತ್ತು ..ಹೊರಗೆ ಕಗ್ಗತ್ತಳು ಮಾತ್ತು ಕೀಟಗಳ ಕೂಗು ನಿರಂತರವಾಗಿತ್ತು.
ಈ ಮಧ್ಯ ನಾನು ಈ ರೆಸಾರ್ಟ್‌ ಬಗ್ಗೆ ಸ್ವಲ್ಪ ಹೇಳಲು ಬಯಸುತ್ತೇನೆ. ಈ "ಕಲ್‌ಗ್ರೀನ್‌ ವ್ಯಾಲಿ ರೆಸಾರ್ಟ್‌" "ಕಲಸಪುರ ಎಸ್ಟೇಟ್‌" ಮಾಲೀಕರಾದ ಕೊಲಾಸ್ ಸಹೋದರರ (ಸುನೀಲ್, ಅನಿಲ್ ಮತ್ತು ಡೆರಿಲ್) ಇನ್ನೂ ಒಂದು ವರ್ಷದ ಕೂಸು. ಮೂವರು ಸಹೋದರರು ದೂರದ ಪಟ್ಟಣಗಳಲ್ಲಿ ವಿಧ್ಯಾಭ್ಯಾಸ ಮುಗಿಸಿ ಕೂಡ ತಮ್ಮ ತೋಟಕ್ಕೆ ಮರಳಿ ಕೃಷಿಯನ್ನು ಮುಂದುವರೆಸುತ್ತಿರುವುದು ಇಂದು ಕೃಷಿಯನ್ನು ತೊರೆದು ನಗರವನ್ನು ಸೇರುತ್ತಿರುವ ಯುವಜನತೆಗೆ ಮಾದರಿಯಾಗಿದ್ದೆ. ಕಾಫಿ ಬೆಲೆ ಕೈಕೊಟ್ಟಾಗ, ತೋಟವನ್ನು ಮಾರಲು ಇಚ್ಛಿಸದೇ ಅದನ್ನೇ ಬಂಡವಾಳವಾಗಿಸಿ ಕೊಂಡು ಈ ವಿಹಾರಧಾಮಕ್ಕೆ ಮುನ್ನುಡಿ ಬರೆದರು. ಈ ಸಹೋದರರು ಕೃಷಿಯೊಂದಿಗೇ ಈ ಉದ್ಯಮವನ್ನು ಬೆಳೆಸುತ್ತಿರುವುದು ಪ್ರಶಂಸನೀಯ. ನಮ್ಮನ್ನು ಭೇಟಿಯಾದ ಅನಿಲ್‌ ಕೊಲಾಸ್‌ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. "ನಮಗೆ ತೋಟವನ್ನು ಮಾರಲು ಇಷ್ಟವಿಲ್ಲ, ಹಾಗೆಯೇ ಹಾಳಗೊಡಲು ಸಹ. ಇಲ್ಲಿಂದ ಹೊರಗೆ ಹೋಗಿ ದುಡಿಯಲು ನಮಗೆ ಸಾಧ್ಯವಿಲ್ಲ. ಬೆಲೆಯನ್ನು ನಂಬಿ ಕುಳಿತರೆ ಕೆಟ್ಟೆವು, ಆದರಿಂದ ಈ ಯೋಜನೆಯನ್ನು ಪ್ರಾರಂಬಿಸಿದ್ದೆವು" ಎಂಬುದು ಸ್ವತಃ ಅವರ ಮಾತುಗಳು. ಮೂವರು ಸಹೋದರರು ಒಂದೊಂದು ಜವಬ್ದಾರಿಗಳನ್ನು ಹಂಚಿಕೊಂಡಿದ್ದೇವೆ ಎನ್ನುತ್ತಾರೆ ಅವರು.
ಇಲ್ಲಿ ಮೂರು ವಿಧದ ಮನೆಗಳು ಲಭ್ಯ. ವಿಲ್ಲಾ (ದೊಡ್ಡ ಬಂಗ್ಲೆ), ರೋ ಹೌಸ್‌ (ಸಾಲು ಮನೆಗಳು) ಮತ್ತು ಟ್ರೀ ಹೌಸ್ (ಮರದ ಮೇಲೆ ಮನೆ). ನಮ್ಮ ಇಚ್ಛೆಗೆ ಅನುಸರವಾಗಿ ನಾವು ಆಯ್ಕೆಮಾಡಿಕೊಳ್ಳಬಹುದು.
