January 6, 2018

ಹ್ಯಾಪಿ ಹಬ್ಬ

ಗಜಮುಖನೆ ಗಣಪತಿಯೇ ನಿನಗೆ ವಂದನೆ...‌

ಒಂದು ಎರಡು ಮೈಲಿ ದೂರದ ಊರಿನ ಶಾಲೆಯಲ್ಲಿ ಕೂರಿಸಿದ ಗಣಪತಿಯ ಮೈಕಿನ ಹಾಡಿನ ಜೊತೆಗೆ, ಇವತ್ತಾದರೂ ಒಂದು ದಿನ  21  ದೂರ್ವೆ ಕ್ಯುಯಿದು ದೇವರಿಗೆ ನಮಸ್ಕಾರ ಮಾಡರೇ... ಅನ್ನುವ ಅಮ್ಮನ ಹಾಡು. ( ಕ್ಯುಯಿದು ದೇವರು ಮುಂದಿಡೋ ವರೆಗೂ ಬಿಡ್ತಾ ಇರಲಿಲ್ಲ.).
ನಮ್ಮ ಬಾಲ್ಯದ ಅಷ್ಟು ಗಣಪತಿ ಹಬ್ಬದ ಒಂದೇ ಒಂದು ನೆನಪು ಹಾಗೂ ಎವರ್ ಫ್ರೆಶ್. 😍

  *********

ಇವತ್ತು ಬೆಳಗ್ಗೆಯಿಂದ ನಮ್ ಮನೆಯಲ್ಲಿ ಹಾಡ್ತಾ ಇರೋದು  Vidya Voxನ ಮ್ಯಾಶ್ ಅಪ್ ಶೇಪ್ ಅಫ್ ಯು, ಚೆನ್ನಾ ಮಾರಿಯಾ... 😃

ವಿದ್ಯಾಳ ಮೆಲೋಡಿಯಸ್ ಕಂಠದ ಹಿನ್ನೆಲೆಯಲ್ಲಿ ಮಗಳ ಕೈಯಲ್ಲಿ  ಗೋಧಿ ಹಿಟ್ಟಿನಿಂದ ಅರಳಿದ ಕ್ಯುಟ್ ಗಣಪ ಗೋ ಗ್ರೀನ್ ಮೇಸೆಜ್ ಜೊತೆಗೆ ಇಲ್ಲಿದೆ. ❤
 
ಎಲ್ಲರಿಗೂ ಒಳ್ಳೆಯದಾಗಲಿ. ಹ್ಯಾಪಿ ಹ್ಯಾಪಿ ಗಣಪತಿ ಹಬ್ಬ. 😍😍

(PS - ಪಕ್ಕದಲ್ಲಿರೋದು ಕಾಟ ಕೊಟ್ಟು (ಟಿಪಿಕಲ್ ಅಮ್ಮನ ರಾಗದಲ್ಲೇ) ಮಗಳ ಕೈಯಲ್ಲೇ ಕ್ಯುಯಿಸಿದ 21 ದುರ್ವೆ. 😂




https://m.facebook.com/story.php?story_fbid=10213761692425932&id=1514881037

ಅಪ್ಪ


Father's day!!

ನಂ(ಮ)ಗೆ ಪ್ರತಿ ದಿನವು ಅಪ್ಪನ ದಿನ. ನಾನು ಅಪ್ಪನ ಮಗಳು. ಈ ಒಂದೇ ದಿನವನ್ನು ಅಪ್ಪನ ದಿನವಾಗಿ ಮಾಡಲು ಇಷ್ಟ ಇಲ್ಲ.

ಅಪ್ಪ...  You're a true sportsman in every sense. You're an unsung hero. 😍
-----
ಅಪ್ಪ, ಬೇರೆಯವರಿಗೆ ಕಾರು, ಬಂಗಾರ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಇಸ್ಪೀಟ್ ಗೀಳಿನ ಮನುಷ್ಯ. ಆದರೆ ಅಪ್ಪ.. ನೀನು ನಾನು ಕಂಡ ಅತ್ಯಂತ ಯಶಸ್ವಿ  ಅಪ್ಪ.

ಅಪ್ಪ , ಮಗಳ ಮೊದಲ ಹೀರೊ ಅಂತೆ! ಆದರೆ ನೀನು ನನ್ನ ಮೊದಲ ಗುರು, ಗೈಡ್, ಮಿತ್ರ, ಶತ್ರು ಎಲ್ಲಾ.!

ಅಪ್ಪ.. ನೀನೊಬ್ಬ ಅದ್ಭುತ sportsman. (Both on field & off filed). ನಿನ್ನಲ್ಲಿರುವ  Sportsman's spirit ನನ್ನ ಮೊದಲ ಪಾಠ. ನಾನು ಕಂಡ ಮೊದಲ ಫೆಮಿನಿಸ್ಟ್ ನೀನು.

ಅಪ್ಪ... ನೀನು ಹೇಳಿ ಕೊಟ್ಟ ಟೇಬಲ್ ಮ್ಯಾನರ್ಸ್ ಪಾಠ ದಿಂದ ಹಿಡಿದು ಸಾಮಾಜಿಕ ಕಳಕಳಿ ವರೆಗಿನ ಪಾಠ ಗಳೇ ನನ್ನ ಇವತ್ತು ಕಾಯ್ತಾ ಇರೋದು.

ನಿನಗೆ ಸರಿ ಅನ್ಸಿದ್ದು ನೀನು ಮಾಡು, ಅದರಿಂದ ಬೇರೆ ಯವರಿಗೆ ತೊಂದರೆ ಆಗಬಾರದು ಅಷ್ಟೇ. ಎನ್ನುವ ನಿನ್ನ ಮಾತು ನನ್ನ ಪ್ರತಿ ಹೆಜ್ಜೆಗೂ ಗಟ್ಟಿ ಬುನಾದಿ.

