June 16, 2011

ಮನೆಯ ಮೇಲೊಂದು ತೋಟ - ರೂಫ್ ಗಾರ್ಡನ್

ಮನೆಯ ಮುಂದೆ ಒಂದು ಸುಂದರವಾದ ಗಾರ್ಡನ್ ಹೊಂದುವ ಆಸೆ ಯಾರಿಗೆ ತಾನೇ ಇರುವುದ್ದಿಲ್ಲ ಹೇಳಿ. ಬಣ್ಣ ಬಣ್ಣದ ತರಾವರಿ ಹೂ ಗಿಡಗಳಿಂದ ತುಂಬಿದ ಕೈ ತೋಟ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೂ ಮುದವನ್ನು ನೀಡುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮನೆಯ ಮುಂದೆ ಗಾರ್ಡನ್ ಹೊಂದಿರುವುದು ಮೊದಲು ಸರ್ವೇಸಾಮಾನ್ಯವಾಗಿತ್ತು. ಹಳ್ಳಿ ಇರಲಿ ಅಥವಾ ನಗರವಾಗಿರಲಿ ಮನೆಯ ಮುಂದೆ ಹೂ ಗಿಡಗಳನ್ನು ಬೆಳೆಸುವುದು ಗೃಹಣಿಯರ ಅಚ್ಚುಮೆಚ್ಚಿನ ಹವಾಸ್ಯವಾಗಿತ್ತು. ಆದರೆ ಈಗ ಸೀಮಿತ ಜಾಗದಲ್ಲಿ ಮನೆ, ಮನೆಯ ಮೇಲೆ ಮನೆಗಳು ಎಲ್ಲ ಕಡೆ ತಲೆ ಎತ್ತಿರುವುದರಿಂದ, ಮನೆಯ ಮುಂದೆ ಹೂದೋಟ ಕಂಡುಬರುವುದು ಬಹಳ ವಿರಳವಾಗಿದೆ. ಮನೆ ಮುಂದೆ ಜಾಗದ ಅಭಾವ, ಮಹಡಿ ಮೇಲೆ ಮನೆಗಳ ಕಾರಣಗಳು ಗಾರ್ಡನ್ ಪರಿಕಲ್ಪನೆಗೆ ಹೊಸ ದಿಕ್ಕನ್ನೇ ನೀಡಿದೆ ಎಂದರೆ ತಪ್ಪಲಾಗರದು. ಅದೇ ರೂಫ್ ಗಾರ್ಡನ್ ಅಥವಾ ಟೆರಸ್ ಗಾರ್ಡನ್ (ಮಾಳಿಗೆ ತೋಟ).

ಸುಮಾರು ೮-೧೦ ಘಂಟೆಗಳ ಕಾಲ ನಿತ್ಯ ವೈಯಕ್ತಿಕ ಮತ್ತು ವೃತ್ತಿಯ ಜಂಜಾಟಗಳನ್ನು ನಿರಂತರವಾಗಿ ನಿಭಾಯಿಸಿದ ನಂತರ, ದಿನದ ಕೊನೆಯಲ್ಲಿ ತೀವ್ರವಾಗಿ ಬಳಲಿರುವ ಸಮಯದಲ್ಲಿ ನಮ್ಮಲ್ಲಿ ಯಾವುದೇ ಚೈತನ್ಯ ಉಳಿದಿರುವುದ್ದಿಲ್ಲ. ಆಗ ನಾವು ಪ್ರಕೃತಿಯಿಂದ ಮಾತ್ರ ಸಮಾಧಾನವನ್ನು ಪಡೆಯಲು ಸಾಧ್ಯ. ಗಾರ್ಡನ್ ಯಾವಾಗಲೂ ರಿಲಾಕ್ಸ್ ಆಗಲು ಒಂದು ಉತ್ತಮ ಸ್ಥಳ, ಆದರೆ ನಗರದಲ್ಲಿ ಸ್ಥಳದ ಅಭಾವದಿಂದ ಮನೆಯ ಮುಂದೆ ತೋಟವನ್ನು ಹೊಂದುವುದು ಅಸಾಧ್ಯವಾಗಿದೆ.
ಈ ರೂಫ್ ಗಾರ್ಡನ್ ಕಾನ್ಸೆಪ್ಟ್ ಮನೆಯ ಮುಂದೆ ಕೈ ತೋಟ ಮಾಡಲು ಸ್ಥಳ ಅಭಾವವನ್ನು ಹೊಂದಿರುವವರಿಗಂತೂ ಒಂದು ವರದಾನವಾಗಿದೆ. ಮಾಳಿಗೆ ತೋಟ ನಿರ್ಮಿಸುವುದು ಜಾಲೆಜಿಂಗ್ ಆದರೂ ಇದರ ಪರಿಕಲ್ಪನೆ ಹೊಸದೇನು ಅಲ್ಲ. ಹಲವು ಶತಮಾನಗಳ ಹಿಂದಿನಿಂದಲ್ಲೂ ಕಂಡು ಬಂದ ಉದಾಹರಣೆಗಳಿವೆ. ಯುರೋಪಿಯನ್ನರು ಶತಮಾನಗಳಿಂದ ರೂಫ್ ಗಾರ್ಡನ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬಂದಿದ್ದಾರೆ. ಮನೆಯ ಮಾಳಿಗೆ ಮೇಲೆ ಗಾರ್ಡನ್ ಹೊಂದುವುದು ಈಗ ಯುರೋಪಿಯನ್ನರಿಗೆ ಮತ್ತು ಬರೀ ನಗರದ ಗಣ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ನಗರ ವಾಸಿಗಳು ತಮ್ಮ ಮನೆಯ ಛಾವಣಿಯ ಮೇಲೆ ಈ ವ್ಯವಸ್ಥೆಯನ್ನು ಹೊಂದಲು ಸಾಧ್ಯ. ಮನೆಯ ತಾರಸಿ ಈಗ ಹಪ್ಪಳ, ಸಂಡಿಗೆ, ಕಾಳು-ಕಡಿ, ಬಣ್ಣೆ ಒಣಿಗಿಸಲು ಮಾತ್ರ ಸೀಮಿತವಾಗಿಸ ಬೇಕಾಗಿಲ್ಲ. ಅದನ್ನು ಒಂದು ಸುಂದರವಾದ ಅಚ್ಚುಕಟ್ಟಾದ ತೋಟವನ್ನು ನಿರ್ಮಿಸುವುದು ನಿಮ್ಮ ಕೈಯಲ್ಲಿದೆ.

ತಮ್ಮ ಮನೆಯ ಥಾರಸಿಯ ಮೇಲೆ ಗಾರ್ಡನ್ ಹೊಂದ ಬಯಸುವರು ಕೆಲವು ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳುವುದು ಅವಶ್ಯಕ. ಪ್ರಥಮವಾಗಿ ತೋಟವನ್ನಾಗಿ ಮಾಡಬೇಕಾಗಿರುವ ಛಾವಣಿಯು ತೋಟದ ಭಾರವನ್ನು ತಡೆಯುವಷ್ಟು ಸುದೃಢವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎರಡನೆಯದಾಗಿ ಥಾರಸಿ ಅಥವಾ ಛಾವಣಿಯು ಇಳಿ ಜಾರನ್ನು ಹೊಂದಿರಬೇಕು ಮತ್ತು ಪರಿಣಾಮಕಾರಿ ಚರಂಡಿ ವ್ಯವಸ್ಥೆಯನ್ನು ಹೊಂದಿರಬೇಕು. ಹಾಗೆ ನಿಮ್ಮ ರೂಫ್ ಗಾರ್ಡನ್‌ನಲ್ಲಿ ಯಾವುದೇ ಸೋರಿಕೆ/ಬಿರುಕು ಇಲ್ಲವೆಂಬುದನ್ನು ಸಹ ಖಚಿತ ಪಡಿಸಿಕೊಳ್ಳಿ.

ರೂಫ್ ಗಾರ್ಡನ್ ಮಾಡುವ ಮುನ್ನ ಸರಿಯಾದ ಒಂದು ಯೋಜನೆಯನ್ನು ತಯಾರಿಸಿಕೊಂಡರೆ ಒಳ್ಳೆಯದು. ನಿಮ್ಮ ಮನೆಯ ಛಾವಣಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಸಿದ್ದ ಪಡಿಸಿ. ಗಿಡಗಳನ್ನು ನೆಡೆವ ಮುನ್ನ ಸಹ ಇದನ್ನು ಗಮನದಲ್ಲಿಟ್ಟು ಕೊಂಡು, ಹೂ, ಹಣ್ಣು ಹಾಗೂ ತರಕಾರಿ ಗಿಡಗಳನ್ನು ಸಮಾನವಾಗಿ ವಿಂಗಡಿಸಿ ಕೊಳ್ಳಿ. ಸಾಧ್ಯವಾದಷ್ಟೂ ಕಡಿಮೆ ತೂಕದ ಕುಂಡಗಳಾದರೆ ಒಳ್ಳೆಯದು. ಇನ್ನೂ ಗಿಡಗಳ ಆಯ್ಕೆ ಸಹ ಆಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಧೀರ್ಘಾವಧಿಯಲ್ಲಿ ಬೇರುಗಳು ಛಾವಣಿಯನ್ನು ಭೇದಿಸಿಕೊಂಡು ಹೋಗದೆ ಇರುವಂತಹ ಬೇರು ವ್ಯವಸ್ಥೆಯನ್ನು ಹೊಂದಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಜೊತೆಗೆ ವರ್ಷದ ಎಲ್ಲ ಕಾಲಕ್ಕೂ ಹೊಂದಿಕೆಯಾಗುವ ಸುಲಭವಾಗಿ ನಿಭಾಯಿಸ ಬಲ್ಲ ಹೂ ಗಿಡಗಳನ್ನು ಆರಿಸಿ ಕೊಳ್ಳುವುದು ಉತ್ತಮ. ಉದಾಹರಣೆಗೆ ಆಥೋರಿಯಂ, ಕಾರ್ನ್‌ನೇಶಿಯನ್, ಡೇಲಿಯಾ, ಕಾಸ್‌ಮೊಸ್, ಚೆಂಡು ಹೂವು, ಗುಲಾಬಿ, ಮಲ್ಲಿಗೆ ಇತ್ಯಾದಿ. ಹಾಗೆ ಸ್ಟ್ರಾಬೆರಿ, ದಾಳಿಂಬೆ, ಪೈನಾಪಲ್ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಲು ಸಾಧ್ಯ. ಬದನೆಕಾಯಿ, ಟೋಮೋಟೊ. ಮೆಣಸಿನಕಾಯಿ, ಸೊಪ್ಪು ಮತ್ತು ಮುಂತಾದವುಗಳನ್ನು ಸುಲಭವಾಗಿ ಬೆಳೆಯ ಬಹುದು.
ಸುಮಾರು ೧೫-೨೦ ಸೇ.ಮಿ ದಪ್ಪದ ಮಣ್ಣಿನ ಪದರ ಥಾರಸಿಯ ಮೇಲೆ ಗಿಡಗಳನ್ನು ಬೆಳಸಲು ಸಾಕಾಗುತ್ತದೆ. ಮಣ್ಣು, ಮರಳು ಮತ್ತು ಸೂಕ್ತ ಗೊಬ್ಬರದ ಉತ್ತಮ ಮಿಶ್ರಣ ಗಿಡಗಳನ್ನು ಬೆಳಸಲು ಅವಶ್ಯಕ. ಜೂನ್-ಜುಲೈ ತಿಂಗಳು ರಿಪಾಟ್ ಮಾಡಲು ಸರಿಯಾದ ಸಮಯ. ನಿಮ್ಮ ಮನೆಯ ಛಾವಣಿಯನ್ನು ಸುಂದರವಾದ ಗಾರ್ಡನ್‌ ಆಗಿ ಪರಿವರ್ತಿಸಲು ಇಷ್ಟೂ ಬೇಸಿಕ್ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಸಾಕು. ಛಾವಣಿಯ ತೋಟ ಚಿಕ್ಕದಾಗಿ ಚೊಕ್ಕವಾಗಿದರೆ ಸುಂದರವಾಗಿರುತ್ತದೆ.
ರೂಫ್ ಗಾರ್ಡನಿಂಗ್ ಬಗ್ಗೆ ಅಂತರ್‌ಜಾಲದಲ್ಲಿ ಸಾಕಷ್ಟೂ ಮಾಹಿತಿಗಳು ಲಭ್ಯವಿದೆ. ಹಲವು ವೆಬ್ ಸೈಟ್‌ಗಳು ಇದರ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತವೆ. ನಿಮ್ಮ ಮನೆಯ ಟೆರಸಿಗೆ ಹೊಂದುವ ಹಾಗೆ ಗಾರ್ಡನ್‌ನ ಪ್ಲಾನ್‌ನಿಂದ ಹಿಡಿದು ಅದಕ್ಕೆ ಸೂಕ್ತ ಗಿಡಗಳನ್ನು ನೆಡೆವ ವರೆಗಿನ ಎಲ್ಲಾ ಕೆಲಸವನ್ನು ಸರಾಗವಾಗಿ ನಿರ್ವಹಿಸುವ ವೃತ್ತಿಪರ ಲ್ಯಾಂಡ್‌ಸ್ಕೇಪಿಂಗ್ ಎಕ್ಸ್‌ಪರ್ಟ್‌‌ಗಳು ಸಹ ಮಾರುಕಟ್ಟೆಯಲ್ಲಿದ್ದಾರೆ.

ಮಾಳಿಗೆ ತೋಟ ಅಥವಾ ಟೆರೆಸ್ ಗಾರ್ಡನ್ ಕೇವಲ ಮನೆಯ ಅಂದ ಚೆಂದ ಅಥವಾ ಟೈಮ್ ಪಾಸ್ ಹವಾಸ್ಯಕ್ಕೆ ಸೀಮಿತವಾಗಿರದೆ, ಅದರ ಅನುಕೂಲಗಳು ಸಹ ಬಹಳ ಇವೆ. ಮೊದಲನೆಯದಾಗಿ ಈ ವ್ಯವಸ್ಥೆಯು ವಿಶೇಷವಾಗಿ ನಗರದ ಪ್ರದೇಶದಲ್ಲಿ ಪರಿಸರಕ್ಕೆ ಒಯಸಿಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಗಾಳಿಯ ಗುಣಮಟ್ಟವನ್ನು ಸುಧಾರಿಸಿವುದರೊಂದಿಗೆ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಗಾರ್ಡನ್‌ಗಳು ಕಟ್ಟಡವನ್ನು ತೀವ್ರವಾದ ಉಷ್ಣ ಮತ್ತು ತಂಡಿಯಿಂದ ತಡೆಯುತ್ತದೆ. ರೂಫ್ ಗಾರ್ಡನ್‌ಗಳು ನಗರದ ಆಹಾರ ಉತ್ಪಾದನೆಯನ್ನು ಸಹ ಪ್ರಮುಖವಾಗಿ ಬೆಂಬಲಿಸುತ್ತದೆ. ಇವುಗಳು ಮಳೆಯ ನೀರನ್ನು ಸಹ ಉಳಿಸುವಲ್ಲಿ ಸಹಾಯಕಾರಿಯಾಗಿದೆ. ಇವುಗಳ ಜೊತೆ ಈ ಛಾವಣಿ ತೋಟಗಳು ಪಕ್ಷಿಗಳು ಮತ್ತು ಕೀಟಗಳಿಗೆ ನೆಲಯನ್ನು ಒದಗಿಸುವ ಮೂಲಕ ಸ್ವಾಭಾವಿಕ ಆವಾಸವಾಗಿ ಕೆಲಸಮಾಡುತ್ತದೆ.
ಇನ್ನೂ ಮನೆ ಮುಂದೆ ಗಾರ್ಡನ್‌ಗೆ ಜಾಗವಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ನಿಮ್ಮ ಮನೆಯ ಛಾವಣಿಯನ್ನು ಒಂದು ಸುಂದರ ತೋಟವಾಗಿ ಮಾರ್ಪಡಿಸುವ ಬಗ್ಗೆ ಯೋಚಿಸಿ.


