February 22, 2013

’ಅವನ ಮೇನಿಯಾ’


ನಿನ್ನದ್ದು ಎಲ್ಲಾ ಅತಿರೇಕ. ಮೂರು ಹೊತ್ತು ನಿಂಗೆ ಅದೇ ಧ್ಯಾನ, ಸುತ್ತಿ ಬಳಸಿ ಮತ್ತದೇ ವಿಷ್ಯಕ್ಕೆ  ಬರ್ತಿಯಾ. ಹೀಗೆ ಮುಂದುವರೆದರೆ ಯು ನೀಡ್ ಎ ಕೌನ್ಸಿಲಿಂಗ್. ನಿನಗೆ ಅವನ ಮೇನಿಯಾಅಂತ  ಗೆಳತಿ ಹೆಚ್ಚು ಕಮ್ಮಿ ನನ್ನ ತರಾಟೆಗೆ ತೆಗೆದುಕೊಂಡಳು. ಹಾಗೆ ಜೊತೆಗೆ ಮೇನಿಯಾದ ಹುಳವನ್ನು ನನ್ನ ತಲೆ ಒಳಗೆ ಬಿಟ್ಟಳು. ಮೇನಿಯಾದ  ಬಗ್ಗೆ ತಿಳಿಯುವ ಕೂತುಹಲದಿಂದ   ಸಂಶೋಧನೆ ಮಾಡಲು, ಕೀ ಬೋರ್ಡ್ ಮೇಲೆ ಮೇನಿಯಾ ಅಂತ ಟೈಪಿಸುತ್ತಿದಂತೆ. ಬೆರಳ ತುದಿಯ ನನ್ನ  ಪ್ರಪಂಚ, ಪ್ರೀತಿಯ ಕಂಪ್ಯೂಟರ್ ಪರದೆ ಮೇಲೆ ಪೂರ್ತಿ ಮೇನಿಯಾದ ಪುರಾಣವೇ ಸಿಕ್ಕಿತ್ತು. ಮೇನಿಯಾ ಅನ್ನುವುದು  ಹುಚ್ಚು ಎಂಬ ಅರ್ಥ ಕೊಡುವ ಗ್ರೀಕ್ ಮೂಲದ ಪದವಂತೆ. ಈ ಪದವು ಬುದ್ಧಿವಿಕಲ್ಪ, ಚಿತ್ತವಿಕಾರ, ಉನ್ಮಾದ ಎಂಬ ಅರ್ಥಗಳನ್ನು ನೀಡುತ್ತದೆ. ಇದನ್ನೊಂದು  ವಿಧದ ಮಾನಸಿಕ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಸರಳವಾಗಿ ಮೇನಿಯಾವನ್ನು   ಮಿತಿಮೀರಿದ ಉತ್ಸಾಹ ಅಥವಾ ಬಯಕೆ, ಗೀಳು ಎಂದು ಹೇಳಬಹುದು. ಮನಸ್ಸಿಗೆ ಕಿರಿಕಿರಿ, ತೀವ್ರ ನೀದ್ರಾಹೀನತೆ, ಅತಿಯಾದ ಮಾತು ಮತ್ತು ಸೂಕ್ತವಲ್ಲದ ಸಾಮಾಜಿಕ ವರ್ತನೆಗಳು ಮೇನಿಯಾದ ಲಕ್ಷಣಗಳಲ್ಲಿ ಕೆಲವು.  ಇನ್ನೂ ಈ ಮನಸ್ಸಿನ ಕಾಯಿಲೆಯಲ್ಲಿ ಹಲವು ರೀತಿಯವು.   ಪ್ರತಿಯೊಂದು  ಗೀಳಿಗೂ  ಒಂದೊಂದು ಹೆಸರು ಹೊಂದಿದ ಎ ಟು ಜೆಡ್ ವರೆಗಿನ  ದೊಡ್ಡ ಪಟ್ಟಿ ಹಾಗೂ  ಮನುಷ್ಯನ ತರೇವಾರಿ ಹುಚ್ಚುತನ ಕಂಡು ನಾನು  ಹೌಹಾರಿದೆ. ಅದರೊಂದಿಗೆ ನಾನು ಈ ಹುಚ್ಚುಗಳಲ್ಲಿ ಹಿಂದೆ ಬಿದ್ದಿಲ್ಲ ಎಂಬುದು  ನೆನೆಪಾಗ ತೊಡಗಿತ್ತು. ಸೆಕೆಂಡ್ ಇಯರ್  ಡಿಗ್ರಿಯಲ್ಲಿ ಪರೀಕ್ಷೆಗೆ ಎರಡು ವಾರ ಮುಂಚೆ ನನಗೆ ಯಾವತ್ತು  ಇಲ್ಲದ ಚೆಸ್ ಆಟದ ಹುಚ್ಚು ಹಿಡಿದು ನಾನು ಮತ್ತು  ನನ್ನ ರೂಮ್ ಮೆಟ್  ಸುಮಾರು  ರಾತ್ರಿ ಬೆಳ್ಳಿಗೆ ಮಾಡಿದ್ದು. ಸ್ಪಲ್ಪ ದಿನಗಳ ಕಾಲ ಕಾದಂಬರಿ ಓದೊ ಹುಚ್ಚು ಯಾವ ಮಟ್ಟಕ್ಕೆ ತಲುಪಿತು ಅಂದರೆ ವಾರಗಟ್ಟಲೇ  ಕ್ಲಾಸ್ ಬಂಕ್ ಮಾಡಿ ಸೆಂಟ್ರಲ್ ಲೈಬ್ರರಿಯಲ್ಲಿ  ಕಾಲ ಕಳೆಯುತ್ತಿದ್ದೆ.  ಗಣಿತ ಅಂದರೆ ಮೂರು ಮೈಲಿ ದೂರ ಓಡೊ ನಾನು, ನಲವತ್ತಕ್ಕಿಂತ ಜಾಸ್ತಿ ಮಾರ್ಕ್ಸ್  ತೆಗೆಯದ ನನಗೆ ಒಂದಷ್ಟು ತಿಂಗಳು  ಸಂಖ್ಯೆಗಳ ಮೇಲೆ ಎಲ್ಲಿಎಲ್ಲಿದ ಪ್ರೀತಿ ಹುಟ್ಟಿ, ಸುಡೊಕೊ ಮೇನಿಯಾ ಅಂಟಿಸಿ ಕೊಂಡಿದೆ. ಅದಕ್ಕಾಗಿ  ಕಂಡಕಂಡವರ ಮನೆಯ  ಪೇಪರ್ ಕೇಳೊ ಅಭ್ಯಾಸ ಶುರುವಾಗಿತ್ತು.  ಹಾಸ್ಟೆಲಿನಿಂದ ಮನೆಗೆ ಹೋದಾಗಲೇಲ್ಲಾ ದಿನದ ಮುಕ್ಕಾಲು ಭಾಗಕ್ಕಿಂತ  ಜಾಸ್ತಿ ಹೊತ್ತು  ನಿದ್ರೆ ಮಾಡುತ್ತಿದ  ನನ್ನ ಗೀಳು,  ಸದಾ ಅಮ್ಮನ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ನನ್ನ ಅತಿ ಪ್ರೀತಿಯ ಮೇನಿಯಾ. ಕಾಫಿ ಅಂದರೆ ಮೂಗು ಮೂರಿಯುತ್ತಿದ್ದ ನನಗೆ ಕಳೆದ ವರ್ಷ ಅಂಟಿ ಕೊಂಡಿದ್ದು  ಕಾಫಿ ಚಟ. ದಿನವೀಡಿ ಘಂಟಗೆ ಎರಡು ಮೂರು ಸಾರಿ ಬ್ರೂ ಕಾಫಿ ಕುಡಿದ್ದು, ಆಸಿಡಿಟಿ ರೂಪದಲ್ಲಿ ಅದು ಕಾರಲು  ಶುರುವಾದ ಮೇಲೆ ಅದಕ್ಕೆ ಕಡಿವಾಣ ಬಿತ್ತು. ಇನ್ನು ಆರು ತಿಂಗಳ ಹಿಂದೆ ಅಂಟಿ ಕೊಂಡಿದ್ದ ಗೀಳಂದರೆ ಸೀರಿಯಲ್ ನೋಡೋದು. ಒಂದೇ ಟೈಮ್ ಸ್ಲಾಟ್‌ನಲ್ಲಿ ಮೂರು ಮೂರು ಧಾರವಾಹಿಗಳನ್ನು ನೋಡಿ ನೋಡಿ ತಲೆಯಲ್ಲಿ ಕಲೆಸು ಮೆಲೋಗರವಾಗಿ ವಾಕರಿಕೆ ಹುಟ್ಟಿಕೊಂಡಾಗಲೇ  ಗೊತ್ತಾಗಿದ್ದು ನನ್ನ ಹುಚ್ಚಿನ ಪರಿಣಾಮದ ಮಟ್ಟ.  ಇನ್ನೂ ಕೆಲವು ಮೇನಿಯಾಗಳು ಕಮಾನ್ ಆದರೂ, ಆದರ ಪರಿಣಾಮ ಮಾತ್ರ ಸ್ಪಲ್ಪ ಜಾಸ್ತಿನೇ ಆಗಿದ್ದೆ. ಆ ರೀತಿಯಲ್ಲಿ ಒಂದು ಚಾಕೊಲೇಟ್  ವ್ಯಾಮೋಹ, ಹೆಚ್ಚಿನ ಎಲ್ಲಾ ಹಲ್ಲುಗಳನ್ನು ಇವಕ್ಕೆ ಬಲಿಯಾಗಿವೆ, ಅನ್ನೊದಕ್ಕಿಂತ ಹೆಚ್ಚಿನ ದುಃಖ ದಿನ ದಿನ ಹೆಚ್ಚುತ್ತಿರುವ ತೂಕ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ.  ಈ ಎಲ್ಲಾ ಹಾಗೂ ಇನ್ನೂ ಕೆಲವು  ಮೇನಿಯಾಗಳು ಆಗಲೋ ಈಗಲೋ ಕಾಡಿ ಬಂದಹಾಗೇ ಮರೆಯಾಗುತ್ತವೆ. ಯಾವುದು ಅಂತ ಏನು ಗಂಬೀರ ನಷ್ಟವನ್ನು ಉಂಟು ಮಾಡಿದ್ದು ಗಮನಕ್ಕೆ ಬಂದಿಲ್ಲ. ಆದರ ಜೊತೆಗೆ ಇವೆಲ್ಲಾ ಎಲ್ಲರಿಗೂ ಇರೋ ಅಂತ ಗೀಳು. 