ಅಪ್ಪ... ನಾನು ಇಡುವ ಎಲ್ಲಾ ಹೆಜ್ಜೆಗಳಲ್ಲೂ ನಿನ್ನದೇ ಛಾಪು. ನನ್ನ ಮನೋಭಾವ, ಆಯ್ಕೆ, ನಾ ನಂಬಿರುವ ಸಿದ್ಧಾಂತಗಳು ಎಲ್ಲಾ ನಿನ್ನದೇ ಬಳುವಳಿ. ಅಪ್ಪ.... ನಿನ್ನ ಮುಂದುವರಿಕೆ ನಾನು.

 ಅಪ್ಪ...  You're a true sportsman in every sense. You're an unsung hero. 😍

(PS: this is on behalf of WE 3. 😍 )



https://m.facebook.com/story.php?story_fbid=10213081643305129&id=1514881037

September 27, 2017

ರಶ್ಮಿ, ರಮ್ಯ, ಪುಟ್ಟು… ಯಾರು ಚಾಕೊಲೇಟ್ ಕವರ್ ಕಿಟಿಕಿಯಿಂದ ಹೊರಗೆ ಎಸೆದಿದ್ದು? ಮನೆ ಮುಂದೆ ಯಾರು ಪೇಪರ್ ಚೂರು ಮಾಡಿ ಹಾಕಿದ್ದು? ನಿಮ್ಗೆ ಎಷ್ಟು ಸಾರಿ ಹೇಳಬೇಕು ಮಾವಿನ ಮರದ ಕೆಳಗೆ ಕಸ ಹಾಕಿ ಗಲೀಜು ಮಾಡ್ಬೇಡಿ ಅಂತ. ಮನೆ ಸುತ್ತ ಮುತ್ತ ದೂರ ದೂರಕ್ಕೂ ಒಂದು ಪೇಪರ್, ಕವರ್, ಕಸ ಹಾಕಿದ್ದು ಕಂಡ್ರೆ ಸಾಕು ಅಮ್ಮನ ಸಿಟ್ಟು ನೆತ್ತಿಗೇರಿ ಕೂಗಕ್ಕೆ ಶುರು ಮಾಡ್ತಿದ್ದಳು (ಮಾಡ್ತಾಳೆ ).
ಇಷ್ಟೇ ಅಲ್ಲ! ಪೇಪರ್ ಜೋಡಿಸಿಟ್ಟರೆ, ಒಂದು ಪೇಪರ್ ತಲೆ ಕೆಳಗೆ ಇಟ್ಟಿದೀಯಾ, ಸ್ಟ್ಯಾಂಡ್ ಮೇಲೆ ಇಟ್ಟ ಬಟ್ಟೆಗಳು ಉದ್ದ ಗಿಡ್ಡ ಆಗಿದೆ, ಲೋಟದ ಮೇಲೆ ಬೆರಳು ಅಚ್ಚು ಇದ್ರೂ ತೊಳೆದು ಒರೆಸಿ ಇಡಲಿಲ್ಲ. ಒಂದೇ ಎರಡೇ ಎಲ್ಲಾದರಲ್ಲೂ ಪ್ರತಿಯೊಂದರಲ್ಲೂ ಕ್ಲೀನೂ, ಕ್ಲೀನೂ.! ಸ್ಪಲ್ಪ ಗಲೀಜನ್ನು ಸಹಿಸಲ್ಲ ಅವಳು. ಇವತ್ತಿಗೂ ಅಷ್ಟೇ ಅಮ್ಮ ಯಾವುದೇ ಮೀಟಿಂಗೋ, ಎಲೆಕ್ಷನ್ ಕ್ಯಾಂಪ್ಯನ್ ಅಥವಾ ಊಟದ ಮನೆಗೆ ಇರಲಿ ಎಲ್ಲಿಗೂ ಹೋಗೋ ಮುಂಚೆ ಅಡುಗೆ ಮನೆಯಿಂದ ಕೊಟ್ಟಿಗೆ ವರೆಗೆ ಎಲ್ಲಾ ಕ್ಲೀನ್ ಮಾಡಿ ಮುಗಿಸೇ ಮನೆಯಿಂದ ಹೋಗುವುದು. ಅಡುಗೆ ಊಟಕ್ಕಿಂತ ಕ್ಲೀನ್ ಅವಳ ಮೊದಲ ಆದ್ಯತೆ. ಹತ್ತಿರದಿಂದ ಅಮ್ಮನ ನೋಡಿದವರಿಗೆ ಇದು ಚೆನ್ನಾಗಿ ಗೊತ್ತು. ಜಯಮ್ಮನಾ… ಹಿಡಿ - ಒರಸೊ ಬಟ್ಟೆ ಹಿಡ್ಕೊಂಡೇ ಇರ್ತಾಳೆ ಅಂತ ಹೇಳಿ ನಗ್ತಾರೆ ಕೂಡ. ಜಾತಿ, ಮಡಿ, ಮೈಲಿಗೆ, ಮುಸರೆ ಅಂತ ಮಕ್ಕಳಿಗೆ ಕಲಿಸಿದ್ರೆ ( ಬ್ರಾಹ್ಮಣರು ಅನ್ಸಿಕೊಳ್ಳೊ ನಮ್ಮಗಳ ಹೆಚ್ಚಿನ ಮನೆಯಲ್ಲಿ ಇದೇ ಫಸ್ಟ್ ತಲೆಗೆ ತುಂಬೋದು ) ಅಮ್ಮ ಮಾತ್ರ ನಮಗೆ ಹೇಳಿ ಕೊಟ್ಟ ಒಂದೇ ಮಂತ್ರ “ಕ್ಲೀನ್”