ಶಿವಮೊಗ್ಗದ ಸಂಜಯ್ ಕುಮಾರ್, ರೂಪ ದಂಪತಿಗಳಿಗೆ ಗಿಡಗಳ ಹುಚ್ಚು. ಆದರೆ ವಾಸ ಮಹಡಿ ಮನೆಯಲ್ಲಿ. ಈ ಹುಚ್ಚು ಅವರನ್ನು ರೂಫ್ ಗಾರ್ಡನಿಂಗ್ಗೆ ಮೊರೆ ಹೋಗಲು ಪ್ರೇರೆಪಿಸಿತು. ಮನೆ ಮುಂದೆ ಗಿಡಗಳನ್ನು ಬೆಳೆಸಲು ಸ್ಥಳದ ಅಭಾವದ ಕೊರತೆಯನ್ನು ಮೀರಿ ಇವರು ಇಂದು ತಮ್ಮ ಮನೆಯ ತಾರಸಿಯನ್ನೇ ಸುಂದರ ತೋಟವಾಗಿ ಮಾರ್ಪಡಿಸಿ ಕೊಂಡಿದ್ದಾರೆ. ಕೈಗಾರಿಕೋದ್ಯಮಿ ಸಂಜಯ್ ಕುಮಾರ್, ಹಾಗೂ ಅವರ ಪತ್ನಿ ರೂಪರ ನಿರಂತರ ಸ್ವಂತ ಪರಿಶ್ರಮದಿಂದ ಇಂದು ಅವರ ಮನೆಯ ಛಾವಣಿ ಒಂದು ಸುಂದರವಾದ ಗಾರ್ಡನ್ ಆಗಿದೆ. ಎಲ್ಲರ ಹಾಗೆ ಮೊದಲು ಖಾಲಿ ಬಿಟ್ಟಿದ ತಾರಸಿಗೆ ತೋಟದ ರೂಪ ಕೊಡಲು ಯೋಜಿಸಿದ್ದು ಮೊದಲಿಗೆ ವೆನಿಲ್ಲಾವನ್ನು ಬೆಳೆಯುವ ಪ್ರಯತ್ನದ ಮೂಲಕ. ಕೆಲವು ವರ್ಷಗಳ ಕಾಲ ಇವರು ಇದೇ ರೂಫ್ ಗಾರ್ಡನ್ನಲ್ಲಿ ಯಶಸ್ವಿಯಾಗಿ ವೆನಿಲ್ಲಾ ಬೆಳೆಯನ್ನು ಸಹ ಬೆಳೆದಿದ್ದಾರೆ ಎಂಬುದು ಉಲ್ಲೇಖಾರ್ಹ. ಸುಮಾರು 7-8 ವರ್ಷಗಳ ಹಿಂದೆ ಅದರ ಮೂಲಕ ಆರಂಭವಾದ ಅವರ ಪ್ರಯತ್ನ ಇಂದು ಮನೆಯ ಛಾವಣಿಯ ಸ್ವರೂಪವನ್ನೇ ಬದಲಾಯಿಸಿದೆ.
ಇವರ ಈ ಛಾವಣಿ ತೋಟದಲ್ಲಿ ತರ ತರದ ಗಿಡಗಳನ್ನು ನಾವು ಕಾಣಬಹುದು. ಇದು ಕೇವಲ ಹೂ ಗಿಡಗಳಿಗೆ ಮಾತ್ರ ಸೀಮಿತವಾಗಿರದೆ ಹಣ್ಣು ತರಕಾರಿ, ಸೊಪ್ಪುಗಳನ್ನು ಸಹ ಅವರ ಗಾರ್ಡನ್ನಲ್ಲಿ ಬೆಳೆಯುತ್ತಿದ್ದಾರೆ. ತರಕಾರಿ ಸಿಪ್ಪೆ, ಕಾಗದ ಹಾಗೂ ಇತರ ತಾಜ್ಯ ವಸ್ತುಗಳನ್ನು ಹಾಕಲು ತಾರಸಿಯ ಒಂದು ಮೂಲೆಯಲ್ಲಿ ಪ್ರತ್ಯೇಕ ತೊಟ್ಟಿಯನ್ನು ಹೊಂದಿದ್ದು, ಅದರಲ್ಲಿ ಎರೆಹುಳು ಸಾಕಣಿಕೆಯನ್ನು ಸಹ ಮಾಡಿರುವುದು ಇವರ ವಿಶೇಷ. ಅದೇ ಗೊಬ್ಬರವನ್ನು ಗಿಡಗಳನ್ನು ಉಪಯೋಗಿಸುವ ಮೂಲಕ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. ಹಾಗೂ ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಗಿಡಗಳ ಮೇಲೆ ಶೆಡ್ ನೆಟ್ ಹಾಸಿದ್ದಾರೆ. ಗುಲಾಬಿ, ದಾಸವಾಳ, ಮಲ್ಲಿಗೆ, ಅಥೋರಿಯಂ ಹಾಗೂ ಹಲವು ವಿಧದ ಗಿಡಗಳ ಜೊತೆಗೆ ಬೋನ್ಸಾಯ್ಗಳು ಇವರ ತೋಟದ ಮುಖ್ಯ ಆಕರ್ಷಣೆಯಾಗಿದೆ. ಇಲ್ಲಿ ಬೆಳೆಯುತ್ತಿರುವ ತರಕಾರಿಗಳ ಪಟ್ಟಿ ಸ್ವಲ್ಪ ದೊಡ್ಡದೆ. ಟಮೋಟೋ, ಬಿನ್ಸ್, ತೊಂಡೆಕಾಯಿ, ಅವರೆ ಕಾಯಿ, ಮೆಣಸಿನ ಕಾಯಿ, ಬದನೆ ಕಾಯಿ, ಕುಂಬಳಕಾಯಿ, ಲಿಂಬೆ ಹಣ್ಣು, ಇತ್ಯಾದಿ ಇತ್ಯಾದಿಗಳು. ಜೊತೆಗೆ ಬಸಳೆ ಮತ್ತು ಬಗೆ ಬಗೆಯ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಇದಲ್ಲದೆ ಬಾಳೆ, ವಿಳ್ಯೇದೆಲೆ, ಕೆಸು, ಗೆಣಸು, ಫ್ಯಾಷನ್ ಫ್ರೂಟ್ಗಳು ಇವರ ರೂಫ್ ಗಾರ್ಡನ್ನಲ್ಲಿ ಲಭ್ಯ.
" ಈ ರೂಫ್ ಗಾರ್ಡನ್ ವ್ಯವಸ್ಥೆಯಿಂದ ನಮಗೆ ತುಂಬಾ ಅನೂಕೂಲಗಳಾಗಿವೆ. ಮುಖ್ಯವಾಗಿ ಬೇಸಿಗೆಯಲ್ಲಿ ಮನೆಯ ಉಷ್ಣತೆಯನ್ನು ಕಡಿಮೆಮಾಡಿದೆ. ಇದಕ್ಕೆ ಇತರ ಗಾರ್ಡನ್ಗಳಿಗೆ ಹೋಲಿಸಿದರೆ ಕಡಿಮೆ ನೀರು ಸಾಕು. ಮತ್ತು ದಿನ ನಿತ್ಯಕ್ಕೆ ಬೇಕಾದ ಹೆಚ್ಚಿನ ತರಕಾರಿ ಸೊಪ್ಪುಗಳನ್ನು ನಾವೇ ಬೆಳೆಯುವುದರಿಂದ, ಮನೆಗೂ ಸಹಾಯವಾಗುತ್ತದೆ ಹಾಗೂ ಒಳ್ಳೆಯ ಗಾಳಿ ಮತ್ತು ಶುದ್ಧ ತರಕಾರಿ ಸೊಪ್ಪುಗಳ ಬಳಕೆಯಿಂದ ಆರೋಗ್ಯ ದೃಷ್ಟಿಯಲ್ಲೂ ಸಹಾಯವಾಗುತ್ತಿದೆ. ಜೊತೆಗೆ ಟಿವಿ ಕಂಪ್ಯೂಟರ್ ಎಂದು ಮೋರೆ ಹೋಗುವ ಮಕ್ಕಳಿಗೂ ಈ ರೀತಿಯ ಗಾರ್ಡನ್‌ನಿಂದ ಬದಲಾವಣೆ ದೊರೆಯುತ್ತದೆ" ಎಂಬುದು ರೂಪಸಂಜಯ್ ದಂಪತಿಗಳ ಅಭಿಪ್ರಾಯ.
ಇದರ ಜೊತೆಗೆ ಗಾರ್ಡನ್ನ ಒಂದು ಭಾಗದಲ್ಲಿ ಪಾರಿವಾಳ, ಲವ್ಬರ್ಡ್ಸ್. ಗಿಳಿ, ಮೊಲಗಳನ್ನು ಸಹ ಸಾಕಿದ್ದಾರೆ. ಇವರ ಸುಂದರ ಛಾವಣಿ ತೋಟ ಒಂದು ಮಿನಿ ಪಾರ್ಕ್‌ನ ಅನುಭವವನ್ನೇ ನೀಡುತ್ತದೆ ಎಂದರೆ ತಪ್ಪಲಾಗರದು. ಮನೆಯ ಛಾವಣಿಯ ಮೇಲೆ ತೋಟವನ್ನು ನಿರ್ಮಿಸುವ ಮೂಲಕ ಈ ದಂಪತಿಗಳು, ಮನೆಯ ಮುಂದೆ ಗಿಡವನ್ನು ಬೆಳೆಯಲು ಸಾಧ್ಯವಾಗದೆ ಕೈ ಚೆಲ್ಲಿ ಕುಳಿತವರಿಗೆ ಮಾದರಿಯಾಗಿದ್ದಾರೆ. ಮತ್ತು ಪರಿಸರಕ್ಕೆ ಇವರ ಕೊಡುಗೆ ಸಹ ಶ್ಲಾಘನೀಯ.

(ಈ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ 2011ರ ಏಪ್ರಿಲ್ 19 ರಂದು ಪ್ರಕಟಗೊಂಡಿತ್ತು)

March 26, 2011

ನೆನಪುಗಳಿಗೇನು........ ಕಾಡಲೊಂದು ಕಾರಣ ಬೇಕಷ್ಟೇ....

ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗೆ ಕಾನ್ಷಿಯಸ್‌ನೆಸ್. ನನಗಂತೂ ಎಸ್‌ಎಸ್‌ಎಲ್‌ಸಿಗೆ ಬಂದ ಮೇಲೆ ಗೊತ್ತಾಗಿದ್ದು ಪರೀಕ್ಷೆ ಅಂದರೆ ಅಷ್ಟು ಮಹತ್ವದ್ದು ಅಂತ, ಅದೂ ಅಮ್ಮನ ರಗಳೆಯಿಂದ. ಆದರೂ ಅದರ ಪರಿಣಾಮ ಏನು ನನ್ನ ಓದಿನ ಮೇಲೇನು ಆಗಿರಲಿಲ್ಲ ಅನ್ನೋದು ಬೇರೆ ವಿಷಯ ಬಿಡಿ. ಪಾಪ ಅಮ್ಮ ಅವಳ ಮಗಳು ಮೊದಲ ಪ್ರಯತ್ನದಲ್ಲೇ ಪಾಸಾಗಲಿ ಅಂತ ಅದೇಷ್ಟು ಹರಕೆ ಹೊತ್ತಿದಲ್ಲೋ? ಸದ್ಯ ಫಲಿಸಿತ್ತು ಕೂಡ.. ಅವಳಿಗೆ ಭಯ ಇದ್ದಿರಬಹುದು ಎಲ್ಲಿ ನಾನು ಫೇಲ್ ಆದರೆ ಅವಳ ಉಳಿದ ಎರಡು ಮಕ್ಕಳು ನನ್ನ ದಾರಿನೇ ಹಿಡಿಬಹುದು ಅಂತ. ಹಿರಿಯಕ್ಕನ್ನ ಚಾಳಿಯ ... ಹಾಗೆ.

ಇಷ್ಟೇಲ್ಲಾ ಯಾಕೆ ನೆನೆಪಾಯಿತು ಅಂದರೆ ನನ್ನ ಮಗಳ ಮೆಂಹದಿ ರಗಳೆಯಿಂದ, ಅವಳಿಗೆ ಪರೀಕ್ಷೆ, ಟೆಸ್ಟ್‌ ಅಂದರೆ ಏನೋ ದೊಡ್ಡ ವಿಷಯ, ಅದು ಮುಗಿದ ಮೇಲೆ ಪ್ರತಿ ಬಾರಿಯು ಅವಳ ಯಾವುದಾದರೂ ಡಿಮ್ಯಾಂಡ್‌ನ ನಾವು ತೀರಿಸಬೇಕು ಅನ್ನೋ ವಾಡಿಕೆ. ಈ ಬಾರಿ ಅದಕ್ಕೆ ಗುರಿಯಾಗಿದು ನಾನು. ಪ್ರತಿ ಸಾರಿ ಮೆಹಂದಿ ಹಾಕು ಅಂತ ರಾಗ ತೆಗೆದರೆ, ನನಗೆ ಬರೋಲ್ಲ ಅನ್ನೊ ವಿಷಯನ್ನ ಬಿಟ್ಟುಕೊಡದೆ ಮೆಹಂದಿ ಕೋನ್ ಇಲ್ಲ ಅಂತ ತಪ್ಪಿಸಿಕೊಳ್ಳುತ್ತಿದೆ. ನಿಜ ಹೇಳಬೇಕೆಂದರೆ ನನಗೆ ಪೆನ್ಸಿಲಲ್ಲೂ ಒಂದು ಹೂವಿನ ಚಿತ್ರ ಬರೆಯಕ್ಕೊ ಬರೊಲ್ಲ. ಸ್ಕೂಲ್, ಕಾಲೇಜನಲ್ಲಿದಾಗ ಪ್ರತಿ ಸಾರಿ ಪರೀಕ್ಷೆಯಲ್ಲೂ ಯಾವುದೋ ದೇಶದ ನಕ್ಷೆಗೆ ಇನ್ಯಾವುದೋ ರೂಪ ಕೊಟ್ಟಿರುತ್ತದೆ. ಆದರೆ ಈ ಬಾರಿ ನನ್ನ ಮಗಳಿಂದ ತಪ್ಪಿಸಿಕೊಳ್ಳಕ್ಕೆ ನನಗೆ ಯಾವುದೇ ಅಪ್ಷನ್ ಇರಲಿಲ್ಲ. ಅವಳ ಪ್ರೀತಿಯ ಚಿಕ್ಕಿ ಮೆಹಂದಿ ಕೋನ್ ಮೊದಲೇ ತಂದು ಕೊಟ್ಟಿದಳು. ಆದರ ಮೇಲೆ ನನ್ನ ಮಗಳು ಚಿಕ್ಕಿ ಆದ್ರೆ ಎಷ್ಟು ಚೆನ್ನಾಗೆ ಚಿತ್ರ ಬರಿತ್ತಾಳೆ, ನನ್ನ ಕ್ಲಾಸಲ್ಲಿ ಎಲ್ಲಾರಿಗೂ ಅವರ ಅಮ್ಮ ಮೆಹಂದಿ ಎಷ್ಟು ಚೆನ್ನಾಗಿ ಹಾಕತ್ತಾರೆ ಗೋತ್ತಾ? ನೀನು ಮಾತ್ರ ಯಾವಾಗಲೂ ಹಾಕಲ್ಲ ಅಂತ ಕಂಪೇರ್ ಮಾಡಿದ ತಕ್ಷಣ ನನಗೆ ಆಗಲ್ಲ ಅಂದರೆ ಅವಳಿಗೆ ಬೇಜಾರಾಗುತ್ತೆ ಅನ್ನೊದಕ್ಕಿಂತ, ನಾನು ಅವರಿಗಿಂತ ಏನು ಕಡಿಮೆ ಇಲ್ಲ ಅನ್ನೋ ಇಗೋ ಇಂದ ಆಯಿತು ಅಂತ ಒಪ್ಪಿಕೊಂಡಿದ್ದೆ. ಹೇಗಿದರೂ ಇನ್ನೂ ಒಂದು ವಾರ ಇದಿಯಲ್ಲಾ ಅಂತ.