ಆದರೆ ಯಾರಿಗೂ  ಕಾಡದ, ಹೆಸರಿಡದ, ನನಗೆ ಮಾತ್ರ ಸೀಮಿತವಾಗಿರುವ ಮೀತಿ ಮಿರಿದ ಉತ್ಸಾಹದ ಲಾಂಗ್ ಲಾಸ್ಟಿಂಗ್  ಗೀಳು  ಅವನ ಮೇನಿಯಾ’. ಇದು ನನ್ನ ಹಿಂದಿನ ಎಲ್ಲಾ ಹುಚ್ಚುತನಗಳನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದು ಕೊಂಡಿದೆ.  ಮೇನಿಯಾದ ಪ್ರತಿಯೊಂದು ಲಕ್ಷಣಗಳನ್ನು ಒಳಗೊಂಡಿರುವುದು ಅಷ್ಟೇ ನಿಜ ಕೂಡ.  ಅವನಿಂದ ದೂರವಾದಷ್ಟು ಹೆಚ್ಚು  ಮನಸ್ಸಿಗೆ ಕಿರಿಕಿರಿಯಾದರೆಅವನ ನೆನಪು ನಿದ್ರೆಯನ್ನು ಓಡಿಸಿದೆ, ನನ್ನೊಳಗೆ ಅವನೊಂದಿಗೆ  ಕೊನೆಯಿಲ್ಲದ ಮಾತುನನ್ನ ಇರುವನೇ ಮರೆಸುವ ಅವನ ಗುಂಗು.  ಇವೆಲ್ಲಾ ನನಗೆ ಅಂಟಿಕೊಂಡಿರುವ ಅವನ ವ್ಯಾಮೋಹದ ಸ್ಪಷ್ಟ ಕುರುಹುಗಳು. ನನಗಿರುವ ಅವನ ಗೀಳು ಅಂಟು ರೋಗವಾಗಿದರೆ ಎಷ್ಟು ಚೆನ್ನಾಗಿರುತಿತ್ತು. ನನ್ನ ಮೇನಿಯಾವನ್ನು ಅವನಿಗೂ ಟ್ರಾನ್ಸ್ ಫರ್ ಮಾಡಿ, ಅದಕ್ಕೊಂದು ಮುದ್ದಾದ ಹೆಸರಿಟ್ಟು ಬಿಡುತ್ತಿದೆ. ಅದಕ್ಕೆ ಅವನು ಹೇಳುತ್ತಾನೆ ಈಗೀಗ ನೀನು ನನ್ನಿಂದ ಇನ್ನು ಹೆಚ್ಚಿನ ಪ್ರೀತಿಯನ್ನು ಎಕ್ಸ್‌ ಪೆಕ್ಟ್ ಮಾಡ್ತಿಯಾ ಅಂತ. ಹೌದು ಏನು ಮಾಡೋದು.. ದಿನದಿಂದ ದಿನಕ್ಕೆ ಅವನು ಇನ್ನಷ್ಟು ಹೆಚ್ಚು ಇಷ್ಟವಾಗಿ ಅವನ ಮೇನಿಯಾಗಂಬೀರವಾಗುತ್ತಿದೆಯಲ್ಲಾ.. !
 ಸುತ್ತಿ ಬಳಸಿ ಮತ್ತದೇ ಅವನ ವಿಷ್ಯ.          


(Published in Vijaya Next on 22.2.2013)
               

January 24, 2013

ವಾಸನೆ, ನೆನಪು ಮತ್ತು ಅವನು!


ನನ್ನ ನೆನಪುಗಳಿಗೆ ಸಂಬಂಧಿಸಿದಂತೆ ನನಗೆ ಒಂದು ವಿಚಿತ್ರವಾದ ಕಾಯಿಲೆ ಇದೆ. ಕೆಲವು ಬಾರಿ ಎಷ್ಟು ನೆನಪು ಮಾಡಿಕೊಂಡರು ಎದುರಿಗೆ ಇರೋ ವ್ಯಕ್ತಿಯ ಹೆಸರೇ ನೆನಪಿಗೆ ಬರುವುದ್ದಿಲ್ಲ. ಇನ್ನೂ ಕೆಲವು ಸಾರಿ ಯಾವುದೋ ಒಂದು ಪ್ರಾಣಿ ಅಥವಾ ವಸ್ತುವನ್ನು ನೋಡಿದ ತಕ್ಷಣ ಅದಕ್ಕೆ ಸಂಬಂಧನೇ ಇಲ್ಲದೆ ಇರೋ  ಇನ್ಯಾರೋ ಮನುಷ್ಯ ನೆನಪಾಗುವುದು. ನಮ್ಮ ಮನೆಯ ನಾಯಿ ರೋನಿ ನೋಡಿದಾಗಲ್ಲೇಲ್ಲಾ ಯಾವುದೋ ಅಂದಕಾಲತ್ತಿನಲ್ಲಿ ನಮ್ಮ ಮನೆಗೆ ಬರುತ್ತಿದ್ದ ದಾಸಯ್ಯ ಪ್ರತಿ ಬಾರಿಯೂ ನನ್ನ ಕಣ್ಣು ಮುಂದೆ ಬರುತ್ತಾನೆ. ಇನ್ನೂ ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರ್ ಕಂಡಾಗ ನಮ್ಮ ಅಜ್ಜಿ ನೆನಪಾಗೋದು. ಈ ರೀತಿ ಹೋಲಿಕೆಗೆ ಯಾವುದೇ ಒಂದು ನಿರ್ದಿಷ್ಟ ಕಾರಣ ಮಾತ್ರ ಎಷ್ಟು ಯೋಚಿಸಿದರು ನೆನಪಿಗೆ ಬಾರದು.  ವಾಸನೆ ಮತ್ತು  ನನ್ನ ನೆನೆಪಿಗಳಿಗಂತೂ ಜನ್ಮ ಜನ್ಮಾಂತರದ ಸಂಬಂಧ. ಕೆಲವು ವಾಸನೆಗಳಂತೂ ಕೇಳೋದೆ ಬೇಡ ನನ್ನ ನೆನಪಿನ ದೋಣಿಯನ್ನು ಎಲ್ಲಿಂದ ಎಲ್ಲಿಗೋ ತೇಲಿಸಿ ಬಿಡುತ್ತದೆ. ನೇಲ್ ಪಾಲಿಶ್ ರಿಮೂರ್ ಅಪರೇಷನ್ ಥೆಟರ್ ನೆನಪು ತರಿಸಿದರೆಮೀನು ವಾಸನೆ ಮೂಗಿಗೆ ಬಡಿದ ತಕ್ಷಣ ನಮ್ಮೂರ ಮಂಗಳವಾರ ಸಂತೆ ನೆನೆಪಾಗುತ್ತದೆ. ಸಗಣಿ ವಾಸನೆಯಿಂದ ಆಗ ತಾನೇ ಕೊಟ್ಟಿಗೆ ಕೆಲಸ ಮುಗಿಸಿ ಕಾಲಿಗೆ ಸಗಣಿ ಮೆತ್ತಿಸಿ ಕೊಂಡ ಬಂದ ಅಮ್ಮ ನೆನಪಾಗುತ್ತಾಳೆ.  