****ಈ ಪುರಾಣ ಈಗ ಯಾಕೆ ಅಂದರೆ....
ನಿನ್ನೆ ನನ್ ಫ್ರೆಂಡ್ ಒಬ್ಬಳು ಫೋನ್ ಮಾಡಿ “ ಏನೇ ! ಮೋದಿ ಬರ್ತಡೇಗೆ ಗಿಫ್ಟಾ? (ನನ್ನ 2 ದಿನ ಹಿಂದಿನ FB ಪೋಸ್ಟ್ ಕುರಿತು ) ನೀನು ಮೋದಿಯ ಸ್ವಚ್ಛ ಭಾರತ ಅಭಿಯಾನ ಫಾಲೋಯರ್ ಆಗಿದ್ದಿಯಾ ಅಂದ್ಲು. ನಂಗೆ ಉರಿದು ಹೋಯ್ತು.
ನಾನ್ಸೆನ್ಸ್! ಯಾಕೆ ಮೋದಿ ಬರೋ ಮೊದಲು ಕ್ಲೀನ್ ಮಾಡ್ತಾನೇ ಇರ್ಲಿಲ್ವಾ! ಮೋದಿ ಸ್ವಚ್ಛ ಭಾರತ ಅಂತ ಕ್ಲೀನ್ ಆಗಿರೋ ಜಾಗದಲ್ಲಿ ಪೊರಕೆ ಹಿಡಿದು ಫೋಸ್ ಕೋಡೊ ಮೊದಲು ಅಥವಾ ಮೈಕ್ ನಲ್ಲಿ ಸ್ವಚ್ಛ ಭಾರತ ಅಂತ ಕಿರಚೋ ಮೊದಲು ಯಾರು ನಮ್ಮ ಮನೆ, ಊರು, ಕೇರಿ ಸ್ವಚ್ಛವಾಗಿ ಇಡ್ತಾ ಇರ್ಲಿಲ್ವಾ.ನಾವು ನಮ್ಮ ಊರನ್ನು ಕ್ಲೀನ್ ಮಾಡಿದ್ದು ಮೋದಿಯ ಯಾವ ಭಾಷಣ ಅಥವಾ ಫೋಸ್ ನಿಂದ ಇಂಪ್ರೆಸ್ ಅಥವಾ ಇನ್ ಸ್ಪೈರ್ ಆಗಿ ಅಲ್ಲ. ನಮ್ಮ ಊರು ಸದಾ ಸುಂದರವಾಗಿ ಮತ್ತು ಸ್ವಚ್ಛವಾಗಿ ಇರಲಿ ಅನ್ನುವ ಉದ್ದೇಶ, ಪ್ರೀತಿ ಮತ್ತು ಕಾಳಜಿಯಿಂದ ಅಷ್ಟೇ.
ಆದರೂ ನಾನು, ನಾವು ಮಾಡಿದ ಕೆಲಸಕ್ಕೆ ಯಾರಿಗಾದರೂ ಕ್ರೆಡಿಟ್ ಕೊಡಬೇಕು ಅಂದರೆ ಅದು ಪೂರ್ತಿ “ಅಮ್ಮಂಗೆ”. ಇವತ್ತು ನನ್ನಲ್ಲಿ ಏನಾದರೂ ಸ್ಪಲ್ಪ ಸಾಮಾಜಿಕ, ಪರಿಸರ ಕಾಳಜಿ ಮತ್ತು ಸ್ವಚ್ಛತೆ ಬಗ್ಗೆ ಅರಿವು ಇದ್ದಲ್ಲಿ ಅದು ಅವತ್ತು ಅಮ್ಮ ನಮ್ಮಲ್ಲಿ ನೆಟ್ಟ “ಸ್ವಚ್ಛತೆ” ಬೀಜವೇ ಕಾರಣ. ಇದು ಈಗ ಎಷ್ಟು ದೊಡ್ಡ ಮರವಾಗಿದೆ ಅಂದ್ರೆ ಶತ ಸೋಮಾರಿ ನನ್ನ ತಮ್ಮನಿಗೂ ಕ್ಲೀನ್ ಭೂತ ಹಿಡ್ಕೊಂಡಿದೆ.
ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು … ಯಾವಾತ್ತಿಗೂ ನೂರಕ್ಕೆ ಇನ್ನೂರಷ್ಟು ಸತ್ಯ.
(ಅಮ್ಮನ ಜೊತೆ ನಾವು 3 ಜನ ಮಕ್ಕಳು ಇರೋ ಫೋಟೊಕ್ಕಾಗಿ ಲ್ಯಾಪ್ ಟಾಪ್, ಫೋನ್ ಜಾಲಾಡಿದರೂ ಸಿಗಲಿಲ್ಲ. ಆದರೆ ಎಂಥಾ coincidence ಅಂದ್ರೆ ಅಮ್ಮನೇ ಮನೆಗೆ ಬಂದಳು ಇವತ್ತು!!)
https://www.facebook.com/rashmikargal/posts/10213968834124345