ಅಂತೂ ಒಂದು ವಾರ ಕಳೆದೇ ಹೋಯಿತು, ನಿನ್ನೆ ಇಂದ ಒಂದೇ ಸಮ ಅದೇ ರಾಗ ಅದೇ ಹಾಡು, ನನ್ನ ಹಿಂದೆ ಮುಂದೆ ಓಡಾಟ ಅಮ್ಮ ಮೆಹಂದಿ ಹಾಕು, ಅಮ್ಮ ಮೆಹಂದಿ ಹಾಕು. ಗಳಿಗೆಗೊಮ್ಮೆ ಪ್ರಿಜ್ ತೆಗೆದು ಅದರಲ್ಲಿಟ್ಟ ಮೆಹಂದಿ ಕೋನ್‌ ಇದಿಯೋ ಇಲ್ಲವೋ ಅಂತ ಕನ್ಫರಂ ಬೇರೆ ಮಾಡಕೊಳ್ಳಿತ್ತಿದಳು. ನಾನು ನನ್ನ ಬುದ್ಧಿ ಎಲ್ಲಾ ಖರ್ಚು ಮಾಡಿ ಮೊದಲೇ ನಿಗದಿಯಾದ ಅವಳಿಗೆ ಮೆಹಂದಿ ಹಾಕುವ ಪೋಗ್ರಾಂ ಅನ್ನು ನಾಳೆಗೆ (ಇವತ್ತಿಗೆ) ಮುಂದೆ ಹಾಕಿದೆ. ಸರಿ ಆ ನಾಳೆನೂ ಬಂತು. ಇವತ್ತು ಬೆಳ್ಳಿಗೆ ಎದ್ದು ಎದ್ದೋಳೆ ಕೋನ್ ಹಿಡ್‌ಕೊಂಡು ನನ್ನ ಮುಂದೆ ಹಾಜಾರು. ನನ್ನ ಕೆಲಸ ಮುಗಿದ ಮೇಲೆ ಹಾಕೋದು ಅಂತ ತೀರ್ಮಾನ ಆಯಿತು ಜೊತೆಗೆ ಪ್ರಾಮಿಸ್ ಕೂಡ.

ಬಿಸಿಲಿನ ಜೊತೆ ಜೊತೆಗೆ ಇವಳ ರಗಳೆ ಕೂಡ ಜಾಸ್ತಿಯಾಗುತ್ತ ಹೋಯಿತು. ಅಂತೂ ಮಧ್ಯಾಹ್ನಕ್ಕೆ ಎಲ್ಲಾ ಕೆಲಸ ಮುಗಿತು. ಬೇತಾಳದ ಹಾಗೆ ಕೋನ್‌ ಜೊತೆ ಹಾಜಾರು. ಅವಳಿಗೆ ಬಯ್ಯೋಕೊಂಡು, ಮನೆ ಮುಂದಿನ ಪೋರ್ಟಿಕೊದಲ್ಲಿ ಕುರುಸ್ಕೊಂಡು ಅಂತಿಮವಾಗಿ ನನ್ನ (ವಿ)ಚಿತ್ರ ಕಲೆಯನ್ನ ಶುರುಮಾಡದೆ. ಹೊರಗೆ ಆಕಾಶದಲ್ಲಿ ಸಡನ್ನಾಗಿ ಸೂರ್ಯ ಮತ್ತು ಮೋಡದ ಕಣ್ಣಾಮುಚ್ಚಾಲೆ ಆರಂಭ, ಎರಡೇ ನಿಮಿಷದಲ್ಲಿ ಹನಿ ಹನಿ ಮಳೆ. ಬೇಸಿಗೆಯ ಮೊದಲ ಮಳೆ.. ಮಣ್ಣಿನ ಸ್ಮೇಲ್, ಮದರಂಗಿಯ ಘಮ, ಇವುಗಳ ಜೊತೆಗೆ ಧೂಳಿನ ಮೇಲೆ ಒಂದೊಂದು ಹನಿ ಬಿದ್ದ ಹಾಗೂ ನನ್ನ ನೆನಪು ಹಿಂದೆ ಹಿಂದೆ ಓಡಲು ತೊಡಗಿತು. ಮಳೆ ಮತ್ತು ನನ್ನ ನೆನಪು ಪಂದ್ಯಕ್ಕೆ ಇಳಿಯಿತು.

ಏಪ್ರಿಲ್-ಮೇ ತಿಂಗಳ ಬೇಸಿಗೆ ರಜ, ಇಡೀ ದಿನ ಬಿಸಿಲಿನಲ್ಲಿ ಕುಣಿತ ಮಧ್ಯಾಹ್ನದ ಮೇಲೆ ಬರುವ ಬೇಸಿಗೆಯ ಮಳೆಯಲ್ಲಿ ಒದ್ದೆ. ಅಬ್ಬಾ ಎಂತಹ ಸುಂದರವಾಗಿದ್ದವು ಆ ದಿನಗಳು. ಎಲ್ಲಾ ಮುಗಿದ ಮೇಲೆ ನಿರಿಯುಳಿಯುವ ಬಟ್ಟೆ, ಕೆಸರು ಕಾಲಲ್ಲಿ ಮನೆ ಒಳಗೆ ಹೋಗಿ, ಕೆಂಪು ಕಾವಿಯ ನೆಲದ ಮೇಲೆ ಮೂಡಿಸುತ್ತಿದ್ದ ಮಣ್ಣಿನ ಹೆಜ್ಜೆಗಳು ಹಾಗೂ ಅಮ್ಮನ ಬೈಗುಳಗಳು... ಇವತ್ತು ಮಧ್ಯಾಹ್ನ ಮಳೆ ಬಂದು ಒದ್ದೆಯಾದ ಅಂಗಳದಷ್ಟೇ ಹಸಿಯಾಗಿದೆ ಮನಸ್ಸಲ್ಲಿ.

ನೆನಪುಗಳ ಮಾತು ಮಧುರ, ಆದರೆ ಅದಕ್ಕೆ ಆಡಚಣೆಯು ಅಷ್ಟೇ ಅಂತ ನನ್ನ ಭಾವನೆ. ಮಳೆಯೊಂದಿಗೆ ಬಾಲ್ಯಕ್ಕೆ ತೇಲಿಹೋಗಿದ್ದ ನನಗೆ, ಮಗಳು ಇದು ಏನಮ್ಮ ..ಚೆನ್ನಾಗಿ ಬರೆಯಮ್ಮ ಅಂತ ಮತ್ತೆ ಎಚ್ಚರಿಸಿದ್ದಳು. ನನಗೆ ರೇಗಿ.. ಸುಮ್ಮನೆ ಕುತ್ಕೋ ಅಂತ ಗದರಿ, ಅವಳ ಕೈ ಎಳೆದು ಕೊಂಡು ನನ್ನ ಆರ್ಟ್ ಮುಂದುವರೆಸಿದೆ. ಈ ಬಾರಿ ಮಳೆಯಿಂದ ಮೆಹಂದಿಯ ಕಡೆಗೆ ತಿರುಗಿತು ನನ್ ನೆನಪು. ಮೆಹಂದಿಯ ವಾಸನೆಯ ಜೊತೆಗೆ ನೆನಪಿನ ಸುರಳಿ ಬಿಚ್ಚ ತೊಡಗಿದೆ. ಸುವಾಸನೆಗೂ ನೆನಪಿಗೂ ತುಂಬಾ ನಂಟು ಅನ್ಸುತ್ತೆ. ಯಾವುದೋ ಪರಿಮಳ ಇನ್ಯಾವುದನ್ನೋ ನೆನಪಿಸುತ್ತೆ.

ಮದರಂಗಿ... ಎಷ್ಟು ಸಂಭ್ರಮ!! ಬೇಸಿಗೆ ರಜ ಬಂದರೆ ಸಾಕು ಎಲ್ಲಾ ಅಜ್ಜನ ಮನೆಯಲ್ಲಿ ಒಟ್ಟಾಗುತ್ತಿದ್ದೀವಿ. ಜೊತೆಗೆ ಎಲ್ಲರ ಅಪ್ಪ-ಅಮ್ಮದಿಂದರೂ ಸಹ. ಆವಾಗ ಈಗಿನಷ್ಟೂ ಕೆಲಸ ಇರಲಿಲ್ಲವೋ ಏನು ಕಥೆನೋ? ಮದರಂಗಿ ಹಚ್ಚಿಕೊಳ್ಳುವುದು ಅಂದರೆ ಒಂದು ದಿನವೀಡಿಯ ಕಾರ್ಯಕ್ರಮ ನಮಗೆ. ಹಿತ್ತಲಕಡೆ ಇದ್ದ ಮದರಂಗಿ ಗಿಡದ ಎಲೆಗಳನ್ನಷ್ಟೂ ಬರಬಿ ಬಾಚಿ ಬರಿದು ಮಾಡಿ ಬಿಡುತ್ತಿದ್ದೇವು. ಎಲೆ ಕ್ಯೂಯಲು ಒಬ್ಬರ ಕೈಯಲ್ಲಿ ಒಂದೊಂದು ಪಾತ್ರೆ. ಕಡಿಮೆ ಅಂದರೂ ಒಂಬತ್ತು-ಹತ್ತು ಮಕ್ಕಳು. ಅಡಿಗೆ ಮನೆಯು (ಪಾತ್ರೆ) ಖಾಲಿ, ಗಿಡವೂ ಖಾಲಿ. ನಂತರ ಅದನ್ನು ಅರೆಯುವ ಕೆಲಸ. ಹಳೆ ಅಡಿಗೆ ಮನೆಯಲ್ಲಿದ್ದ (ವಿಶೇಷಗಳಿಗಾಗಿ ಸೀಮಿತವಾಗಿದ್ದ) ತಿರುಸೆಕಲ್ಲಿನ ಮುಂದೆ ನಮ್ಮ ಜಾಂಡ. ಮದರಂಗಿ ಕೆಂಪಾಗಲು ಏನು ಏನು ಹಾಕ ಬೇಕು ಅಂತ ಒಬ್ಬರು ಒಬ್ಬರ ಹತ್ತಿರ ವಿಚಾರಣೆ ಮಾಡಿ, ಎಲೆ, ಸುಣ್ಣ, ಹುಣಿಸೆ ಹಣ್ಣು, ಲಿಂಬೆ ಹಣ್ಣು ಹೀಗೆ ಮಣ್ಣು-ಮಸಿ ಎಲ್ಲಾ ಹಾಕಿ ನುಣ್ಣಗೆ ಅರೆದು ಒಂದು ಪಾತ್ರೆಯಲ್ಲಿ ಹಾಕಿ ಅದರ ಮುಂದೆ ಕುಳಿತು ಬಿಡುತ್ತಿದ್ದೀವಿ. ರಾತ್ರಿ ಊಟ ಮಾಡಿ ಹಾಸಿಗೆ ಎಲ್ಲಾ ಹಾಸಿದ ನಂತರ ದೊಡ್ಡವರಿಗೆ ನಮಗೆ ಮದರಂಗಿ ಹಚ್ಚುವ ಕೆಲಸ. ಅಲ್ಲಿವರೆಗೆ ನಾವು ಅಲ್ಲಿ ಇಲ್ಲಿ ಹುಡುಕಿ ಕಷ್ಟ ಪಟ್ಟು ಎರಡೆರಡು ಪ್ಲಾಸ್ಟಿಕ್ ಕವರ್‌ಗಳನ್ನು ಒಟ್ಟು ಹಾಕಬೇಕಾದರೆ ಸಾಕಾಗುತ್ತಿತ್ತು. ಈಗಿನಷ್ಟೂ ಧಾರಾಳವಾಗಿ ಕವರ್‌ಗಳು ಆಗ ಮನೆಯಲ್ಲಿ ಎಲ್ಲಿ ಸಿಗುತ್ತಿದ್ದವು?! ದೊಡ್ದಮ್ಮ, ಹಿರಿಯಮ್ಮ, ಚಿಕ್ಕಿ, ಅಮ್ಮ, ಅಕ್ಕ (ಅತ್ತೆಯಂದಿರು) ಇವರೆಲ್ಲಾ ಅಡಿಗೆಮನೆ ಕೆಲಸ ಮುಗಿಸಿ ಬಾವಿಕಟ್ಟೆಗೆ ಬರೋ ಹೊತ್ತಿಗೆ ನಮಗೆ ಅರ್ಧ ಕಣ್ಣು ಮುಚ್ಚಿರುತ್ತಿತ್ತು. ಆದ್ರೂ ಕಷ್ಟಪಟ್ಟು ಎಲ್ಲಾ ಕಾಯುತ್ತಿರುತ್ತಿದ್ದೇವು. ಒಬ್ಬೊಬ್ಬರಿಗೆ ಒಂದು ಕೆಲಸ, ಒಬ್ಬರು ಅಲ್ಲೇ ಇದ್ದ ಬಚ್ಚಲು ಒಲೆಯ ಕೆಂಡದಿಂದ ಬಾಳೆ ಕಾಯಿಸಿ ಕೊಟ್ಟರೆ, ಇನ್ನೊಬ್ಬರು ಅದನ್ನು ಮದರಂಗಿ ಹರಡದ ಹಾಗೆ ಮೇಲಿಟ್ಟು ಬಾಳೆ ದಾರದಿಂದ ಕಟ್ಟಿ ಅದರ ಮೇಲೆ ಇಡಿ ಹಸ್ತಕ್ಕೆ ಕವರ್ ತೊಡಿಸುತ್ತಿದರು. ಇನ್ನೂ ಮದರಂಗಿ ಡಿಸೈನ್ ಎಲ್ಲರಿಗೂ ಕಾಮನ್. ಕೈ ಉಗುರುಗಳಿಗೆ ಟೋಪಿ, ಹಸ್ತಕ್ಕೆ ಮಧ್ಯ ಒಂದು ಚುಕ್ಕಿ, ಅದರ ಸುತ್ತ ಐದೋ ಆರೋ ಚುಕ್ಕಿಗಳು. ವಯಸ್ಸಿಗೆ ಅನುಗುಣವಾಗಿ ಚುಕ್ಕಿಗಳ ಸೈಜ್ ಮತ್ತು ಸಂಖ್ಯೆಯಲ್ಲಿ ವ್ಯತ್ಯಾಸ ಅಷ್ಟೇ. ಕೊನೆಗೆ ಉಳಿದ ಮದರಂಗಿಯನ್ನು ಆಮ್ಮಂದಿರು ಮೆತ್ತಿ ಕೊಳ್ಳುತ್ತಿದರು. ಆಗೆಲ್ಲಾ ಮದರಂಗಿ ಹಚ್ಚಿ ಕೊಳ್ಳುವುದು ಎಂದರೆ ಸಂಜೆಯಿಂದ ರಾತ್ರಿವರೆಗೆ ಸಂಭ್ರಮ. ಮನೆಯಂದಿಯೆಲ್ಲಾ ಅದರರಲ್ಲಿ ಭಾಗಿ.

ಇವತ್ತು ಬೆಳ್ಳಿಗೆ ಇನ್ನೂ ಫೇಸ್ ಬುಕ್‌ಲ್ಲಿ ಯಾರದ್ದೋ ಕಾಮೆಂಟ್ ಓದಿದ ನೆನಪು "ನೆನಪುಗಳಿಗೇನು.... ಕಾಡಲೊಂದು  ಕಾರಣ ಬೇಕಷ್ಟೆ" ಅಂತ. ಎಷ್ಟು ನಿಜ. ಮಗಳ ಎಕ್ಸಾಮ್, ಮೆಹಂದಿ ರಗಳೆ, ಮಳೆ ಹೀಗೆ......

(ನಿನ್ನೆ ಮಧ್ಯಾಹ್ನ ಬಿದ್ದ ಮೊದಲ ಬೇಸಿಗೆ ಮಳೆಯ ನೆನಪಿನಲ್ಲಿ)

January 3, 2011

ಚಳಿಗಾಲದ ಸಮಸ್ಯೆಗಳಿಗೆ ಸರಳ ಪರಿಹಾರಗಳು.