ಇನ್ನೂ  ಈರುಳ್ಳಿ ವಾಸನೆ ಸಣ್ಣಲ್ಲಿ ಯಾವಾಗಲೋ ಅಪ್ಪನೊಡನೆ ನೋಡಿದ ಯಕ್ಷಗಾನ ಮತ್ತು ಅಲ್ಲಿನ ಮಸಾಲೆ ಮಂಡಕ್ಕಿಯ ನೆನೆಪು ಮೂಡಿಸುತ್ತದೆ.  ಮಳೆ ಹನಿ ಬಿದ್ದ ಮಣ್ಣಿನ ವಾಸನೆಯಂತೂ ನನ್ನ ನೆನಪನ್ನು  ನೇರವಾಗಿ  ಬಾಲ್ಯಕ್ಕೆ  ತಳ್ಳುತ್ತೆ. ಮಳೆಯಲ್ಲಿ ಆಟವಾಡಿ ಮನೆಯೆಲ್ಲಾ ಕೆಸರ ಹೆಜ್ಜೆ ಮಾಡಿ, ದೊಡ್ಡವಳಾದ ತಪ್ಪಿಗೆ ಅಮ್ಮನಿಂದ ತಂಗಿ-ತಮ್ಮ ಇಬ್ಬರ ಪಾಲಿನ ಪೆಟ್ಟನ್ನು ನಾನೇ ತಿಂದ ನೆನೆಪು ತಾಜಾವಾಗಿಸುತ್ತದೆ.  ಬೆವರಿನ  ವಾಸನೆ ನಾನು ಶಾಲೆಗೆ ಹೋಗುವಾಗ ಸದಾ ತುಂಬಿರುತ್ತಿದ್ದ ಗುರುಶಕ್ತಿ ಬಸ್ ಅನ್ನು  ನೆನಪಿಸಿದರೆ, ಪಬ್ಲಿಕ್ ಟಾಯ್ಲೆಟ್ ನಮ್ಮ ಹಾಸ್ಟೇಲನ್ನು ನೆನಪಿಸುತ್ತದೆ. ಹೀಗೆ ನನ್ನ ವಾಸನೆ ಮತ್ತು ನೆನಪಿನ ನಿಕಟ ಸಂಬಂಧದ  ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಆದರೆ ಈ ವಾಸನೆ  ಮತ್ತು ನೆನಪಿನ ಪುರಾಣ ಇಷ್ಟಕ್ಕೆ ಸೀಮಿತವಾಗಿಲ್ಲ. ಮೊದಲೇಲ್ಲಾ ಪ್ರತಿಯೊಂದು ವಾಸನೆಗೂ ಬೇರೆಯಾದ ನೆನಪುಗಳಿದ್ದವು. ಆದರೆ ಈಗ ಪ್ರತಿಯೊಂದು ವಾಸನೆಯು ಅವನ ನೆನಪಿನ ಸುತ್ತಲೇ ಸುತ್ತುತ್ತವೆ. ಬೆಳಿಗ್ಗೆ ಎದ್ದ ತಕ್ಷಣದ ಕಾಫಿ ಡಿಕ್ಷಾನ್‌ನಿನ ಘಮಲಿನಿಂದ ಹಿಡಿದು, ರಾತ್ರಿ ಮಲಗುವ ಮುನ್ನ ತಿನ್ನುವ ಚಾಕೊಲೇಟಿನ ತೆಳು ಕಂಪಿನವರೆಗೂ  ಬರಿ ಅವನಿಗೆ ಅಂಟಿ ಕೊಂಡ ನೆನಪೇ. ಬೆಳಗ್ಗಿನ ಚಳಿಯಲ್ಲಿ ಬಿಸಿ ಕಾಫಿಯ ಪರಿಮಳ ಮೂಗನ್ನು ಆರಳಿಸುತ್ತಿದ್ದಂತೆಇಷ್ಟು ದುಡ್ಡು ಕೊಟ್ಟು ನಾವೇ ಸಕ್ಕರೆನೂ ಹಾಕೋ ಬೇಕಾ ಅಂತ ಕಾಫಿ ಡೇಯಲ್ಲಿ ಅವನು ಗೊಣಗಿಕೊಂಡು, ಕಾಫಿಗೆ ಸಕ್ಕರೆ ಸುರಿದು ಕೊಳ್ಳೊ ಅವನ ಪರಿ ನನ್ನನ್ನು ಬೆಚ್ಚಗಾಗಿಸುತ್ತದೆ. ಇನ್ನೂ ನನಗೆ ವಾಂತಿ ಬರಿಸುವ ಸೀಗರೇಟ್ ವಾಸನೆಯೂ, ಅವನ ಮೊದಲ ಭೇಟಿಯನ್ನು ನೆನಪಿಸಿ ತುಟಿಯಲ್ಲಿ ಮಂದಹಾಸ ಮೂಡಿಸುತ್ತದೆ. ಆವತ್ತೇ ಅಲ್ವಾ ಅವನು ನಿನ್ನ ಮೂಗು ನಾಯಿ ಮೂಗು ಅಂತ ಹೇಳಿದ್ದು. ಲಿಂಬೆ ಹಣ್ಣಿನ ವಾಸನೆ ಮೂಗಿಗೆ ರಾಚುತ್ತಿದ್ದಂತೆ ಅವನ ಪ್ರಿಯವಾದ ಹುಳಿ ಹುಳಿಯಾದ  ಚಿತ್ರಾನ್ನದ ನೆನಪು ಮನಸ್ಸಿಗೆ ಮುದ ನೀಡುತ್ತೆ.  ಹೊಟ್ಟೆ ತೊಳಿಸುವ ಎಸಿಯ  ಗಾಳಿಯ ವಾಸನೆ ಅವನ ಕಾರನ್ನು ನೆನಪಿಗೆ ತರುತ್ತದೆ. ಹೀಗೆ ಇನ್ಯಾವುದೋ ವಾಸನೆ ಅವನ ಡೀಯೊ ನೆನಪಿಸಿದರೆ, ಮತ್ತೊಂದು ಅವನ ಬಿಸಿಯುಸರನ್ನು ನೆನಪಿಸಿ ಕಚಗುಳಿ ಇಡುತ್ತದೆ. ಹೀಗೆ ಪ್ರತಿ ಕ್ಷಣವೂ ನನ್ನ  ಕಾಡುವ ವಾಸನೆಗಳು ಅವನ ನೆನಪಿನಲ್ಲಿ ನನ್ನ ಇರುವನ್ನೆ ಮರೆಸುತ್ತವೆ.