ವಿಲ್ಲಾ ಎರಡು ಅಂತಸ್ತಿನ ಮೂರು ಕೋಣೆಗಳ ಪ್ರತ್ಯೇಕ ಆಡುಗೆ ಮನೆ, ಊಟದ ಮನೆ, ಟಿವಿ ರೂಮ್‌ಗಳನ್ನು ಒಳಗೊಂಡ ವಿಶಾಲವಾದ ಬಂಗ್ಲೆಯಾಗಿದೆ. ಇದು ಎಲ್ಲಾ ಅಧುನಿಕ ಸೌಲಭ್ಯಗಳೊಂದಿಗೆ ಮಲೆನಾಡಿನ ತೋಟಮನೆಯ ಚಾಪನ್ನು ಉಳಿಸಿಕೊಂಡಿರುವುದು ಇದರ ವಿಶೇಷವಾಗಿದೆ. ಮಾಳಿಗೆ ಮೇಲಿನ ಮೂರು ಬದಿಯ ವಿಶಾಲವಾದ ಬಾಲ್ಕನಿಗಳು ಸುತ್ತಲಿನ ಪ್ರಕೃತಿಯನ್ನು ಸವಿಯಲು ಹೇಳಿಮಾಡಿಸಿದ ಸ್ಥಳವಾಗಿದೆ.
ರೋ ಹೌಸ್ ಹೆಸರೇ ಹೇಳುವಂತೆ ಸಾಲು ಮನೆಗಳು. ಎಲ್ಲಾ ಸೌಲಭ್ಯಗಳೊಂದಿಗೆ ಎರಡು ರೂಮ್‌ಗಳ ಮನೆಗಳು ಸಾಲಿನಲ್ಲಿವೆ.
ಮರದ ಮೇಲೆ ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿರುವ ಟ್ರೀ ಹೌಸ್ ಅದ್ಭುತವಾಗಿ ಮೂಡಿ ಬಂದಿದೆ. ಇಲ್ಲಿ ದೀಪ ಮತ್ತು ಬಿಸಿನೀರು (ಸೋಲಾರ್) ಸದಾ ಲಭ್ಯ. ಶೌಚಾಲಯದ ವ್ಯವಸ್ಥೆ ಕೂಡ ಮರದ ಮೇಲೆಯೇ.
ಬೋಟಿಂಗ್, ಟೀ ಪ್ಲಾಂಟೇಷನ್ ವೀಕ್ಷಣೆ, ಸೂರ್ಯಸ್ತ ಸ್ಥಳದ ಭೇಟಿ, ಟ್ರಕಿಂಗ್‌ಗಳು ಈ ವಿಹಾರಧಾಮದ ಭಾಗವಾಗಿದೆ. ಮಲೆನಾಡಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಕುಪ್ಪಳಿ, ಶೃಂಗೇರಿ, ಕುಂದಾದ್ರಿ, ಆಗುಂಬೆ ಮುಂತಾದವುಗಳು ಈ ರೆಸಾರ್ಟ್‌ಗೆ ಹತ್ತಿರದಲ್ಲಿರುವುದು ಇಲ್ಲಿ ಬರುವ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಯಾವುದೇ ರೀತಿಯ ಮಾಲಿನ್ಯವಿಲ್ಲದೆ, ಬೆಟ್ಟ ಗುಡ್ಡಗಳ ನಡುವೆ ಹಕ್ಕಿಗಳ ಕಲರವಗಳೊಂದಿಗೆ ಕಳೆಯುವ ಸಮಯ ನಾವು ಯಾಂತ್ರಿಕ ಜೀವನದಿಂದ ದೂರ ಬೇರೆ ಲೋಕದಲ್ಲಿ ಕಳೆದ ಹಾಗೆ ಭಾಸವಾಗುತ್ತದೆ. ಕಾಡಿನ ಸೌಂದರ್ಯದ ನಡುವೆ ಎಲ್ಲಾ ಅಧುನಿಕ ಸೌಕರ್ಯಗಳೊಂದಿಗೆ ಸ್ವಚ್ಛ, ಸುಂದರ, ಪ್ರಶಾಂತವಾದ ಹಚ್ಚ ಹಸಿರಿನ ಪರಿಸರದ ನಡುವಿನ ಕಾಫಿ ಕಣಿವೆಯ ಈ ರೆಸಾರ್ಟ್‌ ಒಂದು ಉತ್ತಮ ಹಾಲಿಡೇ ಸ್ಪಾಟ್‌ ಆಗಿದೆ.