June 5, 2014

ತೂ ಭೀ ಆ ಸಬ್ ಕೊ ಛೋಡ್ ಕೆ…

ಬೆಳಿಗ್ಗೆಯಿಂದ ಬೆಳಗಿದ ಸೂರ್ಯ ಮೋಡದ ಹಿಂದೆ ಎಲ್ಲೋ ಕಳೆದು ಹೋಗಿದ್ದಾನೆ. ಥೇಟ್ ನಿನ್ ಥರಾ. ಮೋಡ ಮುಚ್ಚಿದ ಆಕಾಶ, ಗಾಳಿಯಿಲ್ಲದ ಕಪ್ಪುಗಟ್ಟಿದ ಸಂಜೆ ರಂಗೇಲ್ಲಾ ತೊಳಿದಿಟ್ಟ ಬ್ಲ್ಯಾಕ್  ಅಂಡ್ ವೈಟ್ ಚಿತ್ರ . ಸ್ಥಬ್ದ ನೀರವ. ನೀನಿಲ್ಲದ ನನ್ ಹಾಗೇ. 
ಈ ಸಂಜೆ ಯಾಕಾಗಿದೆ ನೀನಿಲ್ಲದ…, ಈ ಸಂತೆ ಸಾಕಾಗಿದೆ....
ಸಾಯಂಕಾಲದ ಸಂಕಟ ಅನುಭವಿಸಕ್ಕೂ ಆಗಲ್ಲ, ಆಡಕ್ಕೂ, ಒಂಥರಾ ಹೊಕ್ಕಳ ಹುಣ್ಣಿನ ಹಾಗೆ. ಎಲ್ಲಾ ಬಿಟ್ಟು ಓಡಿ ಹೋಗಣ ಅನ್ಸೋದು, ಜನ ಬೇಡವಾಗೋದು, ಗುಂಪಲ್ಲೂ ಒಂಟಿತನ ಕಾಡೋದು ಎಲ್ಲಾ ನೀನಿಲ್ಲದ  ಖಾಲಿ ಖಾಲಿ ಉದ್ದ ಸಂಜೆಗಳಲ್ಲೇ,  ಈ ಸಂಜೆಗಳಲ್ಲಿ ನಿನಗಾಗಿ ಮನಸ್ಸು ಚಡಪಡಿಸುತ್ತೆ, ನಿನ್ ಜೊತೆ ಮಾತಾಡಲು ಮನಸ್ಸು ಹವಣಿಸುತ್ತೆ. ಮೊಬೈಲ್‌ನಲ್ಲಿ ನಿನ್ನ ನಂಬರಿಗಾಗಿ ಬೆರಳುಗಳು ಹುಡುಕಾಡುತ್ವೆ. ಡಯಲ್ ಮಾಡಿ ಕನೆಕ್ಟ್ ಆಗುವ ಮುನ್ನ ಕಟ್ ಮಾಡಿದ ಕಾಲ್‌ಗಳು, ಟೈಪ್ ಮಾಡಿ ಕಳಿಸದೆ ಔಟ್ ಬಾಕ್ಸ್ ತುಂಬಿದ ಮೇಸೆಜ್‌ಗಳು ಅದೇಷ್ಟೋ. ಗೊತ್ತು, ಅವುಗಳು ನಿನ್ನ ತಲುಪಿದರೂ ಈಗ ತಟ್ಟಲಾರವು. ಅವುಗಳಿಗೆಲ್ಲಾ ನಿಂದೊಂದೇ ಉತ್ತರ ಅಸಹನೀಯ ಮೌನ.  ಮಾತಾಡಾದರೂ ಕಡಿದುಕೊಳ್ಳಬಹುದು ಆದ್ರೆ ಮಾತಾಡದೇ ಕಳಕೊಂಡರೆ ಯಾವಾಗಲೂ ಕಾಡ್ತಾ ಇರುತ್ತೆ. ಹಿಂದೆಲ್ಲಾ ಸಂಬಂಧ ಹರಿದುಕೊಂಡೇ ತೀರುತ್ತೀನಿ ಅಂತ ನಿನ್ನೊಡನೆ ನಾ ಜಗಳಕ್ಕೆ ನಿಂತಾಗಲೇ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಕೊಂಡಿದ್ದು. ನನಗೆ ನೀನು ಹೆಚ್ಚು ಹೆಚ್ಚು ಇಷ್ಟವಾಗಿದ್ದು, ನಾವಿಬ್ಬರು ಮತ್ತಷ್ಟೂ ಹತ್ತಿರ ಆಗಿದ್ದು.  ಆದರೆ ಈಗ ಇದು ಬರೀ ಕಾಡುವ ನೆನಪಷ್ಟೇ. ನಿನ್ ಜೊತೆ ಆಡಿದ ಮಾತುಗಳು, ಕಳೆದ ಕಾಲದ ನೆನೆಪುಗಳು ವಿರಹದ ಬೆಂಕಿಗೆ ಈಗ ತುಪ್ಪ.  ನನ್ನ ಪಾಲಿಗೆ  ಉಳಿದಿರೊದು ನೀನಿಲ್ಲದ ಸಂಜೆ ಮತ್ತು ನಿನ್ನ ಮೌನ.

ಧೂಳು ಕೂತ ಸ್ಟಡಿ ಟೇಬಲ್, ಅರ್ಧಂಬರ್ಧ ಕಿತ್ತು ಹೋದ ನೆಲ್ ಪೈಂಟ್, ಬಾಗಿಲು ತೆಗೆದರೆ ಮೈಮೇಲೆ ಬೀಳುವ ವಾರ್ಡ್ ರೋಬ್‌ನ  ಬಟ್ಟೆಗಳು, ಪುಟ ಮಡಚಿಟ್ಟ ಓದಿ ಮುಗಿಸದ ಪುಸ್ತಕ ಎಲ್ಲಾ ನೀನಿಲ್ಲದೆ  ಮುನಿಸಿ ಕೊಂಡ ಹಾಗೆ ಅನ್ಸುತ್ತೆ.   ಸೇಮ್  ಪಿಯಾ ಬಿನಾ… ಪಿಯಾ ಬಿನಾ… ರೀತಿಯಲ್ಲಿ. ಆದ್ರೆ ನೀನಿಲ್ಲದ, ನಿನ್ನ ಪ್ರೀತಿಯಿಲ್ಲದ ಬದುಕಿಗೆ ಹೋಲಿಕೆಯೇ ಇಲ್ಲ. ಹೋಲಿಸಿದಷ್ಟೂ ನೀನಿಲ್ಲದ ನೋವು ಹೆಚ್ಚಿಸುತ್ತೆ.

ನೀ ನನ್ ಕಣ್ಣಲ್ಲಿ ತುಂಬಿ ಹೋದ ಬಣ್ಣಗೆಟ್ಟಿರುವ ಕನಸುಗಳಿಗೆ  ಮತ್ತೆ ಬಣ್ಣ ತುಂಬಿ ಜೀವ ನೀಡಲು ನನ್ನ ಜೊತೆಯಾಗು ಬಾ. ನಮ್ಮ ಕನಸುಗಳಿಗೆ ಜೀವ ತುಂಬಲು ಎಲ್ಲಾ ಬಿಟ್ಟು ನೀನಗಾಗಿ ಕಾಯುತ್ತಿದ್ದೀನಿ.