ಅವನ ನೆನಪಿನ ಗುಂಗಿನಲ್ಲಿದ್ದ ನನಗೆ ತಕ್ಷಣ ಮೂಗಿಗೆ ಬಡಿದಿದ್ದು ಹಾರ್ಲಿಕ್ಸ್ ವಾಸನೆ... ಆಗಾಗಲೇ ನೆನಪಾಗಿದ್ದು ನನಗೆ ಅಡುಗೆ ಮನೆಯಲ್ಲಿ ಒಲೆ ಮೇಲೆ ಇಟ್ಟು ಮರೆತು ಬಂದ ಹಾಲಿನದು.

(Published in Vijaya Next on 13/1/20013)

January 18, 2013

ಮೀನಿನ ಮನೆ


ಪುಟ್ಟ ಮನೆಯಕಾರದ ಗಾಜಿನ  ಪೆಟ್ಟಿಗೆ, ಅದರೊಳಗೆ ಪುಣಾಣಿ ಬಣ್ಣ ಬಣ್ಣದ ಮೀನುಗಳು. ಮೊದಲಿನಿಂದಲೂ ನನಗೆ ಅತಿ ಪ್ರಿಯವಾದದ್ದು.  ಕಂಡ ಕಂಡಲ್ಲಿ ಅದರ ಮುಂದೆ ನಿಂತು, ಕಣ್ಣು ಮಿಟುಕಿಸದೆ ಆದನ್ನು ನೋಡುವುದೆಂದರೆ ಎನ್ನೋ ಖುಶಿ. ಪಾರದರ್ಶಕ ಮನೆ ಅದರೊಳಗೆ ನೀರು. ನೀರನ್ನು ಸೀಳಿ ಬೆಳಕು.  ತಳದಲ್ಲಿ ಮರಳು, ತರಾವರಿ ಕಲ್ಲುಗಳು, ಚಿಕ್ಕ ಚಿಕ್ಕ ಶಂಖ, ಕವಡೆ, ಕಪ್ಪೆ ಚಿಪ್ಪುಗಳ ಹಾಸು ಸದಾ ಆಕರ್ಷಣೆಯ ಬಿಂದು.  ಇವುಗಳನ್ನೇಲ್ಲಾ ಮೀರಿ ಮನಸ್ಸಿಗೆ ನಾಟುತ್ತಿದ್ದಿದ್ದು ಕೆಂಪು, ಕಪ್ಪು, ಬಿಳಿ, ಕೇಸರಿ, ಹಳದಿ, ನೀಲಿ, ಬಂಗಾರ ಬಣ್ಣಗಳ ಹಲವು ಬಗೆಯ ಮೀನುಗಳು. ಒಂದು ಮೀನು ಗಾಳಿ ಪಟದ ಆಕಾರದಲ್ಲಿದ್ದರೆ, ಇನ್ನೊಂದು ಬಲೂನಿನ ಹಾಗೆ, ಮತ್ತೊಂದು ಅಚ್ಚ ಬಿಳಿಅದರ ಜೋಡಿ ಕಡು ಕಪ್ಪು, ಮಗದೊಂದು ಎರಡು ಮೂರು ಬಣ್ಣಗಳ ಸಮಿಶ್ರಣ, ಇನ್ಯಾವುದೊಂದರ ಬಾಲ ಬೀಸಣಿಗೆಯ ತದ್ರೂಪ. ಒಂದೊಂದು ಒಂದೊಂದು ತರ, ಒಂದಕ್ಕಿಂತ ಒಂದು ವಿಭಿನ್ನ.  ಒಂದೇ ಟ್ಯಾಂಕ್‌ನಲ್ಲಿ ಒಗಟ್ಟಿನಲ್ಲಿರುವ ಬಗೆ ಬಗೆಯ ಮೀನುಗಳು. ಪ್ರತಿಯೊಂದರ  ಚಲನವಲನವೂ ಪೂರ್ತಿ ಬೇರೆ ಬೇರೆ. ಒಂದು ಜೋಡಿ ಸದಾ ಒಂದಕ್ಕೊಂದು ಅಂಟಿಕೊಂಡಂತೆ ಇದ್ದರೆ. ಇನ್ನೊಂದು ಬಗೆಯದು ಒಂದರ ಬಾಲ ಹಿಡಿದು ಇನ್ನೊಂದು ಜೂಟಾಟವನ್ನು ನೆನಪಿಸುತ್ತದೆ. ಇವರೆಡರಕ್ಕಿಂತ ಭಿನ್ನವಾಗಿ ಇನ್ನೊಂದು ಜಾತಿಯ ಮೀನು, ಒಂದಕ್ಕೊಂದು  ಮುತ್ತಿಡುವ, ಪಿಸುಗುಟ್ಟುವ  ಇವುಗಳು ಯುವ ಪ್ರೇಮಿಗಳ ತದ್ರೂಪ. ಒಂದು ಜಾತಿಯ ಮೀನು ಪ್ರಪಂಚದ ಎಲ್ಲಾ ತಲೆನೋವು ತನ್ನದೇ ಎಂಬಂತೆ ಗಡಿಬಿಡಿಯಲ್ಲಿ ಓಡಾಡುತ್ತಿದ್ದರೆ, ಇನ್ನೊಂದು ಈ ಲೋಕದ ಗೋಡ ನನಗೇಕೆ ಎಂಬಂತೆ ತಣ್ಣಗೆ ತನ್ನಷ್ಟಕ್ಕೆ ತಾನು.  ಹೇಳಿದಷ್ಟು ಮುಗಿಯದು.   ನಾವು ಏನು ಕಮ್ಮಿ ಇಲ್ಲ ಎನ್ನುವಂತೆ   ಮೀನುಗಳೊಂದಿನ ಬಣ್ಣದ ಗೊಂಬೆಗಳ ಪೈಪೋಟಿ. ಆಕ್ವೇರಿಯಂಗೆ ಇನ್ನಷ್ಟು ರಂಗು. ನೀರಿನ ಗುಳ್ಳೆಗಳನ್ನು ಉಗುಳುವ ಮೀನುಗಾರ, ಉಚ್ಚೆ ಹುಯ್ಯುವ ಪುಟ್ಟ ಬಾಲಕ, ಪುಟ್ಟ ದೋಣಿಯೊಂದಿಗೆ ಹುಟ್ಟು ಹಾಕುವ ಅಂಬಿಗ, ಈಜುಗಾರ ಹತ್ತು ಹಲವು ತರದ ಗೊಂಬೆಗಳು ಹೆಚ್ಚು ಹೆಚ್ಚು ಹೊತ್ತು ನನ್ನನ್ನು ಈ ಪುಟ್ಟ ಮಾಯಲೋಕದ ಮುಂದೆ ಕಾಲ ಕಳೆಯುವಂತೆ ಮಾಡುತ್ತಿದ್ದವು. ಅವುಗಳನ್ನು ನೋಡಲು ಸಿಕ್ಕ ಅವಕಾಶವನ್ನು ತಪ್ಪಿಸಿ ಕೊಳ್ಳದೆ ತೃಪ್ತಿಯಾಗುವಷ್ಟು ಬಣ್ಣದ ನೀರಿನ ಲೋಕವನ್ನು ಕಣ್ಣಿನಲ್ಲಿ ತುಂಬಿ ಕೊಳ್ಳಲು ಪ್ರಯತ್ನಿಸುತ್ತಿದ್ದೆ. ಮೊದಲೇಲ್ಲಾ ಆಕ್ವೇರಿಯಂ ನಮ್ಮಂತಹ ಮಧ್ಯಮ ವರ್ಗದವರ ಮನೆಗಳಲ್ಲಿ ಇದ್ದಿದ್ದು ಬಹಳ ಅಪರೂಪ.  ಆಗೇಲ್ಲಾ ಹೋಟಲ್‌ಗಳು ಅಥವಾ ದೊಡ್ಡ ದೊಡ್ದ ಮನೆಗಳಲ್ಲಿ  ಮಾತ್ರ ಅಕ್ವೇರಿಯಂ ಸೀಮಿತ ಹಾಗೂ ಅದು ಶ್ರೀಮಂತರ ಸೊತ್ತು ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು.ಆದರೂ ಅಪ್ಪನಿಂಗೆ ದಂಬಾಲು ಬಿದ್ದು ಅಕ್ವೇರಿಯಂ ಕೊಡಿಸಿಕೊಂಡು, ಕ್ಲೀನ್ ಮಾಡಲು ಹೋಗಿ ಒಡೆದು ಹಾಕಿದ್ದು ಸ್ಪಲ್ಪ ಹಳೆಯ ಕಥೆ.  ಕಾಲ ಕಳೆದಂತೆ ಅಕ್ವೇರಿಯಂಗಳು ಸಾಮಾನ್ಯವಾದರೂ ಅದರೆಡೆಗಿನ ಪ್ರೀತಿ ಮಾತ್ರ ಬೆಳೆಯುತ್ತಲೇ ಹೋಯಿತು.  ಈಗಲೂ ಮಗಳಿಗೆ ಮೀನು ತೋರಿಸುವ ನೆಪದಲ್ಲಿ ಅದರ ಮುಂದೆ ನಿಲ್ಲುವುದು, ಹೋಟೇಲ್‌ಗಳಲ್ಲಿ ಸಾದ್ಯವಾದಷ್ಟು ಫಿಶ್ ಟ್ಯಾಂಕ್‌ಗಳ ಹತ್ತಿರದ ಸ್ಥಳವನ್ನು ಆರಿಸಿಕೊಳ್ಳುವುದು ಇವತ್ತಿಗೂ ಬಿಟ್ಟಿಲ್ಲ.

ನನ್ನ ಆಕ್ವೇರಿಯಂ ಪ್ರೀತಿಗೆ ಈ ದೀಪಾವಳಿಯಲ್ಲಿ ತಂಗಿಯಿಂದ ಒಂದು ಪುಟ್ಟ ಫಿಶ್ ಟ್ಯಾಂಕ್ ಉಡುಗೊರೆಯಾಗಿ ದೊರೆತ ಮೇಲಂತೂ ಕೇಳುವುದೇ ಬೇಡ. ಈಗ ದಿನದ ಹೆಚ್ಚಿನ ಹೊತ್ತು  ಅದರದೇ ಧ್ಯಾನ. ಮೊದಲು ಬಣ್ಣಗಳಿಂದ ಗುರುತಿಸುತ್ತಿದ ಮೀನುಗಳ ಹೆಸರುಗಳು ಈಗ ಚಿರಪರಿಚಿತ. ಮೋಲಿ, ಗಪ್ಪಿ, ಫ್ಯಾನ್ಸಿ ಗಪ್ಪಿ, ಪ್ಲಾಟಿ, ಎಂಜಲ್, ಟೆಟ್ರಾ ಇತ್ಯಾದಿ ಇತ್ಯಾದಿ.  ಗೂಗಲಿಸಿದ್ದಷ್ಟು ತೆರೆದು ಕೊಳ್ಳುವ ಮೀನಿನ ಪ್ರಪಂಚ.  ಕೇಳಿದಷ್ಟು , ತಿಳಿದಷ್ಟು ಮುಗಿಯದ  ಕುತೂಹಲಕಾರಿ ಮಾಯ ಮತ್ಸ್ಯ ಲೋಕ.
ಅಕ್ವೇರಿಯಂ ಹೊಂದಲು ಸದಾ ನಿರಾಕರಿಸುತ್ತಿದ್ದ ಅವನಿಗೂ ಈಗ ಈ ಮೀನುಗಳ ಮೇಲೆ ಆಕ್ಕರೆ ಹಾಗೂ ಫಿಶ್ ಟ್ಯಾಂಕ್ ಮುಂದೆ ಕಾಲಹರಣ ಅವನ ಪ್ರಿಯವಾದ ಹವ್ಯಾಸಗಳಲ್ಲಿ ಒಂದಾಗಿದೆ.  ಅವನ ಸಾಥ್ ದೊರೆತ ಮೇಲೆ ಆಕ್ವೇರಿಯಂ, ಅದರೊಳಿಗಿನ ಬಣ್ಣ ಬಣ್ಣದ ಮೀನುಗಳು , ಕಪ್ಪೆಚಿಪ್ಫು, ಶಂಖ, ಮರಳು, ಕಲ್ಲುಗಳೆಲ್ಲಾ ಇನ್ನಷ್ಟೂ ಮನಸ್ಸಿಗೆ ಹತ್ತಿರವಾಗಿವೆ ಹಾಗೂ ಪ್ರಿಯವಾಗಿದೆ.

(ವಿಜಯ ನೆಕ್ಸ್ಟ್‌ನ "ಅವಳ ಡೈರಿ" ಆಕಂಣದಲ್ಲಿ 18/1/2013ರಂದು  ಪ್ರಕಟವಾದ ಬರಹ)

January 1, 2013

ಮರೆತೆ ಎಂದರೂ ಮರೆಯಲಾರೆ..


