October 13, 2011

ಬಸ್ ಕೆಟ್ಟ ಆ ರಾತ್ರಿ...

 ದಿನ ಟಿವಿ, ಪೇಪರ್‌ನಲ್ಲಿ ಹೆಣ್ಣು ಮಕ್ಕಳು ಕಾಮುಕರಿಗೆ ಬಲಿಯಾಗುವ ಸುದ್ದಿ ಕೇಳುವಾಗ ನನ್ನ ಹೊಟ್ಟೆಯಲ್ಲಿ ಸಣ್ಣಗೆ ಚಳಿ ಹುಟ್ಟುತ್ತೆ. ಮೈಯೆಲ್ಲಾ ಬೆವುರುತ್ತೆ.  ಅವತ್ತು ಅವರು ಇಲ್ಲ ಅಂದಿದ್ದರೆ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತದೆ. ಮತ್ತೆ ಮತ್ತೆ ಆ ಘಟನೆಯ ನೆನಪು ಮರಕಳಿಸುತ್ತದೆ.  ಅಲ್ಲಿಯವರೆಗೆ  ಒಂದು ಹೆಣ್ಣನ್ನು ಪ್ರಪಂಚ ಅಷ್ಟು ಕೆಟ್ಟ ದೃಷ್ಟಿಯಿದ ನೋಡುತ್ತದೆ  ಎಂಬ ಅರಿವಿರಲಿಲ್ಲ.  ಇಂದಿಗೂ ಅವತ್ತು ನಾನು ಎಂತಹ ಅಪತ್ತಿನಲ್ಲಿ ಸಿಲುಕ್ಕಿದ್ದೆ  ಎಂದು  ಊಹಿಸಿಕೊಳ್ಳಲು ಅಸಾಧ್ಯ.  ಆ ದಿನದ ನೆನಪು ಮಾತ್ರ ಇನ್ನೂ ಸ್ಪಲ್ಪವೂ ಮಾಸಿಲ್ಲ. ಅವತ್ತು ನಾನು  ಹೆದರಿಕೆಯಿಂದ  ಸಂಪೂರ್ಣ ಬ್ಲಾಂಕ್ ಆಗಿದ್ದೆ.  ಪರಿಸ್ಥಿತಿಯೇ  ಹಾಗಿತ್ತು .

      ಈ ಘಟನೆ ನೆಡೆದು ಸುಮಾರು 15-16 ವರ್ಷಗಳೇ ಕಳೆದಿವೆ. ಆ ವಯಸ್ಸೇ ಹಾಗಿತ್ತು. ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅಥವಾ ಯೋಚಿಸಬೇಕು ಅನ್ನೋ ಮೆಚ್ಯೂರಿಟಿ ಇರಲಿಲ್ಲ. ಆಗ ಅದು ಬೇಕಾಗಿರಲಿಲ್ಲ ಕೂಡ.  ಆಗಿನ್ನೂ ನಾನು ಪಿಯುಸಿ ಮುಗಿಸಿದ್ದೆ. ಡಿಗ್ರಿ ಕಾಲೇಜು ಶುರುವಾಗುವ ಮುನ್ನ ಹಳೆ ಹಾಸ್ಟೇಲ್‌ನ ಸ್ನೇಹಿತರೇಲ್ಲಾ ಒಮ್ಮೆ ಭೇಟಿಯಾಗುವ ಪ್ಲಾನ್ ಪ್ರಕಾರ. ನಾವೆಲ್ಲಾ ಮಂಗಳೂರಿನಲ್ಲಿ  ಮೀಟ್ ಮಾಡಿ,  ನಾನು ವಾಪಸ್ಸು ಮನೆ ಸೇರಲು ಮಂಗಳೂರು-ತೀರ್ಥಹಳ್ಳಿಯ ಅಗುಂಬೆ ಮಾರ್ಗದ ಕೊನೆ ಬಸ್ಸೇರಿದ್ದೆ.  ಕತ್ತಲ್ಲಾದ ನಂತರ ಆಗುಂಬೆ ಘಾಟಿಯಲ್ಲಿ ಬಸ್ಸ್ ಸಂಚರಿಸುತ್ತಿರಲಿಲ್ಲ.  ಅದೇ ಕೊನೆಯ  ಬಸ್ಸ್‌ ಆದ ಕಾರಣದಿಂದ  ಹೆಚ್ಚೇ ಎನ್ನುವಷ್ಟು ಜನ ತುಂಬಿದ್ದರು.  ಹೆಬ್ರಿ ದಾಟಿ ಸ್ಪಲ್ಪ ದೂರ ಸಾಗುತ್ತಿದ್ದಂತೆ  ಬಸ್ಸು ಕೆಟ್ಟು ನಿಂತಿತ್ತು.  ಆಗ ಅದೇನು ದೊಡ್ಡ ವಿಷಯ ಅನಿಸಲಿಲ್ಲ.  ಡ್ರೈವರ್ ಅರ್ಧ-ಒಂದು ಘಂಟೆಯಲ್ಲಿ ಸರಿಯಾಗುವ ಭರವಸೆ ಕೊಟ್ಟಿದ್ದರು. ಆದರೆ ಅಗಿದ್ದೇ ಬೇರೆ.  ಮೆಕ್ಯಾನಿಕ್ ರೀಪೇರಿ ಸಾಧ್ಯವಿಲ್ಲ  ಅಂದ ಹಾಗೂ ಕಂಡೆಕ್ಟರ್‌ನಿಂದ ನಿಮ್ಮ ದಾರಿ ನೀವೇ ನೋಡಿ ಕೊಳ್ಳಿ ಎಂಬ ಅಧಿಕೃತ ಘೋಷಣೆಯು ಬಂತು. ಬಸ್ಸಿನ  ಜನ ಸಂದಣಿ ನಿಧಾನವಾಗಿ  ಕರಗತ್ತಾ ಬಂತು. ಆಗಾಲೇ ನನಗೆ ಗೊತ್ತಾಗಿದ್ದು. ಆ ಬಸ್ಸಲ್ಲಿ ಇದ್ದಿದ್ದು ಎರಡೇ ಹೆಣ್ಣು ಜೀವ! ನಾನು ಮತ್ತು ಒಂದು ಕಣ್ಣಿಗೆ ಬ್ಯಾಂಡೇಜ್ ಕಟ್ಟುಕೊಂಡಿದ್ದ ಮಧ್ಯ ವಯಸ್ಸಿನ ಹೆಂಗಸೊಬ್ಬರು. ಯಾರಿಗೆ ಹೇಳೊದು... ? ಎಲ್ಲಿಗೆ ಹೋಗೋದು..? ಯಾರ ಜೊತೆಗೆ?  ಎಲ್ಲದಕ್ಕಿಂತ ಹೆಚ್ಚಾಗಿ ಮನೆಗೆ ಹೇಗೆ ತಿಳಿಸೋದು?  ಆಗ ಮೊಬೈಲ್ ಫೋನ್ ಎಲ್ಲಿತ್ತು.? ನಮ್ಮ ಮನೆಯಲ್ಲಿ ಫೋನ್ ಕೂಡ ಇರಲ್ಲಿಲ್ಲ. ನಾನು ಏನು ಮಾಡಲು ತೋಚದೇ ಉತ್ತರ ಹೊಳಯದ ಪ್ರಶ್ನೆಗಳೊಂದಿಗೆ ಕುಳಿತೇ ಇದ್ದೆ. 

       ಘಂಟೆ ಎಂಟೋ ಒಂಬತ್ತು ಆಗಿತ್ತು. ಬಸ್ ಫುಲ್ ಖಾಲಿ ಆಯಿತು. ಬರೀ ಮೂರು ಜನ ಮಾತ್ರ ಉಳಿದ್ದಿದ್ದು. ನಾನು ಮತ್ತು ಬಸ್ಸ್‌ನಲ್ಲಿದ್ದ ಏಕೈಕ ಮಹಿಳೆ ಮತ್ತು ಅವರ ಗಂಡ. ಮತ್ತು ಬಸ್  ಕೆಳಗೆ ಒಂದು ನಾಲ್ಕೋಐದೋ ಜನ ಇದ್ದರು.  ಕೆಳಗೆ ಕತ್ತಲಲ್ಲಿ  ನಿಂತಿದ್ದ  ನನ್ನ ಬಗ್ಗೆಯ ಅವರ ಮಾತುಗಳು  ಬೇಡ ಅಂದರೂ ಸ್ಪಷ್ಟವಾಗಿ ಕೇಳುತ್ತಿತ್ತು.  ಒಬ್ಬ "ಹಕ್ಕಿ ಬೊಂಬಾಟಾಗಿ ಇದ್ದೆ ಕಣ್ರೋ" ಅಂತ ಹೇಳಿದ್ರೆ, "ಹೌದು ಮರಾಯಾ.. ಮಜಾ ಜೊತೆಗೆ ಒಳ್ಳೆ ಸಂಪಾದನೆನ್ನೂ ಆಗುತ್ತೆ ಕಣೋ" ಅಂತ ಇನ್ನೊಬ್ಬನ್ನ ಸುವಾಲು. ನನ್ನ ರೂಪದ ಬಗ್ಗೆ ನನಗೇ ಅಸಹ್ಯವಾಗುವಷ್ಟು ಅಸಹ್ಯವಾಗಿ ಮಾತಾಡಿ ಕೊಳ್ಳುತ್ತಿದ್ದರು.  ನಂತರ ಒಬ್ಬೊಬ್ಬರೇ ಬಸ್ಸಿನ  ಒಳಗೆ ಒಂದು ನನ್ನ ಮಾತನಾಡಿಸಲು  ಶುರು ಮಾಡಿದ್ದರು.  ನಾನು ಮಾತ್ರ ತುಟಿ ಎರಡು  ಮಾಡದೆ, ಅಳು ನುಂಗಿ ಸೀಟಿಗೆ ಇನ್ನೂ ಅಂಟು ಕೊಂಡು ಕುಳಿತೆ. ಹೊರಗಿನ ಕತ್ತಲಷ್ಟೆ ನನ್ನ ಮುಖ ಕೂಡ ನನಗೆ ಗೊತ್ತಗುವಷ್ಟೂ ಹೆದರಿಕೆಯಿಂದ ಕಪ್ಪಾಗಿತ್ತು. ಅವರೇಲ್ಲಾ ನಾನು ಕುಳಿತ ಸೀಟಿನಿಂದ ಸ್ಪಲ್ಪ ದೂರದಲ್ಲಿ ನಿಂತು  ಅಸಹ್ಯವಾಗಿ ನಗುತ್ತಿದ್ದರು.  ಸೇಮ್ ಯಾವುದೋ ಒಂದು ಫಿಲ್ಮಿ ಸೀನ್ ರೀತಿ. ಅವರ ನೋಟಗಳು  ನನಗೆ ಇಂದಿಗೂ ಕೂಡ ನೆನೆಪಿದೆ.  ನೆನೆಸಿ ಕೊಂಡರೆ ಈಗಲೂ ಮೈ ಕಂಪಿಸುತ್ತದೆ.  ಆ ಕ್ಷಣ ಮಾತ್ರ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಪರಿತಪಿಸಿ ಬಿಟ್ಟೆ.  ಆಗ ನನ್ನನ್ನು ಅವರಿಂದ ಬಚಾವ್ ಮಾಡೊಕ್ಕೆ ಮಾತ್ರ ಬಂದಿದ್ದು   ಬಸ್ಸಿನಲ್ಲಿ ಉಳಿದ್ದಿದ್ದ ದಂಪತಿಗಳು. ಆ ಮಹಿಳೆ ನನ್ನ ಹತ್ತಿರ ಬಂದು  ನಮ್ಮ ಜೊತೆ ಬರ್ತಿಯಾ ಅಂತ ಕೇಳಿದಷ್ಟೇ. ನಾನು ಒಂದು ಸೆಂಕೆಂಡು ಕೂಡ ತಡ ಮಾಡದೆ ಹಿಂದೆ ಮುಂದೆ ಯೋಚಿಸದೆ ಅವರ ಬಾಲ ಹಿಡಿದೆ. ಬೇರೆ ದಾರಿಯಾದರೂ ಏನು ಇತ್ತು? ನನಗೆ ಹೋದ ಜೀವ ವಾಪಸ್ಸು ಬಂದಿತ್ತು. ಅವರು ಯಾವುದೋ ಒಂದು ವಾಹನ ಅಡ್ಡಗಟ್ಟಿ, ಉಡುಪಿಗೆ ಕರ್ಕೊಂಡು ಹೋದರು.  ಮಾತಾಡಲು  ಅಗದಷ್ಟು  ಬಾಯಿ ಒಣಗಿತ್ತು. ಅವರು ಏನೋ ಕೇಳಿದ್ದರೆ ನಾನು ಏನೋ ಹೇಳುತ್ತಿದ್ದೆ.  ಬಾಂಣಲೆಯಿಂದ ಬೆಂಕಿಗೆ ಬಿದ್ದೆನ್ನೇನೊ ಎಂದು  ನನಗೆ ಅನಿಸಲು ಪ್ರಾರಂಭವಾಗಿತ್ತು. ಆದರೆ ಆ ರೀತಿ ಏನು ಆಗದೆ  ಕೊನೆಗೆ ಎಲ್ಲಾ ಸುಖಾಂತ್ಯ ವಾಯಿತು. ರಾತ್ರಿ ಉಡುಪಿ ಮಠದಲ್ಲಿ ಉಳಿದುಕೊಂಡು, ಬೆಳ್ಳಿಗೆ ಮೊದಲ ಬಸ್ಸ್‌ನಲ್ಲೇ  ಅವರು ನನ್ನನ್ನು ಊರು ಮುಟ್ಟಿಸಿದ್ದರು. ಅವರ ಉಪಕಾರಕ್ಕೆ ನಾನು ಮತ್ತು ನನ್ನ ಮನೆಯವರೆಲ್ಲಾ ಜೀವಮಾನವೀಡಿ ಋಣಿಗಳು.
        
           ಆ ಒಂದು ರಾತ್ರಿಯಲ್ಲಿ ನಾನು ಇಡೀ ಜೀವಮಾನಕ್ಕೆ ಆಗುವಷ್ಟು ಹಿಂಸೆ, ಸಂಕಟ, ಭಯ ಎಲ್ಲಾ ಅನುಭವಿಸಿ ಬಿಟ್ಟೆ.  ಆ ಪುಣ್ಯಾತ್ಮರು ಇಲ್ಲದೆ ಹೋಗಿದ್ದರೆ....  ನಾನು ಇಷ್ಟೂ ವರ್ಷ ಜೀವದಲ್ಲಿ  ಇರುತ್ತಿದ್ದೇನೋ ಇಲ್ವೋ ಅಥವಾ ಇದ್ದರೂ ಎಲ್ಲೋ?  ಹೇಗೋ? ಅಬ್ಬಾ ಕಲ್ಪನೆಗೂ ಸಿಗವುದಿಲ್ಲ... ಆ ಪಾಪಿಗಳ ಕೈಗೆ ಸಿಕ್ಕಿ ನಾನೂ ಒಂದು ಕಥೆಯಾಗಿರುತ್ತಿದ್ದೆ....














(2011 ಅಕ್ಟೋಬರ್  7 ರ ವಿಜಯ ನೆಕ್ಸ್ಟ್‌ ಪೇಪರ್‌ನ  "ಅವಳ ಡೈರಿ" ಅಂಕಟದಲ್ಲಿ  ಪ್ರಕಟವಾದ ಬರಹ)