ತೂ ಭೀ ಆ ಸಬ್ ಕೊ ಛೋಡ್ ಕೆ… 

February 23, 2014

ನಾಯಿಗಳಿಗೆ ಹಾನಿಯುಂಟು ಮಾಡುವ ಆಹಾರಗಳು

ಮನುಷ್ಯರು ಹಾಗೂ ಕೆಲವು ಬೇರೆ ಜಾತಿಯ ಪ್ರಾಣಿಗಳು  ತಿನ್ನಲರ್ಹವಾದ ಕೆಲವು ಆಹಾರಗಳು ನಾಯಿಗಳಿಗೆ ಅಪಾಯವನ್ನುಂಟು ಮಾಡಬಹುದು. ಇದಕ್ಕೆ ಮುಖ್ಯ ಕಾರಣ ಅವುಗಳ ವಿಭಿನ್ನ ಚಯಾಪಚಯ (ಮೆಟಬಾಲಿಸಮ್). ಕೆಲವು ಆಹಾರಗಳು ತೀಕ್ಷ್ಣವಲ್ಲದ ಅಜೀರ್ಣವನ್ನು ಮಾತ್ರ ಉಂಟುಮಾಡಿದರೆ, ಇನ್ನೂ ಕೆಲವು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು ಮತ್ತು ಸಾವು ಕೂಡ ಉಂಟಾಗುವ ಸಾಧ್ಯತೆ ಯಿದೆ. ಈ ಕೆಳಗಿನವುಗಳು ನಾಯಿಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲವು ಸಾಮಾನ್ಯ ಆಹಾರ ಪದಾರ್ಥಗಳು.   

v  ಆಲ್ಕೋಹಾಲ್ ಪಾನೀಯಗಳು : ಇವುಗಳು ನಾಯಿಗಳಿಗೆ ಅಮಲೇರಿಸುತ್ತದೆ. ಇದರಿಂದ ನಾಯಿಗಳು ಕೋಮ ಸ್ಥಿತಿಯನ್ನು ತಲುಪಿ ಸಾವನ್ನುಪ್ಪುವ ಸಾಧ್ಯತೆ ಹೆಚ್ಚು.
v  ಬೆಣ್ಣೆ ಹಣ್ಣು :  ಇವುಗಳು ನಾಯಿಗಳಲ್ಲಿ ವಾಂತಿ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ.
v  ಬೆಕ್ಕಿನ ಆಹಾರಗಳು : ಇವುಗಳು ಸಾಮಾನ್ಯವಾಗಿ ಅತಿ ಹೆಚ್ಚಿನ ಪ್ರೋಟಿನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇಂತಹ ಆಹಾರಗಳು  ನಾಯಿಗಳಿಗೆ ಸೂಕ್ತವಲ್ಲ .
v  ಚಾಕೊಲೇಟ್, ಕಾಫಿ, ಟೀ ಮತ್ತು ಇತರೆ ಕೆಫೀನ್‌ಯುಕ್ತ ಆಹಾರಗಳು ವಾಂತಿ ಮತ್ತು ಭೇದಿಯನ್ನು ಉಂಟುಮಾಡುತ್ತವೆ ಮತ್ತು ಹೃದಯ ಮತ್ತು ನರವ್ಯೂಹಕ್ಕೆ ವಿಷಕಾರಿಯಾಗುವ ಸಾಧ್ಯತೆ ಹೆಚ್ಚು.
v  ಸಿಟ್ರಸ್‌ ಹೊಂದಿದ ಆಹಾರ ಉತ್ಪನ್ನಗಳು ನಾಯಿಗಳಲ್ಲಿ  ವಾಂತಿಯನ್ನುಂಟು ಮಾಡುತ್ತದೆ.
v  ಮೀನು, ಕೋಳಿ ಅಥವಾ ಇತರೆ ಮಾಂಸದ ಮೂಲಗಳ ಮೂಳೆಗಳು ನಾಯಿಗಳ ಜೀರ್ಣ ಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡುವುದು ಸಾಧ್ಯ.
v  ದ್ರಾಕ್ಷಿ, ಒಣ ದ್ರಾಕ್ಷಿಗಳಲ್ಲಿರುವ ಅಪರಿಚಿತ ವಿಷ, ನಾಯಿಗಳ ಮೂತ್ರ ಪಿಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ.
v  ಕೊಳೆತ ಅಥವಾ ಹಾಳಾದ ಆಹಾರಗಳು ಹಲವು ಟಾಕ್ಸಿನ್‌ಗಳನ್ನು ಹೊಂದಿರುವುದರಿಂದ ನಾಯಿಗಳಲ್ಲಿ ವಾಂತಿ ಮತ್ತು ಭೇಧಿಯನ್ನು ಉಂಟುಮಾಡುವುದರ ಜೊತೆಗೆ ಇತರ ಅಂಗಗಳ ಮೇಲೂ ಸಹ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.
v  ಹೆಚ್ಚಿನ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳನ್ನು ನಾಯಿಗಳಿಗೆ ನೀಡಿದ್ದಲ್ಲಿ ನಾಯಿಗಳಲ್ಲಿ ಅತಿಸಾರ ಕಂಡುಬರುತ್ತದೆ.
v  ಹಸಿ ಮೊಟ್ಟೆ ಮತ್ತು ಹಸಿ ಮಾಂಸಗಳು ಸಹ ನಾಯಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.
v  ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಕ್ಕರೆಯುಕ್ತ ಆಹಾರ ಕೂಡ ನಾಯಿಗಳಿಗೆ ಒಳೆಯದಲ್ಲ.
v  ನಾಯಿಗಳಿಗೆ ನೀಡುವ ಆಹಾರದಲ್ಲಿ ಅಣಬೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಅವುಗಳ ಆರೋಗ್ಯಕ್ಕೆ ಹಾನಿಕಾರಕ.

v  ತಂಬಾಕು, ಗಾಂಜಾ, ಹುದುಗು ಹಿಟ್ಟು (ಯಿಸ್ಟ್), ಕೃತಕ ಸಿಹಿಯನ್ನು ಹೊಂದಿದ ಆಹಾರಗಳನ್ನು ನಾಯಿಗೆ ನೀಡುವುದು ನೀಷಿದ್ಧ. ಈ ರೀತಿಯ ಆಹಾರಗಳು ಹಲವು ರೀತಿಯ ಟಾಕ್ಸಿನ್‌ಗಳನ್ನು ಹೊಂದಿರುತ್ತವೆ. ಇವುಗಳು ನಾಯಿಯ ಹಲವು ಅಂಗಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮವನ್ನುಂಟುಮಾಡಿ  ಸಾವಿಗೆ ಕಾರಣವಾಗುತ್ತವೆ.