ಅವನ ನೆನಪನ್ನು ನನ್ನ ಮನಸ್ಸಿನಿಂದ ಬೇರು ಸಮೇತ ಕಿತ್ತು  ಹಾಕುತ್ತೇನೆ. ಅವನ್ನನ ಮರತೇ ತೀರುತ್ತೇನೆ ಎಂದು ನಾ ಪಣ ತೊಟ್ಟಾಗಲೇ, ಅವನ ನೆನೆಪುಗಳು ನನ್ನ ಹೆಚ್ಚುಹೆಚ್ಚು ಕಾಡಿರುವುದು. ಅವನ ನಂಟಿನ ಅಂಟಿನಿಂದ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟಷ್ಟು ನಮ್ಮಿಬ್ಬರ ನಡುವಿನ ನಂಟಿನ ಗಂಟು ಗಾಡವಾಗುತ್ತ ಹೋಗಿದ್ದು.  ನನ್ನ ಜೀವನದಿಂದ ಅವನ ಅಸ್ತಿತ್ವವನ್ನು ಅಳಿಸಲು ಯತ್ನಿಸಿದಾಗಲೇಲ್ಲಾ  ಅವನು ನನ್ನ ಮೀರಿ ನನ್ನ ಜೀವನವನ್ನು  ಆಕ್ರಮಿಸಿಕೊಂಡಿದ್ದು. ಇವತ್ತೇ ಕೊನೆ ಇನ್ಯಾವತ್ತು ಅವನ  ಜೊತೆ ಮಾತು ಕಥೆ ಇಲ್ಲ ಎಂದು  ಮಾಡಿದ  ಗಟ್ಟಿ ನಿರ್ಧಾರವನ್ನು ಅದೇಷ್ಟು ಸಾರಿ ಅವನ ದೇವದಾಸನ  ಆವತಾರ ಮಣ್ಣು ಪಾಲು ಮಾಡಿವೆ.  ಅವನ ಎರಡು ಲೈನ್ ಮೇಸೆಜ್‌ಗಾಗಿ ಅಥವಾ ಮೂರು ನಿಮಿಷದ ಮಾತಿಗಾಗಿ ಇಡಿ ದಿನ ಚಡಪಡಿಸುತ್ತಿದ್ದೆ. ಅವನ ಮರೆತು, ಅವನ ಹೊರತಾಗಿನ ನನ್ನ ಜೀವನ  ಕಲ್ಪನೆ ನಿಲುಕಾದಾಗಿತ್ತು. ಆದರೂ ಇದನ್ನೇಲ್ಲಾ ಮೀರಿ ಅವನೊಂದಿಗಿನ ಸಂಬಂಧವನ್ನು ಕಡಿದು ಕೊಳ್ಳಲು ನಿರ್ಧರಿಸಿದ್ದೆ. ಇಷ್ಟೇಲ್ಲಾ ನಿರ್ಧಾರದ ನಂತರವೂ ನನ್ನ ಮನಸ್ಸು ನನ್ನ ಹಿಡಿತ ತಪ್ಪುತ್ತಿತ್ತು.  ಪ್ರತಿ ಬಾರಿ ಫೋನ್ ರಿಂಗ್ ಆದಾಗಲೂ ಅದು ಅವನೇ ಅಂತ ಹೃದಯ ಬಡಿತ ತಪ್ಪುತ್ತಿತ್ತು.  ಪ್ರತಿ ಮೇಸೇಜ್ ಬಿಪ್ ಅವನಿಂದಲೇ  ಮೇಸೇಜ್ ಇರಬೇಕು ಅಂತ ಕೈ ಬೆರಳುಗಳು ಮರು ಸಂದೇಶ ಟೈಪ್ ಮಾಡಲು ಅಣಿಯಾಗುತ್ತಿತ್ತು. ಅವನನ್ನು ಮರೆತೆ ಎಂದರೂ ಮರೆಯಲಾರದೆ  ಒದ್ದಾಡಿದ್ದೆ. ಅವನ ಮರೆಯುವ ಅವಸರದಲ್ಲಿ ನಾನು ಮೂರು ಜನ್ಮಕ್ಕಾಗುವಷ್ಟು ವೇದನೆ ಅನುಭವಿಸಿದೆ. ಅವನನ್ನು ಮರೆತೇ ಬಿಡುವ ನನ್ನ ಈ  ಎಲ್ಲಾ ಕಸರತ್ತುಗಳಿಗೆ ನಿನ್ನೆಯೇ ಎಳ್ಳು ನೀರು ಬಿಟ್ಟೆ.
ಇವತ್ತು ನನ್ನ ಬದುಕಿನ ಅತಿ ಸುಂದರ ಬೆಳಗು ಅದು ಅವನೊಂದಿಗೆ ಆರಂಭಗೊಂಡಿದೆ, ಮುಕ್ತಾಯವು ಅವನೊದಿಂಗೆನೇ. ಇನ್ನೂ ಪ್ರತಿ ದಿನ, ಪ್ರತಿ ಕ್ಷಣ ಅವನ ನೆನಪ್ಪಿನೊಟ್ಟಿಗೆ ಹೆಜ್ಜೆ ಹಾಕಲು ತಿರ್ಮಾನಿಸಿದ್ಡೇನೆ. ನನ್ನಳೊಗಿನ ಅವನ  ನೆನಪನ್ನು  ಅಳಿಸಿ ಹಾಕುವ  ಕದನಕ್ಕೆ ಇಂದಿನ ಶಾಶ್ವತ ವಿರಾಮ ಘೋಷಿಸಿಲಾಗಿದೆ. ನಿನ್ನೆಯವರೆಗೆ ಅವನ ಮರೆತೇ ತೀರುತ್ತೀನಿ ಎಂಬ ಹಟ ಇವತ್ತು ಎಂಥಾ ಹುಚ್ಚಾಟ ಅನಿಸ್ಸುತ್ತಿದೆ. ಇನ್ನೂ ಅವನ ಮರೆಯುವ ಮಾತೇ ಇಲ್ಲ.  ನನ್ನೊಂದಿಗೆ ಅವನಿಲ್ಲ, ಈಗ  ಅವನ ಜೊತೆ ಮಾತಿಲ್ಲ . ಆದರೂ  ಅವನ ಪ್ರತಿಯೊಂದು  ಮಾತು. ನಗು, ನಿಟ್ಟುಸ್ಸುರು  ನನ್ನ ಕಿವಿಯಲ್ಲಿ ತಾಜಾವಾಗಿದೆ.  ಬದುಕು ಮುಗಿಯವರೆಗೂ ಸಾಕಾಗುವಷ್ಟು ನನ್ನೊಳಗೆ ಅವನ ನೆನೆಪಿದೆ. ಈಗ  ಅನು ಕ್ಷಣವು ಅವನೊಂದಿಗೆ ನಮ್ಮಿಬ್ಬರಿಗಷ್ಟ್ಟೆ ಕೇಳುವ ಪಿಸುಮಾತು.   ನನ್ನ  ಜೀವನದ ಪ್ರತಿ ಹಾಡಿಗೂ ಅವನ ನೆನಪೇ ಸಾಹಿತ್ಯ.  ಇಷ್ಟು ದಿನ ಜಾಗ ತಪ್ಪಿದ ನನ್ನ  ದಿನಚರಿಯ ಮತ್ತೆ ಸುಸ್ಥಿತಿಗೆ ಮರಳಿದೆ.  ನನ್ನ ಮನದಳೊಗೆ ಸದಾ ಅವನ ಇರುವಿಕೆಯ ಅನುಭವವೊದೇ  ಸಾಕು  ಜೀವನ ಪೂರ್ತಿಯ  ನೆಮ್ಮದಿಗೆ. 
ಈಗ ಎಲ್ಲಾ ಸುಸೂತ್ರ. ಬದುಕು ಮತ್ತಷ್ಟು ಸುಂದರ. ಹೋಲಿಸಲು ಎಷ್ಟು ಉಪಮೇಯವೂ ಕಡಿಮೆ. ಸೂತ್ರ ಕಿತ್ತ ಗಾಳಿಪಟವಾಗಿದ್ದ ನನ್ನ ದಿನಚರಿ ಮತ್ತೆ ಸರಾಗವಾಗಿದೆ. ಕದಡಿದ ಮನಸ್ಸು ಅದರೊಳಗೆ ರಚ್ಚೆ ಹಿಡಿದು ಕೂತಿದ್ದ ಅವನು  ಎಲ್ಲಾ ಈಗ ಶಾಂತ. ನಿನ್ನೆಯವರೆಗೆ ಎಲ್ಲಾ ಕಡೆಯು ಮುನ್ನುಗ್ಗುತ್ತಿದ್ದ ಅವನ ನೆನಪು ಇಂದು ಯಾವುದೇ ಧಾವಂತವಿಲ್ಲದೆ ಕೈ ಹಿಡಿದು  ನೆಡುವ ಮಗುವಿನಂತೆ ನನ್ನಳೊಗೆ ನನ್ನ ಜೊತೆ ಜೊತೆಯಲ್ಲೇ.... 



(Published in Vijaya next on 14/12/12)

November 18, 2012

ಒಂಟಿತನದಲ್ಲೂ ಬಿಡದ ನಿನ್ನ ನೆನಪುಗಳು.


ಫೇಸ್ ಬುಕ್‌ನಲ್ಲಿ ಇನ್ನೂರಕ್ಕು ಹೆಚ್ಚು ಸ್ನೇಹಿತರು, ಸೆಲ್ ಫೋನ್‌ನಲ್ಲಿ ಅರ್ಧ ಮೆಮೊರಿ ಕಾರ್ಡ್ ತುಂಬುವಷ್ಟ್ಟು  ಸ್ನೇಹಿತರ   ಪೋನ್ ನಂಬರ್‌ನ ದೊಡ್ಡ ಪಟ್ಟಿ. ಎಲ್ಲಾದಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಷೇರ್ ಮಾಡಿಕೊಳ್ಳಬಹುದಾದ  ತಂಗಿ. ಆದರೂ ತಣ್ಣನೆ ಚಳಿಗಾಲದಲ್ಲಿ   ಬೆಚ್ಚಗೆ ನನ್ನ ದಿನಚರಿಯನ್ನು ಆವರಿಸಿಕೊಂಡುವ ನಿನ್ನ ಬಗ್ಗೆ ಹೇಳ್ಕೊಳ್ಳಕ್ಕೆ  ಯಾರು ಯಾರೂ ಇಲ್ಲ.