ಫ್ಲವರ್ ಕೇರ್

ಹೂವುಗಳು ಮನಸ್ಸಿಗೆ ಮುದ ನೀಡುತ್ತವೆ.  ಸುಂದರ ತಾಜಾ ಹೂವುಗಳ ಹೂದಾನಿಯು ಮನೆಯ ಅಲಂಕಾರಕ್ಕೆ ಒಂದು ಹೊಸ ರೂಪವನ್ನು ನೀಡುತ್ತದೆ ಎಂದರೆ ತಪ್ಪಲಾಗರದು. ಜೊತೆಗೆ  ಮನಸ್ಸನ್ನು ಸಹ ಉಲ್ಲಾಸವಾಗಿಡುತ್ತದೆ.  ಹೂವಿನ ಕುಂಡಗಳು ಹೂವಿನ ಸ್ವಾಭಾವಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಒಂದು ಸುಂದರವಾದ ಹೂದಾನಿಯನ್ನು ಮನೆಯ ಅಥವಾ ಅಫೀಸ್‌ನ ಒಂದು ಅತ್ಯುತ್ತಮ ಅಲಂಕಾರಿಕ ಅಂಶ ಎಂದು ಪರಿಗಣಿಸಲಾಗುತ್ತದೆ.
ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿ ವಿಧವಿಧವಾದ ಹೂದಾನಿಗಳು ಲಭ್ಯ, ಆದರೆ ಅದನ್ನು ಆಯ್ಕೆಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳುವುದು ಮುಖ್ಯವಾಗುತ್ತದೆ.
ಪ್ರಕಾಶಮಾನ/ಕಾಂತಿಯುತ ಬಣ್ಣದ ಹೂದಾನಿಗಳಲ್ಲಿ ಹೂಗಳು ಎದ್ದು ಕಾಣುವುದಿಲ್ಲ. ಹೀಗಾಗಿ ಸರಳವಾದ  ಹೂದಾನಿಗಳನ್ನು ಅಯ್ದುಕೊಳ್ಳುವುದು ಉತ್ತಮ.
ಸರಿಯಾದ ಮೂಲ ವಸ್ತುವಿನ ಹೂದಾನಿಯ ಆಯ್ಕೆ ಕೂಡ ಅಷ್ಟೆ ಮುಖ್ಯ. ಬಗೆಬಗೆಯ ಮೂಲವಸ್ತುವಿನ ಹೂಕುಂಡಗಳು ದೊರೆಯುತ್ತದೆ. ಉದಾ; ಗ್ಲಾಸು, ಸಿರಾಮಿಕ್, ಸ್ಟೀಲ್, ಟೆರಾಕೋಟಾ, ಮಣ್ಣು, ಕ್ರಿಸ್ಟಲ್ ಇತ್ಯಾದಿ. ಎಲ್ಲಾ ಬಣ್ಣಗಳ ಹಾಗೂ ವಿಧಗಳ ಹೂಗಳಿಗೆ ಹೊಂದುವ ಹೂ ಕುಂಡವನ್ನು  ಅಯ್ಕೆ ಮಾಡಿಕೊಳ್ಳಬಹುದು.
ಹೂಗಳ ಜೋಡಣೆಗೆ  ಬೇರೆ ಬೇರೆ ಆಕಾರಗಳ ಕುಂಡಗಳನ್ನು ಪ್ರಯತ್ನಿಸಬಹುದು. ಆಗಲ, ಸಿಲಿಂಡರ್, ಬೌಲ್ ಇತ್ಯಾದಿ ಆಕಾರಗಳು. ನಿಮ್ಮ ಮನೆಯ ಒಳಾಂಗಣ ಮತ್ತು ಪೀಠೋಪಕರಣಕ್ಕೆ ಹೊಂದುವ ಗಾತ್ರದ  ಪ್ಲವರ್ ವಾಸ್‌  ಆಯ್ಕೆ ಮಾಡಿಕೊಳ್ಳಿ.
ಖರೀದಿಸುವಾಗ ಯಾವುದೇ ರೀತಿಯ ಬಿರುಕು ಅಥವಾ ಸೀಳುವಿಕೆ ಇಲ್ಲದಿರುವುದನ್ನು ಖಚಿತ ಪಡಿಸಿ ಕೊಳ್ಳಿ. ಹೂದಾನಿಗಳು ತೀರ ದುಬಾರಿಯಾಗಿ, ಅಡಂಬರವಾಗಿರಬೇಕಿಲ್ಲ. ಅದಷ್ಟೂ ಸರಳವಾಗಿದ್ದಲ್ಲಿ ಹೂವಿನ ಅಂದವನ್ನು ಎತ್ತಿ ಹಿಡಿಯುವಲ್ಲಿ ಹೆಚ್ಚು ಸಹಾಯಕಾರಿಯಾಗುತ್ತದೆ.
ಹೂ ದಾನಿಯ ಕಲರ್, ಮೆಟಿರಿಯಲ್, ಶೇಪ್‌ಗಳ ಜೊತೆಗೆ ಅದು ಇಡುವ ಸ್ಥಳ ಕೂಡ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಟೇಬಲ್, ಟೀಪಾಯಿ ಅಥವಾ ಶೇಲ್ಫ್‌ಗಳು ಹೂ ಕುಂಡಗಳನ್ನು ಇಡಲು ಸೂಕ್ತವಾದ ಸ್ಥಳಗಳು. ಹೂದಾನಿಗಳನ್ನು ಎತ್ತರದ ಸ್ಥಳದಲ್ಲಿ ಇರಿಸುವ ಹಾಗಿದ್ದಲ್ಲಿ, ಕೆಳಗೆ ಬಿದ್ದರೆ ಒಡೆಯದ ವಸ್ತುಗಳ ಹೂದಾನಿಗಳನ್ನು ಇಡುವುದು ಉತ್ತಮ.
ಕೆಲವು ಸರಳ ಅಂಶಗಳ ಬಗ್ಗೆ ಗಮನ ಹರಿಸಿದರೆ, ನೀವು ನಿಮ್ಮ ಮನೆಯ ಹೂದಾನಿಯಲ್ಲಿ ಹೂಗಳು ಹೆಚ್ಚು ಕಾಲ ತಾಜವಾಗಿರಂತೆ ನೋಡಿಕೊಳ್ಳಬಹುದು.
ಮೊದಲನೆಯದಾಗಿ ಹೂವಿನ ಕಾಂಡವನ್ನು ಹರಿತವಾದ ಚಾಕುವಿನಿಂದ ಓರೆಯಾಗಿ ಕತ್ತರಿಸಿ. ತುಕ್ಕು ಹಿಡಿದ ಚಾಕು ಅಥವಾ ಕತ್ತರಿಯನ್ನು ಬಳಸಬೇಡಿ. ಹೂವನ್ನು ಗಿಡದಿಂದ ಬೇರ್ಪಡಿಸಿದ ನಂತರ ನೀರಿನಲ್ಲಿ ಹಾಕಿ. ನೀರಿನಲ್ಲಿ ಮುಳುಗುವ ಕೆಳಭಾಗದ ಎಲೆಗಳನ್ನು ಕಾಂಡದಿಂದ ತೆಗೆಯಿರಿ. ಇದರಿಂದ ಹೂಗಳು ಹೂದಾನಿಯಲ್ಲಿ ಹೆಚ್ಚು ಸಮಯ ತಾಜವಾಗಿ ಉಳಿಯುತ್ತದೆ.
ಹೂವನ್ನು ಗಿಡದಿಂದ ಕ್ಯುಯಲು ಮುಂಜಾನೆ ಅಥವಾ ಸಂಜೆ ಸೂಕ್ತವಾದ ಸಮಯ. ಗುಲಾಬಿ, ಡ್ಯಾಫಿಡೋಲ್ ಮತ್ತು ಗ್ಲಾಡಿಯೊಲ್ಸ್‌ಗಳಂತಹ ಹೂಗಳನ್ನು ಮೊಗ್ಗಿನ ಅವಸ್ಥೆಯಲ್ಲಿ ಹಾಗೂ  ಚೆಂಡು ಹೂಗಳನ್ನು ಅರಳಿದ ನಂತರ ಗಿಡದಿಂದ ಕತ್ತರಿಸಬೇಕು.
ಹೂದಾನಿಗಳಲ್ಲಿ ಹೂಗಳು ಹೆಚ್ಚು ಕಾಲ ತಾಜವಾಗಿ ಉಳಿಯಲು ರಾಸಾಯನಿಕಗಳನ್ನು  ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಫ್ಲವರ್ ಫುಡ್‌ಗಳನ್ನು ಬಳಸಬಹುದು. ಅವುಗಳನ್ನು ಬಳಸಲು ಇಚ್ಛಿಸದವರು ಸ್ವಾಭಾವಿಕ ಮಿಶ್ರಣಗಳನ್ನು ಮನೆಯಲ್ಲೇ ತಯಾರಿಸಿ ಕೊಳ್ಳಬಹುದು.ಉದಾ: * ಮೂರು ಭಾಗ ನೀರಿಗೆ ಒಂದು ಭಾಗ ಲೆಮನ್/ಲೈಮ್ ಸೋಡಾ ಬೆರೆಸಿ. ನಂತರ ಪ್ರತಿ ಕಾಲು ಭಾಗ ಮಿಶ್ರಣಕ್ಕೆ, 1/4 ಚಮಚ ಬ್ಲೀಚ್ ಸೇರಿಸಿದ ಮಿಶ್ರಣವನ್ನು ಹೂದಾನಿಯಲ್ಲಿ ಬಳಸಿ. ನಂತರದಲ್ಲಿ ಪ್ರತಿ ನಾಲ್ಕು ದಿನದ ನಂತರ ಕಾಲು ಚಮಚ ಬ್ಲೀಚ್ ಸೇರಿಸಿ.  ಅಥವಾ * ಒಂದು ಕಾಲು ಭಾಗ ನೀರಿಗೆ 2 ಚಮಚ ಲಿಂಬೆ ಹಣ್ಣಿನ ರಸ, 1 ಚಮಚ ಸಕ್ಕರೆ ಮತ್ತು 1/2 ಚಮಚ ಬ್ಲೀಚ್ ಸೇರಿಸಿ ಹೂದಾನಿಯಲ್ಲಿ ಬಳಸಿ. ಈ ಮಿಶ್ರಣಗಳು ಹೂವನ್ನು ಹೆಚ್ಚು ಕಾಲ ಫ್ರೆಶ್ ಆಗಿ ಇಡಲು ಸಹಾಯಮಾಡುತ್ತದೆ.
ಕತ್ತರಿಸಿದ ಹೆಚ್ಚಿನ ಎಲ್ಲಾ ಹೂಗಳಿಗೆ ಹೂದಾನಿಯಲ್ಲಿ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಿ, ಆದರೆ ಬಲ್ಬ್ ಫ್ಲವರ್‌ಗಳಾದ ಡ್ಯಾಫಿಡೋಲ್ ಮತ್ತು ಟುಲಿಪ್‌ ರೀತಿಯ ಹೂಗಳಿಗೆ ತಣ್ಣನೆಯ ನೀರನ್ನು ಬಳಸಿ.  ಪ್ರತಿ ಎರಡು ದಿನಕ್ಕೊಮ್ಮೆ ಹೂಕುಂಡದ ನೀರನ್ನು ಪೂರ್ಣವಾಗಿ ಬದಲಿಸಿ. ಇದು  ಹೂದಾನಿಯ ಹೂಗಳನ್ನು ಫ್ರೆಶ್ ಆಗಿ ಇಡಲು ಪ್ರತಿಯೊಬ್ಬರು ಗಮನದಲ್ಲಿಟ್ಟು ಕೊಳ್ಳಬೇಕಾದ ಕನಿಷ್ಟ ಅಂಶ. ಹೂದಾನಿಯ ಹೂಗಳನ್ನು ಸೂರ್ಯ ಬೆಳಕಿಗೆ ನೇರವಾಗಿ ಒಡ್ಡಬೇಡಿ ಮತ್ತು ಅವುಗಳನ್ನು ಅದಷ್ಟೂ ತಣ್ಣನೆ ಜಾಗದಲ್ಲಿರಿಸಿ.
ಕತ್ತರಿಸಿದ ಹೂಗಳನ್ನು ಹಣ್ಣುಗಳಿಂದ ದೂರವಿಡಿ. ಹಣ್ಣುಗಳು ಹೊರಸೂಸುವ ಒಂದು ಅನಿಲದಿಂದ ಹೂಗಳು ಬೇಗ ಬಾಡುತ್ತವೆ.
ಹೂದಾನಿಯಲ್ಲಿ ಬಾಡಿದ ಹೂಗಳನ್ನು ಹೊರಹಾಕಿ, ಅವುಗಳಿಂದ ಉಳಿದ ಹೂಗಳು ಬೇಗ ತಾಜಾತನವನ್ನು ಕಳೆದು ಕೊಳ್ಳುತ್ತವೆ.
ಡ್ಯಾಫಿಡೋಲ್ ಹೂಗಳನ್ನು  ಪ್ರತ್ಯೇಕವಾದ ಹೂಕುಂಡದಲ್ಲಿ  ಇರಿಸಿ, ಅವುಗಳ ಕಾಂಡಗಳು ಸೂಸುವ ಒಂದು ಸಂಯುಕ್ತ ಬೇರೆ ಹೂಗಳಿಗೆ ವಿಷಕಾರಿ.
ಹೂಕುಂಡಗಳಲ್ಲಿ ಹೆಚ್ಚುಕಾಲ ತಾಜವಾಗಿ ಇರುವ ಹೂಗಳನ್ನೇ ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಗ್ಲಾಡಿಯೊಲ್ಸ್‌ಗಳು ಸುಮಾರು ಹತ್ತು ದಿನಗಳ ವರೆಗೆ ಹೂದಾನಿಯಲ್ಲಿ ತಾಜವಾಗಿ ಇರುತ್ತವೆ. ಹಾಗೆ ಕಾರ್ನೇಶಿಯನ್‌ ಹೂಗಳು ಸರಿಯಾದ ಕಾಳಜಿಯೊಂದಿಗೆ ಸುಮಾರು 21 ದಿನಗಳ ಕಾಲ ಫ್ರೆಶ್ ಆಗಿ ಇರಬಲ್ಲವು.
ಸುಂದರ ಹೂವಿನ ಕುಂಡಗಳಲ್ಲಿ ಜೋಡಿಸಿದ ಹೂವುಗಳನ್ನು ಮನೆಯ ಒಳಾಂಗಣ ಅಲಂಕಾರಕ್ಕಾಗಿ ಬಳಸಬಹುದು. ಮನೆಯ ಅಂದ ಹೆಚ್ಚಿಸುವಲ್ಲಿ ಹೂದಾನಿಗಳು ಮುಖ್ಯ ಪಾತ್ರ ಹೆಚ್ಚಿಸುತ್ತವೆ. ಅದಕ್ಕಾಗಿ ಮಾರುಕಟ್ಟೆಯಿಂದ ದುಬಾರಿಯಾದ ಹೂಕುಂಡವನ್ನು ಬಾರಿ ಹಣ್ಣ ತೆತ್ತು ತರುವ ಅಗತ್ಯವೇನು ಇಲ್ಲ. ಮನೆಯಲ್ಲಿರುವ ಬಣ್ಣದ ಬಾಟಲ್‌ಗಳು, ಗಾಜಿನ ಬೌಲ್‌ಗಳು, ಅಕರ್ಷಕವಾಗಿರುವ ವಿಭಿನ್ನವಾಗಿರುವ ಪಾತ್ರೆಗಳನ್ನು ಸಹ ಹೂದಾನಿಯಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ. ಆದರೆ ಅದನ್ನು ಸುಂದರವಾಗಿ ಕಾಣುವಂತೆ ಮಾಡುವುದು ನಮ್ಮ ಕೈಯಲ್ಲಿದ್ದೆ ಅಷ್ಟೇ. ಹೂದಾನಿಯಲ್ಲಿ ಹೂಗಳ ಜೋಡಣೆಯು ಒಂದು ಕಲೆ. ಎಲ್ಲಾ ರೀತಿಯ ಹೂಗಳನ್ನು ಒಟ್ಟಿಗೆ  ತುಂಬುವುದರಿಂದ ಹೂದಾನಿಯು ಅಕರ್ಷಕವಾಗಿ ಕಾಣುವುದ್ದಿಲ್ಲ. ಸ್ಪಲ್ಪ ಆಸಕ್ತಿಯಿಂದ ಹೂಗಳನ್ನು ಜೋಡಿಸಿದರೆ ಎಂಥ ಹೂ ಕುಂಡವು ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಗ್ಲಾಡಿಯೊಲಸ್ ರೀತಿಯ ಉದ್ದನೆಯ ಹೂಗಳು ಉದ್ದನೆಯ, ತೆಳುವಾದ ಅಥವಾ ಸಿಲಿಂಡರ್ ಆಕಾರದ ವಾಸ್‌ಗಳಿಗೆ ಹೆಚ್ಚು ಹೊಂದುತ್ತವೆ. ಮತ್ತು ಈ ರೀತಿಯ ಉದ್ದನೆಯ ಹೂಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಡುವ ಅಗತ್ಯವಿಲ್ಲ  ಒಂದು ಹೂವು  ಸಹ ಹೂದಾನಿಯನ್ನು ಅಕರ್ಷಕವಾಗಿಸುತ್ತದೆ.  ಹಾಗೆ ಗುಲಾಬಿ, ಕಾರ್ನೇಷಿಯನ್, ಡ್ಯಾಫಿಡೊಲ್, ಜಿನಿಯಾ, ಟುಲಿಪ್ ಮುಂತಾದ ಹೂಗಳನ್ನು ಹೆಚ್ಚು ಸಂಖ್ಯೆಯಲ್ಲಿ ಹೂದಾನಿಯಲ್ಲಿಟ್ಟರೆ ಚೆಂದ. ಪುಟ್ಟ ಪುಟ್ಟ ಬಣ್ಣ,ಬಣ್ಣದ ಹೂಗಳೊಂದಿಗೆ ನಡುವಿನಲ್ಲಿ ಒಂದು ಉದ್ದ ಹೂವು ಕುಂಡದ ಅಂದವನ್ನು ಹೆಚ್ಚಿಸುತ್ತದೆ. ಹೂಗಳ ಜೊತೆ ಬೇರೆ ಬೇರೆ ಬಣ್ಣದ ಸಣ್ಣ ಕಲ್ಲುಗಳು ಅಥವಾ ಗೋಲಿಗಳು ಸಹ ಪಾರದರ್ಶಕ ಹೂದಾನಿಗಳಲ್ಲಿ ಬಳಸಬಹುದು.
May your flowers bring you joy--for a long time.









ವಾಷಿಂಗ್ ಮಶಿನ್‌‌ ಕ್ಲೀನಿಂಗ್ ಟಿಪ್ಸ್

ನಮ್ಮ ಬಟ್ಟೆಗಳನ್ನು ಕ್ಲೀನ್ ಮಾಡುವ ವಾಷಿಂಗ್ ಮಶಿನ್‌ ಕ್ಲೀನ್ ಮಾಡುವ ಕಲ್ಪನೆ ಸ್ಪಲ್ಪ ತಮಾಷೆ ಅನಿಸುತ್ತದೆ. ಆದರೆ ಸದಾ ಕೊಳೆ ಬಟ್ಟೆಗಳನ್ನು ಸ್ವಚ್ಛ ಮಾಡುವ ವಾಷಿಂಗ್ ಮಶಿನ್‌ ಸ್ವಚ್ಛವಾಗಿರುವುದು ಸಹ ಅಷ್ಟೇ ಮುಖ್ಯ. ಬಟ್ಟೆಯ ಕೊಳೆ ಮತ್ತು ಸೋಪ್‌ ಅಂಶಗಳು ವಾಷಿಂಗ್ ಮಶಿನ್‌‌ನಲ್ಲಿ ಸಂಗಹ್ರವಾಗುತ್ತದೆ. ಇವು ಮಶಿನ್‌ ಒಳಗೆ ವಾಸನೆಯನ್ನು ಉಂಟುಮಾಡುತ್ತದೆ ಹಾಗೂ ಕ್ರಮೇಣ ಈ ಅಂಶಗಳು ಅದರ ಕಾರ್ಯ ಸಾಮರ್ಥ್ಯದ ಮೇಲೂ ಪರಿಣಾಮ ಬೀರಲು ಆರಂಭವಾಗುತ್ತದೆ. ಚಿಂತಿಸ ಬೇಡಿ, ವಾಷಿಂಗ್ ಮಶಿನ್‌ ಅನ್ನು ಸ್ವಚ್ಛಗೊಳಿಸುವುದು ಕಷ್ಟದ ಕೆಲಸವೇನು ಅಲ್ಲ. ಇಲ್ಲಿವೆ ಕೆಲವು ಟಿಪ್ಸ್‌ಗಳು: * ವಾಷಿಂಗ್ ಮಶಿನ್‌‌ಗೆ ಅದರ ಗರಿಷ್ಟ ಸಾಮರ್ಥ್ಯದಷ್ಟೂ ಬಿಸಿನೀರನ್ನು ತುಂಬಿಸುವ ಮೂಲಕ ಕ್ಲೀನಿಂಗ್ ಆರಂಭಿಸಿ. * ನಂತರ ಅದಕ್ಕೆ ವೈಟ್‌ ವಿನೆಗರ್ ಅಥವಾ ನಿಂಬೆ ರಸವನ್ನು ಸೇರಿಸಿ (ಸುಮಾರು 1-2 ಲೋಟಗಳ ವರೆಗೆ). ಬೇಕಿಂಗ್ ಸೋಡವನ್ನು ಸಹ ಸೇರಿಸಬಹುದು. ನಂತರ ವಾಷಿಂಗ್ ಮಶಿನ್‌ ಚಾಲೂ ಮಾಡಿ. ಈ ಹಂತ ಪೂರ್ಣವಾದ ನಂತರ ಅದರಲ್ಲಿ ಶೇಖರಗೊಂಡ ಕೊಳೆ ಮತ್ತು ಸೋಪಿನ ಅಂಶ ಮಾಯವಾಗುತ್ತದೆ. * ಪೇಪರ್ ಅಥವಾ ಬಟ್ಟೆಯ ಟವಲ್‌ನಿಂದ ವಾಷಿಂಗ್ ಮಶಿನ್‌ ಒಳ ಭಾಗವನ್ನು ಒರೆಸಿ. ಇದರಿಂದ ಉಳಿದ ಅಲ್ಪ ಸ್ಪಲ್ಪ ಕೊಳೆ-ಕಲ್ಮಶವೂ ಹೋಗುತ್ತದೆ. * ನಂತರ ಮತ್ತೊಮ್ಮೆ ವಾಷಿಂಗ್ ಮಶಿನ್‌ ಅನ್ನು ಓಡಿಸಿ, ಈ ಬಾರಿ ತಣ್ಣೀರನ್ನು ಒಳಸಿ. *ನಂತರ ಒದ್ದೆ ಬಟ್ಟೆಯಿಂದ ಹೊರಭಾಗವನ್ನು ಓರೆಸಿ. ಈಗ ನಿಮ್ಮ ವಾಷಿಂಗ್ ಮಶಿನ್‌ ಸಂಪೂರ್ಣ ಕ್ಲೀನ್ ಹಾಗೂ ಇನ್ನೂ ಹೆಚ್ಚು ಬಟ್ಟೆಗಳನ್ನು ಕ್ಲೀನ್ ಮಾಡಲು ಸಿದ್ಧ. ಈ ಪ್ರಕ್ರಿಯೆಯನ್ನು ಅವಶ್ಯಕತೆ ಕಂಡು ಬಂದಾಗಲೇಲ್ಲಾ ಪುನರಾವರ್ತಿಸಿ. ವಾಷಿಂಗ್ ಮಶಿನ್‌‌ನ ಪ್ರತಿ ಉಪಯೋಗದ ನಂತರ ಅದರ ಮುಚ್ಚಳವನ್ನು ತೆರೆದಿಟ್ಟು ಅದರ ಒಳಭಾಗವನ್ನು ಒಣಗಲು ಅವಕಾಶಿಸಿ ಹಾಗೂ ನಿಮ್ಮ ವಾಷಿಂಗ್ ಮಶಿನ್‌ನ್ನ ದುರ್ಗಂಧವನ್ನು ತಡೆಗಟ್ಟಿ.