ವಾವ್! ಚಳಿಗಾಲದಲ್ಲಿ ಬೆಚ್ಚನೆ ಉಡುಪು ಧರಿಸಿ, ಬಿಸಿಬಿಸಿ ಕಾಫಿಯೊಂದಿಗೆ, ಬೋಂಡ, ಬಜ್ಜಿ ಸವಿಯುವುದು ಎಲ್ಲರಿಗೂ ಪ್ರಿಯವಾದದ್ದೇ. ಚಳಿಗಾಲ ಎಂದರೆ ಬರೀ ಬೆಚ್ಚನೆ ಉಡುಪುಗಳನ್ನು ತೊಡುವುದು ಮಾತ್ರವಲ್ಲ. ಚಳಿಗಾಲದ ಜೊತೆಗೆ ಹಲವು ತೊಂದರೆಗಳು ಕಾಡುತ್ತವೆ. ಶುಷ್ಕ ಕೂದಲು, ಒಣ ಚರ್ಮ, ಬಿರುಕು ಬಿಟ್ಟ ಹಿಮ್ಮುಡಿಗಳು , ಒಡೆದ ತುಟಿಗಳು ಈ ಕಾಲದ ಕಾಮನ್ ಸಮಸ್ಯೆಗಳು. ಕಡಿಮೆ ಉಷ್ಣಾಂಶ, ಕಡಿಮೆ ತೇವಾಂಶ ಮತ್ತು ತಣ್ಣನೆ ಕೊರೆಯುವ ಗಾಳಿ ಇವುಗಳಿಗೆಲ್ಲಾ ಮೂಲ ಕಾರ‍ಣವಾಗಿದೆ. ಕೂದಲು ಮತ್ತು ಚರ್ಮವಂತೂ ಶುಷ್ಕವಾಗಿ ನಿರ್ಜಿವ ಸ್ವರೂಪ ಪಡೆದು ಕೊಳ್ಳುತ್ತವೆ. ಫ್ಯಾಷನ್ ಪ್ರಿಯರಿಗೊಂತು ಈ ಕಾಲ ಶಾಪವೇ ಸರಿ. ಸ್ಪಲ ಕಾಳಜಿ ಮತ್ತು ಸುಲಭ ಕ್ರಮಗಳ ಮೂಲಕ ಈ ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಚಳಿಗಾಲದಲ್ಲಿ ಕಾಡುವ ಕಾಮನ್ ಸಮಸ್ಯೆಗಳಿಗೆ ಕೆಲವು ಸರಳ ಟಿಪ್ಸ್‌ಗಳು ಇಲ್ಲಿವೆ. ಈ ಕ್ರಮಗಳನ್ನು ನಿತ್ಯ ಜೀವನದಲ್ಲಿ ಆಳವಡಿಸಿ ಕೊಳ್ಳಿ ಚಳಿಗಾಲದಲ್ಲಿ ನಿಮ್ಮನ್ನು ಕಾಡುವ ತೊಂದರೆಗಳಿಗೆ ಬಾಯ್ ಹೇಳಿ ಮತ್ತು ಎಂಜಾಯ್ ವಿಂಟರ್..!


ಚರ್ಮ:
ಚಳಿಗಾಲದ ತಣ್ಣನೆ ಗಡುಸಾದ ಹವಾಗುಣದಿಂದ ಚರ್ಮವು ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು, ತುರಿಕೆ ಕಾಣಿಸು ಕೊಳ್ಳುವುದು ಸಾಮನ್ಯ.ಇದನ್ನು ತಡೆಗಟ್ಟಲು ಸ್ಪಲ ಕೇರ್ ಅತ್ಯಗತ್ಯ.
ಚಳಿಗಾಲದಲ್ಲಿ ಅತಿ ಬಿಸಿ ನೀರಿನ ಸ್ನಾನ ಬೇಡ. ಇದು ಚರ್ಮದ ಎಣ್ಣೆ ಅಂಶವನ್ನು ನಾಶ ಮಾಡುತ್ತದೆ. ಉಗುರು ಬೆಚ್ಚಗಿನ ನೀರು ಉತ್ತಮ. ಹಾಗೆ ಸ್ನಾನ ಮಾಡುವ ಅವಧಿಯನ್ನು ಕಡಿಮೆಗೊಳಿಸಿ. ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನ ಮಾಡಿ.
ಗಡುಸಾದ ಸೋಪಿನ ಬಳಕೆಯಿಂದ ಚರ್ಮದ ನೈಸರ್ಗಿಕ ತೈಲಗಳ ನಷ್ಟವಾಗಿ ಇನ್ನಷ್ಟೂ ಒಣಗುತ್ತದೆ, ಅದರಿಂದ ಸಾದ್ಯವಾದಷ್ಟೂ ಸೌಮ್ಯವಾದ ಹೆಚ್ಚು ಮಾಶ್ಚರೈಸರ್ ಯುಕ್ತ ಸೋಪನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವೆ ಸೋಪಿನ ಬದಲಿಗೆ ಸ್ನಾನಕ್ಕೆ ಹೆಸರು ಕಾಳಿನ ಹಿಟ್ಟನ್ನು ಸಹ ಬಳಸಬಹುದು.
ಸ್ನಾನದ ನಂತರ ಟವೆಲ್‌ನಿಂದ ದೇಹವನ್ನು ಉಜ್ಜ ಬೇಡಿ. ಕೋಮಲವಾಗಿ ಒರಿಸಿ ಹಾಗೂ ಕಡ್ಡಾಯವಾಗಿ ಕೊಬ್ಬರಿ ಎಣ್ಣೆ, ಷೀಕಕಾಯಿ ಎಣ್ಣೆ (shea butter) ಅಥವಾ ಸೂಕ್ತವಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳುವ ರೂಡಿ ಮಾಡಿಕೊಳ್ಳಿ.
ಚಳಿಯಿಂದ ಗಡುಸಾದ ಚರ್ಮದ ತುರಿಕೆಗೆ ಕೊಬ್ಬರಿ ಎಣ್ಣೆಯ ಮಸಾಜ್ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಮುಖ, ಕೈ, ಕಾಲುಗಳಿಗೆ ಸೂಕ್ತವಾದ ಕ್ರಿಮ್, ಎಣ್ಣೆ ಅಥವಾ ಲೋಶನ್ ಬಳಸುವುದನ್ನು ಮರೆಯಬೇಡಿ. ಸಾಧ್ಯವಾದಷ್ಟೂ A, C, D ಮತ್ತು E ವಿಟಮಿನ್ ಯುಕ್ತ ನೈಸರ್ಗಿಕ ಎಣ್ಣೆಗಳನ್ನು ಅಯ್ಕೆ ಮಾಡಿಕೊಳ್ಳಿ. (ಕೊಬ್ಬರಿ ಎಣ್ಣೆ, ಅಲಿವ್ ಎಣ್ಣೆ, ಕೋಕಾ ಎಣ್ಣೆ, ಷೀಕಕಾಯಿ ಎಣ್ಣೆ ಇತ್ಯಾದಿ)
ವಾರಕ್ಕೊಮ್ಮೆ ಸ್ಕ್ರಬರ್ ಬಳಸಿ, ಇದು ಒಣಗಿದ ಚರ್ಮವನ್ನು ತೆಗೆಯಲು ಸಹಕಾರಿಯಾಗುತ್ತದೆ. ನಂತರ ಪೇಸ್ ಪ್ಯಾಕ್ ಮಾಡಿ ಕೊಳ್ಳಿ. ಇದರಿಂದ ಚಳಿಯಿಂದ ಒಡೆದ ಚರ್ಮ ಮತ್ತೆ ಕಾಂತಿಯುಕ್ತ ಹೊಳೆಯತ್ತದೆ.
ಬೆಣ್ಣೆ ಹಣ್ಣಿನ (avocado) ಪೇಸ್ ಪ್ಯಾಕ್ ಒಣ ಚರ್ಮಕ್ಕೆ ಅತಿ ಸೂಕ್ತ. ಬೆಣ್ಣೆ ಹಣ್ಣಿನೊಂದಿಗೆ ಅಲಿವ್ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಕೊಳ್ಳಿ. 10-15 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳಿಯಿರಿ.
ಹಾಗೇ ಓಟ್ಸ್‌ನ ಪೇಸ್ ಪ್ಯಾಕ್ ಕೂಡ ಬಳಸಬಹುದು. ಓಟ್ಸ್ ಫ್ಲೆಕ್ಸ್‌ನ ಪುಡಿ, ಮೊಟ್ಟೆಯ ಹಳದಿ ಭಾಗ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ. ಮುಖ ಹಚ್ಚಿ 20 ನಿಮಿಷಗಳ ನಂತರ ತೊಳಿಯಿರಿ.
ಮೊಸರು, ಮಜ್ಜಿಗೆ, ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ನಂತರ ತೊಳಿರಿ.
ರಾತ್ರಿ ಮಲಗುವ ಮುನ್ನ ಲೋಳೆಸರದ ರಸವನ್ನು ನೇರವಾಗಿ ಮುಖಕ್ಕೆ ಹಚ್ಚಿ ಕೊಳ್ಳಿ.
ಈ ಫೇಸ್ ಮ್ಯಾಕ್ಸ್‌ಗಳು ನಿಮ್ಮ ಚರ್ಮಕ್ಕೆ ಸಂಪೂರ್ಣ ಪ್ರಮಾಣದ ವಿಟಮಿನ್, ಮಿನರಲ್ಸ್, ಅಂಟಿಅಕ್ಸಿಡೆಂಟ್‌ಗಳು ಮತ್ತು ಚರ್ಮವನ್ನು ಮೃದುಗೊಳಿಸುವ ಅಂಶಗಳನ್ನು ಸರಬರಾಜುಮಾಡುತ್ತವೆ. ಮತ್ತು ಚರ್ಮದ ಶುಷ್ಕತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇವು ನಿಮ್ಮ ಚರ್ಮದ ನೈಸರ್ಗಿಕ pH ಮಟ್ಟವನ್ನು ಪುನಃ ಸ್ಥಾಪಿಸುತ್ತದೆ ಮತ್ತು ಚಳಿಗಾಲದ ಗಾಳಿಯ ಋಣಾತ್ಮಕ ಪ್ರಭಾವದಿಂದ ಚರ್ಮವನ್ನು ರಕ್ಷಿಸುತ್ತದೆ.
ಕೈಗಳಿಗೆ ಗ್ಲೌಸ್ ಹಾಕಿ ಕೊಳ್ಳಿ. ಕೆಲಸದ ನಂತರ ಸರಿಯಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳಿ.
ಒರಟಾದ ಹಸ್ತಗಳಿಗೆ ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣದಿಂದ ಮಸಾಜ್ ಮಾಡಿ ಕೊಳ್ಳಿ. ಇದು ಕೈಯನ್ನು ಮೃದುಗೊಳಿಸುತ್ತದೆ.
ಹಾಗೆಯೇ 1 ಚಮಚ- ಗ್ಲಿಸಿರಿನ್,1 ಚಮಚ- ನಿಂಬೆ ರಸ ಮತ್ತು 5 ಹನಿ ರೋಸ ವಾಟರ್‌ ಅನ್ನು ಮಿಕ್ಸ್ ಮಾಡಿ, ಕೈಗಳಿಗೆ 10-15 ನಿಮಿಷಗಳ ಮಸಾಜ್ ಮಾಡಿ ಕೊಳ್ಳಿ
ಮನೆಯಿಂದ ಹೊರ ಹೊರಡುವಾಗ ಕನಿಷ್ಟ 15 ಅಥವಾ ಹೆಚ್ಚಿನ SPF ಅಂಶವನ್ನು ಹೊಂದಿರುವ ಸನ್‌ಸ್ಕ್ರೀನ್ ಲೊಶನ್ ಹಚ್ಚಿ ಕೊಳ್ಳಿ. ಸನ್‌ಸ್ಕ್ರೀನ್ ಮತ್ತು ಮಾಶ್ಚರೈಸರ್‌ ಮಿಶ್ರವಾಗಿರುವ ಲೋಶನ್‌ ಸಹ ನೀವು ಆಯ್ಕೆ ಮಾಡಿಕೊಳ್ಳ ಬಹುದು.
ಒಡೆದ ಹಿಮ್ಮುಡಿಗಳಿಂದ ಮುಕ್ತಿ ಪಡೆಯಲು ರಾತ್ರಿ ಮಲಗುವ ಮುನ್ನ ಸೂಕ್ತವಾದ ಕ್ರೀಮ್ ಹಚ್ಚಿ, ಕಾಲಿಗೆ ಸಾಕ್ಸ್ ಹಾಕಿ ಕೊಂಡು ಮಲಗುವ ಅಭ್ಯಾಸ ಮಾಡಿ ಕೊಳ್ಳಿ. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಹಾಕಿ ಕಾಲನ್ನು ಅದರಲ್ಲಿ ಇಟ್ಟು ಕೊಳ್ಳಿ. ಹಾಗೇಯೆ ಅನ್ನದ ತಿಳಿಗೆ ಸ್ವಲ್ಪ ಹಾಕಿ ಕಾಲನ್ನು 10-15 ನಿಮಿಷಗಳ ಕಾಲ ಅದರಲ್ಲಿ ಇಟ್ಟುಕೊಳ್ಳಿ. ಒಡೆದ ಹಿಮ್ಮುಡಿಯನ್ನು ಮೃದುಗೊಳಿಸುತ್ತದೆ ಮತ್ತು ಬಿರುಕುಗಳು ಮುಚ್ಚಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ತುಟಿಗಳ ಒಡೆಯುವಿಕೆ ಸಾಮಾನ್ಯ. ಒಡೆದ ತುಟಿಗಳಿಗೆ ಪದೇ ಪದೇ ನಾಲಿಗೆ ತಗಲಿಸ ಬೇಡಿ. ಸದಾ ಲಿಪ್ ಬಾಮ್ ಹಚ್ಚಿ ಕೊಳ್ಳಿ, ತುಟಿಯನ್ನು ಒಣಗಲು ಬಿಡಬೇಡಿ. ಒಡೆದ ತುಟಿಗಳಿಗೆ ಬೆಣ್ಣೆ ಮತ್ತು ಹಾಲು ಕೆನೆ ರಾಮಬಾಣ. ಕೊಬ್ಬರಿ ಎಣ್ಣೆ, ಅಲಿವ್‌ ಅಯಿಲ್, ಷೀಕಕಾಯಿ ಎಣ್ಣೆಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಕೂದಲು:
ಚಳಿಗಾಲದ ತಡಿ ಹವೆಯಿಂದ ಕೂದಲು ಒಣಗಿ ತನ್ನ ಹೊಳಪನ್ನು ಕಳೆದು ಕೊಳ್ಳುತ್ತದೆ. ಜೊತೆಗೆ ಕೂದಲು ಉದುರುವುದು ಕವಲು ಒಡೆಯುವುದು, ಹೊಟ್ಟಿನ ಸಮಸ್ಯೆಗಳು ಸೇರಿ ಕೊಳ್ಳುತ್ತವೆ.
ಚಳಿಗಾಲದ ಸಮಯದಲ್ಲಿ ನಿಮ್ಮ ಕೂದಲನ್ನು ಬಿಸಿ ನೀರಿನಿಂದ ತೊಳಿಯಬೇಡಿ. ಅತಿಯಾಗಿ ಕೂದಲು ತೊಳೆಯುವುದು ಅಥವಾ ಶಾಂಪೂ ಬಳಕೆಯನ್ನು ತಪ್ಪಿಸಿ. ಕೂದಲಿಗೆ ಮೈಲ್ಡ್ ಶಾಂಪೂವನ್ನು ಬಳಸಿ. ದಾಸವಾಳದ ಸೊಪ್ಪು, ಲೋಳೆಸರ, ಅಂಟವಾಳ ಮತ್ತು ಸೀಗೆಕಾಯಿಯ ಮಿಶ್ರಣವು ಕೂದಲಿಗೆ ಒಳ್ಳೆಯ ನೈಸರ್ಗಿಕ ಶಾಂಪೂ.
ಕೂದಲನ್ನು ಬಿಸಿ ಮಾಡುವ ಉಪಕರಣಗಳಾದ ಹೇರ್ ಡ್ರೈಯರ್, ಕರಲರ್‌ಗಳ ಬಳಕೆಯಿಂದ ದೂರ ಇರಿ. ಕೂದಲನ್ನು ನೈಸರ್ಗಿಕವಾಗಿ ಒಣಗಿಸಿ ಕೊಳ್ಳಿ.
ಚಳಿಗಾಲದಲ್ಲಿ ಕೂದಲನ್ನು ಪದೇ ಪದೇ ಕಲರಿಂಗ್, ಸ್ಟ್ರೀಕಿಂಗ್, ಅಥವಾ ಐರಿನಿಂಗ್‌ಗಳಿಗೆ ಒಡ್ಡಬೇಡಿ. ಇದರಿಂದ ಕೂದಲಿನ ನೈಸರ್ಗಿಕ ತೈಲ ನಷ್ಟವಾಗಿ, ಕೂದಲು ಇನ್ನಷ್ಟೂ ಹದಗೆಡುತ್ತದೆ.
ಕೂದಲನ್ನು ಗಾಳಿಗೆ ಹಾರಡಲೂ ಬಿಡಬೇಡಿ. ಅದಷ್ಟೂ ಕೂದಲನ್ನು ಕಟ್ಟಿ ಕೊಳ್ಳಿ. ಹೊರಗೆ ಹೋಗುವ ಸ್ಕಾರ್ಫ್‌, ಟೋಪಿಗಳನ್ನು ಬಳಸಿ
ಒಣ ಕೂದಲಿಗೆ ಬಿಸಿ ಎಣ್ಣೆಯ ಮಸಾಜ್ ಅತ್ಯಂತ ಪರಿಣಾಮಕಾರಿ. ಹಾಗೆ ಅಲಿವ್ ಅಯಿಲ್ ಮಸಾಜ್ ಸಹ ತುಂಬಾ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಚಳಿಗಾಲದಲ್ಲಿ ಕೂದಲು ಒಣಗಿ ಹೊಳಪನ್ನು ಕಳೆದು ಕೊಳ್ಳುವುದನ್ನು ತಪ್ಪಿಸಲು, ಆಗಾಗ ಸೂಕ್ತ ನೈಸರ್ಗಿಕ ಕಂಡಿಷನರ್ ಬಳಕೆ ಅಗತ್ಯ. ಬೇಸಿಗೆಗಿಂತ ಚಳಿಗಾಲದಲ್ಲಿ ಕೂದಲಿಗೆ ಕಂಡಿಷನರ್‌ನ್ನ ಅಗತ್ಯ ಹೆಚ್ಚು. ಕೂದಲು ತೊಳೆಯುವ ಮುನ್ನ ಲೋಳೆಸರದ ರಸ ಅಥವಾ ರುಬ್ಬಿದ ದಾಸವಾಳ ಸೊಪ್ಪನ್ನು 15-20 ನಿಮಿಷಗಳ ಕಾಲ ತಲೆಗೆ ಹಚ್ಚಿ ಕೊಳ್ಳಿ. ಮೆಹಂದಿಯನ್ನು ಕಂಡಿಷನ್ ಆಗಿ ಸಹ ಬಳಸಬಹುದು, ಅದಕ್ಕೆ ಒಂದು ಚಮಚ ಎಣ್ಣೆ ಮಿಕ್ಸ್ ಮಾಡಿಕೊಳ್ಳಿ. ಕೆಲ್ವು ಹನಿ ಶುಂಠಿರಸದೊಂದಿಗೆ ಅಲೀವ್ ಅಯಿಲ್ ಸೇರಿಸಿ, ತಲೆಗೆ ಹಚ್ಚಿ ಕೊಂಡು, ಒಂದು ಘಂಟೆಯ ನಂತರ ತೊಳಿಯಿರಿ. ಸೀಗೆ ಕಾಯಿ ಮತ್ತು ಮೆಂತ್ಯೆಯ ಪುಡಿಯನ್ನು ಕೂದಲು ತೊಳೆಯಲು ಉಪಯೋಗಿಸಿ. ಬೆಣ್ಣೆ ಹಣ್ಣು ಸಹ ಕೂದಲಿಗೆ ಒಳ್ಳೆಯ ಕಂಡಿಷನರ್.