 ನಾನೋ ನನ್ನ ಪಾಡಿಗೆ ಇಷ್ಟು ವರ್ಷದಿಂದ ಹಾಯಾಗಿದ್ದೆ. ಎಲ್ಲಿದ್ದಿಯೋ ಏನೋ ನೀನು ದೀಡಿರ್ ಅಂತ ಬಂದೇ ಬಿಟ್ಟಿದ್ದಿಯಾ ನನ್ನ ಜೀವನದೊಳಗೆ. ಈಗ ನೀನು ಹೊರಗೆ ಹೋಗಲೊಪ್ಪದೆ ಹಟ ಹಿಡಿದ ಮಗುವಿನ ಹಾಗೆ ಕೂತೇ ಬಿಟ್ಟಿದ್ದಿಯಾ. ನಾನೋ ನಿನ್ನ ಹೊರದೂಡೇ ಮನಸ್ಸಿನ ಬಾಗಿಲಿಗೆ ಬೀಗ ಜಡಿಯುತ್ತೀನಿ ಅಂತ ಶಪಥ ಮಾಡಿಕೊಂಡ ಕ್ಷಣದಲ್ಲೇ ಮತ್ತೆ ನೀನು ಹಾಜರು. ನೀನು ಹೋಗಲು ರೆಡಿ ಇಲ್ಲ ನಾನು ಬಿಡಲು. ನನ್ನ ನಿನ್ನ ಈ ಗುದ್ದಾಟದಲ್ಲಿ  ನಿನ್ನ ನೆನಪು ಮಾತ್ರ  ಅಲುಗಾಡದೆ ಜಂಡಾ ಹೂಡಿ ಬಿಟ್ಟಿದ್ದೆ. ನೀನು ನನ್ನ ಬದುಕಲ್ಲಿ ಬಂದಿದ್ದೆ ಹಾಗಲ್ವಾ. ನೀನಂದು
ಮೊದಲಿನಿಂದಲೂ ಲೇಟ್ ಎಂಟ್ರಿನೇ ಅದು ನನ್ನ ಜೀವನದಲ್ಲಿರ ಬಹುದು ಅಥವಾ ಕಾಲೇಜಿನಲ್ಲಿ ಕ್ಲಾಸಿಗೇ ಇರಬಹುದು.  ಎಲ್ಲಾ ಪ್ರಾರಂಭವಾದ ಮೇಲೆ ನಿಧಾನವಾಗಿ ಕಾಲೆಳೆದು ಕೊಂಡು ಒಳಬರುವುದು ನಿನ್ನ ಹುಟ್ಟು ಗುಣ ಅಂತ ನನಗೆ ಅನ್ಸುತ್ತೆ.  ಯಾವಾಗಲೋ ಒಂದು ಸಾರಿ ಬರ್ತಿಯಾ, ದರ್ಶನ ಕೊಡ್ತೀಯಾ,  ಇದ್ದಕ್ಕಿದ್ದ ಹಾಗೆ ಸುಳಿವೆ ಕೊಡದೆ ನಾಪತ್ತೆ . ಇದೇನು ನನಗೆ ಹೊಸತಲ್ಲ. ಆದರೆ ಈ ಸಾರಿ ಮಾತ್ರ ನೀನು ಬರುವಾಗಲೇ ನಿರ್ಧಾರ ಮಾಡಿಕೊಂಡೇ ಬಂದ ಹಾಗೇ ಕಾಣುತ್ತೀಯಾ. ಬಂದೋನು ವಾಪಸ್ಸು  ಹೋಗೋ ಮಾತೇ ಇಲ್ಲದೆ ಕೂತೇ ಬಿಟ್ಟಿದ್ದಿಯಾ!


ನೀನು ಬಂದಾದರೂ  ಎಷ್ಟು ದಿನ ಆಯಿತು.  ಇನ್ನೂ ಐದೋ-ಆರೋ ದಿನ ಅಷ್ಟೇ. ಆದರೆ ಯಾವುದೋ ಜನ್ಮದ ನಂಟೋ ಅನ್ನುವಷ್ಟ್ಟು ಅಂಟುಕೊಂಡಿದ್ದೀಯಾ. ದಿನವೀಡಿ ಹರಟಿದರೂ ಮುಗಿಯದ ಮಾತು, ಮೊಬೈಲ್ ಕಂಪೆನಿಗೆ ಬೇಸರ ಹುಟ್ಟುವಷ್ಟ್ಟು ಮೇಸೇಜ್ ರವಾನೆ.  ಅದರೂ ಮುಗಿಯದ ಕೆಲಸಕ್ಕೆ ಬಾರದ ಮಾತುಗಳು. ಸುಮ್ಮನೆ ಮಾತು ಯಾವುದೇ ಗೊತ್ತು ಗುರಿಯಿಲ್ಲದ ಮಾತು. ನನಗೊ ಹುಡುಕಿ ಹುಡುಕಿ ಮಾತಾಡಲು ಬಾರದು.  ಮೂರು ದಿನ ಮಾತೇ ಇಲ್ಲದೇ ಕಳೆಯ ಬಲ್ಲೆ. ಆದರೆ ಯಾವಾಗ ನೀನು ನನ್ನ ಜೀವನಕ್ಕೆ ಕಾಲಿಟ್ಟಿಯೋ, ಎಲ್ಲಾ ತಲೆಕೆಳಗು.  ನಿನ್ನೊಂದಿಗೆ  ಒಂದು ಮಾತು ಮುಗಿಯುವ ಮುನ್ನ ಮತ್ತೊಂದು ಮಾತಿಗೆ ಮುನ್ನುಡಿ ಬರೆಯಲು ನಾನು ರೆಡಿ.


  ನಿನ್ನ ಫೋನ್, ಮೇಸೆಜ್‌ಗಳಿಗೆ ಕಾಯುವುದೇ ನನ್ನ ದಿನದ ಕೆಲಸವಾಗಿದೆ. ಯಾವ ಕೆಲಸದಲ್ಲೂ ಮನಸ್ಸಿಲ್ಲ. ಹೋದಲ್ಲಿ ಬಂದಲ್ಲಿ  ನಾನು  ಮುಂದೆ ಏನುವಂತೆ ಮುನ್ನುಗ್ಗುವ ನಿನ್ನ ನೆನಪು. ಈಗ ನನ್ನ ದಿನಚರಿ ಸೂತ್ರ ಕಿತ್ತ ಗಾಳಿಪಟ.  ಕೈಗೆ ಸಿಗದೆ ಸಿಕ್ಕಸಿಕ್ಕ ಕಡೆಗೆ ಎಲ್ಲಾ ಹಾರಾಡುತ್ತಿದೆ.  ತಹಬದಿಗೆ ತರಲಾರದೆ ನಾ ಒದ್ದಾಡುತ್ತಿರುವೆ.  ನೀನು ಇದೇ ಪ್ರೀತಿ ಕಣೇ ಅಂದರೆ ನಾನು ಇಲ್ಲ ಕಣೋ ಇದು ಕ್ಷಣಿಕ ಅಂತಿನಿ. ಆದರೆ ನೀನು ಎಲ್ಲಿ ಅಷ್ಟು ಸುಲಭಕ್ಕೆ ಒಪ್ತಿಯಾ. ಇದು ಪ್ರೀತಿನೇ ಅನ್ನೊದೊಂದೇ ನಿನ್ನ ವಾದ. ನನ್ನದು ಇಲ್ಲ ಎನ್ನುವುದೊಂದೆ ಉತ್ತರ. ಮತ್ತೆ ನಮ್ಮಿಬ್ಬರಲ್ಲಿ ಹಗ್ಗಜಗ್ಗಾಟ. ನೀನೋ ಎಲ್ಲೋ ಮೈಲಿಗಳಾಚೆಯಾದರೆ ನಿನ್ನ   ನೆನಪು ಮಾತ್ರ  ಹಾಗೇ ಕಚಗುಳಿಯಿಡುತ್ತಾ ಬೆಚ್ಚಗೆ ನನ್ನೊಳಗೆ ನನ್ನ ಒಪ್ಪಿಸೇ ತೀರುವೆ ಎಂಬಂತೆ ತಪ್ಪಸ್ಸಿಗೆ ಕೂತು  ಬಿಟ್ಟಿದ್ದೆ.


ಮತ್ತೆ  ನಾನು ಇಲ್ಲಿ ಒಂಟಿ. ಯಾರಲ್ಲಿ ಹೇಳಲಿ ಈ  ನನ್ನ ಅಸ್ವಸ್ಥ ಮನಸ್ಥಿತಿ ಬಗ್ಗೆ, ನನ್ನ ಒಂಟಿತನದಲ್ಲೂ ಕಾಡುವ  ನಿನ್ನ ನೆನಪುಗಳ ಬಗ್ಗೆ.....



November 17, 2012

ಮತ್ತದೇ ಮಾಗಿ ಮಧ್ಯಾಹ್ಯ...!