ಮಳೆಗಾಲಕ್ಕಾಗಿ ಗಾರ್ಡನಿಂಗ್ ಟಿಪ್ಸ್‌ಗಳು

ಮಳೆಗಾಲ ಬಂತೆಂದರೆ ಸಾಕು. ತಂಪಾದ ಹೆಚ್ಚು ತೇವಾಂಶ, ಬಿಸಿಲಿನ ತಾಪವಿಲ್ಲದ ಹವಾಗುಣ ಗಿಡ-ಮರಗಳಿಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಸಸ್ಯ ಪ್ರೇಮಿಗಳಿಗೆ ತಮ್ಮ ಮನೆಯ ಮುಂದಿನ ಗಾರ್ಡನ್‌ನಲ್ಲಿ ಇನ್ನೂ ಹೆಚ್ಚು ಹೆಚ್ಚು ಗಿಡ ಮರಗಳನ್ನೂ ನೆಡೆಲು ಸರಿಯಾದ ಕಾಲ. ಮಳೆಗಾಲದ ಸಮಯದಲ್ಲಿ ನಿಮ್ಮ ಹೂದೋಟದ ಕಾಳಜಿಗಾಗಿ ಕೆಲವು ಮುಖ್ಯ ಅಂಶಗಳನ್ನು ಪಾಲಿಸಿದರೆ ಸಾಕು ವರ್ಷವೀಡಿ ಸುಂದರವಾದ ಗಾರ್ಡನ್‌ನನ್ನು ಅಸ್ವಾದಿಸಬಹದು. ಮಾನ್ಸೂನ್ ಮರ ಗಿಡಗಳನ್ನು ನೆಡಲು ಅತ್ಯಂತ ಉತ್ತಮವಾದ ಕಾಲ. ಹೆಚ್ಚಿನ ತೇವಾಂಶ, ಮೋಡ ಹಾಗೂ ಮಳೆಯಿಂದ ಹೊಸದಾಗಿ ನೆಟ್ಟ ಗಿಡಗಳು ಸುಲಭವಾಗಿ ಚಿಗುರುತ್ತವೆ. ಎಲ್ಲಾ ರೀತಿಯ ಮರಗಿಡಗಳನ್ನು ನೆಡಲು ಮಳೆಗಾಲ ಅತಿ ಸೂಕ್ತವಾದ ಸಮಯ. ಈ ಕಾಲದಲ್ಲಿ ಗಿಡ-ಮರಗಳನ್ನು ನೆಡುವುದರಿಂದ ಕೆಲಸ ಹಾಗೂ ಗಿಡಗಳ ನಿರ್ವಹಣೆ ಎರಡೂ ಕಡಿಮೆಯಾಗುತ್ತದೆ. ಆದರೆ ನೀರು ಸರಿಯಾಗಿ ಬೇರಿನ ಮೂಲವನ್ನು ತಲುಪಿ, ಬೇರುಗಳನ್ನು ಸಂಪೂರ್ಣವಾಗಿ ಹೈಡ್ರೇಟು ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪಾಟ್‌ಗಳಲ್ಲಿ ಗಿಡಗಳನ್ನು ನೆಡುವ ಮೊದಲು ಹೂವಿನ ಕುಂಡಗಳಿಗೆ ನೀರು ಸೋರಿ ಹೋಗುವಷ್ಟೂ ನೀರು ಹಾಕಿ ಪರೀಕ್ಷಿಸಿ. ಕೈ ತೋಟ ಅಥವಾ ಕಾಪೌಂಡ್‌ನಲ್ಲಿ ಉತ್ತಮವಾದ ಚರಂಡಿ ವ್ಯವಸ್ಥೆ ಅಗತ್ಯ. ನಿಮ್ಮ ಗಾರ್ಡನ್‌ನ ನೀರಿನ ಹರಿಯುವಿಕೆಯನ್ನು ಪರೀಕ್ಷಿಸಿ. ಗಿಡ-ಮರಗಳ ಬುಡಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಿ. ಹರಿಯದೆ ನಿಂತ ನೀರಿನಿಂದ ಗಿಡಗಳು ಸುಲಭವಾಗಿ ಕೊಳೆಯುತ್ತವೆ. ಹಾಗೂ ಹಾಗೆ ನೀರು ನಿಂತ ಸ್ಥಳಗಳು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗಿ ಮಾರ್ಪಡುತ್ತವೆ. ಗಿಡದ ಕೆಳಗೆ ಬೀಳುವ ಹಳದಿ ಎಲೆಗಳನ್ನೆಲ್ಲಾ ಗಿಡದ ಸುತ್ತ ಹರಡಿ ಅದರ ಮೇಲೆ ಒಂದು ಪದರ ಮಣ್ಣು ಮುಚ್ಚಿ. ಇದು ಒಳ್ಳೆ ಕಾಂಪೋಸ್ಟ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಎರೆಹುಳಗಳನ್ನು ಪ್ರೋತ್ಸಾಹಿಸಿ. ಇದು ನಿಮ್ಮ ಸಾಕಷ್ಟು ಕೆಲಸವನ್ನು ಕಡಿಮೆ ಮಾಡುವುದರ ಜೊತೆಗೆ ಗಿಡಗಳಿಗೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ. ಮಳೆಗಾಲದಲ್ಲಿ ಮರ-ಗಿಡಗಳಿಗೆ ಕೀಟಗಳ ಹಾವಳಿ ಹೆಚ್ಚು. ಯಾವುದೇ ರೀತಿಯ ಕೀಟನಾಶಕಗಳ ಸಿಂಪಡಣೆ, ಮಳೆಯಿಂದ ಹೆಚ್ಚು ಪರಿಣಾಮಕಾರಿಯಾಗದು ಹಾಗೂ ಸಿಂಪಡಿಸಿದ ಕೀಟನಾಶಕವು ಮಳೆ ನೀರಿನ ಮೂಲಕ ಇಡಿ ತೋಟದಲ್ಲಿ ಹರಡುತ್ತದೆ. ಹೂದೋಟಗಳಲ್ಲಿ ಕಾಣಿಸಿಕೊಳ್ಳುವ ಜೇಡ, ಕಪ್ಪೆ, ಇರುವೆಗಳನ್ನು ನಾಶಮಾಡಬೇಡಿ. ಇವುಗಳು ಕೀಟಗಳ ಉಪದ್ರವ ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗುತ್ತವೆ. ಹಾಗೇ ಮಳೆಗಾಲದಲ್ಲಿ ನೆದುವ ಗಿಡಗಳ ಅಯ್ಕೆ ಕೂಡ ಮುಖ್ಯ. ಗುಲಾಬಿ, ದಾಸವಾಳ, ಮಲ್ಲಿಗೆ, ಡೇರೆ, ಲಿಲ್ಲಿ, ಗ್ಲಾಡಿಯೊಲಸ್‌ಗಳನ್ನು ಅಯ್ದು ಕೊಳ್ಳಬಹುದು. ಹಾಗೆ ಜೀನಿಯಾ, ಚೆಂಡು ಹೂವು, ಕಾಕ್ಸ್ ಕುಂಬ್‌ಗಳ ಗೂವಿನ ಜೀಜ ಹಾಕಲು ಮಳೆಗಾಲ ಅತಿಯಾಗಿ ಹೊಂದುವ ಸಮಯ. ಆದರೆ ಹೂವಿನ ಬೀಜಗಳು ನೀರಿನಲ್ಲಿ ಕೊಚ್ಚಿಹೋಗದ ಹಾಗೆ ಕಾಳಜಿ ವಹಿಸಿ. ಇನ್ನೂ ಮಾವು, ಸೇಬು, ಕಿತ್ತಳೆ, ಮುಸುಂಬಿ, ನಿಂಬೆ ಮುಂತಾದ ಹಣ್ಣಿನ ಗಿಡಗಳನ್ನೂ ಸಹ ನೆಡಬಹುದು. ಇವುಗಳೊಂದಿಗೆ ಸೌತೆಕಾಯಿ, ಬೀನ್ಸ್‌ಗಳಂತಹ ತರಕಾರಿಗಳನ್ನು ಬೆಳೆಯಲು ಆರಿಸಿಕೊಳ್ಳಬಹುದು. ಮಳೆಗಾಲಕ್ಕೆ ಸೂಕ್ತವಾದ ಗಿಡ ಮರಗಳ ಬಗ್ಗೆ ತಙ್ಞರಿಂದ ಮಾಹಿತಿ ಪಡೆಯಿರಿ. ಮಳೆಗಾಲವು ಹೊಸ ಮರ-ಗಿಡಗಳನ್ನು ನೆಡೆವುದರ ಜೊತೆಗೆ , ಹೂದೋಟದ ಹಳೆ ಗಿಡಗಳ ಆರೈಕೆಗೂ ಅತ್ಯಂತ ಪ್ರಶಸ್ತ ಸಮಯ. ದಾಸವಾಳ, ಗುಲಾಬಿ, ಮಲ್ಲಿಗೆ ಮುತಾಂದ ಗಿಡಗಳ ಕೊಂಬೆಗಳನ್ನು ಕತ್ತರಿಸಿ, ಟ್ರೀಮ್ ಮಾಡಿ. ಮರ-ಗಿಡಗಳ ಬುಡದ ಮಣ್ಣನ್ನು ಕೊಚ್ಚಿ, ಗೊಬ್ಬರ ನೀಡಿ. ನಂತರ ಅದರ ಮೇಲೆ ಮಣ್ಣು ಹರಡಿ. ಇಲ್ಲವೇ ಮರ ಗಿಡಗಳ ಹಳೆಯ ಎಲೆಗಳನ್ನು ಹಾಕಿ ಮಣ್ಣು ಮುಚ್ಚಿ. ಇದು ಗಿಡಗಳಿಗೆ ಉತ್ತಮ ಪೋಷಕಾಂಶವನ್ನು ಒದಗಿಸಿ ಬೆಳವಣಿಗೆ ಸಹಾಯವಾಗುತ್ತದೆ. ಪಾಟ್‌ಗಳಲ್ಲಿರುವ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಹೊಸ ಮಣ್ಣು ಗೊಬ್ಬರ ಹಾಕಿ ರೀ-ಪಾಟ್ ಮಾಡಿ. ಮನೆಯ ಒಳಗೆ ಇರಿಸಿದ ಪಾಠ್‌ಗಳನ್ನು ಮಳೆಯಲ್ಲಿ ಸ್ಪಲ್ಲ ಕಾಲ ಇಡಿ. ಗಿಡಗಳ ಬೆಳವಣಿಗೆ ಹೆಚ್ಚು ಉಪಯುಕ್ತ. ಇದರಿಂದ ಗಿಡಗಳು ಸ್ವಾಭಾವಿಕವಾಗಿ ನೀರು ಪಡೆಯುತ್ತವೆ. ಸರಳವಾದ ಟಿಪ್‌ಗಳೊಂದಿಗೆ ಈ ಮಳೆಗಾಲದಲ್ಲಿ ಗಾರ್ಡನಿಂಗ್‌ ಅನ್ನೂ ಎಂಜಾಯಿ ಮಾಡಿ ಹಾಗೂ ನಿಮ್ಮ ಕನಸಿನ ಹೂದೋಟ ಪಡೆಯಿರಿ. (ಜೂನ್ 28 2011ರ ಕನ್ನಡ ಪ್ರಭ ಪತ್ರಿಕೆಗಾಗಿ ಬರೆದ ಬರಹ.)