ನಾಗರಾಜ್‌, ಹಮೀದ್‌, ಅಣ್ಣಪ್ಪ, ಲಕ್ಷಣ ಇವರೆಲ್ಲಾರ ನಗು ಮೊಗದ ಸೇವೆ, ಸಕಲ ಸೌಲಭ್ಯಗಳ ಲಭ್ಯತೆ, ಕುಂದು ಕೊರತೆಗಳ ಬಗ್ಗೆ ಮಾಲೀಕರ ನಿರಂತರ ವಿಚಾರಣೆಗಳು ಒಮ್ಮೆ ಬಂದವರನ್ನು ಪುನಃ ಬರುವಂತೆ ಮಾಡುತ್ತವೆ.
ಮಾರನೆ ದಿನ ಹಾಗೆ ಒಂದು ರೌಂಡ್‌ ಆಡಾಡಿ, ತಿಂದಿ ಮುಗಿಸಿ ಇಷ್ಟವಿಲ್ಲದೆ ಹೋರಡುವ ತಯಾರಿ ನೆಡೆಸಿದೆವು. ಸ್ವಲ್ಪ ಹರಟೆ ಮತ್ತೊಮ್ಮೆ ಟೀ ಮುಗಿಸಿ ಸ್ನೇಹಿತರಿಗೆ ಬಾಯ್ ಹೇಳಿ ಭಾರದ ಮನಸ್ಸಿನಿಂದ ಕಾರು ಏರಿದೇವು, ವಿಲ್ಲಾವನ್ನು ಹಿಂದಿಕ್ಕಿ ಕಾರು ಗುಡ್ಡವನ್ನು ಇಳಿಯಲು ಪ್ರಾರಂಭಿಸಿತು. ಇಂದು ಕೃಷಿಯನ್ನು ಕಡೆಗಣಿಸಿ ಪಟ್ಟಣ ಸೇರುತ್ತಿರುವ ಯುವಜನರು ಹೀಗೆ ಯಾವುದಾದರೂ ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಂಡಲ್ಲಿ ವ್ಯವಸಾಯವು ಆಸಕ್ತಿದಾಯಕ ಮತ್ತು ಲಾಭದಾಯಕವಾಗುವುದು ದೂರವಿಲ್ಲ ಎಂಬ ಯೋಚನೆ ನನ್ನ ಮನದಲ್ಲಿ ಮೂಡಿತು.

January 19, 2010

ಆಡುಗೆಮನೆಯಲ್ಲೊಂದು ಅನಾಹುತ !!