ಮೊದಲಿನಿಂದಲೂ ಅಷ್ಟೇ ನಂಗೂ ಈ ಮಾಗಿಯ ಮಧ್ಯಾಹಕ್ಕೂ ಆಗ್ಬರೊದೇ ಇಲ್ಲ. ಎಣ್ಣೆ ಸೀಗೆಕಾಯಿ ಸಂಬಂಧ. ಸುಮ್‌ಸುಮ್ಮನೆ ಸಿಟ್ಟು, ಅಂತಕ, ಅಳು, ಹುಚ್ಚು ಎಲ್ಲಾ ಈ ಮಧ್ಯಾಹ್ನಗಳಲ್ಲೇ ನನ್ನ ಕಾಡೋದು ಹಾಗೂ ನಾನು ತುಂಬಾ ಒಂಟಿ ಅನ್ಸೊದು ಕೂಡ. ಶಾಲೆಗೆ ಹೋಗವಾಗ ನನ್ನ ಒರಗೆಯ ಮಕ್ಕಳೇಲ್ಲಾ ಭಾನುವಾರಕ್ಕೆ ಕಾಯಿತ್ತಾ ಇದ್ದರೆ, ನನಗೆ ಮಾತ್ರ ಯಾಕಪ್ಪ ಬರುತ್ತೆ ಭಾನುವಾರ ಅನ್ನೊ ಸಂಕಟ. ಹೇಳಿ ಕೇಳಿ ಮಲೆನಾಡಿನ ಒಂಟಿ ಮನೆ, ಯಾವುದೇ ಮೂಲೆಯಲ್ಲೋ ಅಥವಾ ಕೊಟ್ಟಿಗೆಯಲ್ಲೊ ಕೆಲಸ ಮಾಡುವ ಅಮ್ಮ, ಪೇಟೆ ಹೊಗಿ ಇನ್ನೂ ಬಂದಿರದ ಅಪ್ಪ, ಹೆಂಚಿನ ಮಾಡಿನಿಂದ ನುಸುಳುವ ತಣ್ಣನೆ ಗಾಳಿ, ಮನೆತುಂಬಾ ಒಂಥರಾ ನೀರವ ಮೌನ ಇವೆಲ್ಲಾ ಚಳಿಗಾಲದ ಮಧ್ಯಾಹ್ನದೊಂದಿಗೆ ನನ್ನ ನೆನೆಪಿನಲ್ಲಿ ಉಳಿದುಬಿಟ್ಟಿದೆ. ಮುಂದೆ ಹಾಸ್ಟೇಲ್ ಸೇರಿದ ಮೇಲೂ ಮಧ್ಯಾಹ್ನಗಳೂ ನನ್ನ ಕಾಡೋದು ಏನು ಕಮ್ಮಿ ಆಗಿಲ್ಲ. ಇಡಿ ಹಾಸ್ಟೇಲ್ಗೆ ಹಾಸ್ಟೇಲೇ ಬೆಚ್ಚಗೆ ಹೊದ್ದು ಮಲಗಿದ್ರೂ ನಾನು ಮಾತ್ರ ಪಾಪಿ ತರಹ ಕಾಲ ದೂಡುತ್ತಾಇದ್ದೆ. ಅಪ್ಪಿತಪ್ಪಿ ಏನಾದರೂ ನಿದ್ರೆಗೆ ಜಾರಿದರೆ, ಮಲಗಿ ಎದ್ದ ಮೇಲಿನ ಕಷ್ಟ ಮಾತ್ರ ಯಾರಿಗೂ ಬೇಡ. ಯಾರಿಗೂ ಹೇಳಲಾಗದ ತಳಮಳ, ಎಲ್ಲಾ ಬಿಟ್ಟು ದೂರ ಓಡಿ ಹೋಗುವಷ್ಟು ಹಿಂಸೆ. ಮತ್ತೆ ಈಗ ಚಳಿಗಾಲ.. ಮತ್ತೆ ಅದೇ ನನ್ನ ಕಾಡುವ ಮಾಗಿಯ ಮಧ್ಯಾಹ್ಯಗಳು. ಮೊದಲೇಲ್ಲಾ ಆಗಿದ್ದರೆ ಬರೀ ಭಾನುವಾರದ ಮಧ್ಯಾಹ್ನಗಳು ಮಾತ್ರ ನನ್ನ ಮನಸ್ಸನ್ನು ಭಾರವಾಗಿಸುತ್ತಿದ್ದವು. ಈಗ ಪ್ರತಿ ದಿನದ ಮಧ್ಯಾಹ್ನವೂ ಭಾನುವಾರ ಮಧ್ಯಾಹ್ನವೇನೋ ಅನ್ನುವಷ್ಟು ಖಾಲಿತನ, ಪದೇ ಪದೇ ಬೇಜಾರು.. ದಿನಕ್ಕೆ ಹತ್ತು ತರಹ ಹುಚ್ಚುಚ್ಚಾಗಿ ಆಡುವ ಹಿಡಿತಕ್ಕೆ ಸಿಗದ ಮನಸ್ಸು...

October 13, 2011

ಬಸ್ ಕೆಟ್ಟ ಆ ರಾತ್ರಿ...

 ದಿನ ಟಿವಿ, ಪೇಪರ್‌ನಲ್ಲಿ ಹೆಣ್ಣು ಮಕ್ಕಳು ಕಾಮುಕರಿಗೆ ಬಲಿಯಾಗುವ ಸುದ್ದಿ ಕೇಳುವಾಗ ನನ್ನ ಹೊಟ್ಟೆಯಲ್ಲಿ ಸಣ್ಣಗೆ ಚಳಿ ಹುಟ್ಟುತ್ತೆ. ಮೈಯೆಲ್ಲಾ ಬೆವುರುತ್ತೆ.  ಅವತ್ತು ಅವರು ಇಲ್ಲ ಅಂದಿದ್ದರೆ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತದೆ. ಮತ್ತೆ ಮತ್ತೆ ಆ ಘಟನೆಯ ನೆನಪು ಮರಕಳಿಸುತ್ತದೆ.  ಅಲ್ಲಿಯವರೆಗೆ  ಒಂದು ಹೆಣ್ಣನ್ನು ಪ್ರಪಂಚ ಅಷ್ಟು ಕೆಟ್ಟ ದೃಷ್ಟಿಯಿದ ನೋಡುತ್ತದೆ  ಎಂಬ ಅರಿವಿರಲಿಲ್ಲ.  ಇಂದಿಗೂ ಅವತ್ತು ನಾನು ಎಂತಹ ಅಪತ್ತಿನಲ್ಲಿ ಸಿಲುಕ್ಕಿದ್ದೆ  ಎಂದು  ಊಹಿಸಿಕೊಳ್ಳಲು ಅಸಾಧ್ಯ.  ಆ ದಿನದ ನೆನಪು ಮಾತ್ರ ಇನ್ನೂ ಸ್ಪಲ್ಪವೂ ಮಾಸಿಲ್ಲ. ಅವತ್ತು ನಾನು  ಹೆದರಿಕೆಯಿಂದ  ಸಂಪೂರ್ಣ ಬ್ಲಾಂಕ್ ಆಗಿದ್ದೆ.  ಪರಿಸ್ಥಿತಿಯೇ  ಹಾಗಿತ್ತು .

      ಈ ಘಟನೆ ನೆಡೆದು ಸುಮಾರು 15-16 ವರ್ಷಗಳೇ ಕಳೆದಿವೆ. ಆ ವಯಸ್ಸೇ ಹಾಗಿತ್ತು. ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅಥವಾ ಯೋಚಿಸಬೇಕು ಅನ್ನೋ ಮೆಚ್ಯೂರಿಟಿ ಇರಲಿಲ್ಲ. ಆಗ ಅದು ಬೇಕಾಗಿರಲಿಲ್ಲ ಕೂಡ.  ಆಗಿನ್ನೂ ನಾನು ಪಿಯುಸಿ ಮುಗಿಸಿದ್ದೆ. ಡಿಗ್ರಿ ಕಾಲೇಜು ಶುರುವಾಗುವ ಮುನ್ನ ಹಳೆ ಹಾಸ್ಟೇಲ್‌ನ ಸ್ನೇಹಿತರೇಲ್ಲಾ ಒಮ್ಮೆ ಭೇಟಿಯಾಗುವ ಪ್ಲಾನ್ ಪ್ರಕಾರ. ನಾವೆಲ್ಲಾ ಮಂಗಳೂರಿನಲ್ಲಿ  ಮೀಟ್ ಮಾಡಿ,  ನಾನು ವಾಪಸ್ಸು ಮನೆ ಸೇರಲು ಮಂಗಳೂರು-ತೀರ್ಥಹಳ್ಳಿಯ ಅಗುಂಬೆ ಮಾರ್ಗದ ಕೊನೆ ಬಸ್ಸೇರಿದ್ದೆ.  ಕತ್ತಲ್ಲಾದ ನಂತರ ಆಗುಂಬೆ ಘಾಟಿಯಲ್ಲಿ ಬಸ್ಸ್ ಸಂಚರಿಸುತ್ತಿರಲಿಲ್ಲ.  ಅದೇ ಕೊನೆಯ  ಬಸ್ಸ್‌ ಆದ ಕಾರಣದಿಂದ  ಹೆಚ್ಚೇ ಎನ್ನುವಷ್ಟು ಜನ ತುಂಬಿದ್ದರು.  ಹೆಬ್ರಿ ದಾಟಿ ಸ್ಪಲ್ಪ ದೂರ ಸಾಗುತ್ತಿದ್ದಂತೆ  ಬಸ್ಸು ಕೆಟ್ಟು ನಿಂತಿತ್ತು.  ಆಗ ಅದೇನು ದೊಡ್ಡ ವಿಷಯ ಅನಿಸಲಿಲ್ಲ.  ಡ್ರೈವರ್ ಅರ್ಧ-ಒಂದು ಘಂಟೆಯಲ್ಲಿ ಸರಿಯಾಗುವ ಭರವಸೆ ಕೊಟ್ಟಿದ್ದರು. ಆದರೆ ಅಗಿದ್ದೇ ಬೇರೆ.  ಮೆಕ್ಯಾನಿಕ್ ರೀಪೇರಿ ಸಾಧ್ಯವಿಲ್ಲ  ಅಂದ ಹಾಗೂ ಕಂಡೆಕ್ಟರ್‌ನಿಂದ ನಿಮ್ಮ ದಾರಿ ನೀವೇ ನೋಡಿ ಕೊಳ್ಳಿ ಎಂಬ ಅಧಿಕೃತ ಘೋಷಣೆಯು ಬಂತು. ಬಸ್ಸಿನ  ಜನ ಸಂದಣಿ ನಿಧಾನವಾಗಿ  ಕರಗತ್ತಾ ಬಂತು. ಆಗಾಲೇ ನನಗೆ ಗೊತ್ತಾಗಿದ್ದು. ಆ ಬಸ್ಸಲ್ಲಿ ಇದ್ದಿದ್ದು ಎರಡೇ ಹೆಣ್ಣು ಜೀವ! ನಾನು ಮತ್ತು ಒಂದು ಕಣ್ಣಿಗೆ ಬ್ಯಾಂಡೇಜ್ ಕಟ್ಟುಕೊಂಡಿದ್ದ ಮಧ್ಯ ವಯಸ್ಸಿನ ಹೆಂಗಸೊಬ್ಬರು. ಯಾರಿಗೆ ಹೇಳೊದು... ? ಎಲ್ಲಿಗೆ ಹೋಗೋದು..? ಯಾರ ಜೊತೆಗೆ?  ಎಲ್ಲದಕ್ಕಿಂತ ಹೆಚ್ಚಾಗಿ ಮನೆಗೆ ಹೇಗೆ ತಿಳಿಸೋದು?  ಆಗ ಮೊಬೈಲ್ ಫೋನ್ ಎಲ್ಲಿತ್ತು.? ನಮ್ಮ ಮನೆಯಲ್ಲಿ ಫೋನ್ ಕೂಡ ಇರಲ್ಲಿಲ್ಲ. ನಾನು ಏನು ಮಾಡಲು ತೋಚದೇ ಉತ್ತರ ಹೊಳಯದ ಪ್ರಶ್ನೆಗಳೊಂದಿಗೆ ಕುಳಿತೇ ಇದ್ದೆ. 