ರಕ್ತ ಶುದ್ಧೀಕಾರಕ ಆಹಾರಗಳು

ರಕ್ತ  ಶುದ್ಧೀಕರಣ ದೇಹದ ಆರೋಗ್ಯಕರ ಕ್ರಿಯೆಗಳಿಗೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಡೀ ದೇಹದ ಕ್ರಿಯೆಗಳು ರಕ್ತ ಚಲನೆಯನ್ನು ಅವಲಂಬಿಸಿದೆ. ವಿಷದ ಅಂಶ ಹೆಚ್ಚಾದಂತೆಲ್ಲಾ ದೇಹದ ಅಂಗಾಂಗಗಳಿಗೆ  ನಿಧಾನವಾಗಿ ಹಾನಿಯಗುತ್ತದೆ ಮತ್ತು ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.ಅಲರ್ಜಿಗಳು, ರೋಗ ನಿರೋಧಕ ಶಕ್ತಿಯ ಕೊರತೆ, ನಿರಂತರ ತಲೆ ನೋವು, ಆಯಾಸಗಳು ದೇಹದಲ್ಲಿ ಕಲ್ಮಶ ಮತ್ತು ವಿಷಕಾರಿ ಅಂಶಗಳ ಉಪಸ್ಥಿತಿಯನ್ನು  ತೋರಿಸುವ  ಕೆಲವು ಸಾಮಾನ್ಯ ಲಕ್ಷಣಗಳು. ಕಲ್ಮಶ ರಕ್ತ ಅರೋಗ್ಯ ಮತ್ತು ಚರ್ಮದ ತೊಂದರೆಗಳಿಗೆ ಕಾರಣವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳಾದ ಮೊಡವೆ, ಕಪ್ಪು ಕಲೆಗಳು, ಒಣ ಮತ್ತು ಶುಷ್ಕ ತ್ವಚೆಗಳಿಗೆ ದೇಹದಲ್ಲಿನ ಕಲ್ಮಶ ರಕ್ತ ಕಾರಣ. ಹಾಗಾಗಿ ಮಾರುಕಟ್ಟೆಯಲ್ಲಿ ವಿವಿಧ ರಕ್ತ ಶುದ್ಧಿಕಾರಕ ಟಾನಿಕ್ ಮತ್ತು ಔಷಧಗಳು ಲಭ್ಯ. ಆದರೆ ಇವುಗಳು ನೂರಕ್ಕೆ ನೂರಷ್ಟು ಫಲಿತಾಂಶವನ್ನೇನ್ನೂ ನೀಡುವುದಿಲ್ಲ. ಇದಕ್ಕೆ ಕಾರಣ ಕೇವಲ ಟಾನಿಕ್ ಮತ್ತು ಔಷಧಿಗಳು ಮಾತ್ರ ಸಾಕಾಗುವುದಿಲ್ಲ. ನೀವು  ರಕ್ತವನ್ನು ಶುದ್ಧಗೊಳಿಸುವ ಆಹಾರದ ಮೇಲೆ ಸಹ ಗಮನ ನೀಡಬೇಕಾಗುತ್ತದೆ. ಯಕೃತ್ತು, ಮೂತ್ರಪಿಂಡಗಳು  ಹಾಗೇಯೆದುಗ್ಧನಾಳಗಳನ್ನು ಸಹ ರಕ್ತವನ್ನು ಶುದ್ಧಿಕರಿಸುವ ಮತ್ತು ದೇಹದಿಂದ  ಕಲ್ಮಶ ಮತ್ತು ವಿಷ ಅಂಶಗಳನ್ನು ತೊಲಗಿಸುವ ಕೆಲಸವನ್ನು ಮಾಡುತ್ತವೆ. ಈ ಆಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ, ಇಡೀ ದೇಹದಲ್ಲಿ  ಕಲ್ಮಶ ರಕ್ತದ ಚಲನೆಯಿಂದಾಗಿ ಚರ್ಮ ಕಾಯಿಲೆಗಳು ಕಾಡುತ್ತವೆ. ಆದ್ದರಿಂದ ನೀವು ನಿಮ್ಮ ರಕ್ತವನ್ನು ಶುದ್ಧಗೊಳಿಸಲು ಬಯಸುವೀರಾದರೆ,   ರಕ್ತವನ್ನು ಶುದ್ದಗೊಳಿಸುವ ಮತ್ತು  ಮೂತ್ರಪಿಂಡ ಹಾಗೂ ಯಕೃತ್ತುಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯ ಮಾಡುವ  ಕೆಲವು ನಿರ್ವಿಷಕಾರಕ ಆಹಾರವನ್ನು  ನಿಮ್ಮ ಆಹಾರದಲ್ಲಿ ಸೇರ್ಪಡಿಸಬೇಕು. ಆರೋಗ್ಯಕರ ಮತ್ತು ದೋಷರಹಿತ ತ್ವಚೆಕ್ಕಾಗಿ ಆಹಾರ ಕ್ರಮದಲ್ಲಿ ಒಳಪಡಿಸಲೇ ಬೇಕಾದ  ರಕ್ತ ಶುದ್ಧಕಾರಕ ಆಹಾರಗಳಲ್ಲಿ ಕೆಲವು ಇಲ್ಲಿವೆ.
 ಬ್ರೊಕ್ಲಿ - ಈ ಹಸಿರು ತರಕಾರಿ  ಆಂಟಿಅಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತದೆ. ಅದು ರಕ್ತವನ್ನು ಶುದ್ಧಗೊಳಿಸಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ  ಕಲ್ಮಶ ಮತ್ತು ವಿಷ ಅಂಶಗಳನ್ನು ದೇಹದಿಂದ ತೆಗೆದು ಹಾಕುತ್ತದೆ.
ಕೊಸುಗೆಡ್ಡೆ -ಕ್ಯಾಬೆಜ್ ರಸದ ಸೇವನೆ  ರಕ್ತ ಶುದ್ಧಿಕರಣಕ್ಕೆ ಒಂದು ಉತ್ತಮವಾದ ಮನೆ ಮದ್ದು.