ಬುಕ್ ಸ್ಟ್ಯಾಂಡ್‌









ಒಂದು ಬುಕ್ ಸ್ಟ್ಯಾಂಡ್‌ ಇಲ್ಲದ ಮನೆ ಪರಿಪೂರ್ಣ ಅನ್ನಿಸುವುದ್ದಿಲ್ಲ. ಬುಕ್ ಸ್ಟ್ಯಾಂಡ್‌ನ ಹೊರತಾಗಿ, ನಮ್ಮ ಪುಸ್ತಕಗಳು ನೆಲ, ಹಾಸಿಗೆ , ಟೇಬಲ್, ಅಲ್ಲಿ ಇಲ್ಲಿ ಎಲ್ಲಾ ಕಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಬುಕ್ ಶೆಲ್ಫ್‌ಗಳು ಅಥವಾ ಬುಕ್ ಸ್ಟ್ಯಾಂಡ್‌ಗಳು ನಮ್ಮ ಪುಸ್ತಕಗಳು, ಮ್ಯಾಗಜೀನ್‌ಗಳನ್ನು ವ್ಯವಸ್ಥಿತವಾಗಿ ಮತ್ತು ಕಣ್ಣಿಗೆ ಮುದ ನೀಡುವ ಹಾಗೆ ಜೋಡಿಸಿಡಲು ಸುಲಭವಾಗಿ ಅವಕಾಶ ನೀಡುತ್ತದೆ. ಇವುಗಳು ನಮ್ಮ ಮನೆಯಲ್ಲಿ ಕಾರ್ಯರೂಪಕ ಹಾಗೂ ಅಲಂಕಾರಿಕ ಅಂಶಗಳಾಗಿ ಸಹ ಸೇವೆ ಸಲ್ಲಿಸುತ್ತವೆ. ಒಂದು ಸರಿಯಾಗಿ ಸಜ್ಜುಗೊಳಿಸಿದ ಬುಕ್ ಕೇಸ್ ಮನೆಯ ಅಲಂಕಾರವನ್ನು ಹೆಚ್ಚಿಸುತ್ತದೆ. ಬುಕ್‍ ಸ್ಟ್ಯಾಂಡ್‌ಗಳು ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವಲ್ಲಿ ಮುಖ್ಯ ಪಾತ್ರವಹಿಸುವುದ್ದಲ್ಲದೇ, ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ಮಕ್ಕಳ ಕೋಣೆಯಲ್ಲಿ ಬುಕ್‌ ಸ್ಟ್ಯಾಂಡ್‌ ಇರಿಸುವುದರಿಂದ ಅವರ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಇಡುವುದನ್ನು ತಪ್ಪಿಸುವುದಲ್ಲದೆ, ಅದು ಅವರಿಗೆ ವ್ಯವಸ್ಥಿತವಾಗಿರುವುದನ್ನು ಸಹ ಕಲಿಸುತ್ತದೆ. ಪುಸ್ತಕಗಳು ಅತಿ ಅಮೂಲ್ಯವಾದವು, ಮತ್ತು ಮಕ್ಕಳು ಅವುಗಳನ್ನು ಪುಸ್ತಕದ ಸ್ಟ್ಯಾಂಡ್‌ಗಳಲ್ಲಿ ಇಡುವುದನ್ನು ಒಮ್ಮೆ ರೂಡಿಸಿ ಕೊಂಡರೆ, ಆ ಅಭ್ಯಾಸವನ್ನು ಅವರ ಮುಂದಿನ ಜೀವನದಲ್ಲೂ ಸಹಾಯವಾಗುತ್ತದೆ. ಮಾರುಕಟ್ಟೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ವಿನ್ಯಾಸದ ಬುಕ್‌ ಸ್ಟ್ಯಾಂಡ್‌ಗಳು ದೊರೆಯುತ್ತದೆ. ನಿಮ್ಮ ಮಕ್ಕಳಿಗಾಗಿ ಗೋಡೆಗೆ ಬುಕ್‌ ಸ್ಟ್ಯಾಂಡ್‌ ಅನ್ನು ಅಳವಡಿಸುವುದಾದರೆ, ಅತಿ ಎತ್ತರದಲ್ಲಿರದಂತೆ ನೋಡಿಕೊಳ್ಳಿ. ಮಗುವಿನ ಕೈಗೆ ಸಿಗುವ ಹಾಗೆ ಇದ್ದರೆ ಒಳ್ಳೆಯದು. ಮಕ್ಕಳು ತುಂಬಾ ಸಣ್ಣವರಾಗಿದ್ದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನೆಲದ ಮೇಲಿಡುವ ಬುಕ್ ಸ್ಟ್ಯಾಂಡ್‌ಗಳು ಉತ್ತಮ. ಈಗ ಈ ಬುಕ್ ಸ್ಟ್ಯಾಂಡ್‌, ಬುಕ್ ಶೆಲ್ಫ್ ಅಥವಾ ಬುಕ್‌ ಸ್ಟ್ಯಾಂಡ್‌ಗಳು ಬರಿ ಮರಕ್ಕೆ ಸೀಮಿತವಾಗಿರತ್ತದೆ. ಹಲವು ಮೂಲವಸ್ತುಗಳಲ್ಲಿ ಲಭ್ಯವಿದೆ. ಗ್ಲಾಸು, ಹಲವು ಬಗೆಯ ಮೆಟಲ್‌ಗಳು ಹಾಗೂ ಮರಗಳಿಂದ ತಯಾರಾದ ಬುಕ್‌ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ದೊರೆಯುವ ಮೂಲಕ ಮರದ ಸಾಂಪ್ರದಾಯಿಕ ಬುಕ್‌ ಸ್ಟ್ಯಾಂಡ್‌ಗಳ ಪರಿಕಲ್ಪನೆಯನ್ನೇ ಬದಲಿಸಿದೆ ಎಂದರೆ ತಪ್ಪಾಗಲಾರದು. ಆದರೆ ಮರದ ಬುಕ್ ಸ್ಟ್ಯಾಂಡ್‌ಗಳು ಯಾವುದೇ ಗೃಹಾಲಂಕರಣಕ್ಕೆ ಹೊಂದುತ್ತವೆ. ಇವುಗಳು ವಿಧ ವಿಧವಾದ ಮರ ಮತ್ತು ಬಣ್ಣಗಳಲ್ಲಿ ದೊರೆಯುತ್ತದೆ. ಈ ಮರದ ಸ್ಟ್ಯಾಂಡ್‌ಗಳು ವಿವಿಧ ವಿನ್ಯಾಸ ಹಾಗೂ ಹಲವು ಗಾತ್ರಗಳಲ್ಲಿ ಲಭ್ಯ. ವಿನ್ಯಾಸವು ಒಂದರಿಂದ ಒಂದಕ್ಕೆ ಭಿನ್ನವಾಗಿರುತ್ತವೆ. ಪುಸ್ತಕದ ಸ್ಟ್ಯಾಂಡ್‌ಗಳನ್ನು ಬೆಲೆಬಾಳುವ ಮರಗಳಾದ ಬೀಟೆ, ಸಾಗವಾನಿ, ತೇಗ ಇತ್ಯಾದಿಗಳಲ್ಲಿ ಸಹ ಮಾಡಲಾಗುತ್ತದೆ. ಪುಸ್ತಕಗಳು, ಮ್ಯಾಗಜೀನ್‌ಗಳು, ಪೇಪರ್‌‍ಗಳ ಸಂಗ್ರಹಣೆಯ ಗಾತ್ರದ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮನೆಯ ಒಳಾಂಗಣಕ್ಕೆ ಹೊಂದುವ ಹಾಗೆ ನೀವು ಬುಕ್ ಸ್ಟ್ಯಾಂಡ್ ಅಥವಾ ಸ್ಟ್ಯಾಂಡ್‌ಗಳ ವಿನ್ಯಾಸ ಮತ್ತು ಬುಕ್ ಸ್ಟ್ಯಾಂಡ್ ಅಥವಾ ಸ್ಟ್ಯಾಂಡ್‌ïಗಳ ಮೂಲವಸ್ತಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬುಕ್‌ ಸ್ಟ್ಯಾಂಡ್ ಅನ್ನು ಮಾಡಿಸುವಾಗ ಅಥವಾ ಕೊಳ್ಳುವಾಗ ಯಾವ ರೀತಿಯದು ನಿಮಗೆ ಅತ್ಯಂತ ಉಪಯುಕ್ತ ಎಂಬುದನ್ನು ಗಮನಹರಿಸುವುದು ಸೂಕ್ತ. ಹಾಗೂ ಹಲವು ಅಂಶಗಳನ್ನು ಗಮನದಲ್ಲಿರಿಸಿ ಕೊಳ್ಳುವುದು ಕೂಡ ಅವಶ್ಯಕ. ತಮ್ಮ ಮನೆಯ ಅಂದಕ್ಕೆ ಹೆಚ್ಚು ಒತ್ತು ಕೊಡುವರು ಕೆತ್ತನೆಗಳನ್ನು ಹೊಂದಿದ ಅಲಂಕಾರಿಕ ಬುಕ್‌ ಸ್ಟ್ಯಾಂಡ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದು. ಹಾಗೆಯೇ ಉದ್ದನೆಯ, ಮೂಲೆಯ ಬುಕ್ ಸ್ಟ್ಯಾಂಡ್‌ಗಳು ಅಥವಾ ಬಿಲ್ಟ್-ಇನ್ ಬುಕ್ ಸ್ಟ್ಯಾಂಡ್ ಕಡಿಮೆ ಜಾಗಯಿರುವ ಮನೆಗಳಿಗೆ ಸೂಕ್ತವಾಗಿ ಹೊಂದುತ್ತದೆ. ಗೋಡೆ ಅಥವಾ ಯಾವುದೇ ವಸ್ತುವಿನಲ್ಲಿ ಆಡಕವಾಗಿರುವ (ಬಿಲ್ಟ್-ಇನ್) ಬುಕ್ ಶೆಲ್ಫ್‌ಗಳು ಅತಿ ಹೆಚ್ಚು ಸ್ಥಳ ಉಳಿತಾಯಕವಾಗಿ ಕೆಲಸ ಮಾಡುತ್ತದೆ. ಈ ರೀತಿಯ ಬುಕ್ ಶೆಲ್ಫ್‌ಗಳು ಕಡಿಮೆ ಸ್ಥಳವನ್ನು ಆಕ್ರಮಿಸಿಕೊಳ್ಳುವುದರಿಂದ ಕಡಿಮೆ ಸ್ಥಳವನ್ನು ಹೊಂದಿರುವ ವಾಸಸ್ಥಳಗಳಿಗೆ ಹೊಂದುತ್ತದೆ. ಇವು ಶೇಖರಣಾ ಸ್ಥಳವನ್ನು ಉಳಿಸುವುದರೊಂದಿಗೆ ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಬಿಲ್ಟ್-ಇನ್ ಬುಕ್ ಕೇಸ್‌ಗಳು ಲಭ್ಯವಿವೆ. ತೆರೆದ ಬುಕ್ ಸ್ಟ್ಯಾಂಡ್‌ಗಳನ್ನು ಕರ್ಟನ್ ಬಳಸಿ ಅಥವಾ ಬಾಗಿಲುಗಳನ್ನು ಅಳವಡಿಸಿ ಮುಚ್ಚಲು ಸಾಧ್ಯ. ಹಾಗೆ ಬಾಗಿಲಿರುವ ಬುಕ್ ಸ್ಟ್ಯಾಂಡ್ ಅಥವಾ ಶೆಲ್ಫ್‌ಗಳಲ್ಲಿ ಪುಸ್ತಕಗಳ ಮೇಲೆ ಧೂಳು ಕೂರುವ ಸಂಭವ ಕಡಿಮೆ ಹಾಗೂ ಇದು ಪುಸ್ತಕದ ಸುರಕ್ಷತೆಯ ದೃಷ್ಟಿಯಿಂದ ಸಹ ಅತಿ ಹೆಚ್ಚು ಸಹಕಾರಿ. ನಿಮ್ಮ ಮನೆಯಲ್ಲಿ ಒಳ್ಳೆಯ ಬುಕ್ ಸೇಲ್ಫ್‌ ಅನ್ನು ಹೊಂದಲು ನೀವು ಹೆಚ್ಚು ಹಣವನ್ನು ಖರ್ಚುಮಾಡುವ ಅವಶ್ಯಕತೆಯೇನು ಇಲ್ಲ. ನಿಮ್ಮ ಮನೆಯಲ್ಲಿ ಖಾಲಿ ಗೋಡೆ ಇದ್ದರೆ ಸಾಕು. ಕೆಲವು ಅರೆಗಳನ್ನು ಜೋಡಿಸುವುದಷ್ಟೇ ನೀವು ಮಾಡ ಬೇಕಾಗಿರುವುದು. ಎಷ್ಟು ಅರೆಗಳು ಬೇಕು ಎಂಬುದು ನಿಮ್ಮ ಮನೆಯ ಗೋಡೆಯ ಸ್ಥಳಾವಕಾಶ ಮತ್ತು ನೀವು ಹೊಂದಿರುವ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ. * ಮೊದಲಿಗೆ ನಿಮ್ಮ ಪುಸ್ತಕಗಳನ್ನು ಗಾತ್ರಗಳಿಗೆ ಅನುಗುಣವಾಗಿ ಜೋಡಿಸಿ ಕೊಳ್ಳಿ, ಇದರಿಂದ ಅರೆಗಳ ನಡುವೆ ಇರ ಬೇಕಾದ ಅಂತರ ತಿಳಿಯಲು ಸಹಾಯವಾಗುತ್ತದೆ. *ನೆಲದಿಂದ ಎಷ್ಟು ಎತ್ತರದಲ್ಲಿ ಕೊನೆಯ ಅರೆ ಇರಬೇಕು ಎಂಬುದನ್ನು ಅಳತೆ ಮಾಡಿಕೊಳ್ಳಿ. * ಪ್ರತಿ ಅರೆಯಲ್ಲಿಡುವ ಅತಿ ದೊಡ್ಡ ಪುಸ್ತಕವನ್ನು ಅಳತೆ ಮಾಡಿ ಕೊಳ್ಳಿ, ಅದಕ್ಕಿಂತ ಮೂರು ಇಂಚು ಹೆಚ್ಚು ಸ್ಥಳವನ್ನು ಅರೆಗಳ ನಡುವೆ ಬಿಡಿ. ಪುಸ್ತಕಗಳನ್ನು ತೆಗೆಯಲು ಸುಲಭವಾಗುತ್ತದೆ. * ಗೋಡೆಗೆ ಜೋಡಿಸಿದ ಅರೆಗಳು ಸ್ಥಿರವಾಗಿದೆ ಎಂದು ಖಚಿತ ಪಡಿಸಿ ಕೊಳ್ಳಿ ಹಾಗೂ ನೀವು ಬಯಸಿದಲ್ಲಿ ಬಣ್ಣ ಹಚ್ಚಿ, ಬುಕ್ ಸ್ಟ್ಯಾಂಡ್‌ಗಳನ್ನು ಅಂದಗೊಳಿಸಿಕೊಳ್ಳಿ. ಈ ಸರಳವಾದ ಅಂಶಗಳನ್ನು ಅನುಸರಿಸಿ ಕಡಿಮೆ ಖರ್ಚಿನಲ್ಲಿ ಪುಸ್ತಕದ ಸ್ಟ್ಯಾಂಡ್‌ನ್ನು ಹೊಂದಲು ಸಾಧ್ಯ. ಸುಂದರವಾದ ಬುಕ್‌ ಕೇಸ್‌ ಹೊಂದುವುದಷ್ಟಕ್ಕೆ ಮುಖ್ಯವಲ್ಲ, ಅದರಲ್ಲಿ ಕಲಾತ್ಮಕವಾಗಿ ಪುಸಕ್ತಗಳನ್ನು ಜೋಡಿಸುವುದು ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರು ಬುಕ್‌ ಸ್ಟ್ಯಾಂಡ್ ಎಂದರೆ ಕೇವಲ ವಸ್ತುಗಳ ಸಂಗ್ರಹಣೆಗೆ ಮಾತ್ರ ಸೀಮಿತ ಎಂದು ಯೋಚಿಸುತ್ತಾರೆ, ಎಲ್ಲಾ ರೀತಿಯ ವಸ್ತುಗಳನ್ನು ಸುಮ್ಮನೆ ಅದರಲ್ಲಿ ತುಂಬಿರುತ್ತಾರೆ. ಬುಕ್ ಸ್ಟ್ಯಾಂಡ್‌ಗಳಲ್ಲಿ ವ್ಯವಸ್ಥಿತವಾಗಿ ಪುಸ್ತಕ ಜೋಡಿಸಲು ಸ್ಪಲ್ಪ ಗಮನ ಹರಿಸಿದ್ದರೆ ಸಾಕು ಅದು ಸಹ ಮನೆಯ ಇತರ ಪಿಟೋಪಕರಣ ಹಾಗೆ ಮನೆಯ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬುಕ್‌ ಸ್ಟ್ಯಾಂಡ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪುಸ್ತಕಗಳನ್ನು ತುರುಕ ಬೇಡಿ. ಅಕರ್ಷಕವಾಗಿರದ ಹಳೆಯ ಪುಸ್ತಕಗಳನ್ನು ತೆರೆದ ಕಪಾಟುಗಳಲ್ಲಿ ಇಡ ಬೇಡಿ. ಪುಸ್ತಗಳನ್ನು ಲಂಬವಾಗಿ ಅಥವಾ ಅಡ್ಡವಾಗಿ, ಎಲ್ಲಾ ಪುಸ್ತಕಗಳು ಒಂದೇ ಕಡೆ ಮುಖಮಾಡಿರುವ ಹಾಗೆ ಜೋಡಿಸಿ. ಒಂದೇ ರೀತಿಯ, ಬಣ್ಣದ, ಗಾತ್ರದ ಪುಸ್ತಕಗಳನ್ನು ಒಟ್ಟಿಗೆ ಇರಿಸಿದ್ದಲ್ಲಿ ಹೆಚ್ಚು ಅಕರ್ಷಕವಾಗಿ ಕಾಣುತ್ತದೆ. ಲೇಖಕರು, ವಿಷಯ, ಶೀರ್ಷಿಕೆಗಳ ಪ್ರಕಾರವಾಗಿ ಪುಸ್ತಕಗಳನ್ನು ಜೋಡಿಸಿದಲ್ಲಿ ಉಪಯೋಗಕ್ಕೆ ಅನುಕೂಲವಾಗುವುದರ ಜೊತೆಗೆ ಮನಸ್ಸಿಗೆ ಸಹ ಮುದ ನೀಡುತ್ತದೆ. ನಿಮ್ಮ ಮನೆಯ ಆಕಾರ, ಗಾತ್ರ ಬಣ್ಣಗಳಿಗೆ ಸರಿಹೊಂದುವಂತಹ ವಿವಿಧ ಮೂಲವಸ್ತುಗಳ (ಮರ, ಕಬ್ಬಿಣ್ಣ, ಗಾಜು, ಇತ್ಯಾದಿ) ಪುಸ್ತಕದ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ನಿಮ್ಮ ಅಭಿರುಚಿ, ಹಣಕಾಸು, ಮನೆಗೆ ಹೊಂದುವ ಹಾಗೆ ಬುಕ್ ಸ್ಟ್ಯಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ರೀತಿಯ ವಿನ್ಯಾಸಗಳು ಹಾಗೂ ಮಾಹಿತಿಗಳು ಅಂತರ್ಜಾಲದಲ್ಲಿ ಧಾರಳವಾಗಿ ದೊರೆಯುತ್ತದೆ. (ಕನ್ನಡಪ್ರಭ ಪತ್ರಿಕೆಗಾಗಿ ಬರೆದ ಬರಹ. 2011 ರ ಜೂನ್ 21ರಂದು ಪ್ರಕಟವಾಗಿತ್ತು)

June 16, 2011

ಮನೆಯ ಮೇಲೊಂದು ತೋಟ - ರೂಫ್ ಗಾರ್ಡನ್

ಮನೆಯ ಮುಂದೆ ಒಂದು ಸುಂದರವಾದ ಗಾರ್ಡನ್ ಹೊಂದುವ ಆಸೆ ಯಾರಿಗೆ ತಾನೇ ಇರುವುದ್ದಿಲ್ಲ ಹೇಳಿ. ಬಣ್ಣ ಬಣ್ಣದ ತರಾವರಿ ಹೂ ಗಿಡಗಳಿಂದ ತುಂಬಿದ ಕೈ ತೋಟ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೂ ಮುದವನ್ನು ನೀಡುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮನೆಯ ಮುಂದೆ ಗಾರ್ಡನ್ ಹೊಂದಿರುವುದು ಮೊದಲು ಸರ್ವೇಸಾಮಾನ್ಯವಾಗಿತ್ತು. ಹಳ್ಳಿ ಇರಲಿ ಅಥವಾ ನಗರವಾಗಿರಲಿ ಮನೆಯ ಮುಂದೆ ಹೂ ಗಿಡಗಳನ್ನು ಬೆಳೆಸುವುದು ಗೃಹಣಿಯರ ಅಚ್ಚುಮೆಚ್ಚಿನ ಹವಾಸ್ಯವಾಗಿತ್ತು. ಆದರೆ ಈಗ ಸೀಮಿತ ಜಾಗದಲ್ಲಿ ಮನೆ, ಮನೆಯ ಮೇಲೆ ಮನೆಗಳು ಎಲ್ಲ ಕಡೆ ತಲೆ ಎತ್ತಿರುವುದರಿಂದ, ಮನೆಯ ಮುಂದೆ ಹೂದೋಟ ಕಂಡುಬರುವುದು ಬಹಳ ವಿರಳವಾಗಿದೆ. ಮನೆ ಮುಂದೆ ಜಾಗದ ಅಭಾವ, ಮಹಡಿ ಮೇಲೆ ಮನೆಗಳ ಕಾರಣಗಳು ಗಾರ್ಡನ್ ಪರಿಕಲ್ಪನೆಗೆ ಹೊಸ ದಿಕ್ಕನ್ನೇ ನೀಡಿದೆ ಎಂದರೆ ತಪ್ಪಲಾಗರದು. ಅದೇ ರೂಫ್ ಗಾರ್ಡನ್ ಅಥವಾ ಟೆರಸ್ ಗಾರ್ಡನ್ (ಮಾಳಿಗೆ ತೋಟ).

ಸುಮಾರು ೮-೧೦ ಘಂಟೆಗಳ ಕಾಲ ನಿತ್ಯ ವೈಯಕ್ತಿಕ ಮತ್ತು ವೃತ್ತಿಯ ಜಂಜಾಟಗಳನ್ನು ನಿರಂತರವಾಗಿ ನಿಭಾಯಿಸಿದ ನಂತರ, ದಿನದ ಕೊನೆಯಲ್ಲಿ ತೀವ್ರವಾಗಿ ಬಳಲಿರುವ ಸಮಯದಲ್ಲಿ ನಮ್ಮಲ್ಲಿ ಯಾವುದೇ ಚೈತನ್ಯ ಉಳಿದಿರುವುದ್ದಿಲ್ಲ. ಆಗ ನಾವು ಪ್ರಕೃತಿಯಿಂದ ಮಾತ್ರ ಸಮಾಧಾನವನ್ನು ಪಡೆಯಲು ಸಾಧ್ಯ. ಗಾರ್ಡನ್ ಯಾವಾಗಲೂ ರಿಲಾಕ್ಸ್ ಆಗಲು ಒಂದು ಉತ್ತಮ ಸ್ಥಳ, ಆದರೆ ನಗರದಲ್ಲಿ ಸ್ಥಳದ ಅಭಾವದಿಂದ ಮನೆಯ ಮುಂದೆ ತೋಟವನ್ನು ಹೊಂದುವುದು ಅಸಾಧ್ಯವಾಗಿದೆ.
ಈ ರೂಫ್ ಗಾರ್ಡನ್ ಕಾನ್ಸೆಪ್ಟ್ ಮನೆಯ ಮುಂದೆ ಕೈ ತೋಟ ಮಾಡಲು ಸ್ಥಳ ಅಭಾವವನ್ನು ಹೊಂದಿರುವವರಿಗಂತೂ ಒಂದು ವರದಾನವಾಗಿದೆ. ಮಾಳಿಗೆ ತೋಟ ನಿರ್ಮಿಸುವುದು ಜಾಲೆಜಿಂಗ್ ಆದರೂ ಇದರ ಪರಿಕಲ್ಪನೆ ಹೊಸದೇನು ಅಲ್ಲ. ಹಲವು ಶತಮಾನಗಳ ಹಿಂದಿನಿಂದಲ್ಲೂ ಕಂಡು ಬಂದ ಉದಾಹರಣೆಗಳಿವೆ. ಯುರೋಪಿಯನ್ನರು ಶತಮಾನಗಳಿಂದ ರೂಫ್ ಗಾರ್ಡನ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬಂದಿದ್ದಾರೆ. ಮನೆಯ ಮಾಳಿಗೆ ಮೇಲೆ ಗಾರ್ಡನ್ ಹೊಂದುವುದು ಈಗ ಯುರೋಪಿಯನ್ನರಿಗೆ ಮತ್ತು ಬರೀ ನಗರದ ಗಣ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ನಗರ ವಾಸಿಗಳು ತಮ್ಮ ಮನೆಯ ಛಾವಣಿಯ ಮೇಲೆ ಈ ವ್ಯವಸ್ಥೆಯನ್ನು ಹೊಂದಲು ಸಾಧ್ಯ. ಮನೆಯ ತಾರಸಿ ಈಗ ಹಪ್ಪಳ, ಸಂಡಿಗೆ, ಕಾಳು-ಕಡಿ, ಬಣ್ಣೆ ಒಣಿಗಿಸಲು ಮಾತ್ರ ಸೀಮಿತವಾಗಿಸ ಬೇಕಾಗಿಲ್ಲ. ಅದನ್ನು ಒಂದು ಸುಂದರವಾದ ಅಚ್ಚುಕಟ್ಟಾದ ತೋಟವನ್ನು ನಿರ್ಮಿಸುವುದು ನಿಮ್ಮ ಕೈಯಲ್ಲಿದೆ.

ತಮ್ಮ ಮನೆಯ ಥಾರಸಿಯ ಮೇಲೆ ಗಾರ್ಡನ್ ಹೊಂದ ಬಯಸುವರು ಕೆಲವು ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳುವುದು ಅವಶ್ಯಕ. ಪ್ರಥಮವಾಗಿ ತೋಟವನ್ನಾಗಿ ಮಾಡಬೇಕಾಗಿರುವ ಛಾವಣಿಯು ತೋಟದ ಭಾರವನ್ನು ತಡೆಯುವಷ್ಟು ಸುದೃಢವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎರಡನೆಯದಾಗಿ ಥಾರಸಿ ಅಥವಾ ಛಾವಣಿಯು ಇಳಿ ಜಾರನ್ನು ಹೊಂದಿರಬೇಕು ಮತ್ತು ಪರಿಣಾಮಕಾರಿ ಚರಂಡಿ ವ್ಯವಸ್ಥೆಯನ್ನು ಹೊಂದಿರಬೇಕು. ಹಾಗೆ ನಿಮ್ಮ ರೂಫ್ ಗಾರ್ಡನ್‌ನಲ್ಲಿ ಯಾವುದೇ ಸೋರಿಕೆ/ಬಿರುಕು ಇಲ್ಲವೆಂಬುದನ್ನು ಸಹ ಖಚಿತ ಪಡಿಸಿಕೊಳ್ಳಿ.