       ಘಂಟೆ ಎಂಟೋ ಒಂಬತ್ತು ಆಗಿತ್ತು. ಬಸ್ ಫುಲ್ ಖಾಲಿ ಆಯಿತು. ಬರೀ ಮೂರು ಜನ ಮಾತ್ರ ಉಳಿದ್ದಿದ್ದು. ನಾನು ಮತ್ತು ಬಸ್ಸ್‌ನಲ್ಲಿದ್ದ ಏಕೈಕ ಮಹಿಳೆ ಮತ್ತು ಅವರ ಗಂಡ. ಮತ್ತು ಬಸ್  ಕೆಳಗೆ ಒಂದು ನಾಲ್ಕೋಐದೋ ಜನ ಇದ್ದರು.  ಕೆಳಗೆ ಕತ್ತಲಲ್ಲಿ  ನಿಂತಿದ್ದ  ನನ್ನ ಬಗ್ಗೆಯ ಅವರ ಮಾತುಗಳು  ಬೇಡ ಅಂದರೂ ಸ್ಪಷ್ಟವಾಗಿ ಕೇಳುತ್ತಿತ್ತು.  ಒಬ್ಬ "ಹಕ್ಕಿ ಬೊಂಬಾಟಾಗಿ ಇದ್ದೆ ಕಣ್ರೋ" ಅಂತ ಹೇಳಿದ್ರೆ, "ಹೌದು ಮರಾಯಾ.. ಮಜಾ ಜೊತೆಗೆ ಒಳ್ಳೆ ಸಂಪಾದನೆನ್ನೂ ಆಗುತ್ತೆ ಕಣೋ" ಅಂತ ಇನ್ನೊಬ್ಬನ್ನ ಸುವಾಲು. ನನ್ನ ರೂಪದ ಬಗ್ಗೆ ನನಗೇ ಅಸಹ್ಯವಾಗುವಷ್ಟು ಅಸಹ್ಯವಾಗಿ ಮಾತಾಡಿ ಕೊಳ್ಳುತ್ತಿದ್ದರು.  ನಂತರ ಒಬ್ಬೊಬ್ಬರೇ ಬಸ್ಸಿನ  ಒಳಗೆ ಒಂದು ನನ್ನ ಮಾತನಾಡಿಸಲು  ಶುರು ಮಾಡಿದ್ದರು.  ನಾನು ಮಾತ್ರ ತುಟಿ ಎರಡು  ಮಾಡದೆ, ಅಳು ನುಂಗಿ ಸೀಟಿಗೆ ಇನ್ನೂ ಅಂಟು ಕೊಂಡು ಕುಳಿತೆ. ಹೊರಗಿನ ಕತ್ತಲಷ್ಟೆ ನನ್ನ ಮುಖ ಕೂಡ ನನಗೆ ಗೊತ್ತಗುವಷ್ಟೂ ಹೆದರಿಕೆಯಿಂದ ಕಪ್ಪಾಗಿತ್ತು. ಅವರೇಲ್ಲಾ ನಾನು ಕುಳಿತ ಸೀಟಿನಿಂದ ಸ್ಪಲ್ಪ ದೂರದಲ್ಲಿ ನಿಂತು  ಅಸಹ್ಯವಾಗಿ ನಗುತ್ತಿದ್ದರು.  ಸೇಮ್ ಯಾವುದೋ ಒಂದು ಫಿಲ್ಮಿ ಸೀನ್ ರೀತಿ. ಅವರ ನೋಟಗಳು  ನನಗೆ ಇಂದಿಗೂ ಕೂಡ ನೆನೆಪಿದೆ.  ನೆನೆಸಿ ಕೊಂಡರೆ ಈಗಲೂ ಮೈ ಕಂಪಿಸುತ್ತದೆ.  ಆ ಕ್ಷಣ ಮಾತ್ರ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಪರಿತಪಿಸಿ ಬಿಟ್ಟೆ.  ಆಗ ನನ್ನನ್ನು ಅವರಿಂದ ಬಚಾವ್ ಮಾಡೊಕ್ಕೆ ಮಾತ್ರ ಬಂದಿದ್ದು   ಬಸ್ಸಿನಲ್ಲಿ ಉಳಿದ್ದಿದ್ದ ದಂಪತಿಗಳು. ಆ ಮಹಿಳೆ ನನ್ನ ಹತ್ತಿರ ಬಂದು  ನಮ್ಮ ಜೊತೆ ಬರ್ತಿಯಾ ಅಂತ ಕೇಳಿದಷ್ಟೇ. ನಾನು ಒಂದು ಸೆಂಕೆಂಡು ಕೂಡ ತಡ ಮಾಡದೆ ಹಿಂದೆ ಮುಂದೆ ಯೋಚಿಸದೆ ಅವರ ಬಾಲ ಹಿಡಿದೆ. ಬೇರೆ ದಾರಿಯಾದರೂ ಏನು ಇತ್ತು? ನನಗೆ ಹೋದ ಜೀವ ವಾಪಸ್ಸು ಬಂದಿತ್ತು. ಅವರು ಯಾವುದೋ ಒಂದು ವಾಹನ ಅಡ್ಡಗಟ್ಟಿ, ಉಡುಪಿಗೆ ಕರ್ಕೊಂಡು ಹೋದರು.  ಮಾತಾಡಲು  ಅಗದಷ್ಟು  ಬಾಯಿ ಒಣಗಿತ್ತು. ಅವರು ಏನೋ ಕೇಳಿದ್ದರೆ ನಾನು ಏನೋ ಹೇಳುತ್ತಿದ್ದೆ.  ಬಾಂಣಲೆಯಿಂದ ಬೆಂಕಿಗೆ ಬಿದ್ದೆನ್ನೇನೊ ಎಂದು  ನನಗೆ ಅನಿಸಲು ಪ್ರಾರಂಭವಾಗಿತ್ತು. ಆದರೆ ಆ ರೀತಿ ಏನು ಆಗದೆ  ಕೊನೆಗೆ ಎಲ್ಲಾ ಸುಖಾಂತ್ಯ ವಾಯಿತು. ರಾತ್ರಿ ಉಡುಪಿ ಮಠದಲ್ಲಿ ಉಳಿದುಕೊಂಡು, ಬೆಳ್ಳಿಗೆ ಮೊದಲ ಬಸ್ಸ್‌ನಲ್ಲೇ  ಅವರು ನನ್ನನ್ನು ಊರು ಮುಟ್ಟಿಸಿದ್ದರು. ಅವರ ಉಪಕಾರಕ್ಕೆ ನಾನು ಮತ್ತು ನನ್ನ ಮನೆಯವರೆಲ್ಲಾ ಜೀವಮಾನವೀಡಿ ಋಣಿಗಳು.
        
           ಆ ಒಂದು ರಾತ್ರಿಯಲ್ಲಿ ನಾನು ಇಡೀ ಜೀವಮಾನಕ್ಕೆ ಆಗುವಷ್ಟು ಹಿಂಸೆ, ಸಂಕಟ, ಭಯ ಎಲ್ಲಾ ಅನುಭವಿಸಿ ಬಿಟ್ಟೆ.  ಆ ಪುಣ್ಯಾತ್ಮರು ಇಲ್ಲದೆ ಹೋಗಿದ್ದರೆ....  ನಾನು ಇಷ್ಟೂ ವರ್ಷ ಜೀವದಲ್ಲಿ  ಇರುತ್ತಿದ್ದೇನೋ ಇಲ್ವೋ ಅಥವಾ ಇದ್ದರೂ ಎಲ್ಲೋ?  ಹೇಗೋ? ಅಬ್ಬಾ ಕಲ್ಪನೆಗೂ ಸಿಗವುದಿಲ್ಲ... ಆ ಪಾಪಿಗಳ ಕೈಗೆ ಸಿಕ್ಕಿ ನಾನೂ ಒಂದು ಕಥೆಯಾಗಿರುತ್ತಿದ್ದೆ....














(2011 ಅಕ್ಟೋಬರ್  7 ರ ವಿಜಯ ನೆಕ್ಸ್ಟ್‌ ಪೇಪರ್‌ನ  "ಅವಳ ಡೈರಿ" ಅಂಕಟದಲ್ಲಿ  ಪ್ರಕಟವಾದ ಬರಹ)