ಹೂಕೋಸು -  ಇದರಲ್ಲಿರುವ ಕ್ಲೋರೊಫಿಲ್‌ ಅಂಶ, ರಕ್ತದಲ್ಲಿರುವ ಕಲ್ಮಶಗಳನ್ನು ತೆಗೆಯುತ್ತದೆ ಮತ್ತು ರಕ್ತವನ್ನು ಶುದ್ಧ ಗೊಳಿಸುತ್ತದೆ.
ಹಾಗಲಕಾಯಿ-  ಕಹಿ ರುಚಿಯ ಈ ತರಕಾರಿ ಹಲವು ಔಷಧ ಗುಣಗಳನ್ನು ಹೊಂದಿದೆ. ಹಾಗೇ ಹಾಗಲಕಾಯಿ ರಕ್ತವನ್ನು ಸಹ ಶುದ್ಧಿಕರಿಸುತ್ತದೆ.
ಬೇವು - ಕಹಿ ಬೇವು ರಕ್ತವನ್ನು ಶುದ್ಧಗೊಳಿಸುವ  ಒಂದು ಅತ್ಯಂತ ಜನಪ್ರಿಯ ನೈಸರ್ಗಿಕ ಉಪಾಯ. ಇದರ ಎಲೆಗಳನ್ನು ನೀರನಲ್ಲಿ ಕುದಿಸಿ,   ಬೆಳಿಗ್ಗೆ ಸೇವಿಸಿ. ಇದು ಬಲವಾದ ಮತ್ತು ನೈಸರ್ಗಿಕವಾದ ರಕ್ತ ಶುದ್ಧಿಕಾರಕವಾಗಿ ಕೆಲಸ ಮಾಡುತ್ತದೆ.
ಜೇನು ತುಪ್ಪ ಸಹ ಒಂದು ಪರಿಣಾಮಕಾರಿ ರಕ್ತ ಶುದ್ಧಕಾರಕ.
ಬೆಳ್ಳುಳ್ಳಿ- ಬೆಳ್ಳುಳ್ಳಿ ಕೇವಲ ಒಂದು ಆಂಟಿಬಯೋಟಿಕ್ (ಪ್ರತಿಜೀವಕ) ಮಾತ್ರವಲ್ಲ. ಇದು ಒಂದು ರಕ್ತ ಶುದ್ಧೀಕರಣ ಮೂಲಿಕೆ. ಬೆಳ್ಳುಳ್ಳಿ ರಕ್ತವನ್ನು ಶುದ್ಧ ಮಾಡುತ್ತದೆ, ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಹೊರಹಾಕುತ್ತದೆ ಮತ್ತು ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುತ್ತದೆ.
ಕ್ಯಾರೆಟ್-  ಕ್ಯಾರೆಟ್ ರಕ್ತ ಶುದ್ಧಿಗೊಳಿಸುವ ಆಹಾರಗಳಲ್ಲಿ ಒಂದು. ಇದು ತ್ವಚೆಗೆ ಉತ್ತಮ . ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲ್ಯಾಸ್ ಕ್ಯಾರೆಟ್ ಜ್ಯೂಸ್ ನ ಸೇವನೆ ಪರಿಣಾಮಕಾರಿ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ತ್ಚಚೆಗೆ ತೊಂದರೆಯುಂಟು ಮಾಡುವ ಹಾನಿಕಾರಕ ವಿಷ ಅಂಶಗಳು ಮತ್ತು  ಸ್ವತಂತ್ರ ರಾಡಿಕಲ್‌ಗಳನ್ನು ತೊಲಗಿಸುತ್ತದೆ.
ಕಲ್ಲಂಗಡಿ - ವ್ಯಾಪಕವಾಗಿ ಕಲ್ಲಂಗಡಿಯು ಅದರಲ್ಲಿರುವ ನಿರ್ವಿಷಗೊಳಿಸುವ ಗುಣಲಕ್ಷಣಗಳಿಗೆ ಪ್ರಸಿದ್ಧ. ಇದು ಕೇವಲ ರಕ್ತವನ್ನು ಶುದ್ಧಗೊಳಿಸುವುದು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಾಯ್ದುಕೊಳ್ಳುತ್ತದೆ. ಮೇಲಾಗಿ ಇದು ತೂಕ ನಿರ್ವಹಣೆಗೆ ಸಹಕಾರಿಯಾಗಿದೆ.
ಅನಾನಸ್ ಹಣ್ಣು -  ನಿಮ್ಮ ರಕ್ತ ಶುದ್ಧಿಕಾರಕ ಆಹಾರಗಳಲ್ಲಿ ಸೇರಿಸಲೇ ಬೇಕಾದ ಹಣ್ಣಗಳಲ್ಲಿ ಅನಾನಸ್ ಒಂದು. ತಾಜಾ ಹಣ್ಣು ರಕ್ತ ಮತ್ತು ಮೂತ್ರಪಿಂಡ ಶುದ್ಧಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಗ್ರೀನ್ ಟೀ - ಮೂಲಿಕೆಗಳ ಈ ಟೀ ಅನ್ನು ದಿನಕ್ಕೆ ಒಂದು ಬಾರಿ ರಕ್ತ ಶುದ್ಧೀಕರಣಕ್ಕಾಗಿ ಸೇವಿಸ ಬಹುದು.
ಪಾರ್ಸ್ಲೇ ಮೂತ್ರಪಿಂಡಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅವುಗಳು ಮೂತ್ರಪಿಂಡಗಳನ್ನು ಶುದ್ಧಗೊಳಿಸಿ, ನಿರ್ವಿಷಗೊಳಿಸುತ್ತದೆ. ಇದನ್ನು  ವ್ಯಾಪಕವಾಗಿ ರಕ್ತ ಶುದ್ಧೀಕರಿಸಲು ಒಂದು ಪರಿಹಾರವಾಗಿ ಬಳಸಲಾಗುತ್ತದೆ.