ಆಹಾರ ಕ್ರಮ:
ಚಳಿಗಾಲದಲ್ಲಿ ಈ ಎಲ್ಲಾ ಬೇಸಿಕ್ ಕೇರ್‌ಗಳ ಜೊತೆ ನಾವು ಸೇವಿಸುವ ಆಹಾರ ಕ್ರಮದ ಕಡೆಗೆ ಗಮನಹರಿಸುವುದು ಸಹ ಅತಿ ಅವಶ್ಯಕ. ಚಳಿಗಾಲದ ಸಮಸ್ಯೆಗಳಿಂದ ದೂರವಿರಲು ದೇಹದ ಹೊರಗಿನಿಂದ ಕಾಳಜಿಯ ಜೊತೆಗೆ ದೇಹದ ಒಳಗಿನ ಕಾಳಜಿ ಸಹ ಮುಖ್ಯ. ಈ ಕಾಲದಲ್ಲಿನ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಪರಿಹಾರಿಸಲು ನಾವು ಸೇವಿಸುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.
ಜೀವ ಜಲ ನೀರು ಬೇಸಿಗೆ ಅಷ್ಟೇ ಚಳಗಾಲದಲ್ಲೂ ಅವಶ್ಯಕ. ಇದು ದೇಹವನ್ನು ಹೈಡ್ರೇಟು ಮಾಡುತ್ತದೆ. ಇದರಿಂದ ಚರ್ಮವನ್ನು ಆರೋಗ್ಯಕರ ಹೊಳಪನ್ನು ಪಡೆಯುತ್ತದೆ. ಚೆನ್ನಾಗಿ ನೀರು ಕುಡಿಯಿರಿ.
ಅಗಸೆ ಬೀಜದ ಎಣ್ಣೆ (Flaxseed) - ಇದು ದೇಹವನ್ನು ಒಳಗಿನಿಂದ ತೇವವಾಗಿಡುತ್ತದೆ. ಇದು ಬಹು ಆವಶ್ಯಕವಾದ ಸ್ವಾಭಾವಿಕ ಕೊಬ್ಬುಗಳನ್ನು ಹೊಂದಿರುವುದರಿಂದ ಸಮಸ್ತ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ ಹಾಗೂ ಅವಶ್ಯಕ. ಇದು ಎಣ್ಣೆಯ ರೂಪದಲ್ಲಿ ಹಾಗೂ ಕ್ಯಾಪ್ಸೂಲ್‌ ರೂಪದಲ್ಲಿಯೂ ಸಹ ಲಭ್ಯ .
ನಿತ್ಯದ ಆಹಾರ ಕ್ರಮದಲ್ಲಿ ಅಗತ್ಯವಾದ ಒಳ್ಳೆಯ ಎಣ್ಣೆಗಳನ್ನು ಅಳವಡಿಸಿ ಕೊಳ್ಳಿ. ಜೈವಿಕ ಬೆಣ್ಣೆ, ಕಾಡ್ ಲೀವರ್ ಅಯಿಲ್, ಒಮೆಗಾ-3, ಕೊಬ್ಬರಿ ಎಣ್ಣೆ ಇತ್ಯಾದಿಗಳು. ಜೊತೆಗೆ ಹಸಿ ತರಕಾರಿ, ಮೀನು, ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತು ಹಣ್ಣುಗಳನ್ನು ನಿಮ್ಮ ದಿನದ ಆಹಾರದಲ್ಲಿ ಸೇರಿಸಿ ಕೊಳ್ಳಿ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

ಮನಸ್ಸಿದ್ದರೆ ಮಾರ್ಗ..!!

ಮಲೆನಾಡಿನ ಹಳ್ಳಿಗಳಲ್ಲಿ ಈಗ ಕೃಷಿಕ ಯುವಕರ ಮದುವೆ ಹೆತ್ತವರಿಗೆ ಒಂದು ಸಮಸ್ಯೆಯಾಗಿದೆ. ಮದುವೆ ವಯಸ್ಸು ದಾಟಿದರೂ ಮದುವೆಗೆ ಹೆಣ್ಣು ಸಿಗದೆ ಪರದಾಡುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದೆ. ಈ ವಿಷಯ ಕೇಳುಗರಿಗೆ ಒಂದು ತಮಾಷೆ ಅನಿಸ ಬಹುದು. ಆದರೆ ಇದರ ಗಂಭೀರತೆಯನ್ನು ಇಲ್ಲಿನವರು ಮಾತ್ರ ಬಲ್ಲರು. ನಮ್ಮ ಕಡೆ ಈಗ ಮದುವೆ-ಮುಂಜಿ, ನಾಮಕರಣ ಅಥವಾ ಯಾವುದೇ ಫಂಕ್ಷನ್ ಇರಲಿ, ಅಲ್ಲಿ ಒಂದು ವಿಷಯದ ಚಚರ್ೆಯಂತೂ ಗ್ಯಾರಂಟಿ. ಅದು ನಿಮ್ಮ ಕಡೆ ಮದುವೆಗಿರುವ ಹುಡುಗಿಯರು ಇದ್ದರಾ ಅಂತ. ಒಂದು ಕಾಲ ಇತ್ತು ಹುಡುಗನಿಗೆ ಜಮೀನು ಮನೆಯಿದ್ದರೆ ಸಾಕು ಮದುವೆಯಾಗಲೂ ಯಾವುದೇ ಅಡ್ಡಿಲ್ಲ ಎಂಬುದು ಹೆಣ್ಣು ಹೆತ್ತವರ ಅಭಿಪ್ರಾಯವಾಗಿತ್ತು. ಆದರೆ ಈಗ ಇದಕ್ಕೆ ವಿರುದ್ಧವಾಗಿ ಹಳ್ಳಿ ಮನೆಯಾದರೆ ಬೇಡ, ಮದುವೆಯಾಗುವ ಹುಡುಗ ಸಿಟಿಯಲ್ಲಿರಬೇಕು ಅನ್ನೋದೇ ನೂರಕ್ಕೆ ತೊಂಬತ್ತೊಬ್ಬತ್ತು ಜನ ಕನ್ಯಾಮಣಿಗಳ ಮೊದಲ ಹಾಗೂ ಕೊನೆಯ ಬೇಡಿಕೆಯಾಗಿದೆ. ಹೆಣ್ಣು ಮಕ್ಕಳೇ ಕಡಿಮೆ, ಅದರಲ್ಲೂ ಮದುವೆಯಾಗಿ ಹಳ್ಳಿಯಲ್ಲಿ ಜೀವನ ನೆಡೆಸಲು ಸಿದ್ಧವಾಗಿರುವ ಕನ್ಯೆಯರಂತೂ ವಿರಳ. ನನ್ನ ಕಸಿನ್ಗಳಲ್ಲಿ ಮೂರು-ನಾಲ್ಕು ಜನ ವರ್ಷ ಮೂವತ್ತು ದಾಟಿದರೂ ಮದುವೆಯಾಗದೆ ಉಳಿದಿರುವುದು ಒಂದು ಚಿಕ್ಕ ಉದಾಹರಣೆ ಅಷ್ಟೆ! ಅನೂಕೂಲಸ್ಥರಾಗಿರುವ ಇವರೆಲ್ಲರ ಒಂದೇ ಒಂದು ಮೈನೆಸ್ ಪಾಯಿಂಟ್ ಎಂದರೆ ಹುಡುಗ ಹಳ್ಳಿಯಲ್ಲಿ ಕೃಷಿಕ ಎನ್ನುವುದಾಗಿದೆ.
ಹೀಗೆ ಹೇಳುವ ಹೆಚ್ಚಿನವರು ಹಳ್ಳಿಯಲ್ಲೇ ಹುಟ್ಟಿ ಬೆಳೆದ ಕನ್ಯಾಮಣಿಗಳು ! ಸಿಟಿಯ ಯಾತ್ರಿಕ ಜೀವನ, ಮಾಲಿನ್ಯ, ನೀರು, ಗಾಳಿ, ಬೆಳಕಿನ ಕೊರತೆ ಜೊತೆಗೆ ನೂರೆಂಟು ಜಂಜಾಟಗಳ ನಡುವೆಯೂ ಇವರುಗಳಿಗೆ ನಗರದ ಬಣ್ಣದ ಬದುಕಿನ ಹುಚ್ಚು ಮಾತ್ರ ಕಡಿಮೆಯಾಗಿಲ್ಲವೆಂಬುದು ವಿಪರ್ಯಾಸ! ನಾನು ಸಂಪಾದಿಸಬೇಕು ಅದಕ್ಕೆ ಹಳ್ಳಿಯಲ್ಲಿ ಅವಕಾಶವಿಲ್ಲ ಎಂಬುದು ಹಳ್ಳಿಯ ವರ ಬೇಡ ಎಂದು ಮೂಗು ಮೂರಿಯುವ ಈ ನಾರಿಯರ ಸಿದ್ಧ ಉತ್ತರ ಮತ್ತು ಸಮರ್ಥನೆ.
ಏಕೆ ಹಳ್ಳಿಯಲ್ಲಿ ಸಂಪಾದನೆಗೆ ದಾರಿಗಳಿಲ್ಲವೇ? ಸ್ವ ಉದ್ಯೋಗ ದುಡಿಮೆಯಲ್ಲವೇ? ಬರೀ ಬಿ.ಪಿ.ಒ. ಕಾಲ್ ಸೆಂಟರ್, ಐ.ಟಿ. ಬಿ.ಟಿ ಕಂಪೆನಿಗಳಲ್ಲಿ ಕೆಲಸ ಮಾಡುವುದು ಮಾತ್ರ ಕೆಲಸವೇ? ಹಳ್ಳಿಯಲ್ಲಿ ಸಹ ನೂರೆಂಟು ಮಾರ್ಗಗಳಿವೆ. ತಾವು ಸಂಪಾದಿಸುವುದಲ್ಲದೇ ಇತರರಿಗೂ ಸಹ ಉದ್ಯೋಗ ಕಲ್ಪಿ ಸಿಕೊಡಬಹುದು. ಕೆಲಸ ಮಾಡುವ ಆಸಕ್ತಿ ಇದ್ದರೆ ಹಳ್ಳಿಯಾದರೇನು ದಿಲ್ಲಿಯಾದರೇನು ಅವಕಾಶಗಳು ಹಲವು. ಅವುಗಳಲ್ಲಿ ಅತಿ ಸರಳವಾಗಿರುವ ಕೆಲವು ಮಾರ್ಗಗಳು ಇಲ್ಲಿವೆ. ನೀವು ಪ್ರಯತ್ನಿಸಿ ನೋಡಿ.
ಬಣ್ಣ ಬಣ್ಣದ ಹೂ ಗಿಡಗಳನ್ನು ಬೆಳೆಸುವುದು ಮಹಿಳೆಯರ ನೆಚ್ಚಿನ ಹವ್ಯಾಸವಾಗಿದೆ. ಈ ಹವ್ಯಾಸವನ್ನೆ ಸ್ಪಲ್ಪ ಯೋಜನಾ ಬದ್ಧವಾಗಿಸಿದರೆ ಸಾಕು ಪುಷ್ಪೋದ್ಯಮ ಅತಿ ಯಶಸ್ವಿ ಹಾಗೂ ಲಾಭಾದಾಯಕ ಉದ್ಯಮವಾಗುತ್ತದೆ. ಇದರಲ್ಲಿ ಅತ್ಯಂತ ಯಶಸ್ಸು ಗಳಿಸಿದವರ ಉದಾಹರಣೆಗಳು ಹಲವು.
ಇನ್ನೂ ಸೊಪ್ಪು ತರಕಾರಿಗಳು ಈಗಂತೂ ಅತ್ಯಂತ ದುಬಾರಿ, ಆದರೆ ದಿನ ನಿತ್ಯ ಅಡುಗೆಮನೆಯಲ್ಲಿ ಬೇಕೇ ಬೇಕು. ಮನೆಯ ಸುತ್ತ ಮುತ್ತ ಇರುವ ಜಾಗದಲ್ಲೇ ಬೆಳೆದರೂ ಸಾಕು. ತಾಜಾ ತಾಜಾ ತರಕಾರಿಗಳು ಮನೆಯಲ್ಲೇ ಲಭ್ಯ. ಜೊತೆಗೆ ಮನೆ ಖಚರ್ಿನಲ್ಲಿ ಬಾರಿ ಉಳಿತಾಯ ಕೂಡ ಆಗುತ್ತದೆ. ಇದನ್ನೆ ವಿಸ್ತರಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆದರಂತೂ ಬಂಪರ್. ಇದು ನನ್ನ ಸ್ವಂತ ಅನುಭವ. ನೀವು ಪ್ರಯತ್ನಿಸಿ ನೋಡಿ ಮನೆ ಖರ್ಚಿನಲ್ಲಿ ಉಳಿತಾಯದ ಜೊತೆಗೆ ಸಂಪಾದನೆಯೂ ಗ್ಯಾರಂಟಿ.
ನಿಮಗೆ ಟೈಲರಿಂಗ್ ಗೊತ್ತಾ?! ಹಾಗಾದರೆ ಬೇರೆ ಕೆಲಸದ ಯೋಚನೆ ಬಿಟ್ಟು ಬಿಡಿ. ಸಂಪಾದನೆಗೆ ಇದಕ್ಕಿಂತ ಉತ್ತಮ ಮಾರ್ಗ ಯಾವುದು ಇಲ್ಲ. ಈಗಂತೂ ಹೊಲಿಗೆ ಮಜೂರಿ ಕೊಟ್ಟು ಪೂರೈಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕಲಿತ ಈ ವಿದ್ಯೆಯನ್ನೇ ಬಂಡವಾಳ ವಾಗಿಸಿಕೊಂಡು ಸ್ವ ಉದ್ಯೋಗ ಪ್ರಾರಂಭಿಸಬಹುದು, ಜೊತೆಗೆ ಬೇರೆಯವರಿಗೂ ಉದ್ಯೋಗಾವಕಾಶ ಕಲ್ಪಿಸಿಕೊಡಲು ಇದರಿಂದ ಸಾದ್ಯ. ಇದರ ಜೊತೆ ಜೊತೆಗೆ ಸೀರೆ, ಡ್ರೆಸ್ಗಳಿಗೆ ಕಸೂತಿ, ತರ ತರಹದ ಡಿಸೈನ್ಗಳನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಇದಕ್ಕೆ ಅತಿ ಬೇಡಿಕೆ ಇದೆ. ಅತಿ ಕಡಿಮೆ ಬಂಡವಾಳ ಹೂಡಿ, ಹೆಚ್ಚು ಸಂಪಾದಿಸ ಬಹುದಾದ ಅಲ್ ಟೈಮ್ ಬೇಡಿಕೆಯಲ್ಲಿರುವ ಉದ್ಯೋಗ ಇದಾಗಿದೆ.
ಈಗ ಸಾವಯವ ಕೃಷಿಯ ಕಾಲ. ಎರೆಹುಳು ಗೊಬ್ಬರಕ್ಕೊಂತು ಬಂಗಾರದ ಬೆಲೆ ಇದೆ. ಹಾಗೂ ಇದರ ಸಾಗಣಿಕೆ ಅತಿ ಸುಲಭ ಕೂಡ ಹೌದು. ಅಡಿಗೆಮನೆಯ ತ್ಯಾಜ್ಯಗಳಾದ ತರಕಾರಿ ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ. ಇದು ಎರೆಹುಳು ಸಾಕಣಿಕೆಗೆ ತುಂಬಾ ಉಪಯುಕ್ತ. ಸಕರ್ಾರದಿಂದ ಇದಕ್ಕೆ ಸಬ್ಸಿಡಿ ಸಹ ದೊರೆಯುತ್ತದೆ.
ಹಳ್ಳಿಗಳಲ್ಲಿ ಹಲವು ಸ್ವ ಸಹಾಯ ಸಂಘಗಳು ಮಹಿಳೆಯರ ಉದ್ಧಾರಕ್ಕಾಗಿ ಪಣ ತೊಟ್ಟಿವೆ ಹಾಗೂ ಉತ್ತಮ ನೆರವನ್ನು ಸಹ ನೀಡುತ್ತವೆ. ನೀವುಗಳು ಇದರ ಭಾಗವಾಗಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ದೊರಕುವ ಸಾಲದ ಉಪಯೋಗ ಪಡೆದು, ನಿಮ್ಮ ಆಸಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ಯಾವುದಾದರೂ ಉದ್ಯೋಗ ಪ್ರಾರಂಭಿಸಿ, ಸುತ್ತ ಮುತ್ತಲಿನವರಿಗೂ ದಾರಿ ದೀಪವಾಗಿ.