ರೂಫ್ ಗಾರ್ಡನ್ ಮಾಡುವ ಮುನ್ನ ಸರಿಯಾದ ಒಂದು ಯೋಜನೆಯನ್ನು ತಯಾರಿಸಿಕೊಂಡರೆ ಒಳ್ಳೆಯದು. ನಿಮ್ಮ ಮನೆಯ ಛಾವಣಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಸಿದ್ದ ಪಡಿಸಿ. ಗಿಡಗಳನ್ನು ನೆಡೆವ ಮುನ್ನ ಸಹ ಇದನ್ನು ಗಮನದಲ್ಲಿಟ್ಟು ಕೊಂಡು, ಹೂ, ಹಣ್ಣು ಹಾಗೂ ತರಕಾರಿ ಗಿಡಗಳನ್ನು ಸಮಾನವಾಗಿ ವಿಂಗಡಿಸಿ ಕೊಳ್ಳಿ. ಸಾಧ್ಯವಾದಷ್ಟೂ ಕಡಿಮೆ ತೂಕದ ಕುಂಡಗಳಾದರೆ ಒಳ್ಳೆಯದು. ಇನ್ನೂ ಗಿಡಗಳ ಆಯ್ಕೆ ಸಹ ಆಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಧೀರ್ಘಾವಧಿಯಲ್ಲಿ ಬೇರುಗಳು ಛಾವಣಿಯನ್ನು ಭೇದಿಸಿಕೊಂಡು ಹೋಗದೆ ಇರುವಂತಹ ಬೇರು ವ್ಯವಸ್ಥೆಯನ್ನು ಹೊಂದಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಜೊತೆಗೆ ವರ್ಷದ ಎಲ್ಲ ಕಾಲಕ್ಕೂ ಹೊಂದಿಕೆಯಾಗುವ ಸುಲಭವಾಗಿ ನಿಭಾಯಿಸ ಬಲ್ಲ ಹೂ ಗಿಡಗಳನ್ನು ಆರಿಸಿ ಕೊಳ್ಳುವುದು ಉತ್ತಮ. ಉದಾಹರಣೆಗೆ ಆಥೋರಿಯಂ, ಕಾರ್ನ್‌ನೇಶಿಯನ್, ಡೇಲಿಯಾ, ಕಾಸ್‌ಮೊಸ್, ಚೆಂಡು ಹೂವು, ಗುಲಾಬಿ, ಮಲ್ಲಿಗೆ ಇತ್ಯಾದಿ. ಹಾಗೆ ಸ್ಟ್ರಾಬೆರಿ, ದಾಳಿಂಬೆ, ಪೈನಾಪಲ್ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಲು ಸಾಧ್ಯ. ಬದನೆಕಾಯಿ, ಟೋಮೋಟೊ. ಮೆಣಸಿನಕಾಯಿ, ಸೊಪ್ಪು ಮತ್ತು ಮುಂತಾದವುಗಳನ್ನು ಸುಲಭವಾಗಿ ಬೆಳೆಯ ಬಹುದು.
ಸುಮಾರು ೧೫-೨೦ ಸೇ.ಮಿ ದಪ್ಪದ ಮಣ್ಣಿನ ಪದರ ಥಾರಸಿಯ ಮೇಲೆ ಗಿಡಗಳನ್ನು ಬೆಳಸಲು ಸಾಕಾಗುತ್ತದೆ. ಮಣ್ಣು, ಮರಳು ಮತ್ತು ಸೂಕ್ತ ಗೊಬ್ಬರದ ಉತ್ತಮ ಮಿಶ್ರಣ ಗಿಡಗಳನ್ನು ಬೆಳಸಲು ಅವಶ್ಯಕ. ಜೂನ್-ಜುಲೈ ತಿಂಗಳು ರಿಪಾಟ್ ಮಾಡಲು ಸರಿಯಾದ ಸಮಯ. ನಿಮ್ಮ ಮನೆಯ ಛಾವಣಿಯನ್ನು ಸುಂದರವಾದ ಗಾರ್ಡನ್‌ ಆಗಿ ಪರಿವರ್ತಿಸಲು ಇಷ್ಟೂ ಬೇಸಿಕ್ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಸಾಕು. ಛಾವಣಿಯ ತೋಟ ಚಿಕ್ಕದಾಗಿ ಚೊಕ್ಕವಾಗಿದರೆ ಸುಂದರವಾಗಿರುತ್ತದೆ.
ರೂಫ್ ಗಾರ್ಡನಿಂಗ್ ಬಗ್ಗೆ ಅಂತರ್‌ಜಾಲದಲ್ಲಿ ಸಾಕಷ್ಟೂ ಮಾಹಿತಿಗಳು ಲಭ್ಯವಿದೆ. ಹಲವು ವೆಬ್ ಸೈಟ್‌ಗಳು ಇದರ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತವೆ. ನಿಮ್ಮ ಮನೆಯ ಟೆರಸಿಗೆ ಹೊಂದುವ ಹಾಗೆ ಗಾರ್ಡನ್‌ನ ಪ್ಲಾನ್‌ನಿಂದ ಹಿಡಿದು ಅದಕ್ಕೆ ಸೂಕ್ತ ಗಿಡಗಳನ್ನು ನೆಡೆವ ವರೆಗಿನ ಎಲ್ಲಾ ಕೆಲಸವನ್ನು ಸರಾಗವಾಗಿ ನಿರ್ವಹಿಸುವ ವೃತ್ತಿಪರ ಲ್ಯಾಂಡ್‌ಸ್ಕೇಪಿಂಗ್ ಎಕ್ಸ್‌ಪರ್ಟ್‌‌ಗಳು ಸಹ ಮಾರುಕಟ್ಟೆಯಲ್ಲಿದ್ದಾರೆ.

ಮಾಳಿಗೆ ತೋಟ ಅಥವಾ ಟೆರೆಸ್ ಗಾರ್ಡನ್ ಕೇವಲ ಮನೆಯ ಅಂದ ಚೆಂದ ಅಥವಾ ಟೈಮ್ ಪಾಸ್ ಹವಾಸ್ಯಕ್ಕೆ ಸೀಮಿತವಾಗಿರದೆ, ಅದರ ಅನುಕೂಲಗಳು ಸಹ ಬಹಳ ಇವೆ. ಮೊದಲನೆಯದಾಗಿ ಈ ವ್ಯವಸ್ಥೆಯು ವಿಶೇಷವಾಗಿ ನಗರದ ಪ್ರದೇಶದಲ್ಲಿ ಪರಿಸರಕ್ಕೆ ಒಯಸಿಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಗಾಳಿಯ ಗುಣಮಟ್ಟವನ್ನು ಸುಧಾರಿಸಿವುದರೊಂದಿಗೆ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಗಾರ್ಡನ್‌ಗಳು ಕಟ್ಟಡವನ್ನು ತೀವ್ರವಾದ ಉಷ್ಣ ಮತ್ತು ತಂಡಿಯಿಂದ ತಡೆಯುತ್ತದೆ. ರೂಫ್ ಗಾರ್ಡನ್‌ಗಳು ನಗರದ ಆಹಾರ ಉತ್ಪಾದನೆಯನ್ನು ಸಹ ಪ್ರಮುಖವಾಗಿ ಬೆಂಬಲಿಸುತ್ತದೆ. ಇವುಗಳು ಮಳೆಯ ನೀರನ್ನು ಸಹ ಉಳಿಸುವಲ್ಲಿ ಸಹಾಯಕಾರಿಯಾಗಿದೆ. ಇವುಗಳ ಜೊತೆ ಈ ಛಾವಣಿ ತೋಟಗಳು ಪಕ್ಷಿಗಳು ಮತ್ತು ಕೀಟಗಳಿಗೆ ನೆಲಯನ್ನು ಒದಗಿಸುವ ಮೂಲಕ ಸ್ವಾಭಾವಿಕ ಆವಾಸವಾಗಿ ಕೆಲಸಮಾಡುತ್ತದೆ.
ಇನ್ನೂ ಮನೆ ಮುಂದೆ ಗಾರ್ಡನ್‌ಗೆ ಜಾಗವಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ನಿಮ್ಮ ಮನೆಯ ಛಾವಣಿಯನ್ನು ಒಂದು ಸುಂದರ ತೋಟವಾಗಿ ಮಾರ್ಪಡಿಸುವ ಬಗ್ಗೆ ಯೋಚಿಸಿ.


ಶಿವಮೊಗ್ಗದ ಸಂಜಯ್ ಕುಮಾರ್, ರೂಪ ದಂಪತಿಗಳಿಗೆ ಗಿಡಗಳ ಹುಚ್ಚು. ಆದರೆ ವಾಸ ಮಹಡಿ ಮನೆಯಲ್ಲಿ. ಈ ಹುಚ್ಚು ಅವರನ್ನು ರೂಫ್ ಗಾರ್ಡನಿಂಗ್ಗೆ ಮೊರೆ ಹೋಗಲು ಪ್ರೇರೆಪಿಸಿತು. ಮನೆ ಮುಂದೆ ಗಿಡಗಳನ್ನು ಬೆಳೆಸಲು ಸ್ಥಳದ ಅಭಾವದ ಕೊರತೆಯನ್ನು ಮೀರಿ ಇವರು ಇಂದು ತಮ್ಮ ಮನೆಯ ತಾರಸಿಯನ್ನೇ ಸುಂದರ ತೋಟವಾಗಿ ಮಾರ್ಪಡಿಸಿ ಕೊಂಡಿದ್ದಾರೆ. ಕೈಗಾರಿಕೋದ್ಯಮಿ ಸಂಜಯ್ ಕುಮಾರ್, ಹಾಗೂ ಅವರ ಪತ್ನಿ ರೂಪರ ನಿರಂತರ ಸ್ವಂತ ಪರಿಶ್ರಮದಿಂದ ಇಂದು ಅವರ ಮನೆಯ ಛಾವಣಿ ಒಂದು ಸುಂದರವಾದ ಗಾರ್ಡನ್ ಆಗಿದೆ. ಎಲ್ಲರ ಹಾಗೆ ಮೊದಲು ಖಾಲಿ ಬಿಟ್ಟಿದ ತಾರಸಿಗೆ ತೋಟದ ರೂಪ ಕೊಡಲು ಯೋಜಿಸಿದ್ದು ಮೊದಲಿಗೆ ವೆನಿಲ್ಲಾವನ್ನು ಬೆಳೆಯುವ ಪ್ರಯತ್ನದ ಮೂಲಕ. ಕೆಲವು ವರ್ಷಗಳ ಕಾಲ ಇವರು ಇದೇ ರೂಫ್ ಗಾರ್ಡನ್ನಲ್ಲಿ ಯಶಸ್ವಿಯಾಗಿ ವೆನಿಲ್ಲಾ ಬೆಳೆಯನ್ನು ಸಹ ಬೆಳೆದಿದ್ದಾರೆ ಎಂಬುದು ಉಲ್ಲೇಖಾರ್ಹ. ಸುಮಾರು 7-8 ವರ್ಷಗಳ ಹಿಂದೆ ಅದರ ಮೂಲಕ ಆರಂಭವಾದ ಅವರ ಪ್ರಯತ್ನ ಇಂದು ಮನೆಯ ಛಾವಣಿಯ ಸ್ವರೂಪವನ್ನೇ ಬದಲಾಯಿಸಿದೆ.
ಇವರ ಈ ಛಾವಣಿ ತೋಟದಲ್ಲಿ ತರ ತರದ ಗಿಡಗಳನ್ನು ನಾವು ಕಾಣಬಹುದು. ಇದು ಕೇವಲ ಹೂ ಗಿಡಗಳಿಗೆ ಮಾತ್ರ ಸೀಮಿತವಾಗಿರದೆ ಹಣ್ಣು ತರಕಾರಿ, ಸೊಪ್ಪುಗಳನ್ನು ಸಹ ಅವರ ಗಾರ್ಡನ್ನಲ್ಲಿ ಬೆಳೆಯುತ್ತಿದ್ದಾರೆ. ತರಕಾರಿ ಸಿಪ್ಪೆ, ಕಾಗದ ಹಾಗೂ ಇತರ ತಾಜ್ಯ ವಸ್ತುಗಳನ್ನು ಹಾಕಲು ತಾರಸಿಯ ಒಂದು ಮೂಲೆಯಲ್ಲಿ ಪ್ರತ್ಯೇಕ ತೊಟ್ಟಿಯನ್ನು ಹೊಂದಿದ್ದು, ಅದರಲ್ಲಿ ಎರೆಹುಳು ಸಾಕಣಿಕೆಯನ್ನು ಸಹ ಮಾಡಿರುವುದು ಇವರ ವಿಶೇಷ. ಅದೇ ಗೊಬ್ಬರವನ್ನು ಗಿಡಗಳನ್ನು ಉಪಯೋಗಿಸುವ ಮೂಲಕ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. ಹಾಗೂ ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಗಿಡಗಳ ಮೇಲೆ ಶೆಡ್ ನೆಟ್ ಹಾಸಿದ್ದಾರೆ. ಗುಲಾಬಿ, ದಾಸವಾಳ, ಮಲ್ಲಿಗೆ, ಅಥೋರಿಯಂ ಹಾಗೂ ಹಲವು ವಿಧದ ಗಿಡಗಳ ಜೊತೆಗೆ ಬೋನ್ಸಾಯ್ಗಳು ಇವರ ತೋಟದ ಮುಖ್ಯ ಆಕರ್ಷಣೆಯಾಗಿದೆ. ಇಲ್ಲಿ ಬೆಳೆಯುತ್ತಿರುವ ತರಕಾರಿಗಳ ಪಟ್ಟಿ ಸ್ವಲ್ಪ ದೊಡ್ಡದೆ. ಟಮೋಟೋ, ಬಿನ್ಸ್, ತೊಂಡೆಕಾಯಿ, ಅವರೆ ಕಾಯಿ, ಮೆಣಸಿನ ಕಾಯಿ, ಬದನೆ ಕಾಯಿ, ಕುಂಬಳಕಾಯಿ, ಲಿಂಬೆ ಹಣ್ಣು, ಇತ್ಯಾದಿ ಇತ್ಯಾದಿಗಳು. ಜೊತೆಗೆ ಬಸಳೆ ಮತ್ತು ಬಗೆ ಬಗೆಯ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಇದಲ್ಲದೆ ಬಾಳೆ, ವಿಳ್ಯೇದೆಲೆ, ಕೆಸು, ಗೆಣಸು, ಫ್ಯಾಷನ್ ಫ್ರೂಟ್ಗಳು ಇವರ ರೂಫ್ ಗಾರ್ಡನ್ನಲ್ಲಿ ಲಭ್ಯ.
" ಈ ರೂಫ್ ಗಾರ್ಡನ್ ವ್ಯವಸ್ಥೆಯಿಂದ ನಮಗೆ ತುಂಬಾ ಅನೂಕೂಲಗಳಾಗಿವೆ. ಮುಖ್ಯವಾಗಿ ಬೇಸಿಗೆಯಲ್ಲಿ ಮನೆಯ ಉಷ್ಣತೆಯನ್ನು ಕಡಿಮೆಮಾಡಿದೆ. ಇದಕ್ಕೆ ಇತರ ಗಾರ್ಡನ್ಗಳಿಗೆ ಹೋಲಿಸಿದರೆ ಕಡಿಮೆ ನೀರು ಸಾಕು. ಮತ್ತು ದಿನ ನಿತ್ಯಕ್ಕೆ ಬೇಕಾದ ಹೆಚ್ಚಿನ ತರಕಾರಿ ಸೊಪ್ಪುಗಳನ್ನು ನಾವೇ ಬೆಳೆಯುವುದರಿಂದ, ಮನೆಗೂ ಸಹಾಯವಾಗುತ್ತದೆ ಹಾಗೂ ಒಳ್ಳೆಯ ಗಾಳಿ ಮತ್ತು ಶುದ್ಧ ತರಕಾರಿ ಸೊಪ್ಪುಗಳ ಬಳಕೆಯಿಂದ ಆರೋಗ್ಯ ದೃಷ್ಟಿಯಲ್ಲೂ ಸಹಾಯವಾಗುತ್ತಿದೆ. ಜೊತೆಗೆ ಟಿವಿ ಕಂಪ್ಯೂಟರ್ ಎಂದು ಮೋರೆ ಹೋಗುವ ಮಕ್ಕಳಿಗೂ ಈ ರೀತಿಯ ಗಾರ್ಡನ್‌ನಿಂದ ಬದಲಾವಣೆ ದೊರೆಯುತ್ತದೆ" ಎಂಬುದು ರೂಪಸಂಜಯ್ ದಂಪತಿಗಳ ಅಭಿಪ್ರಾಯ.
ಇದರ ಜೊತೆಗೆ ಗಾರ್ಡನ್ನ ಒಂದು ಭಾಗದಲ್ಲಿ ಪಾರಿವಾಳ, ಲವ್ಬರ್ಡ್ಸ್. ಗಿಳಿ, ಮೊಲಗಳನ್ನು ಸಹ ಸಾಕಿದ್ದಾರೆ. ಇವರ ಸುಂದರ ಛಾವಣಿ ತೋಟ ಒಂದು ಮಿನಿ ಪಾರ್ಕ್‌ನ ಅನುಭವವನ್ನೇ ನೀಡುತ್ತದೆ ಎಂದರೆ ತಪ್ಪಲಾಗರದು. ಮನೆಯ ಛಾವಣಿಯ ಮೇಲೆ ತೋಟವನ್ನು ನಿರ್ಮಿಸುವ ಮೂಲಕ ಈ ದಂಪತಿಗಳು, ಮನೆಯ ಮುಂದೆ ಗಿಡವನ್ನು ಬೆಳೆಯಲು ಸಾಧ್ಯವಾಗದೆ ಕೈ ಚೆಲ್ಲಿ ಕುಳಿತವರಿಗೆ ಮಾದರಿಯಾಗಿದ್ದಾರೆ. ಮತ್ತು ಪರಿಸರಕ್ಕೆ ಇವರ ಕೊಡುಗೆ ಸಹ ಶ್ಲಾಘನೀಯ.

(ಈ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ 2011ರ ಏಪ್ರಿಲ್ 19 ರಂದು ಪ್ರಕಟಗೊಂಡಿತ್ತು)

March 26, 2011

ನೆನಪುಗಳಿಗೇನು........ ಕಾಡಲೊಂದು ಕಾರಣ ಬೇಕಷ್ಟೇ....

ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗೆ ಕಾನ್ಷಿಯಸ್‌ನೆಸ್. ನನಗಂತೂ ಎಸ್‌ಎಸ್‌ಎಲ್‌ಸಿಗೆ ಬಂದ ಮೇಲೆ ಗೊತ್ತಾಗಿದ್ದು ಪರೀಕ್ಷೆ ಅಂದರೆ ಅಷ್ಟು ಮಹತ್ವದ್ದು ಅಂತ, ಅದೂ ಅಮ್ಮನ ರಗಳೆಯಿಂದ. ಆದರೂ ಅದರ ಪರಿಣಾಮ ಏನು ನನ್ನ ಓದಿನ ಮೇಲೇನು ಆಗಿರಲಿಲ್ಲ ಅನ್ನೋದು ಬೇರೆ ವಿಷಯ ಬಿಡಿ. ಪಾಪ ಅಮ್ಮ ಅವಳ ಮಗಳು ಮೊದಲ ಪ್ರಯತ್ನದಲ್ಲೇ ಪಾಸಾಗಲಿ ಅಂತ ಅದೇಷ್ಟು ಹರಕೆ ಹೊತ್ತಿದಲ್ಲೋ? ಸದ್ಯ ಫಲಿಸಿತ್ತು ಕೂಡ.. ಅವಳಿಗೆ ಭಯ ಇದ್ದಿರಬಹುದು ಎಲ್ಲಿ ನಾನು ಫೇಲ್ ಆದರೆ ಅವಳ ಉಳಿದ ಎರಡು ಮಕ್ಕಳು ನನ್ನ ದಾರಿನೇ ಹಿಡಿಬಹುದು ಅಂತ. ಹಿರಿಯಕ್ಕನ್ನ ಚಾಳಿಯ ... ಹಾಗೆ.