ನನಗೆ ಮೊದಲಿನಿಂದಲೂ ನನ್ನ ಕೈಯ ನೀಳ ಬೆರಳುಗಳು ಮತ್ತು ಉಗುರುಗಳ ಬಗ್ಗೆ ವಿಷೇಶ ಒಲವು. ಸ್ವಲ್ಪ ಜಂಬ ಎಂದರೂ ತಪ್ಪಾಗಲಾರದೂ. ಯಾವಾಗಲೂ ನನ್ನ ತಂಗಿಯ ಗಿಡ್ಡ ಗಿಡ್ಡ ಬೆರಳುಗಳ ಜೊತೆ ಹೋಲಿಸಿಕೊಂಡು ಖುಷಿಪಡುತ್ತಿದ್ದೆ. ನಂತರ ಹಾಸ್ಟೇಲಿನಲ್ಲಿದ್ದ ದಿನಗಳಲ್ಲೂ ಅಷ್ಟೇ, ಗೆಳತಿಯರು ನನ್ನ ಕೈ ಬೆರಳು ಮತ್ತು ಉಗುರಿನ ಬಗ್ಗೆ ಕಾಂಪ್ಲಿಮೆಂಟ್ ಕೊಡುತ್ತಿದ್ದಾಗ ಖುಷಿಯಿಂದ ನನ್ನ ಕೈಗಳ ಬಗ್ಗೆ ನನಗೆ ಗೊತ್ತಿಲ್ಲದ ಹಾಗೆ ಒಲವು ಬೆಳೆಸಿಕೊಂಡೆ. ತುಂಬಾ ಆಸ್ಥೆಯಿಂದ ಉಗುರುಗಳನ್ನು ಬೆಳೆಸುವುದು, ಅದಕ್ಕೆ ಚೆಂದದ ಆಕಾರ ಕೊಡುವುದನ್ನು ಅಭ್ಯಾಸ ಮಾಡಿಕೊಂಡೆ. ಬಣ್ಣ ಬಣ್ಣದ ನೈಲ್‌ಪಾಲಿಶ್ ಹಚ್ಚಿಕೊಳ್ಳುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಯಿತು. ಓದು ಮುಗಿದ ನಂತರ ಕೆಲಸಕ್ಕೆ ಸೇರಿಕೊಂಡಾಗ ಸಂಬಳದಲ್ಲಿ ನೈಲ್‌ಪಾಲಿಶ್‌ಗೆಂದೇ ಪ್ರತ್ಯೇಕವಾಗಿ ಖರ್ಚುಮಾಡುತ್ತಿದೆ. ನನ್ನ ಬಳಿ ವಿವಿಧ ನೈಲ್‌ಪಾಲಿಶ್‌ಗಳ ಪುಟ್ಟ ಸಂಗ್ರಹವೇ ಇತ್ತು. ಈ ಪರಿಪಾಟ ಮದುವೆಯಾಗುವ ವರೆಗೆ ಸರಾಗವಾಗಿ ನೆಡೆಯುತ್ತಿತ್ತು
ನಂತರ ಗಂಡ, ಮನೆ, ಮಗು ಹೀಗೆ ಸಂಸಾರ ಸಾಗರದಲ್ಲಿ ನನ್ನ ಪ್ರೀತಿಯ ಹವ್ಯಾಸ ತೇಲಿಹೋಗಿತ್ತು. ಇದರ ಬಗ್ಗೆ ಮನೆಯಲ್ಲಿ ಯಾರದ್ದೂ ವಿರೋಧವಿರದ್ದಿದರೂ ಸಹ, ನಾನು ಬಹುವಾಗಿ ಇಷ್ಟಪಡ್ಡುತ್ತಿದ್ದ ಉಗುರಿಗೆ ಬಣ್ಣ ಹಚ್ಚುವ ಹವ್ಯಾಸ ಮಸುಕಾಗಿತ್ತು.