ನಮಗೆ ಇವುಗಳಲ್ಲಿ ಆಸಕ್ತಿ ಇಲ್ಲ ಎನ್ನುವ ಹುಡುಗಿಯರೇ ಅದಕ್ಕೂ ಪರಿಹಾರವಿದೆ. ನಿಮ್ಮ ಬಳಿ ಕಂಪ್ಯೂಟರ್ ಒಂದು ಇದ್ದರೆ ಸಾಕು, ಯಾವುದೇ ಜಂಜಾಟವಿಲ್ಲದೇ ಮನೆಯಿಂದಲೇ ಕೆಲಸ ಮಾಡಿ, ಡಾಟಾ ಎಂಟ್ರಿ, ಟ್ರಾನ್ಸಲೇಶನ್, ಮೆಡಿಕಲ್ ಟ್ರಾನ್ಸಕ್ರಿಪ್ಷನ್ , ಈ-ಟ್ಯೂಟಿಂಗ್ ಹೀಗೆ ಹತ್ತು ಹಲವು ಅವಕಾಶಗಳು ನಿಮ್ಮ ಮುಂದೆ ತೆರೆದು ಕೊಳ್ಳುತ್ತವೆ. ಇಲ್ಲವಾದರೆ ನೀವು ನೋಡಿದ ಹೊಸ ಸ್ಥಳಗಳ ಅಥವಾ ಭಾಗವಹಿಸಿದ ಕಾರ್ಯಕ್ರಮಗಳ ವಿಶೇಷತೆಗಳು, ಅಥವಾ ನಿಮ್ಮೂರಿನ ಅಡುಗೆ, ಇಲ್ಲವೆ ನಿಮ್ಮ ಅನುಭವಗಳು, ಸುತ್ತಮುತ್ತಲಿನ ಪರಿಸರದ ವಿಶಿಷ್ಟಗಳ ಬಗ್ಗೆ ಲೇಖನ ಬರೆದು ಒಂದೆರೆಡು ಫೋಟೊಗಳೊಂದಿಗೆ ಪೇಪರ್, ಮ್ಯಾಗಜೀನ್ಗಳಿಗೆ ಕಳುಹಿಸಿ ಕೊಡಿ. ಉತ್ತಮ ಸಂಬಾವನೆಯೊಂದಿಗೆ ಹೆಸರು, ಕೀರ್ತಿ ನಿಮ್ಮ ಪಾಲಾಗುವುದರಲ್ಲಿ ಸಂದೇಹವೆ ಇಲ್ಲ.
ನಿಮ್ಮದು ತಂಬಾ ಇಂಟಿರಿಯರ್ ಪ್ರದೇಶವೇ? ಸುತ್ತ ಮುತ್ತ ಕಾಡೇ? ಹಳೆ ಮನೆಯೇ? ಹಾಗಾದರೆ "ಹೋಮ್ ಸ್ಟೇ" ಯೋಜನೆಯ ಬಗ್ಗೆ ಸಹ ಯೋಚಿಸ ಬಹುದು.
ಹೀಗೆ ಸ್ವ ಉದ್ಯೋಗಗಳ ಪಟ್ಟಿ ಬೆಳೆಯುತ್ತದೆ. ಹಳ್ಳಿ ಜೀವನ ಬೇಡ ಎನ್ನುವ ಕನ್ಯಾಮಣಿಗಳೇ ಮನಸ್ಸಿದ್ದರೆ ಮಾರ್ಗ. ಹಳ್ಳಿಯಾದರೇನು ಆಸಕ್ತಿ ಮತ್ತು ಛಲವಿದ್ದರೆ ಏನಾದರೂ ಸಾಧಿಸಲು ಸಾಧ್ಯ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