ಇಷ್ಟೇಲ್ಲಾ ಯಾಕೆ ನೆನೆಪಾಯಿತು ಅಂದರೆ ನನ್ನ ಮಗಳ ಮೆಂಹದಿ ರಗಳೆಯಿಂದ, ಅವಳಿಗೆ ಪರೀಕ್ಷೆ, ಟೆಸ್ಟ್‌ ಅಂದರೆ ಏನೋ ದೊಡ್ಡ ವಿಷಯ, ಅದು ಮುಗಿದ ಮೇಲೆ ಪ್ರತಿ ಬಾರಿಯು ಅವಳ ಯಾವುದಾದರೂ ಡಿಮ್ಯಾಂಡ್‌ನ ನಾವು ತೀರಿಸಬೇಕು ಅನ್ನೋ ವಾಡಿಕೆ. ಈ ಬಾರಿ ಅದಕ್ಕೆ ಗುರಿಯಾಗಿದು ನಾನು. ಪ್ರತಿ ಸಾರಿ ಮೆಹಂದಿ ಹಾಕು ಅಂತ ರಾಗ ತೆಗೆದರೆ, ನನಗೆ ಬರೋಲ್ಲ ಅನ್ನೊ ವಿಷಯನ್ನ ಬಿಟ್ಟುಕೊಡದೆ ಮೆಹಂದಿ ಕೋನ್ ಇಲ್ಲ ಅಂತ ತಪ್ಪಿಸಿಕೊಳ್ಳುತ್ತಿದೆ. ನಿಜ ಹೇಳಬೇಕೆಂದರೆ ನನಗೆ ಪೆನ್ಸಿಲಲ್ಲೂ ಒಂದು ಹೂವಿನ ಚಿತ್ರ ಬರೆಯಕ್ಕೊ ಬರೊಲ್ಲ. ಸ್ಕೂಲ್, ಕಾಲೇಜನಲ್ಲಿದಾಗ ಪ್ರತಿ ಸಾರಿ ಪರೀಕ್ಷೆಯಲ್ಲೂ ಯಾವುದೋ ದೇಶದ ನಕ್ಷೆಗೆ ಇನ್ಯಾವುದೋ ರೂಪ ಕೊಟ್ಟಿರುತ್ತದೆ. ಆದರೆ ಈ ಬಾರಿ ನನ್ನ ಮಗಳಿಂದ ತಪ್ಪಿಸಿಕೊಳ್ಳಕ್ಕೆ ನನಗೆ ಯಾವುದೇ ಅಪ್ಷನ್ ಇರಲಿಲ್ಲ. ಅವಳ ಪ್ರೀತಿಯ ಚಿಕ್ಕಿ ಮೆಹಂದಿ ಕೋನ್ ಮೊದಲೇ ತಂದು ಕೊಟ್ಟಿದಳು. ಆದರ ಮೇಲೆ ನನ್ನ ಮಗಳು ಚಿಕ್ಕಿ ಆದ್ರೆ ಎಷ್ಟು ಚೆನ್ನಾಗೆ ಚಿತ್ರ ಬರಿತ್ತಾಳೆ, ನನ್ನ ಕ್ಲಾಸಲ್ಲಿ ಎಲ್ಲಾರಿಗೂ ಅವರ ಅಮ್ಮ ಮೆಹಂದಿ ಎಷ್ಟು ಚೆನ್ನಾಗಿ ಹಾಕತ್ತಾರೆ ಗೋತ್ತಾ? ನೀನು ಮಾತ್ರ ಯಾವಾಗಲೂ ಹಾಕಲ್ಲ ಅಂತ ಕಂಪೇರ್ ಮಾಡಿದ ತಕ್ಷಣ ನನಗೆ ಆಗಲ್ಲ ಅಂದರೆ ಅವಳಿಗೆ ಬೇಜಾರಾಗುತ್ತೆ ಅನ್ನೊದಕ್ಕಿಂತ, ನಾನು ಅವರಿಗಿಂತ ಏನು ಕಡಿಮೆ ಇಲ್ಲ ಅನ್ನೋ ಇಗೋ ಇಂದ ಆಯಿತು ಅಂತ ಒಪ್ಪಿಕೊಂಡಿದ್ದೆ. ಹೇಗಿದರೂ ಇನ್ನೂ ಒಂದು ವಾರ ಇದಿಯಲ್ಲಾ ಅಂತ.

ಅಂತೂ ಒಂದು ವಾರ ಕಳೆದೇ ಹೋಯಿತು, ನಿನ್ನೆ ಇಂದ ಒಂದೇ ಸಮ ಅದೇ ರಾಗ ಅದೇ ಹಾಡು, ನನ್ನ ಹಿಂದೆ ಮುಂದೆ ಓಡಾಟ ಅಮ್ಮ ಮೆಹಂದಿ ಹಾಕು, ಅಮ್ಮ ಮೆಹಂದಿ ಹಾಕು. ಗಳಿಗೆಗೊಮ್ಮೆ ಪ್ರಿಜ್ ತೆಗೆದು ಅದರಲ್ಲಿಟ್ಟ ಮೆಹಂದಿ ಕೋನ್‌ ಇದಿಯೋ ಇಲ್ಲವೋ ಅಂತ ಕನ್ಫರಂ ಬೇರೆ ಮಾಡಕೊಳ್ಳಿತ್ತಿದಳು. ನಾನು ನನ್ನ ಬುದ್ಧಿ ಎಲ್ಲಾ ಖರ್ಚು ಮಾಡಿ ಮೊದಲೇ ನಿಗದಿಯಾದ ಅವಳಿಗೆ ಮೆಹಂದಿ ಹಾಕುವ ಪೋಗ್ರಾಂ ಅನ್ನು ನಾಳೆಗೆ (ಇವತ್ತಿಗೆ) ಮುಂದೆ ಹಾಕಿದೆ. ಸರಿ ಆ ನಾಳೆನೂ ಬಂತು. ಇವತ್ತು ಬೆಳ್ಳಿಗೆ ಎದ್ದು ಎದ್ದೋಳೆ ಕೋನ್ ಹಿಡ್‌ಕೊಂಡು ನನ್ನ ಮುಂದೆ ಹಾಜಾರು. ನನ್ನ ಕೆಲಸ ಮುಗಿದ ಮೇಲೆ ಹಾಕೋದು ಅಂತ ತೀರ್ಮಾನ ಆಯಿತು ಜೊತೆಗೆ ಪ್ರಾಮಿಸ್ ಕೂಡ.

ಬಿಸಿಲಿನ ಜೊತೆ ಜೊತೆಗೆ ಇವಳ ರಗಳೆ ಕೂಡ ಜಾಸ್ತಿಯಾಗುತ್ತ ಹೋಯಿತು. ಅಂತೂ ಮಧ್ಯಾಹ್ನಕ್ಕೆ ಎಲ್ಲಾ ಕೆಲಸ ಮುಗಿತು. ಬೇತಾಳದ ಹಾಗೆ ಕೋನ್‌ ಜೊತೆ ಹಾಜಾರು. ಅವಳಿಗೆ ಬಯ್ಯೋಕೊಂಡು, ಮನೆ ಮುಂದಿನ ಪೋರ್ಟಿಕೊದಲ್ಲಿ ಕುರುಸ್ಕೊಂಡು ಅಂತಿಮವಾಗಿ ನನ್ನ (ವಿ)ಚಿತ್ರ ಕಲೆಯನ್ನ ಶುರುಮಾಡದೆ. ಹೊರಗೆ ಆಕಾಶದಲ್ಲಿ ಸಡನ್ನಾಗಿ ಸೂರ್ಯ ಮತ್ತು ಮೋಡದ ಕಣ್ಣಾಮುಚ್ಚಾಲೆ ಆರಂಭ, ಎರಡೇ ನಿಮಿಷದಲ್ಲಿ ಹನಿ ಹನಿ ಮಳೆ. ಬೇಸಿಗೆಯ ಮೊದಲ ಮಳೆ.. ಮಣ್ಣಿನ ಸ್ಮೇಲ್, ಮದರಂಗಿಯ ಘಮ, ಇವುಗಳ ಜೊತೆಗೆ ಧೂಳಿನ ಮೇಲೆ ಒಂದೊಂದು ಹನಿ ಬಿದ್ದ ಹಾಗೂ ನನ್ನ ನೆನಪು ಹಿಂದೆ ಹಿಂದೆ ಓಡಲು ತೊಡಗಿತು. ಮಳೆ ಮತ್ತು ನನ್ನ ನೆನಪು ಪಂದ್ಯಕ್ಕೆ ಇಳಿಯಿತು.

ಏಪ್ರಿಲ್-ಮೇ ತಿಂಗಳ ಬೇಸಿಗೆ ರಜ, ಇಡೀ ದಿನ ಬಿಸಿಲಿನಲ್ಲಿ ಕುಣಿತ ಮಧ್ಯಾಹ್ನದ ಮೇಲೆ ಬರುವ ಬೇಸಿಗೆಯ ಮಳೆಯಲ್ಲಿ ಒದ್ದೆ. ಅಬ್ಬಾ ಎಂತಹ ಸುಂದರವಾಗಿದ್ದವು ಆ ದಿನಗಳು. ಎಲ್ಲಾ ಮುಗಿದ ಮೇಲೆ ನಿರಿಯುಳಿಯುವ ಬಟ್ಟೆ, ಕೆಸರು ಕಾಲಲ್ಲಿ ಮನೆ ಒಳಗೆ ಹೋಗಿ, ಕೆಂಪು ಕಾವಿಯ ನೆಲದ ಮೇಲೆ ಮೂಡಿಸುತ್ತಿದ್ದ ಮಣ್ಣಿನ ಹೆಜ್ಜೆಗಳು ಹಾಗೂ ಅಮ್ಮನ ಬೈಗುಳಗಳು... ಇವತ್ತು ಮಧ್ಯಾಹ್ನ ಮಳೆ ಬಂದು ಒದ್ದೆಯಾದ ಅಂಗಳದಷ್ಟೇ ಹಸಿಯಾಗಿದೆ ಮನಸ್ಸಲ್ಲಿ.

ನೆನಪುಗಳ ಮಾತು ಮಧುರ, ಆದರೆ ಅದಕ್ಕೆ ಆಡಚಣೆಯು ಅಷ್ಟೇ ಅಂತ ನನ್ನ ಭಾವನೆ. ಮಳೆಯೊಂದಿಗೆ ಬಾಲ್ಯಕ್ಕೆ ತೇಲಿಹೋಗಿದ್ದ ನನಗೆ, ಮಗಳು ಇದು ಏನಮ್ಮ ..ಚೆನ್ನಾಗಿ ಬರೆಯಮ್ಮ ಅಂತ ಮತ್ತೆ ಎಚ್ಚರಿಸಿದ್ದಳು. ನನಗೆ ರೇಗಿ.. ಸುಮ್ಮನೆ ಕುತ್ಕೋ ಅಂತ ಗದರಿ, ಅವಳ ಕೈ ಎಳೆದು ಕೊಂಡು ನನ್ನ ಆರ್ಟ್ ಮುಂದುವರೆಸಿದೆ. ಈ ಬಾರಿ ಮಳೆಯಿಂದ ಮೆಹಂದಿಯ ಕಡೆಗೆ ತಿರುಗಿತು ನನ್ ನೆನಪು. ಮೆಹಂದಿಯ ವಾಸನೆಯ ಜೊತೆಗೆ ನೆನಪಿನ ಸುರಳಿ ಬಿಚ್ಚ ತೊಡಗಿದೆ. ಸುವಾಸನೆಗೂ ನೆನಪಿಗೂ ತುಂಬಾ ನಂಟು ಅನ್ಸುತ್ತೆ. ಯಾವುದೋ ಪರಿಮಳ ಇನ್ಯಾವುದನ್ನೋ ನೆನಪಿಸುತ್ತೆ.

ಮದರಂಗಿ... ಎಷ್ಟು ಸಂಭ್ರಮ!! ಬೇಸಿಗೆ ರಜ ಬಂದರೆ ಸಾಕು ಎಲ್ಲಾ ಅಜ್ಜನ ಮನೆಯಲ್ಲಿ ಒಟ್ಟಾಗುತ್ತಿದ್ದೀವಿ. ಜೊತೆಗೆ ಎಲ್ಲರ ಅಪ್ಪ-ಅಮ್ಮದಿಂದರೂ ಸಹ. ಆವಾಗ ಈಗಿನಷ್ಟೂ ಕೆಲಸ ಇರಲಿಲ್ಲವೋ ಏನು ಕಥೆನೋ? ಮದರಂಗಿ ಹಚ್ಚಿಕೊಳ್ಳುವುದು ಅಂದರೆ ಒಂದು ದಿನವೀಡಿಯ ಕಾರ್ಯಕ್ರಮ ನಮಗೆ. ಹಿತ್ತಲಕಡೆ ಇದ್ದ ಮದರಂಗಿ ಗಿಡದ ಎಲೆಗಳನ್ನಷ್ಟೂ ಬರಬಿ ಬಾಚಿ ಬರಿದು ಮಾಡಿ ಬಿಡುತ್ತಿದ್ದೇವು. ಎಲೆ ಕ್ಯೂಯಲು ಒಬ್ಬರ ಕೈಯಲ್ಲಿ ಒಂದೊಂದು ಪಾತ್ರೆ. ಕಡಿಮೆ ಅಂದರೂ ಒಂಬತ್ತು-ಹತ್ತು ಮಕ್ಕಳು. ಅಡಿಗೆ ಮನೆಯು (ಪಾತ್ರೆ) ಖಾಲಿ, ಗಿಡವೂ ಖಾಲಿ. ನಂತರ ಅದನ್ನು ಅರೆಯುವ ಕೆಲಸ. ಹಳೆ ಅಡಿಗೆ ಮನೆಯಲ್ಲಿದ್ದ (ವಿಶೇಷಗಳಿಗಾಗಿ ಸೀಮಿತವಾಗಿದ್ದ) ತಿರುಸೆಕಲ್ಲಿನ ಮುಂದೆ ನಮ್ಮ ಜಾಂಡ. ಮದರಂಗಿ ಕೆಂಪಾಗಲು ಏನು ಏನು ಹಾಕ ಬೇಕು ಅಂತ ಒಬ್ಬರು ಒಬ್ಬರ ಹತ್ತಿರ ವಿಚಾರಣೆ ಮಾಡಿ, ಎಲೆ, ಸುಣ್ಣ, ಹುಣಿಸೆ ಹಣ್ಣು, ಲಿಂಬೆ ಹಣ್ಣು ಹೀಗೆ ಮಣ್ಣು-ಮಸಿ ಎಲ್ಲಾ ಹಾಕಿ ನುಣ್ಣಗೆ ಅರೆದು ಒಂದು ಪಾತ್ರೆಯಲ್ಲಿ ಹಾಕಿ ಅದರ ಮುಂದೆ ಕುಳಿತು ಬಿಡುತ್ತಿದ್ದೀವಿ. ರಾತ್ರಿ ಊಟ ಮಾಡಿ ಹಾಸಿಗೆ ಎಲ್ಲಾ ಹಾಸಿದ ನಂತರ ದೊಡ್ಡವರಿಗೆ ನಮಗೆ ಮದರಂಗಿ ಹಚ್ಚುವ ಕೆಲಸ. ಅಲ್ಲಿವರೆಗೆ ನಾವು ಅಲ್ಲಿ ಇಲ್ಲಿ ಹುಡುಕಿ ಕಷ್ಟ ಪಟ್ಟು ಎರಡೆರಡು ಪ್ಲಾಸ್ಟಿಕ್ ಕವರ್‌ಗಳನ್ನು ಒಟ್ಟು ಹಾಕಬೇಕಾದರೆ ಸಾಕಾಗುತ್ತಿತ್ತು. ಈಗಿನಷ್ಟೂ ಧಾರಾಳವಾಗಿ ಕವರ್‌ಗಳು ಆಗ ಮನೆಯಲ್ಲಿ ಎಲ್ಲಿ ಸಿಗುತ್ತಿದ್ದವು?! ದೊಡ್ದಮ್ಮ, ಹಿರಿಯಮ್ಮ, ಚಿಕ್ಕಿ, ಅಮ್ಮ, ಅಕ್ಕ (ಅತ್ತೆಯಂದಿರು) ಇವರೆಲ್ಲಾ ಅಡಿಗೆಮನೆ ಕೆಲಸ ಮುಗಿಸಿ ಬಾವಿಕಟ್ಟೆಗೆ ಬರೋ ಹೊತ್ತಿಗೆ ನಮಗೆ ಅರ್ಧ ಕಣ್ಣು ಮುಚ್ಚಿರುತ್ತಿತ್ತು. ಆದ್ರೂ ಕಷ್ಟಪಟ್ಟು ಎಲ್ಲಾ ಕಾಯುತ್ತಿರುತ್ತಿದ್ದೇವು. ಒಬ್ಬೊಬ್ಬರಿಗೆ ಒಂದು ಕೆಲಸ, ಒಬ್ಬರು ಅಲ್ಲೇ ಇದ್ದ ಬಚ್ಚಲು ಒಲೆಯ ಕೆಂಡದಿಂದ ಬಾಳೆ ಕಾಯಿಸಿ ಕೊಟ್ಟರೆ, ಇನ್ನೊಬ್ಬರು ಅದನ್ನು ಮದರಂಗಿ ಹರಡದ ಹಾಗೆ ಮೇಲಿಟ್ಟು ಬಾಳೆ ದಾರದಿಂದ ಕಟ್ಟಿ ಅದರ ಮೇಲೆ ಇಡಿ ಹಸ್ತಕ್ಕೆ ಕವರ್ ತೊಡಿಸುತ್ತಿದರು. ಇನ್ನೂ ಮದರಂಗಿ ಡಿಸೈನ್ ಎಲ್ಲರಿಗೂ ಕಾಮನ್. ಕೈ ಉಗುರುಗಳಿಗೆ ಟೋಪಿ, ಹಸ್ತಕ್ಕೆ ಮಧ್ಯ ಒಂದು ಚುಕ್ಕಿ, ಅದರ ಸುತ್ತ ಐದೋ ಆರೋ ಚುಕ್ಕಿಗಳು. ವಯಸ್ಸಿಗೆ ಅನುಗುಣವಾಗಿ ಚುಕ್ಕಿಗಳ ಸೈಜ್ ಮತ್ತು ಸಂಖ್ಯೆಯಲ್ಲಿ ವ್ಯತ್ಯಾಸ ಅಷ್ಟೇ. ಕೊನೆಗೆ ಉಳಿದ ಮದರಂಗಿಯನ್ನು ಆಮ್ಮಂದಿರು ಮೆತ್ತಿ ಕೊಳ್ಳುತ್ತಿದರು. ಆಗೆಲ್ಲಾ ಮದರಂಗಿ ಹಚ್ಚಿ ಕೊಳ್ಳುವುದು ಎಂದರೆ ಸಂಜೆಯಿಂದ ರಾತ್ರಿವರೆಗೆ ಸಂಭ್ರಮ. ಮನೆಯಂದಿಯೆಲ್ಲಾ ಅದರರಲ್ಲಿ ಭಾಗಿ.

ಇವತ್ತು ಬೆಳ್ಳಿಗೆ ಇನ್ನೂ ಫೇಸ್ ಬುಕ್‌ಲ್ಲಿ ಯಾರದ್ದೋ ಕಾಮೆಂಟ್ ಓದಿದ ನೆನಪು "ನೆನಪುಗಳಿಗೇನು.... ಕಾಡಲೊಂದು  ಕಾರಣ ಬೇಕಷ್ಟೆ" ಅಂತ. ಎಷ್ಟು ನಿಜ. ಮಗಳ ಎಕ್ಸಾಮ್, ಮೆಹಂದಿ ರಗಳೆ, ಮಳೆ ಹೀಗೆ......

(ನಿನ್ನೆ ಮಧ್ಯಾಹ್ನ ಬಿದ್ದ ಮೊದಲ ಬೇಸಿಗೆ ಮಳೆಯ ನೆನಪಿನಲ್ಲಿ)

January 3, 2011

ಚಳಿಗಾಲದ ಸಮಸ್ಯೆಗಳಿಗೆ ಸರಳ ಪರಿಹಾರಗಳು.