ಮದುವೆಯಾಗಿ ಐದು ವರ್ಷಗಳ ನಂತರ ಮತ್ತೆ ನಾನು ಮನೆಯಿಂದಲೇ ಕೆಲಸಮಾಡಲು ಪ್ರಾರಂಭಿಸಿದೆ, ಸಂಬಂಳವೂ ಬಂತು. ನಾನೂ ಮೊದಲು ಖರೀದಿಸಿದ ವಸ್ತುವೆಂದರೆ 3 ವಿವಿಧ ಬಣ್ಣದ ನೈಲ್‌ಪಾಲಿಶ್‌ಗಳು. ಇದರ ಮಧ್ಯೆ ಅತೀ ಜಾಗರೂಕತೆಯಿಂದ ಉಗುರುಗಳನ್ನು ಸಹ ಬೆಳೆಸಿದ್ದೆ. ತರಕಾರಿ ಹೆಚ್ಚುವಾಗ, ಪಾತ್ರೆ ತೊಳೆಯುವಾಗ ಅಥವಾ ಇತರೆ ಯಾವಾದಾದರೂ ಕೆಲಸ ಮಾಡುವಾಗ ನನ್ನ ಉದ್ದನೆಯ ಉಗುರುಗಳಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತಿದ್ದೆ. ಸುಮಾರು ಐದು ವರ್ಷಗಳ ನಂತರ ಮತ್ತೆ ಉದ್ದ ಉಗುರು ಬೆಳಸಿ, ನೈಲ್ ಪಾಲಿಶ್ ಹಚ್ಚಿಕೊಂಡು ಸಂಭ್ರಮ ಪಟ್ಟೆ. ನನ್ನ ಪುಟ್ಟ ಮಗಳಿಂದ ಹಿಡಿದು ನನ್ನ ಗಂಡ, ಅತ್ತೆ ಎಲ್ಲರೂ ನನ್ನ ನೀಳ ಸುಂದರವಾದ ಬೆರಳ ಮತ್ತು ಉಗುರುಗಳನ್ನು ಹೊಗಳಿದ್ದಾಗ, ಮತ್ತೆ ನನಗೆ ಹಾಸ್ಟೇಲಿನ ಆ ಸುಂದರ ದಿನಗಳು ನೆನಪಾದವು. ನನ್ನ ಕೈಗಳನ್ನು ಹೆಮ್ಮಯಿಂದ ಪದೇ ಪದೇ ನೋಡಿಕೊಳ್ಳುವುದು ಮತ್ತೆ ನನಗೆ ರೂಡಿಯಾಯಿತು.
ಅಂದು ಬೆಳಿಗ್ಗೆ ಎಳ್ಳುವುದು ಸ್ವಲ್ಪ ತಡವಾಗಿತ್ತು. ಗಡಿಬಿಡಿಯಲ್ಲೇ ಆಡಿಗೆಮನೆಯ ಕೆಲಸ ಪ್ರಾರಂಭಿಸಿದೆ. ಮಿಕ್ಸರ್ ಆನ್ ಮಾಡಿದ್ದಷ್ಟೇ ಗೊತ್ತು, ಮುಚ್ಚಳ ಹಾರಿತು. ಆಯ್ಯೋ ಆಡಿಗೆ ಮನೆಯಲ್ಲಾ ರಂಪವಾಯಿತಲ್ಲಾ..!! ಅಂದು ಕೊಳ್ಳುವಷ್ಟರಲ್ಲೇ ಮುಖದ ಮೇಲೆ ಬಿಸಿ ಹನಿಗಳು ಬಿದ್ದ ಅನುಭವ. ಇವೆಲ್ಲಾ ಕೆಲವೇ ಕ್ಷಣಗಳಲ್ಲಿ ನೆಡೆದು ಹೋಯಿತು.7-8 ಸೆಂಕೆಂಡ್‌ಗಳ ನಂತರವಷ್ಟೇ ನನಗೆ ತಿಳ್ದಿದ್ದು ಮುಖ ಮೇಲೆ ಹಾರಿದ ಆ ಬಿಸಿಯ ಹನಿಗಳು ನನ್ನ ಕೈಯ ರಕ್ತವೆಂದು!! ನನ್ನ ಪ್ರೀತಿಯ ಕೈ ಬೆರಳುಗಳು ಮಿಕ್ಸರ್‌ನ ಜಾರಿಗೆ ಸಿಕ್ಕಿದ್ದವು.
ಈಗ ವಿಕಾರಗೊಂಡಿರುವ ನನ್ನ ಸುಂದರ ಕೈಗಳನ್ನು ನೊಡಿದ್ದಾಗಲ್ಲೇಲ್ಲಾ ಅಂದು ಬೆಳಿಗ್ಗೆ ನೆಡೆದ ಮಿಕ್ಸರ್‌ನ ಘಟನೆ ಮತ್ತೆ ಮತ್ತೆ ನೆನೆಪಾಗುತ್ತದೆ. ನನ್ನ ಕಣ್ಣಾಲಿಗಳು ತುಂಬಿ ಬರುತ್ತವೆ......