December 1, 2010

ಅಡುಗೆ ಮನೆಯ ಮುಂಜಾಗತ್ರ ಕ್ರಮಗಳು

ಮಹಿಳೆಯರಾದ ನಮಗೂ ಅಡಿಗೆಮನೆಗೂ ಜನ್ಮ ಜನ್ಮದ ನಂಟು. ಕೆಲವು ದಶಕಗಳ ಹಿಂದೆ ಮಹಿಳೆ ಎಂದರೆ ಅಡಿಗೆ ಕೆಲಸದಲ್ಲಿ ಬ್ಯುಸಿ ಎನ್ನುವ ಯೋಚನೆ ತಕ್ಷಣ ತಲೆಯಲ್ಲಿ ಬರುತ್ತದೆ. ಅಲ್ಲಿ ಅವಳ ಕೆಲಸವು ಹಾಗೆ ಚಾಲೆಂಜಿಗ್‌. ಬೆಂಕಿ, ಬಿಸಿಯೊಡನೆ ಸೆಣಾಸಾಟವೆಂದರೆ ಸಮಂಜಸ. ಹರಿತವಾದ ಕತ್ತಿ, ಭಾರವಾದ ಪಾತ್ರೆಗಳನ್ನು ಸರಾಗವಾಗಿ ಹ್ಯಾಂಡಲ್‌ ಮಾಡಬಲ್ಲ ಚತುರೆ. ಅಲ್ಲಿ ಅವಳದೇ ರಾಜ್ಯಭಾರ. ಈಗ ಮಹಿಳೆಯರು ಅಡುಗೆ ಮನೆಯ ಹೊರಗೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಸಂತೋಷಕರ. ಆದರೆ ಅಡುಗೆಮನೆಯಿಂದ ಮಾತ್ರ ಮುಕ್ತಿ ಪಡೆದಿಲ್ಲ. ಅಲ್ಲಿ ಅವಳ ಸ್ಥಾನ ಖಾಯಂ. ಅಡುಗೆ ಮನೆಯ ಪರಿಕಲ್ಪನೆ ಈಗ ಬದಲಾಗಿದೆ. ಸೌದೆ ಒಲೆ, ಸೀಮೆ ಎಣ್ಣೆ ಸ್ಟೌವಿನ ಜಾಗವನ್ನು ಗ್ಯಾಸ್ ಸ್ಟೌವ್ ಅಥವಾ ಒವನ್, ಅಥವಾ ಹಾಟ್‌ ಪ್ಲೇಟ್, ಬೀಸೆಕಲ್ಲು, ತಿರುವೆ ಕಲ್ಲಿನ ಸ್ಥಾನವನ್ನು ಮಿಕ್ಸರ್ ಮತ್ತು ಗ್ರೈಂಡರ್‌, ಕಡೆಗೋಲಿನ ಜಾಗವನ್ನು ಬ್ಲೆಂಡರ್ ಪಡೆದು ಕೊಂಡಿದೆ. ಇಷ್ಟೇ ಅಲ್ಲದೆ ಬೇರೆ ವಿದ್ಯುತ್ ಉಪಕರಣಗಳು ಅಡಿಗೆ ಮನೆಯನ್ನು ಆಕ್ರಮಿಸಿ ಕೊಂಡಿವೆ. ಅಡಿಗೆ ಮನೆಯ ಜೊತೆಗೆ ಹೊರಗೂ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಅದು ಅವಶ್ಯಕ ಕೂಡ. ಅದರೆ ಇವುಗಳ ಅನೂಕೂಲದ ಜೊತೆಗೆ ಅಪಾಯವು ಕಟ್ಟಿಟ್ಟ ಬುತ್ತಿ. ಸ್ಪಲ್ಪ ಎಚ್ಚರ ತಪ್ಪಿದರೂ ಅಡಿಗೆಮನೆಗಳಲ್ಲಿ ಅನಾಹುತಗಳು ಗ್ಯಾರಂಟಿ. ಬಟ್ಟೆಗೆ ಬೆಂಕಿ ತಗಲುವುದು, ಬಿಸಿ ಎಣ್ಣೆ ಅಥವಾ ನೀರು ಮೈ ಕೈ ಮೇಲೆ ಬೀಳುವುದು, ಗ್ಯಾಸ್ ಸ್ಪೋಟ, ಮಿಕ್ಸಿ ಜಾರ್‌ಗೆ ಕೈ ಸಿಕ್ಕಿಕೊಳ್ಳುವುದು, ವಿದ್ಯುತ್ ಶಾಕ್ ಇತ್ಯಾದಿ, ಇತ್ಯಾದಿ. ಇವುಗಳೆಲ್ಲಾ ಉದಾಹರಣೆಗಳಷ್ಟೆ. ಅದೇಷ್ಟೋ ಅನಾಹುತಗಳು ಪ್ರತಿ ದಿನ ಒಂದಲ್ಲ ಒಂದು ಅಡಿಗೆ ಮನೆಯಲ್ಲಿ ಉಪಕರಣಗಳನ್ನು ಬಳಸುವಾಗ ನೆಡೆಯುತ್ತದೆ. ಈ ರೀತಿ ಮಹಿಳೆಯರಾದ ನಾವು ಮನೆಯಲ್ಲಿ ದಿನ ಹೆಚ್ಚು ಸಮಯವನ್ನು ಕಳೆಯುವುದು ಅಡಿಗೆ ಮನೆಯಲ್ಲೇ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಡಿಗೆ ಮನೆಯೆ ಮನೆ ಅವಘಡಗಳು ನೆಡೆಯುವ ಪ್ರಾಥಮಿಕ ಸ್ಥಳ ಕೂಡ. ಇದರಲ್ಲಿ ಅಶ್ಚರ್ಯ ಪಡುವುಂತಹದು ಏನು ಇಲ್ಲ. ಬಗೆ ಬಗೆ ಎಲೆಕ್ಟ್ರಿಕ್ ಉಪಕರಣಗಳು, ಗ್ಯಾಸ್‌, ಬೆಂಕಿ, ಹರಿತವಾದ ವಸ್ತುಗಳನ್ನೆಲ್ಲಾ ಹೊಂದಿರುವಾಗ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಸಾಮಾನ್ಯ ಕೂಡ. ಚಾಕು, ಕತ್ತಿ, ಗ್ಯಾಸ್‌, ಬೆಂಕಿ, ಮಿಕ್ಸರ್, ಗ್ರೈಂಡರ್, ಓವನ್ , ಪ್ರಿಜ್ಡ್ ಅಥವಾ ಇನ್ಯಾವುದೇ ವಸ್ತುಗಳನ್ನು ಉಪಯೋಗಿಸುವಾಗ ಆಗಬಹುದು. ಅನಾಹುತಗಳು ಕ್ಷಣಾರ್ಧದಲ್ಲಿ ಸಂಭವಿಸತ್ತವೆ. ನಾವು ಮಹಿಳೆಯರು ಸ್ವಲ್ಪ ಕಾಮನ್ ಸೆನ್ಸ್ ಉಪಯೋಗಿಸಿದರೆ ಇವುಗಳನ್ನು ತಡೆಯುವುದು ಸುಲಭ. ನಾವು ಮನೆಯಲ್ಲಿ ಈ ರೀತಿಯ ಅಡುಗೆ ಮನೆಯ ಅನಾಹುತಗಳನ್ನು ತಡೆಗಟ್ಟಲು ಹಲವು ಮುಂಜಾಗತ್ರ ಕ್ರಮಗಳನ್ನು ಖಂಡಿತವಾಗಿ ತೆಗೆದುಕೊಳ್ಳಬಹುದು. ಅವುಗಳಲ್ಲಿ ಅತಿ ಸರಳ ಹಾಗೂ ಅಗತ್ಯ ಕ್ರಮಗಳು ಇಲ್ಲಿವೆ.
ಗಡಿಬಿಡಿಯಲ್ಲಿ ಅಡಿಗೆ ಮಾಡುವಾಗ ನೀರು, ಎಣ್ಣೆ ಅಥವಾ ಯಾವುದಾದರೂ ಪದಾರ್ಥ ನೆಲ ಮೇಲೆ ಬೀಳುವುದು ಕಾಮಾನ್. ಆದರೆ ಅವುಗಳು ಅಪಾಯಕಾರಿ ಎನ್ನುವ ಅಂಶ ಕೂಡ ಅಷ್ಟೆ ನಿಜ. ಅವುಗಳು ಅವಘಡಗಳಿಗೆ ಮೂಲವಾಗ ಬಹುದು. ಹಾಗಾಗಿ ನೆಲದ ಮೇಲೆ ಚೆಲ್ಲಿರುವುದನ್ನು ಉದಾಸೀನ ಮಾಡದೇ ತಕ್ಷಣ ಕ್ಲೀನ್ ಮಾಡಿ. ಅಡಿಗೆ ಮನೆಯ ನೆಲ ಜಾರದಂತೆ (slip-resistant/matte finished) ಇದ್ದರೆ ಉತ್ತಮ.
ಅಡಿಗೆ ಮಾಡುವಾಗ ನಿಮ್ಮ ಬಟ್ಟೆ ಮತ್ತು ಕೂದಲಿನ ಕಡೆ ಗಮನವಿರಲಿ. ಕೂದಲನ್ನು ಕಟ್ಟಿ ಕೊಳ್ಳಿ. ಸೀರೆ ಸೆರಗಿನ ಕಡೆ ಲಕ್ಷ್ಯವಿರಲಿ, ಉದ್ದ ತೋಳನ್ನು ಹಿಂದಕ್ಕೆ ಮಡಚಿ ಕೊಳ್ಳಿ. ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ.
ಪೇಪರ್‌, ಬಟ್ಟೆ, ಎಣ್ಣೆ, ಟವೆಲ್, ಅಲ್ಕೋಹಾಲ್ ಹಾಗೂ ಇತರೆ ಯಾವುದೇ ಸುಭವಾಗಿ ಉರಿ ಹೊತ್ತಿಕೊಳ್ಳುವ ವಸ್ತುಗಳನ್ನು ಬೆಂಕಿ ಅಥವಾ ಸ್ಟೌವ್‌ನಿಂದ ದೂರವಿಡಿ.
ಅಡುಗೆ ಮನೆಯಿಂದ ಹೊರ ಹೋಗುವಾಗ ಓಲೆ ಅಫ್ ಮಾಡಿರುವುದನ್ನು ಖಚಿತ ಪಡಿಸಿಕೊಳ್ಳಿ. ಯಾವಾಗಲೂ ಗ್ಯಾಸ್‌ ಸಿಲಿಂಡರ್‌ನ ರೆಗ್ಯುಲೇಟರ್ ಬಂದ್‌ ಮಾಡಿಡಿ.
ಪಾತ್ರೆಯಲ್ಲಿ ಎಣ್ಣೆ, ಬೆಣ್ಣೆ , ತುಪ್ಪವನ್ನು ಕಾಯಿಸುವಾಗ ಆದಷ್ಟೂ ಅಡಿಗೆ ಮನೆಯಲ್ಲಿ ಇರಿ. ಒಂದೊಮ್ಮೆ ಬೆಂಕಿ ಹತ್ತಿ ಕೊಂಡರೆ ನೀರು ಸುರಿಯಬೇಡಿ. ಅಡುಗೆಮನೆಯಲ್ಲಿ ಅಗ್ನಿ ಶಾಮಕ ಉಪಕರಣವನ್ನು ಹೊಂದಿರುವುದು ಕ್ಷೇಮ.
ಸರಿಯಾದ ಗಾಳಿ, ಬೆಳಕು ಅಡಿಗೆ ಮನೆಯಲ್ಲಿರುವಂತೆ ನೋಡಿಕೊಳ್ಳಿ. ಮಂದ ಬೆಳಕಿನ ಅಡಿಗೆ ಮನೆಯಲ್ಲಿ ಕೆಲಸ ಮಾಡುವುದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚು.
ಹರಿತವಾದ ಸಲಕರಣೆಗಳನ್ನು ಉಪಯೋಗಿಸುವ ಜಾಗೂರಕರಾಗಿರಿ ಹಾಗೂ ಅವುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಿ.
ಎಲೆಕ್ಟ್ರಿಕ್ ಉಪಕರಣಗಳನ್ನು ಉಪಯೊಗಿಸುವಾಗ ಸಾಧ್ಯವಾದಷ್ಟು ಜಾಗರೂಕರಾಗಿ. ವೈಯರ್‌ಗಳನ್ನು, ಸ್ವಿಚ್‌ಗಳನ್ನು ಹಾಗೂ ಉಪಕರಣಗಳನ್ನು ನೀರಿನಿಂದ ದೂರ ಇಡಿ. ವೈಯರ್‌ಗಳಲ್ಲಿ, ಸ್ವಿಚ್‌ಗಳಲ್ಲಿ ಯಾವುದೇ ದೋಷ ಕಂಡು ಬಂದಲ್ಲಿ ನಿರ್ಲಕ್ಷಿಸದೇ ಬದಲಾಯಿಸಿ ಅಥವಾ ಸರಿ ಪಡಿಸಿ. ಆಗುವ ಅಕ್ಸಿಡೆಂಟ್‌ಗಳನ್ನು ತಪ್ಪಿಸಿ.
ಗೃಹ ಉಪಯೋಗಿ ವಿದ್ಯುತ್ ಉಪಕರಣಗಳನ್ನು ಬಳಸುವ ಮುನ್ನ ಯುಸರ್ ಮ್ಯಾನುಯಲ್‌ ಅನ್ನು ಓದಿಕೊಳ್ಳಿ. ಇದು ಬಹಳ ಸಹಕಾರಿ ಹಾಗೂ ಅದರಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿ.
ಫ್ರಿಜ್ಡ್‌ನ್ನು ಕ್ಲೀನ್ ಮಾಡುವಾಗ ಸ್ವಿಚ್ ಅಫ್ ಮಾಡಿ ಹಾಗೂ ಸಂಪರ್ಕವನ್ನು ತೆಗೆಯಲು ಮರೆಯದಿರಿ.
ಮಿಕ್ಸರ್ ಜಾರ್‌ಗಳಿಗೆ ಅದರ ಸಾಮರ್ಥ್ಯಕ್ಕೆ ತಕ್ಕಷ್ಟೆ ಹಾಕಿ, ಒವರ್‌ ಲೋಡ್ ಅಪಾಯಕಾರಿ. ಅತಿ ಗಟ್ಟಿಯಾದ ಪದಾರ್ಥಗಳನ್ನು ಬಳಸ ಬೇಡಿ. ಮಿಕ್ಸರ್ ಜಾರ್ ಸರಿಯಾಗಿ ಫಿಟ್‌ ಆಗಿದ್ದೇಯೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
ಒವನ್‌ಗಳಿಗೆ ಸೂಕ್ತವಾದ ಪಾತ್ರೆಗಳನ್ನೇ ಬಳಸಿ.
ನಿಮ್ಮ ಅಡಿಗೆ ಮನೆಯನ್ನು ಸುರಕ್ಷಿತ ತಾಣವಾಗಿಸಿ. ಇಲ್ಲಿನ ಅಪಾಯಕಾರಿ ವಸ್ತುಗಳನ್ನು ಮಕ್ಕಳಿಂದ ದೂರವಿಡಿ. ಹಾಗೇಯೆ ಅಡಿಗೆ ಮಾಡುವಾಗ ಮಕ್ಕಳನ್ನು ಅಡಿಗೆ ಮನೆಯಿಂದ ದೂರವಿಡಿ.
ಅಡಿಗೆ ಮನೆಯಲ್ಲಿ ಫಸ್ಟ್ ಏಡ್ ಕಿಟ್ ಇಟ್ಟುಕೊಳ್ಳಿ.
ಇಡೀ ಮನೆಯ ಹಾಗೂ ಮನೆಯವರ ಸಂತೋಷ ಹೋಮ್ ಮೇಕರ್‌ ಆಗಿರುವ ಮಹಿಳೆಯ ಮೇಲೆ ಅವಲಂಬಿತವಾಗಿದೆ. ನಾವು ಮಾಡುವ ಕೆಲಸದಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ ಸಾಕು ಮನೆ ಆನಂದವನ ವಾಗುತ್ತದೆ. ಅಡುಗೆಮನೆಯನ್ನು ಸುರಕ್ಷಿತ ತಾಣವಾಗಿಸುವ ನಿಟ್ಟಿನಲ್ಲಿ ಸ್ಪಲ್ಪ ಮುತುವರ್ಜಿ ವಹಿಸಿದರೆ ಮಹಿಳೆ ಸ್ಮಾರ್ಟ್ ಗೃಹಣಿ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

(2010ರ ನವೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

October 26, 2010

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

ಮಲೆನಾಡಿನ ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಬಹುಶ: ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.
ಇಲ್ಲಿನ ಕೃಷಿಕರಿಗೆ ಅಡಿಕೆ ಕೊಯ್ಲು ಬರೀ ಒಂದು ಕೆಲಸವಾಗಿರದೆ, ಒಂದು ಆಚರಣೆಯೇ ಆಗಿತ್ತು ಎಂದರೆ ತಪ್ಪಾಗಲಾರದು. ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿತ (ಕೊಯ್ಲು) ಪ್ರಾರಂಭಿಸುವುದೇ ಒಂದು ಸಂಭ್ರಮ ಸಡಗರ. ಅದಕ್ಕೆ ಪೂರ್ವಭಾವಿಯಾಗಿ ಕತ್ತಿ, ಮಣೆ. ತಟ್ಟಿ-ಬುಟ್ಟಿಗಳನ್ನು ಒಟ್ಟುಗೂಡಿಸುವುದು, ಚಪ್ಪರದಂಗಳವನ್ನು ಸಾರಿಸುವುದು, ಚೊಗರು ತಯಾರಿಸುವುದು, ಕೊನೆಗಾರನಿಗೆ, ಅಡಿಕೆ ಸುಲಿಯುವ ಕುಲಿಯಾಳುಗಳಿಗೆ ತಿಳಿಸುವುದು ಹೀಗೆ ಹತ್ತು ಹಲವು ತಯಾರಿಗಳನ್ನು ಮಾಡಿಕೊಳ್ಳುವುದು. ನಂತರ ಶುಭ ದಿನದಂದು ಒಳ್ಳೆ ಮೂಹರ್ತದಲ್ಲಿ ಪೂಜೆ ಮಾಡಿ ಕೊನೆ ತೆಗೆಯುವುದು. ಅಡಿಕೆ ಒಲೆಗೆ ಉರಿ ಹಚ್ಚುವ ಮುನ್ನ ಒಲೆಗೆ ಪೂಜೆ ಸಲ್ಲಿಸುತ್ತಿದ್ದರು. ಹಾಗೇ ಸೂರ್ಯ ಮೇಲೆರುವ ಮುನ್ನವೇ ಬೇಯಿಸಿದ ಅಡಿಕೆಯನ್ನು ಬಿದರಿನ ತಟ್ಟಿಯ ಮೇಲೆ ಒಣಗಿಸಲಾಗುತ್ತಿತ್ತು. ಸಂಜೆ ಇಬ್ಬನಿ ಬೀಳುವ ಮುನ್ನ ಒಣಗಿದ ಅಡಿಕೆಯನ್ನು ಒಟ್ಟು ಮಾಡಿ ಅಡಿಕೆ ಹಾಳೆಯನ್ನು ಮುಚ್ಚಲಾಗುತ್ತಿತ್ತು. ಅಡಿಕೆ ಕೊಯ್ಲು ಮುಗಿದ ನಂತರ ಒಣಗಿಸಿದ ಅಡಿಕೆಯನ್ನು ಒಟ್ಟಿಗೆ ಸುರಿದು ರಾಶಿಗೆ ಪೂಜೆ ಮಾಡಿ ನಂತರ ಮೂಟೆ ಮಾಡಿ ಮಂಡಿಗೆ ಕಳುಹಿಸುವುದು, ಇದಿಷ್ಟು ಮಲೆನಾಡಿನ ಸಂಪ್ರಾದಾಯಿಕ ಅಡಿಕೆ ಕೊಯ್ಲಿನ ಚಿತ್ರಣ. ಇಷ್ಟೆ ಅಲ್ಲದೇ ತೋಟದಿಂದ ತಂದ ಗೊನೆಗಳನ್ನು ಅಚ್ಚುಕಟ್ಟಾಗಿ ರಾಶಿ ಮಾಡಲಾಗುತ್ತಿತ್ತು. ಅಡಿಕೆ ಸುಲಿಯುವವರಿಗೆ ಸಮಾನಾಗಿ ಗೊನೆಗಳನ್ನು ಪಾಲು ಮಾಡುತ್ತಿದ್ದರು. ಹಾಡು, ಹರಟೆ, ನಗು, ತಮಾಷೆ, ಒಗಟು, ಪ್ರಶ್ನೋತ್ತರಗಳು ಮಧ್ಯರಾತ್ರಿಯವರೆಗೆ ಚಪ್ಪರದಂಗಳ ತುಂಬಿರುತ್ತಿತ್ತು. ಅಪರೂಪಕ್ಕೊಮ್ಮೆ ಟೇಪ್ ರೀಕಾರ್ಡಗಳು ಕಾಣಿಸಿಕೊಳ್ಳುತ್ತಿದ್ದವು.
ಆದರೆ, ಈಗ ಈ ರೀತಿಯ ಅಡಿಕೆ ಕೊಯ್ಲು ಕಾಣಲು ಸಿಗುವುದಿಲ್ಲ, ಈಗ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣವೇ ಬದಲಾಗಿದೆ. ಕೇಲವೆ ವರ್ಷಗಳೀಚೆಗೆ ಈ ಅಡಿಕೆ ಕೊಯ್ಲಿನ ಕಾನ್ಸೆಪೆಟ್ ಬದಲಾಗಿದೆ. ಕುಲಿಯಾಳುಗಳಾಗಿ ಪರದಾಟ, ಕೊಯ್ಲಿನ ಸಮಯ ಹತ್ತಿರವಾದಂತೆ ಹಸಿ ಅಡಿಕೆ ಕಾಯಿ ಕೊಳ್ಳುವರನ್ನೋ ಅಥವಾ ಚೇಣಿದಾರರನ್ನೋ ಹುಡುಕುವಂತೆ ಬೆಳೆಗಾರರನ್ನು ಮಾಡಿದೆ.
ಚಪ್ಪರದಂಗಳದಲ್ಲಿ ಕಂಬಕ್ಕೆ ಒರಗಿ ನಡುರಾತ್ರಿವರೆಗೆ ಚಳಿಯಲ್ಲಿ ಅಡಿಕೆ ಸುಲಿಯುವ ಅಳುಗಳು ಈಗ ವಿರಳ. ಚಪ್ಪರವೇ ಎಷ್ಟೋ ಮನೆಗಳಲ್ಲಿ ಇಲ್ಲವಾಗಿದೆ . ಬದಲಾಗಿ ಅಂಗಳ ಅಥವಾ ಮನೆಯ ಥಾರಸಿಯನ್ನು ಅಡಿಕೆ ಒಣಗಿಸಲು ಬಳಸಿಕೊಳ್ಳಲಾರಂಭಿಸಿದ್ದಾರೆ. ಬಿದರಿನ ಬುಟ್ಟಿಯ ಜಾಗವನ್ನು ಪ್ಲಾಸ್ಟಿಕ್ ಬುಟ್ಟಿಗಳು, ತಟ್ಟಿಯ ಸ್ಥಾನವನ್ನು ಕಬ್ಬಿಣದ ಟ್ರೇಗಳು ಆಕ್ರಮಿಸಿಕೊಂಡಿದೆ. ನಗು, ಹಾಡು, ಹರಟೆಯನ್ನು ಟಿವಿ ನುಂಗಿ ಹಾಕಿದೆ. ಅಡಿಕೆ ಸುಲಿಗೆಗೆ ಈಗ ಟಿವಿ ಕಡ್ಡಾಯವಾಗಿದೆ. ಅದರಲ್ಲೂ ಡಿಶ್ ಸಂಪರ್ಕ ಅಗತ್ಯ. ಅಡಿಕೆ ಸುಲಿಯುವ ಯಂತ್ರಗಳ ಆಗಮನವಾಗಿದೆ. ಈ ಯಂತ್ರಗಳು ಪರಿಪೂರ್ಣವಾಗಿಲ್ಲ, ಆದರೂ ಸಹ ಅನಿವಾರ್ಯವಾಗಿ ಕೃಷಿಕ ಇದರ ಮೊರೆ ಹೋಗಬೇಕಾಗಿದೆ.
ಅಡಿಕೆಯ ಅಸ್ಥಿರ ಬೆಲೆ, ಕೆಲಸಗಾರ ಅಭಾವ, ದಿನೇ ದಿನೇ ಹೆಚ್ಚುತ್ತಿರುವ ಸಂಬಳ, ಖರ್ಚು, ಹವಾಮಾನದ ಏರುಪೇರು, ರೋಗ, ಯುವ ಪೀಳಿಗೆಯವರ ಪಟ್ಟಣದತ್ತ ವಲಸೆ ಇವುಗಳೆಲ್ಲದರಿಂದ ಅಡಿಕೆ ಬೆಳೆಗಾರ ತತ್ತರಿಸಿ ಹೋಗಿದ್ದಾನೆ. ವಿಧಿಯಿಲ್ಲದೆ ಕೃಷಿಕ ಅಧುನಿಕರಣ, ಯಂತ್ರೀಕರಣ ಹಾಗೂ ಸರಳೀಕರಣಕ್ಕೆ ತಲೆ ಬಾಗುತ್ತಿದ್ದಾನೆ. ಸಣ್ಣ ಪುಟ್ಟ ಬೆಳೆಗಾರರು ಈ ಎಲ್ಲಾ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ಹಸಿಕಾಯಿಯನ್ನೇ ಮಾರಿ ಕೈ ತೊಳೆದು ಕೊಳ್ಳುತ್ತಿದ್ದಾರೆ.
ಮಲೆನಾಡಿನಲ್ಲಿ ಕೃಷಿಕರು ಅಡಿಕೆ ಕೊಯ್ಲುನ್ನು ಬರೀ ಅರ್ಥಿಕ ಉದ್ದೇಶಕ್ಕಾಗಿ ಮಾತ್ರ ಎನ್ನುವ ಭಾವನೆಯಿಂದಷ್ಟೇ ಅಲ್ಲದೆ, ಒಂದು ಸಂಪ್ರಾದಾಯಿಕ ಅಚರಣೆಯನ್ನು ನೆಡೆಸುವಷ್ಟೇ ಶ್ರದ್ಧೆಯಿಂದ ಮಾಡುತ್ತಿದ್ದರು ಎಂದರೆ ತಪ್ಪಾಗಲಾರದು. ಆದರೆ ಇಂದು ಆ ದಿನಗಳಲ್ಲಿ ಕಂಡು ಬರುತ್ತಿದ್ದ ಸಂಭ್ರಮ, ಅಚ್ಚುಕಟ್ಟುತನ, ವೈಭವ ಯಾವುದು ಇಲ್ಲದೇ ಅಡಿಕೆ ಕೊಯ್ಲು ನೀರಸವಾಗಿದೆ.