ವಾವ್! ಚಳಿಗಾಲದಲ್ಲಿ ಬೆಚ್ಚನೆ ಉಡುಪು ಧರಿಸಿ, ಬಿಸಿಬಿಸಿ ಕಾಫಿಯೊಂದಿಗೆ, ಬೋಂಡ, ಬಜ್ಜಿ ಸವಿಯುವುದು ಎಲ್ಲರಿಗೂ ಪ್ರಿಯವಾದದ್ದೇ. ಚಳಿಗಾಲ ಎಂದರೆ ಬರೀ ಬೆಚ್ಚನೆ ಉಡುಪುಗಳನ್ನು ತೊಡುವುದು ಮಾತ್ರವಲ್ಲ. ಚಳಿಗಾಲದ ಜೊತೆಗೆ ಹಲವು ತೊಂದರೆಗಳು ಕಾಡುತ್ತವೆ. ಶುಷ್ಕ ಕೂದಲು, ಒಣ ಚರ್ಮ, ಬಿರುಕು ಬಿಟ್ಟ ಹಿಮ್ಮುಡಿಗಳು , ಒಡೆದ ತುಟಿಗಳು ಈ ಕಾಲದ ಕಾಮನ್ ಸಮಸ್ಯೆಗಳು. ಕಡಿಮೆ ಉಷ್ಣಾಂಶ, ಕಡಿಮೆ ತೇವಾಂಶ ಮತ್ತು ತಣ್ಣನೆ ಕೊರೆಯುವ ಗಾಳಿ ಇವುಗಳಿಗೆಲ್ಲಾ ಮೂಲ ಕಾರ‍ಣವಾಗಿದೆ. ಕೂದಲು ಮತ್ತು ಚರ್ಮವಂತೂ ಶುಷ್ಕವಾಗಿ ನಿರ್ಜಿವ ಸ್ವರೂಪ ಪಡೆದು ಕೊಳ್ಳುತ್ತವೆ. ಫ್ಯಾಷನ್ ಪ್ರಿಯರಿಗೊಂತು ಈ ಕಾಲ ಶಾಪವೇ ಸರಿ. ಸ್ಪಲ ಕಾಳಜಿ ಮತ್ತು ಸುಲಭ ಕ್ರಮಗಳ ಮೂಲಕ ಈ ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಚಳಿಗಾಲದಲ್ಲಿ ಕಾಡುವ ಕಾಮನ್ ಸಮಸ್ಯೆಗಳಿಗೆ ಕೆಲವು ಸರಳ ಟಿಪ್ಸ್‌ಗಳು ಇಲ್ಲಿವೆ. ಈ ಕ್ರಮಗಳನ್ನು ನಿತ್ಯ ಜೀವನದಲ್ಲಿ ಆಳವಡಿಸಿ ಕೊಳ್ಳಿ ಚಳಿಗಾಲದಲ್ಲಿ ನಿಮ್ಮನ್ನು ಕಾಡುವ ತೊಂದರೆಗಳಿಗೆ ಬಾಯ್ ಹೇಳಿ ಮತ್ತು ಎಂಜಾಯ್ ವಿಂಟರ್..!


ಚರ್ಮ:
ಚಳಿಗಾಲದ ತಣ್ಣನೆ ಗಡುಸಾದ ಹವಾಗುಣದಿಂದ ಚರ್ಮವು ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು, ತುರಿಕೆ ಕಾಣಿಸು ಕೊಳ್ಳುವುದು ಸಾಮನ್ಯ.ಇದನ್ನು ತಡೆಗಟ್ಟಲು ಸ್ಪಲ ಕೇರ್ ಅತ್ಯಗತ್ಯ.
ಚಳಿಗಾಲದಲ್ಲಿ ಅತಿ ಬಿಸಿ ನೀರಿನ ಸ್ನಾನ ಬೇಡ. ಇದು ಚರ್ಮದ ಎಣ್ಣೆ ಅಂಶವನ್ನು ನಾಶ ಮಾಡುತ್ತದೆ. ಉಗುರು ಬೆಚ್ಚಗಿನ ನೀರು ಉತ್ತಮ. ಹಾಗೆ ಸ್ನಾನ ಮಾಡುವ ಅವಧಿಯನ್ನು ಕಡಿಮೆಗೊಳಿಸಿ. ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನ ಮಾಡಿ.
ಗಡುಸಾದ ಸೋಪಿನ ಬಳಕೆಯಿಂದ ಚರ್ಮದ ನೈಸರ್ಗಿಕ ತೈಲಗಳ ನಷ್ಟವಾಗಿ ಇನ್ನಷ್ಟೂ ಒಣಗುತ್ತದೆ, ಅದರಿಂದ ಸಾದ್ಯವಾದಷ್ಟೂ ಸೌಮ್ಯವಾದ ಹೆಚ್ಚು ಮಾಶ್ಚರೈಸರ್ ಯುಕ್ತ ಸೋಪನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವೆ ಸೋಪಿನ ಬದಲಿಗೆ ಸ್ನಾನಕ್ಕೆ ಹೆಸರು ಕಾಳಿನ ಹಿಟ್ಟನ್ನು ಸಹ ಬಳಸಬಹುದು.
ಸ್ನಾನದ ನಂತರ ಟವೆಲ್‌ನಿಂದ ದೇಹವನ್ನು ಉಜ್ಜ ಬೇಡಿ. ಕೋಮಲವಾಗಿ ಒರಿಸಿ ಹಾಗೂ ಕಡ್ಡಾಯವಾಗಿ ಕೊಬ್ಬರಿ ಎಣ್ಣೆ, ಷೀಕಕಾಯಿ ಎಣ್ಣೆ (shea butter) ಅಥವಾ ಸೂಕ್ತವಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳುವ ರೂಡಿ ಮಾಡಿಕೊಳ್ಳಿ.
ಚಳಿಯಿಂದ ಗಡುಸಾದ ಚರ್ಮದ ತುರಿಕೆಗೆ ಕೊಬ್ಬರಿ ಎಣ್ಣೆಯ ಮಸಾಜ್ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಮುಖ, ಕೈ, ಕಾಲುಗಳಿಗೆ ಸೂಕ್ತವಾದ ಕ್ರಿಮ್, ಎಣ್ಣೆ ಅಥವಾ ಲೋಶನ್ ಬಳಸುವುದನ್ನು ಮರೆಯಬೇಡಿ. ಸಾಧ್ಯವಾದಷ್ಟೂ A, C, D ಮತ್ತು E ವಿಟಮಿನ್ ಯುಕ್ತ ನೈಸರ್ಗಿಕ ಎಣ್ಣೆಗಳನ್ನು ಅಯ್ಕೆ ಮಾಡಿಕೊಳ್ಳಿ. (ಕೊಬ್ಬರಿ ಎಣ್ಣೆ, ಅಲಿವ್ ಎಣ್ಣೆ, ಕೋಕಾ ಎಣ್ಣೆ, ಷೀಕಕಾಯಿ ಎಣ್ಣೆ ಇತ್ಯಾದಿ)
ವಾರಕ್ಕೊಮ್ಮೆ ಸ್ಕ್ರಬರ್ ಬಳಸಿ, ಇದು ಒಣಗಿದ ಚರ್ಮವನ್ನು ತೆಗೆಯಲು ಸಹಕಾರಿಯಾಗುತ್ತದೆ. ನಂತರ ಪೇಸ್ ಪ್ಯಾಕ್ ಮಾಡಿ ಕೊಳ್ಳಿ. ಇದರಿಂದ ಚಳಿಯಿಂದ ಒಡೆದ ಚರ್ಮ ಮತ್ತೆ ಕಾಂತಿಯುಕ್ತ ಹೊಳೆಯತ್ತದೆ.
ಬೆಣ್ಣೆ ಹಣ್ಣಿನ (avocado) ಪೇಸ್ ಪ್ಯಾಕ್ ಒಣ ಚರ್ಮಕ್ಕೆ ಅತಿ ಸೂಕ್ತ. ಬೆಣ್ಣೆ ಹಣ್ಣಿನೊಂದಿಗೆ ಅಲಿವ್ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಕೊಳ್ಳಿ. 10-15 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳಿಯಿರಿ.
ಹಾಗೇ ಓಟ್ಸ್‌ನ ಪೇಸ್ ಪ್ಯಾಕ್ ಕೂಡ ಬಳಸಬಹುದು. ಓಟ್ಸ್ ಫ್ಲೆಕ್ಸ್‌ನ ಪುಡಿ, ಮೊಟ್ಟೆಯ ಹಳದಿ ಭಾಗ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ. ಮುಖ ಹಚ್ಚಿ 20 ನಿಮಿಷಗಳ ನಂತರ ತೊಳಿಯಿರಿ.
ಮೊಸರು, ಮಜ್ಜಿಗೆ, ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ನಂತರ ತೊಳಿರಿ.
ರಾತ್ರಿ ಮಲಗುವ ಮುನ್ನ ಲೋಳೆಸರದ ರಸವನ್ನು ನೇರವಾಗಿ ಮುಖಕ್ಕೆ ಹಚ್ಚಿ ಕೊಳ್ಳಿ.
ಈ ಫೇಸ್ ಮ್ಯಾಕ್ಸ್‌ಗಳು ನಿಮ್ಮ ಚರ್ಮಕ್ಕೆ ಸಂಪೂರ್ಣ ಪ್ರಮಾಣದ ವಿಟಮಿನ್, ಮಿನರಲ್ಸ್, ಅಂಟಿಅಕ್ಸಿಡೆಂಟ್‌ಗಳು ಮತ್ತು ಚರ್ಮವನ್ನು ಮೃದುಗೊಳಿಸುವ ಅಂಶಗಳನ್ನು ಸರಬರಾಜುಮಾಡುತ್ತವೆ. ಮತ್ತು ಚರ್ಮದ ಶುಷ್ಕತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇವು ನಿಮ್ಮ ಚರ್ಮದ ನೈಸರ್ಗಿಕ pH ಮಟ್ಟವನ್ನು ಪುನಃ ಸ್ಥಾಪಿಸುತ್ತದೆ ಮತ್ತು ಚಳಿಗಾಲದ ಗಾಳಿಯ ಋಣಾತ್ಮಕ ಪ್ರಭಾವದಿಂದ ಚರ್ಮವನ್ನು ರಕ್ಷಿಸುತ್ತದೆ.
ಕೈಗಳಿಗೆ ಗ್ಲೌಸ್ ಹಾಕಿ ಕೊಳ್ಳಿ. ಕೆಲಸದ ನಂತರ ಸರಿಯಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳಿ.
ಒರಟಾದ ಹಸ್ತಗಳಿಗೆ ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣದಿಂದ ಮಸಾಜ್ ಮಾಡಿ ಕೊಳ್ಳಿ. ಇದು ಕೈಯನ್ನು ಮೃದುಗೊಳಿಸುತ್ತದೆ.
ಹಾಗೆಯೇ 1 ಚಮಚ- ಗ್ಲಿಸಿರಿನ್,1 ಚಮಚ- ನಿಂಬೆ ರಸ ಮತ್ತು 5 ಹನಿ ರೋಸ ವಾಟರ್‌ ಅನ್ನು ಮಿಕ್ಸ್ ಮಾಡಿ, ಕೈಗಳಿಗೆ 10-15 ನಿಮಿಷಗಳ ಮಸಾಜ್ ಮಾಡಿ ಕೊಳ್ಳಿ
ಮನೆಯಿಂದ ಹೊರ ಹೊರಡುವಾಗ ಕನಿಷ್ಟ 15 ಅಥವಾ ಹೆಚ್ಚಿನ SPF ಅಂಶವನ್ನು ಹೊಂದಿರುವ ಸನ್‌ಸ್ಕ್ರೀನ್ ಲೊಶನ್ ಹಚ್ಚಿ ಕೊಳ್ಳಿ. ಸನ್‌ಸ್ಕ್ರೀನ್ ಮತ್ತು ಮಾಶ್ಚರೈಸರ್‌ ಮಿಶ್ರವಾಗಿರುವ ಲೋಶನ್‌ ಸಹ ನೀವು ಆಯ್ಕೆ ಮಾಡಿಕೊಳ್ಳ ಬಹುದು.
ಒಡೆದ ಹಿಮ್ಮುಡಿಗಳಿಂದ ಮುಕ್ತಿ ಪಡೆಯಲು ರಾತ್ರಿ ಮಲಗುವ ಮುನ್ನ ಸೂಕ್ತವಾದ ಕ್ರೀಮ್ ಹಚ್ಚಿ, ಕಾಲಿಗೆ ಸಾಕ್ಸ್ ಹಾಕಿ ಕೊಂಡು ಮಲಗುವ ಅಭ್ಯಾಸ ಮಾಡಿ ಕೊಳ್ಳಿ. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಹಾಕಿ ಕಾಲನ್ನು ಅದರಲ್ಲಿ ಇಟ್ಟು ಕೊಳ್ಳಿ. ಹಾಗೇಯೆ ಅನ್ನದ ತಿಳಿಗೆ ಸ್ವಲ್ಪ ಹಾಕಿ ಕಾಲನ್ನು 10-15 ನಿಮಿಷಗಳ ಕಾಲ ಅದರಲ್ಲಿ ಇಟ್ಟುಕೊಳ್ಳಿ. ಒಡೆದ ಹಿಮ್ಮುಡಿಯನ್ನು ಮೃದುಗೊಳಿಸುತ್ತದೆ ಮತ್ತು ಬಿರುಕುಗಳು ಮುಚ್ಚಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ತುಟಿಗಳ ಒಡೆಯುವಿಕೆ ಸಾಮಾನ್ಯ. ಒಡೆದ ತುಟಿಗಳಿಗೆ ಪದೇ ಪದೇ ನಾಲಿಗೆ ತಗಲಿಸ ಬೇಡಿ. ಸದಾ ಲಿಪ್ ಬಾಮ್ ಹಚ್ಚಿ ಕೊಳ್ಳಿ, ತುಟಿಯನ್ನು ಒಣಗಲು ಬಿಡಬೇಡಿ. ಒಡೆದ ತುಟಿಗಳಿಗೆ ಬೆಣ್ಣೆ ಮತ್ತು ಹಾಲು ಕೆನೆ ರಾಮಬಾಣ. ಕೊಬ್ಬರಿ ಎಣ್ಣೆ, ಅಲಿವ್‌ ಅಯಿಲ್, ಷೀಕಕಾಯಿ ಎಣ್ಣೆಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಕೂದಲು:
ಚಳಿಗಾಲದ ತಡಿ ಹವೆಯಿಂದ ಕೂದಲು ಒಣಗಿ ತನ್ನ ಹೊಳಪನ್ನು ಕಳೆದು ಕೊಳ್ಳುತ್ತದೆ. ಜೊತೆಗೆ ಕೂದಲು ಉದುರುವುದು ಕವಲು ಒಡೆಯುವುದು, ಹೊಟ್ಟಿನ ಸಮಸ್ಯೆಗಳು ಸೇರಿ ಕೊಳ್ಳುತ್ತವೆ.
ಚಳಿಗಾಲದ ಸಮಯದಲ್ಲಿ ನಿಮ್ಮ ಕೂದಲನ್ನು ಬಿಸಿ ನೀರಿನಿಂದ ತೊಳಿಯಬೇಡಿ. ಅತಿಯಾಗಿ ಕೂದಲು ತೊಳೆಯುವುದು ಅಥವಾ ಶಾಂಪೂ ಬಳಕೆಯನ್ನು ತಪ್ಪಿಸಿ. ಕೂದಲಿಗೆ ಮೈಲ್ಡ್ ಶಾಂಪೂವನ್ನು ಬಳಸಿ. ದಾಸವಾಳದ ಸೊಪ್ಪು, ಲೋಳೆಸರ, ಅಂಟವಾಳ ಮತ್ತು ಸೀಗೆಕಾಯಿಯ ಮಿಶ್ರಣವು ಕೂದಲಿಗೆ ಒಳ್ಳೆಯ ನೈಸರ್ಗಿಕ ಶಾಂಪೂ.
ಕೂದಲನ್ನು ಬಿಸಿ ಮಾಡುವ ಉಪಕರಣಗಳಾದ ಹೇರ್ ಡ್ರೈಯರ್, ಕರಲರ್‌ಗಳ ಬಳಕೆಯಿಂದ ದೂರ ಇರಿ. ಕೂದಲನ್ನು ನೈಸರ್ಗಿಕವಾಗಿ ಒಣಗಿಸಿ ಕೊಳ್ಳಿ.
ಚಳಿಗಾಲದಲ್ಲಿ ಕೂದಲನ್ನು ಪದೇ ಪದೇ ಕಲರಿಂಗ್, ಸ್ಟ್ರೀಕಿಂಗ್, ಅಥವಾ ಐರಿನಿಂಗ್‌ಗಳಿಗೆ ಒಡ್ಡಬೇಡಿ. ಇದರಿಂದ ಕೂದಲಿನ ನೈಸರ್ಗಿಕ ತೈಲ ನಷ್ಟವಾಗಿ, ಕೂದಲು ಇನ್ನಷ್ಟೂ ಹದಗೆಡುತ್ತದೆ.
ಕೂದಲನ್ನು ಗಾಳಿಗೆ ಹಾರಡಲೂ ಬಿಡಬೇಡಿ. ಅದಷ್ಟೂ ಕೂದಲನ್ನು ಕಟ್ಟಿ ಕೊಳ್ಳಿ. ಹೊರಗೆ ಹೋಗುವ ಸ್ಕಾರ್ಫ್‌, ಟೋಪಿಗಳನ್ನು ಬಳಸಿ
ಒಣ ಕೂದಲಿಗೆ ಬಿಸಿ ಎಣ್ಣೆಯ ಮಸಾಜ್ ಅತ್ಯಂತ ಪರಿಣಾಮಕಾರಿ. ಹಾಗೆ ಅಲಿವ್ ಅಯಿಲ್ ಮಸಾಜ್ ಸಹ ತುಂಬಾ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಚಳಿಗಾಲದಲ್ಲಿ ಕೂದಲು ಒಣಗಿ ಹೊಳಪನ್ನು ಕಳೆದು ಕೊಳ್ಳುವುದನ್ನು ತಪ್ಪಿಸಲು, ಆಗಾಗ ಸೂಕ್ತ ನೈಸರ್ಗಿಕ ಕಂಡಿಷನರ್ ಬಳಕೆ ಅಗತ್ಯ. ಬೇಸಿಗೆಗಿಂತ ಚಳಿಗಾಲದಲ್ಲಿ ಕೂದಲಿಗೆ ಕಂಡಿಷನರ್‌ನ್ನ ಅಗತ್ಯ ಹೆಚ್ಚು. ಕೂದಲು ತೊಳೆಯುವ ಮುನ್ನ ಲೋಳೆಸರದ ರಸ ಅಥವಾ ರುಬ್ಬಿದ ದಾಸವಾಳ ಸೊಪ್ಪನ್ನು 15-20 ನಿಮಿಷಗಳ ಕಾಲ ತಲೆಗೆ ಹಚ್ಚಿ ಕೊಳ್ಳಿ. ಮೆಹಂದಿಯನ್ನು ಕಂಡಿಷನ್ ಆಗಿ ಸಹ ಬಳಸಬಹುದು, ಅದಕ್ಕೆ ಒಂದು ಚಮಚ ಎಣ್ಣೆ ಮಿಕ್ಸ್ ಮಾಡಿಕೊಳ್ಳಿ. ಕೆಲ್ವು ಹನಿ ಶುಂಠಿರಸದೊಂದಿಗೆ ಅಲೀವ್ ಅಯಿಲ್ ಸೇರಿಸಿ, ತಲೆಗೆ ಹಚ್ಚಿ ಕೊಂಡು, ಒಂದು ಘಂಟೆಯ ನಂತರ ತೊಳಿಯಿರಿ. ಸೀಗೆ ಕಾಯಿ ಮತ್ತು ಮೆಂತ್ಯೆಯ ಪುಡಿಯನ್ನು ಕೂದಲು ತೊಳೆಯಲು ಉಪಯೋಗಿಸಿ. ಬೆಣ್ಣೆ ಹಣ್ಣು ಸಹ ಕೂದಲಿಗೆ ಒಳ್ಳೆಯ ಕಂಡಿಷನರ್.