ಭಾರತೀಯ ಗುಸ್ ಬರಿಗಳಲ್ಲಿನ ರಕ್ತ ಶುದ್ಧಗೊಳಿಸುವ  ಮತ್ತು ನಿರ್ವಿಷಗೊಳಿಸುವ ಗುಣಲಕ್ಷಣಗಳು ಜನಪ್ರಿಯ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ. ದೇಹವನ್ನು ನಿರ್ವಿಷಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

ತಲೆ ಕೂದಲ ಆರೈಕೆಯಲ್ಲಿ ಮೆಹಂದಿ

ಮೆಹಂದಿ ನಿಜವಾಗಿಯೂ ಅದ್ಭುತ ನೈಸರ್ಗಿಕ ಕೂದಲು ಬಣ್ಣ. ಭಾರತದಲ್ಲಿ ಇದನ್ನು ಶತಮಾನಗಳಿಂದ  ಉಪಯೋಗಿಸಲಾಗುತ್ತಿದೆ. ಮೆಹಂದಿ, ಮದರಂಗಿ,ಹೆನ್ನಾ, ಗೊರಂಟಿ ಎಂಬ ಹೆಸರಿನಿಂದ ಇದು ಚಿರಪರಿಚಿತ. ಮೆಹಂದಿಯಲ್ಲಿ ಅನೇಕ ಶ್ರೇಷ್ಟ ಗುಣಗಳು ಅಡಕವಾಗಿದೆ. ಇದು ಕೂದಲಿಗೆ ಬಣ್ಣ ನೀಡುವುದು ಮಾತ್ರವಲ್ಲ ಕೂದಲು ಆರೋಗ್ಯಕರವಾಗಿ ಸಹ ಮಾಡುತ್ತದೆ. ನಿಯಮಿತವಾಗಿ ಮದರಂಗಿಯನ್ನು ಕೂದಲಿಗೆ ಬಳಸುವುದರಿಂದ ಕೂದಲಿಗೆ ಹೊಳಪು ಬರುತ್ತದೆ ಮತ್ತು ಬಲಿಷ್ಟವಾಗುತ್ತದೆ. ಹಾಗೂ ಇದು ತಲೆ ಹೊಟ್ಟಿನ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಕೆಲವು ಪ್ರಯೋಜನಗಳು
·         ಮದರಂಗಿ ಒಂದು ನೈಸರ್ಗಿಕ ಕೂದಲ ಬಣ್ಣವಾಗಿದೆ. ಹೆಚ್ಚಿನವರು ಕೂದಲಿಗೆ ರಾಸಾಯಿನಿಕ ಬಣ್ಣವನ್ನು  ಉಪಯೋಗಿಸುತ್ತಾರೆ, ಅದು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಆದರೆ ಮದರಂಗಿ  ಆ ಎಲ್ಲಾ  ಸಮಸ್ಯೆಗಳಿಂದ  ಕೂದಲನ್ನು ದೂರವಿಡುತ್ತದೆ. ಹೆನ್ನಾ ಕೂದಲಿಗೆ ಯಾವುದೇ ತೊಂದರೆ ಇಲ್ಲದೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ನೀಡುತ್ತದೆ.
·         ಮೆಹಂದಿ ಒಂದು ಅದ್ಭುತವಾದ ಕಂಡಿಷನರ್. ಇದು ಕೂದಲಿಗೆ ಪುನಃ ಆರೋಗ್ಯ ಮತ್ತು ಕಾಂತಿ ಮರಳಿ ನೀಡವ ಗುಣಗಳನ್ನು ಹೊಂದಿದೆ. ಇದು ನೆತ್ತಿಯ ನೈಸರ್ಗಿಕ ಆಮ್ಲ ಕ್ಷಾರೀಯ ಸಮತೋಲನವನ್ನು ಕೂಡ ಪೂರ್ವಸ್ಥಿತಿಗೆ ತರುತ್ತದೆ.
·         ಮದರಂಗಿಯು ಒಂದು ನೈಸರ್ಗಿಕವಾಗಿ ಫಂಗಸ್ ವಿರೋಧಿ ಮತ್ತು ಬ್ಯಾಕ್ಟಿರೀಯಾ ವಿರೋಧಿ. ಕೂದಲಿಗೆ ಮೆಂಹಂದಿಯನ್ನು ಹಚ್ಚುವುದರಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ದೂರವಿಡುವುದು ಸಾಧ್ಯ. ನಿಯಮಿತವಾಗಿ ಕೂದಲಿಗೆ ಮದರಂಗಿಯನ್ನು ಬಳಸುವುದರಿಂದ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುವುದ್ದಿಲ್ಲ.
·         ಬಲಿಷ್ಟವಾದ ಕೂದಲನ್ನು ಬಯಸುವಂತವರು ಕೂಡ ಮೆಹಂದಿಯ ಮೊರೆ ಹೋಗಬಹುದು. ಇದು ಕೂದಲನ್ನು ಬಲಿಷ್ಟಗೊಳಿಸಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಇದು ಕೂದಲ ಬೇರಿನವರೆಗೆ ಪ್ರವೇಶಿಸಿ ಕೂದಲನ್ನು  ಧೃಡವಾಗಿಸುತ್ತದೆ.
·         ತುಂಬಾ ತೆಳುವಾದ ಕೂದಲನ್ನು ಹೊಂದಿರುವವರು ಮತ್ತು ಕಡಿಮೆ ಕೂದಲನ್ನು ಉಳ್ಳವರು ಮೆಹಂದಿ ಬಳಸಿ. ಇದು ಕೂದಲಿನ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಮೆಹಂದಿಯ ಅಂಶದ ಸಂಗ್ರಹಣೆ ಕೂದಲ ಎಳೆಯನ್ನು ದಪ್ಪವಾಗಿಸುವುದರ ಮೂಲಕ ಕೂದಲ ಮೊತ್ತವನ್ನು ಜಾಸ್ತಿಯಾಗಲು ಸಹಾಯ ಮಾಡುತ್ತದೆ.
·         ಮೆಹಂದಿ ಕೂದಲಿನ ನೈಸರ್ಗಿಕ ಹೊಳಪನ್ನು ಅಧಿಕಗೊಳಿಸುತ್ತದೆ. ಮೆಹಂದಿಯ ಅಂಶದ ಸಂಗ್ರಹಣೆ ಕೂದಲಿನ ಕ್ಯುಟಿಕಲ್‌ನ್ನು ಹೊಳಪಾಗಿಸಿ ನೈಸರ್ಗಿಕ ಹೊಳಪನ್ನು ವರ್ಧಿಸುತ್ತದೆ.