October 22, 2010

ಕಾಡುವ ಭೂಮಿ ಹುಣ್ಣಿಮೆಯ ನೆನಪುಗಳು...!

ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ ಅತ್ತೆ ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿಸುತ್ತಿರಲಿಲ್ಲ. ಆದರೆ ಇದಕ್ಕೆ ಭೂಮಿ ಹುಣ್ಣಿಮೆ ಮತ್ತು ದೀಪಾವಳಿ ಮಾತ್ರ ಹೊರತಾಗಿತ್ತು. ಈ ಎರಡು ಹಬ್ಬಗಳು ತಪ್ಪದೇ ನಮ್ಮ ಮನೆಯಲ್ಲಿ ನೆಡೆಯುತ್ತಿತ್ತು. ನಮಗೆ ಕಾರಣ ಮಾತ್ರ ಆಗ ತಿಳಿದಿರಲಿಲ್ಲ. ಆದರೆ ನಾವು ಕೃಷಿಕರಾಗಿದ್ದೇ ಈ ಹಬ್ಬದ ಬಗ್ಗೆ ಹೆಚ್ಚಿನ ಒಲವಿಗೆ ಕಾರಣ ಎಂಬುದು ಈಗ ಅರ್ಥವಾಗಿದೆ. ಹಾಗೆ ನನಗೂ ಈ ಎರಡು ಹಬ್ಬಗಳು ಬೇರೆ ಕಾರಣಗಳಿಗೆ ಇಂದಿಗೂ ಅತೀ ಪ್ರಿಯವಾದವು. ಇವುಗಳು ನನ್ನ ಬಾಲ್ಯದ ಮಧುರ ನೆನೆಪುಗಳೊಂದಿಗೆ ಬೆಸೆದು ಕೊಂಡಿವೆ.
ಅಪ್ಪನಿಗೆ ಹೇಳಿ ಕೇಳಿ ಈ ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳೆಂದರೆ ಮಾರು ದೂರು. ಆದರೆ ಈ ಹಬ್ಬದಲ್ಲಿ ಮಾತ್ರ ತೋಟ ಗದ್ದೆಗೆ ಅಪ್ಪನದೇ ಪೂಜೆ. ನಾವು ಮೂರು ಮಕ್ಕಳು ಅಪ್ಪನ ಬಾಲ ಹಿಡಿದು ಈ ಪೂಜೆಯಲ್ಲಿ ಭಾಗವಹಿಸುತ್ತಿದ್ದೆವು. ಹಬ್ಬದ ಪ್ರಯುಕ್ತ ನಿತ್ಯಕ್ಕಿಂತ ಸ್ವಲ್ಪ ಬೇಗ ಏಳುವುದು ಮಾತ್ರ ನಿದ್ರೆ ಗುಮ್ಮನಾದ ನನಗೆ ಸಂಕಟ ತರಿಸುತ್ತಿತ್ತು. ಆದರೆ ಅಮ್ಮ ಬಿಡಬೇಕಲ್ಲಾ!! ನಾನೇ ಹಿರಿಯವಳಾದ ಕಾರಣ ನನ್ನ ಹೆಸರೇ ಮೊದಲು, ಪಲ್ಯಕ್ಕೆ ಸೊಪ್ಪು ತರಬೇಕು ಏಳರೇ ಅನ್ನುವ ಸುಪ್ರಭಾತದಿಂದ ದಿನ ಶುರುವಾಗುತ್ತಿತ್ತು. ಈ ಹಬ್ಬದ ವಿಶೇಷ ಅಡಿಗೆ ಅಂದರೆ ಬೆರಕೆ (ಮಿಶ್ರ) ಸೊಪ್ಪಿನ ಪಲ್ಯ. ಅಪ್ಪನ ಜೊತೆ ನಾವು ಮೂರು ಜನ ಮಕ್ಕಳು ಮನೆ ಸುತ್ತಮುತ್ತ ಇರುವ ಸೊಪ್ಪು ತರಲು ಹೋಗುವುದು ನನಗೆ ಇನ್ನು ನಿನ್ನೆ ಮೊನ್ನೆ ನೆಡೆದ ಹಾಗೆ ಅನಿಸುತ್ತದೆ. ಎಲ್ಲಾ ಗಿಡದ್ದೂ ಹತ್ತು ಹತ್ತು ಎಲೆ ಕುಯ್ಯಿರಿ ಸಾಕು ಅಂತ ಅಪ್ಪ ಹೇಳೆದೆ ತಡ, ನಾವು ಪಾರ್ಥೇನಿಯಂ ಸೇರಿಸಿ ಇದ್ದ ಬದ್ದ ಗಿಡದ ಎಲೆ ಎಲ್ಲಾ ಬುಟ್ಟಿಗೆ ಸೇರಿಸುತ್ತಿದ್ದೇವು. ಅಪ್ಪನಿಗೆ ಅಡಿಗೆ ಯೋಗ್ಯವಾದ ಎಲೆಗಳನ್ನು ಬೇರೆ ಮಾಡುವುದೇ ಒಂದು ಕೆಲಸವಾಗುತ್ತಿತ್ತು. ನಮ್ಮ ಅವಾಂತರ ನೋಡಿ, ಬರೀ ಅಡಿಗೆ ಯೋಗ್ಯವಾದ ಎಲೆಗಳನ್ನು ಮಾತ್ರ ಕುಯ್ಯಿಬೇಕು ಅಂತ ಅಪ್ಪ ಹೇಳಿದರೆ, ಪ್ರತಿಯೊಂದು ಎಲೆಯನ್ನು ತೋರಿಸಿ ಇದು ಆಗುತ್ತಾ ? ಇದು ಆಗುತ್ತಾ? ಅಂತ ಮೂರು ಜನನ್ನು ಅಪ್ಪನ ತಲೆ ಚಿಟ್ಟು ಹಿಡಿಸಿ ಬಿಡುತ್ತಿದ್ದೀವಿ. ನಂತರ ತೋಟಕ್ಕೆ ಹೋಗಿ ಪೂಜೆ ಮಾಡುವ ಜಾಗ ಸರಿ ಮಾಡಿ ಬರುವ ಕೆಲಸಕ್ಕೆ ಅಪ್ಪನ ಜೊತೆ ತೋಟಕ್ಕೂ ದಾಳಿ ಇಟ್ಟು, ಅಲ್ಲಿ ಸ್ವಲ್ಪ ಗಲಾಟೆ ಮಾಡಿ, ಮನೆಗೆ ಬರೋ ಅಷ್ಟೋತ್ತಿಗೆ ಅಮ್ಮ ಅಡಿಗೆಯಲ್ಲಿ ಬ್ಯುಸಿಯಾಗಿರುತ್ತಿದ್ದಳು. ನಾವು ಸ್ನಾನದ ಶಾಸ್ತ್ರ ಮುಗಿಸೋ ವೇಳೆಗೆ, ಮನೆ ತುಂಬಾ ನನ್ನ ಫೆವರೇಟ್ ಬೆರಕೆ ಸೊಪ್ಪಿನ ಪಲ್ಯದ ಗಮ. ಆದರೆ ತಿನ್ನೊಕ್ಕೆ ಪೂಜೆ ಮುಗಿಯದೆ ಅನುಮತಿಯಿಲ್ಲ. ಅದರೆ ಈ ಪಲ್ಯಕ್ಕೆ ಉಪ್ಪು ಹಾಕದೆ ಮಾಡಲಾಗುತ್ತಿತ್ತು. ಕಾರಣ ಮಾತ್ರ ನನಗೆ ಇವತ್ತಿಗೂ ಗೊತ್ತಿಲ್ಲ. ಅಮ್ಮ ಒಂದು ಪಾತ್ರೆಗೆ ಅನ್ನ ಮತ್ತು ಪಲ್ಯ ಹಾಕಿ ಕಲಸಿ ಪೂಜೆಗೆ ಕಳುಹಿಸುತ್ತಿದ್ದಳು. ಪೂಜೆ ಯ ನಂತರ ಅದನ್ನು ತೋಟಕ್ಕೆ ಬೀರುವುದು ವಾಡಿಕೆ. ಅಪ್ಪ ಮುಂದೆ ಮುಂದೆ ಪಲ್ಯದ ಅನ್ನವನ್ನು ಬೀರುತ್ತಾ ಹೋದ ಹಾಗೆ ನಾನು ಅವನ ಹಿಂದೆ ಪಾತ್ರೆ ಹಿಡಿದು ಹಿಂಬಾಲಿಸುತ್ತಿದ್ದೆ, ಅಪ್ಪನಿಗೆ ಕಾಣದ ಹಾಗೆ ಸಾಕಷ್ಟು ಅನ್ನ ನನ್ನ ಹೊಟ್ಟೆ ಸೇರಿರುತ್ತಿತ್ತು. ಇದಕ್ಕಾಗಿಯೇ ನಾನು ತೋಟಕ್ಕೆ ಹೋಗುತ್ತಿದ್ದೆ ಅನ್ಸುತ್ತೆ. ಆದರೆ ತೋಟ ಗದ್ದೆಗೆ ಅನ್ನ ಚೆಲ್ಲುವುದು ಮಾತ್ರ ನನಗೆ ಇಷ್ಟ ಆಗುತ್ತಿರಲ್ಲಿಲ್ಲ. ವೇಸ್ಟ್ ಅನ್ನೋದು ನನ್ನ ಭಾವನೆಯಾಗಿತ್ತು. ಅಗ ಅಪ್ಪ ನಮ್ಮ ಜೀವನ ನೆಡೆಯೋದೆ ಈ ಜಮೀನಿನಿಂದ, ಇಡೀ ವರ್ಷ ಇದರಿಂದ ಲಾಭ ಪಡೆಯುತ್ತೇವೆ, ಒಂದು ದಿನ ಇದಕ್ಕಾಗಿ ನಾವು ಸ್ಪಲ್ಪ ಖರ್ಚು ಮಾಡಿದ್ದರೆ ಅದು ನಾವು ಭೂಮಿಗೆ ಸಲ್ಲಿಸುವ ವಂದೆನೆ ಅಂತ ಬುದ್ಧಿ ಹೇಳುತ್ತಿದ್ದ. ನಾವು ದೊಡ್ಡವರಾದ ಹಾಗೆ ಕಾಲೇಜು, ಹಾಸ್ಟೇಲ್ ಅಂತ ಹಬ್ಬಕ್ಕೆ ಮನೆಯಲ್ಲಿ ಇರುತ್ತಿರಲಿಲ್ಲ. ಹಾಗೆ ಹಬ್ಬದೊಂದಿಗಿನ ನಂಟು ಕಡಿಮೆಯಾಗುತ್ತಾ ಬಂತು.
ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಈ ಹಬ್ಬವನ್ನು ಬೇರೆ ತರ ಆಚರಿಸುತ್ತಿದ್ದರು. ರಾತ್ರಿ ಎಲ್ಲಾ ಅಡಿಗೆ ಮಾಡಿ, ಮುಂಜಾನೆ ಕಾಗೆ ಕೂಗುವ ಮುನ್ನ ಜಮೀನಿಗೆ ಪೂಜೆ ಮಾಡಿ, ಮಾಡಿದ ಭಕ್ಷ್ಯಗಳನ್ನು ಭೂ ತಾಯಿಗೆ ಅರ್ಪಿಸುತ್ತಿದ್ದರು. ಅವರಲ್ಲಿ ಕೊಟ್ಟೆ ಕಡಬು ಅ ದಿನ ವಿಶೇಷ, ಅದನ್ನು ಭೂಮಿಯ ಒಳಗೆ ಹೂಳಿ, ಗದ್ದೆ ಕುಯ್ಲಿನ ಸಮಯದಲ್ಲಿ ತೆಗೆದು ತಿನ್ನುವುದು ಅವರ ಆಚರಣೆ. ಅವರ ಮನೆಗೆ ಹಬ್ಬಕ್ಕೆ ಹೋಗುವ ನನ್ನ ಆಸೆ ಮಾತ್ರ ಆಸೆಯಾಗಿಯೆ ಉಳಿಯಿತು. ಅದನ್ನು ಅಮ್ಮನ ಬಳಿ ಹೇಳಿದಾಗ ಚೆನ್ನಾಗಿ ಬೈಯಿದು, ಬಾಯಿ ಮುಚ್ಚಿಸಿದ್ದಳು.
ಈಗ ಹಬ್ಬ ಮಾಡಿದರೂ, ಆ ಸಂಭ್ರಮ ಇಲ್ಲ. ಆದರೂ ನನಗೆ ಭೂಮಿ ಹುಣ್ಣಿಮೆ ಅತಿ ಪ್ರಿಯವಾದ ಹಬ್ಬ. ಹಲವು ವರ್ಷಗಳ ನಂತರವೂ ಬಾಲ್ಯದ ಈ ಹಬ್ಬದ ಆ ದಿನಗಳ ನೆನಪು ಹಸಿರಾಗಿದೆ, ಪ್ರತಿ ವರ್ಷವೂ ಅವುಗಳನ್ನು ಮಿಸ್ ಮಾಡ್ಕೊಳುತ್ತೀನಿ ಮತ್ತು ನೆನೆಪುಗಳು ಕಾಡುತ್ತವೆ. ಆದರೆ ಈ ಬಾರಿ ನನ್ನ ಮಗಳೊಂದಿಗೆ ಈ ಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅವಳಿಗೂ ಬಾಲ್ಯದ ಸುಂದರ ದಿನಗಳ ನೆನಪುಗಳನ್ನು ಉಳಿಸುವ ನಿಟ್ಟಿನಲ್ಲಿ...