ಆಹಾರ ಕ್ರಮ:
ಚಳಿಗಾಲದಲ್ಲಿ ಈ ಎಲ್ಲಾ ಬೇಸಿಕ್ ಕೇರ್‌ಗಳ ಜೊತೆ ನಾವು ಸೇವಿಸುವ ಆಹಾರ ಕ್ರಮದ ಕಡೆಗೆ ಗಮನಹರಿಸುವುದು ಸಹ ಅತಿ ಅವಶ್ಯಕ. ಚಳಿಗಾಲದ ಸಮಸ್ಯೆಗಳಿಂದ ದೂರವಿರಲು ದೇಹದ ಹೊರಗಿನಿಂದ ಕಾಳಜಿಯ ಜೊತೆಗೆ ದೇಹದ ಒಳಗಿನ ಕಾಳಜಿ ಸಹ ಮುಖ್ಯ. ಈ ಕಾಲದಲ್ಲಿನ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಪರಿಹಾರಿಸಲು ನಾವು ಸೇವಿಸುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.
ಜೀವ ಜಲ ನೀರು ಬೇಸಿಗೆ ಅಷ್ಟೇ ಚಳಗಾಲದಲ್ಲೂ ಅವಶ್ಯಕ. ಇದು ದೇಹವನ್ನು ಹೈಡ್ರೇಟು ಮಾಡುತ್ತದೆ. ಇದರಿಂದ ಚರ್ಮವನ್ನು ಆರೋಗ್ಯಕರ ಹೊಳಪನ್ನು ಪಡೆಯುತ್ತದೆ. ಚೆನ್ನಾಗಿ ನೀರು ಕುಡಿಯಿರಿ.
ಅಗಸೆ ಬೀಜದ ಎಣ್ಣೆ (Flaxseed) - ಇದು ದೇಹವನ್ನು ಒಳಗಿನಿಂದ ತೇವವಾಗಿಡುತ್ತದೆ. ಇದು ಬಹು ಆವಶ್ಯಕವಾದ ಸ್ವಾಭಾವಿಕ ಕೊಬ್ಬುಗಳನ್ನು ಹೊಂದಿರುವುದರಿಂದ ಸಮಸ್ತ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ ಹಾಗೂ ಅವಶ್ಯಕ. ಇದು ಎಣ್ಣೆಯ ರೂಪದಲ್ಲಿ ಹಾಗೂ ಕ್ಯಾಪ್ಸೂಲ್‌ ರೂಪದಲ್ಲಿಯೂ ಸಹ ಲಭ್ಯ .
ನಿತ್ಯದ ಆಹಾರ ಕ್ರಮದಲ್ಲಿ ಅಗತ್ಯವಾದ ಒಳ್ಳೆಯ ಎಣ್ಣೆಗಳನ್ನು ಅಳವಡಿಸಿ ಕೊಳ್ಳಿ. ಜೈವಿಕ ಬೆಣ್ಣೆ, ಕಾಡ್ ಲೀವರ್ ಅಯಿಲ್, ಒಮೆಗಾ-3, ಕೊಬ್ಬರಿ ಎಣ್ಣೆ ಇತ್ಯಾದಿಗಳು. ಜೊತೆಗೆ ಹಸಿ ತರಕಾರಿ, ಮೀನು, ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತು ಹಣ್ಣುಗಳನ್ನು ನಿಮ್ಮ ದಿನದ ಆಹಾರದಲ್ಲಿ ಸೇರಿಸಿ ಕೊಳ್ಳಿ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

ಮನಸ್ಸಿದ್ದರೆ ಮಾರ್ಗ..!!

ಮಲೆನಾಡಿನ ಹಳ್ಳಿಗಳಲ್ಲಿ ಈಗ ಕೃಷಿಕ ಯುವಕರ ಮದುವೆ ಹೆತ್ತವರಿಗೆ ಒಂದು ಸಮಸ್ಯೆಯಾಗಿದೆ. ಮದುವೆ ವಯಸ್ಸು ದಾಟಿದರೂ ಮದುವೆಗೆ ಹೆಣ್ಣು ಸಿಗದೆ ಪರದಾಡುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದೆ. ಈ ವಿಷಯ ಕೇಳುಗರಿಗೆ ಒಂದು ತಮಾಷೆ ಅನಿಸ ಬಹುದು. ಆದರೆ ಇದರ ಗಂಭೀರತೆಯನ್ನು ಇಲ್ಲಿನವರು ಮಾತ್ರ ಬಲ್ಲರು. ನಮ್ಮ ಕಡೆ ಈಗ ಮದುವೆ-ಮುಂಜಿ, ನಾಮಕರಣ ಅಥವಾ ಯಾವುದೇ ಫಂಕ್ಷನ್ ಇರಲಿ, ಅಲ್ಲಿ ಒಂದು ವಿಷಯದ ಚಚರ್ೆಯಂತೂ ಗ್ಯಾರಂಟಿ. ಅದು ನಿಮ್ಮ ಕಡೆ ಮದುವೆಗಿರುವ ಹುಡುಗಿಯರು ಇದ್ದರಾ ಅಂತ. ಒಂದು ಕಾಲ ಇತ್ತು ಹುಡುಗನಿಗೆ ಜಮೀನು ಮನೆಯಿದ್ದರೆ ಸಾಕು ಮದುವೆಯಾಗಲೂ ಯಾವುದೇ ಅಡ್ಡಿಲ್ಲ ಎಂಬುದು ಹೆಣ್ಣು ಹೆತ್ತವರ ಅಭಿಪ್ರಾಯವಾಗಿತ್ತು. ಆದರೆ ಈಗ ಇದಕ್ಕೆ ವಿರುದ್ಧವಾಗಿ ಹಳ್ಳಿ ಮನೆಯಾದರೆ ಬೇಡ, ಮದುವೆಯಾಗುವ ಹುಡುಗ ಸಿಟಿಯಲ್ಲಿರಬೇಕು ಅನ್ನೋದೇ ನೂರಕ್ಕೆ ತೊಂಬತ್ತೊಬ್ಬತ್ತು ಜನ ಕನ್ಯಾಮಣಿಗಳ ಮೊದಲ ಹಾಗೂ ಕೊನೆಯ ಬೇಡಿಕೆಯಾಗಿದೆ. ಹೆಣ್ಣು ಮಕ್ಕಳೇ ಕಡಿಮೆ, ಅದರಲ್ಲೂ ಮದುವೆಯಾಗಿ ಹಳ್ಳಿಯಲ್ಲಿ ಜೀವನ ನೆಡೆಸಲು ಸಿದ್ಧವಾಗಿರುವ ಕನ್ಯೆಯರಂತೂ ವಿರಳ. ನನ್ನ ಕಸಿನ್ಗಳಲ್ಲಿ ಮೂರು-ನಾಲ್ಕು ಜನ ವರ್ಷ ಮೂವತ್ತು ದಾಟಿದರೂ ಮದುವೆಯಾಗದೆ ಉಳಿದಿರುವುದು ಒಂದು ಚಿಕ್ಕ ಉದಾಹರಣೆ ಅಷ್ಟೆ! ಅನೂಕೂಲಸ್ಥರಾಗಿರುವ ಇವರೆಲ್ಲರ ಒಂದೇ ಒಂದು ಮೈನೆಸ್ ಪಾಯಿಂಟ್ ಎಂದರೆ ಹುಡುಗ ಹಳ್ಳಿಯಲ್ಲಿ ಕೃಷಿಕ ಎನ್ನುವುದಾಗಿದೆ.
ಹೀಗೆ ಹೇಳುವ ಹೆಚ್ಚಿನವರು ಹಳ್ಳಿಯಲ್ಲೇ ಹುಟ್ಟಿ ಬೆಳೆದ ಕನ್ಯಾಮಣಿಗಳು ! ಸಿಟಿಯ ಯಾತ್ರಿಕ ಜೀವನ, ಮಾಲಿನ್ಯ, ನೀರು, ಗಾಳಿ, ಬೆಳಕಿನ ಕೊರತೆ ಜೊತೆಗೆ ನೂರೆಂಟು ಜಂಜಾಟಗಳ ನಡುವೆಯೂ ಇವರುಗಳಿಗೆ ನಗರದ ಬಣ್ಣದ ಬದುಕಿನ ಹುಚ್ಚು ಮಾತ್ರ ಕಡಿಮೆಯಾಗಿಲ್ಲವೆಂಬುದು ವಿಪರ್ಯಾಸ! ನಾನು ಸಂಪಾದಿಸಬೇಕು ಅದಕ್ಕೆ ಹಳ್ಳಿಯಲ್ಲಿ ಅವಕಾಶವಿಲ್ಲ ಎಂಬುದು ಹಳ್ಳಿಯ ವರ ಬೇಡ ಎಂದು ಮೂಗು ಮೂರಿಯುವ ಈ ನಾರಿಯರ ಸಿದ್ಧ ಉತ್ತರ ಮತ್ತು ಸಮರ್ಥನೆ.
ಏಕೆ ಹಳ್ಳಿಯಲ್ಲಿ ಸಂಪಾದನೆಗೆ ದಾರಿಗಳಿಲ್ಲವೇ? ಸ್ವ ಉದ್ಯೋಗ ದುಡಿಮೆಯಲ್ಲವೇ? ಬರೀ ಬಿ.ಪಿ.ಒ. ಕಾಲ್ ಸೆಂಟರ್, ಐ.ಟಿ. ಬಿ.ಟಿ ಕಂಪೆನಿಗಳಲ್ಲಿ ಕೆಲಸ ಮಾಡುವುದು ಮಾತ್ರ ಕೆಲಸವೇ? ಹಳ್ಳಿಯಲ್ಲಿ ಸಹ ನೂರೆಂಟು ಮಾರ್ಗಗಳಿವೆ. ತಾವು ಸಂಪಾದಿಸುವುದಲ್ಲದೇ ಇತರರಿಗೂ ಸಹ ಉದ್ಯೋಗ ಕಲ್ಪಿ ಸಿಕೊಡಬಹುದು. ಕೆಲಸ ಮಾಡುವ ಆಸಕ್ತಿ ಇದ್ದರೆ ಹಳ್ಳಿಯಾದರೇನು ದಿಲ್ಲಿಯಾದರೇನು ಅವಕಾಶಗಳು ಹಲವು. ಅವುಗಳಲ್ಲಿ ಅತಿ ಸರಳವಾಗಿರುವ ಕೆಲವು ಮಾರ್ಗಗಳು ಇಲ್ಲಿವೆ. ನೀವು ಪ್ರಯತ್ನಿಸಿ ನೋಡಿ.
ಬಣ್ಣ ಬಣ್ಣದ ಹೂ ಗಿಡಗಳನ್ನು ಬೆಳೆಸುವುದು ಮಹಿಳೆಯರ ನೆಚ್ಚಿನ ಹವ್ಯಾಸವಾಗಿದೆ. ಈ ಹವ್ಯಾಸವನ್ನೆ ಸ್ಪಲ್ಪ ಯೋಜನಾ ಬದ್ಧವಾಗಿಸಿದರೆ ಸಾಕು ಪುಷ್ಪೋದ್ಯಮ ಅತಿ ಯಶಸ್ವಿ ಹಾಗೂ ಲಾಭಾದಾಯಕ ಉದ್ಯಮವಾಗುತ್ತದೆ. ಇದರಲ್ಲಿ ಅತ್ಯಂತ ಯಶಸ್ಸು ಗಳಿಸಿದವರ ಉದಾಹರಣೆಗಳು ಹಲವು.
ಇನ್ನೂ ಸೊಪ್ಪು ತರಕಾರಿಗಳು ಈಗಂತೂ ಅತ್ಯಂತ ದುಬಾರಿ, ಆದರೆ ದಿನ ನಿತ್ಯ ಅಡುಗೆಮನೆಯಲ್ಲಿ ಬೇಕೇ ಬೇಕು. ಮನೆಯ ಸುತ್ತ ಮುತ್ತ ಇರುವ ಜಾಗದಲ್ಲೇ ಬೆಳೆದರೂ ಸಾಕು. ತಾಜಾ ತಾಜಾ ತರಕಾರಿಗಳು ಮನೆಯಲ್ಲೇ ಲಭ್ಯ. ಜೊತೆಗೆ ಮನೆ ಖಚರ್ಿನಲ್ಲಿ ಬಾರಿ ಉಳಿತಾಯ ಕೂಡ ಆಗುತ್ತದೆ. ಇದನ್ನೆ ವಿಸ್ತರಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆದರಂತೂ ಬಂಪರ್. ಇದು ನನ್ನ ಸ್ವಂತ ಅನುಭವ. ನೀವು ಪ್ರಯತ್ನಿಸಿ ನೋಡಿ ಮನೆ ಖರ್ಚಿನಲ್ಲಿ ಉಳಿತಾಯದ ಜೊತೆಗೆ ಸಂಪಾದನೆಯೂ ಗ್ಯಾರಂಟಿ.
ನಿಮಗೆ ಟೈಲರಿಂಗ್ ಗೊತ್ತಾ?! ಹಾಗಾದರೆ ಬೇರೆ ಕೆಲಸದ ಯೋಚನೆ ಬಿಟ್ಟು ಬಿಡಿ. ಸಂಪಾದನೆಗೆ ಇದಕ್ಕಿಂತ ಉತ್ತಮ ಮಾರ್ಗ ಯಾವುದು ಇಲ್ಲ. ಈಗಂತೂ ಹೊಲಿಗೆ ಮಜೂರಿ ಕೊಟ್ಟು ಪೂರೈಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕಲಿತ ಈ ವಿದ್ಯೆಯನ್ನೇ ಬಂಡವಾಳ ವಾಗಿಸಿಕೊಂಡು ಸ್ವ ಉದ್ಯೋಗ ಪ್ರಾರಂಭಿಸಬಹುದು, ಜೊತೆಗೆ ಬೇರೆಯವರಿಗೂ ಉದ್ಯೋಗಾವಕಾಶ ಕಲ್ಪಿಸಿಕೊಡಲು ಇದರಿಂದ ಸಾದ್ಯ. ಇದರ ಜೊತೆ ಜೊತೆಗೆ ಸೀರೆ, ಡ್ರೆಸ್ಗಳಿಗೆ ಕಸೂತಿ, ತರ ತರಹದ ಡಿಸೈನ್ಗಳನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಇದಕ್ಕೆ ಅತಿ ಬೇಡಿಕೆ ಇದೆ. ಅತಿ ಕಡಿಮೆ ಬಂಡವಾಳ ಹೂಡಿ, ಹೆಚ್ಚು ಸಂಪಾದಿಸ ಬಹುದಾದ ಅಲ್ ಟೈಮ್ ಬೇಡಿಕೆಯಲ್ಲಿರುವ ಉದ್ಯೋಗ ಇದಾಗಿದೆ.
ಈಗ ಸಾವಯವ ಕೃಷಿಯ ಕಾಲ. ಎರೆಹುಳು ಗೊಬ್ಬರಕ್ಕೊಂತು ಬಂಗಾರದ ಬೆಲೆ ಇದೆ. ಹಾಗೂ ಇದರ ಸಾಗಣಿಕೆ ಅತಿ ಸುಲಭ ಕೂಡ ಹೌದು. ಅಡಿಗೆಮನೆಯ ತ್ಯಾಜ್ಯಗಳಾದ ತರಕಾರಿ ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ. ಇದು ಎರೆಹುಳು ಸಾಕಣಿಕೆಗೆ ತುಂಬಾ ಉಪಯುಕ್ತ. ಸಕರ್ಾರದಿಂದ ಇದಕ್ಕೆ ಸಬ್ಸಿಡಿ ಸಹ ದೊರೆಯುತ್ತದೆ.
ಹಳ್ಳಿಗಳಲ್ಲಿ ಹಲವು ಸ್ವ ಸಹಾಯ ಸಂಘಗಳು ಮಹಿಳೆಯರ ಉದ್ಧಾರಕ್ಕಾಗಿ ಪಣ ತೊಟ್ಟಿವೆ ಹಾಗೂ ಉತ್ತಮ ನೆರವನ್ನು ಸಹ ನೀಡುತ್ತವೆ. ನೀವುಗಳು ಇದರ ಭಾಗವಾಗಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ದೊರಕುವ ಸಾಲದ ಉಪಯೋಗ ಪಡೆದು, ನಿಮ್ಮ ಆಸಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ಯಾವುದಾದರೂ ಉದ್ಯೋಗ ಪ್ರಾರಂಭಿಸಿ, ಸುತ್ತ ಮುತ್ತಲಿನವರಿಗೂ ದಾರಿ ದೀಪವಾಗಿ.

ನಮಗೆ ಇವುಗಳಲ್ಲಿ ಆಸಕ್ತಿ ಇಲ್ಲ ಎನ್ನುವ ಹುಡುಗಿಯರೇ ಅದಕ್ಕೂ ಪರಿಹಾರವಿದೆ. ನಿಮ್ಮ ಬಳಿ ಕಂಪ್ಯೂಟರ್ ಒಂದು ಇದ್ದರೆ ಸಾಕು, ಯಾವುದೇ ಜಂಜಾಟವಿಲ್ಲದೇ ಮನೆಯಿಂದಲೇ ಕೆಲಸ ಮಾಡಿ, ಡಾಟಾ ಎಂಟ್ರಿ, ಟ್ರಾನ್ಸಲೇಶನ್, ಮೆಡಿಕಲ್ ಟ್ರಾನ್ಸಕ್ರಿಪ್ಷನ್ , ಈ-ಟ್ಯೂಟಿಂಗ್ ಹೀಗೆ ಹತ್ತು ಹಲವು ಅವಕಾಶಗಳು ನಿಮ್ಮ ಮುಂದೆ ತೆರೆದು ಕೊಳ್ಳುತ್ತವೆ. ಇಲ್ಲವಾದರೆ ನೀವು ನೋಡಿದ ಹೊಸ ಸ್ಥಳಗಳ ಅಥವಾ ಭಾಗವಹಿಸಿದ ಕಾರ್ಯಕ್ರಮಗಳ ವಿಶೇಷತೆಗಳು, ಅಥವಾ ನಿಮ್ಮೂರಿನ ಅಡುಗೆ, ಇಲ್ಲವೆ ನಿಮ್ಮ ಅನುಭವಗಳು, ಸುತ್ತಮುತ್ತಲಿನ ಪರಿಸರದ ವಿಶಿಷ್ಟಗಳ ಬಗ್ಗೆ ಲೇಖನ ಬರೆದು ಒಂದೆರೆಡು ಫೋಟೊಗಳೊಂದಿಗೆ ಪೇಪರ್, ಮ್ಯಾಗಜೀನ್ಗಳಿಗೆ ಕಳುಹಿಸಿ ಕೊಡಿ. ಉತ್ತಮ ಸಂಬಾವನೆಯೊಂದಿಗೆ ಹೆಸರು, ಕೀರ್ತಿ ನಿಮ್ಮ ಪಾಲಾಗುವುದರಲ್ಲಿ ಸಂದೇಹವೆ ಇಲ್ಲ.
ನಿಮ್ಮದು ತಂಬಾ ಇಂಟಿರಿಯರ್ ಪ್ರದೇಶವೇ? ಸುತ್ತ ಮುತ್ತ ಕಾಡೇ? ಹಳೆ ಮನೆಯೇ? ಹಾಗಾದರೆ "ಹೋಮ್ ಸ್ಟೇ" ಯೋಜನೆಯ ಬಗ್ಗೆ ಸಹ ಯೋಚಿಸ ಬಹುದು.
ಹೀಗೆ ಸ್ವ ಉದ್ಯೋಗಗಳ ಪಟ್ಟಿ ಬೆಳೆಯುತ್ತದೆ. ಹಳ್ಳಿ ಜೀವನ ಬೇಡ ಎನ್ನುವ ಕನ್ಯಾಮಣಿಗಳೇ ಮನಸ್ಸಿದ್ದರೆ ಮಾರ್ಗ. ಹಳ್ಳಿಯಾದರೇನು ಆಸಕ್ತಿ ಮತ್ತು ಛಲವಿದ್ದರೆ ಏನಾದರೂ ಸಾಧಿಸಲು ಸಾಧ್ಯ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)